Advertisement

Deepfake ವಿಚಾರ ಶೀಘ್ರ ನಿಯಮ ರೂಪಿತವಾಗಲಿ

12:30 AM Nov 24, 2023 | Team Udayavani |

ಪ್ರಸಕ್ತ ತಂತ್ರಜ್ಞಾನ ಯುಗದಲ್ಲಿ ಡೀಪ್‌ಫೇಕ್‌ ಅಥವಾ ನಕಲಿ ಮುಖ ಸೃಷ್ಟಿ ಎಂಬುದು ಸಮಸ್ಯೆಯಾಗಿ ಮಾರ್ಪಟ್ಟಿದ್ದು, ಇದು ಆತಂಕಕ್ಕೂ ಕಾರಣವಾಗಿದೆ. ಇತ್ತೀಚೆಗಷ್ಟೇ ಕರ್ನಾಟಕ ಮೂಲದ ನಟಿ ರಶ್ಮಿಕಾ ಮಂದಣ್ಣ ಅವರ ನಕಲು ವೇಷಧಾರಿಯಾಗಿ ಬೇರೊಬ್ಬಳು ಯುವತಿ ಕಾಣಿಸಿಕೊಂಡಿದ್ದು, ಇದು ಭಾರೀ ವಿವಾದಕ್ಕೂ ಕಾರಣವಾಗಿತ್ತು. ಇದಾದ ಬಳಿಕ ಕತ್ರಿನಾ ಕೈಫ್ ಮತ್ತು ಕಾಜೋಲ್‌ ಮತ್ತು ಸಾರಾ ತೆಂಡುಲ್ಕರ್‌ ಕೂಡ ಈ ಡೀಪ್‌ಫೇಕ್‌ ತಂತ್ರಜ್ಞಾನದಲ್ಲಿ ಸಂತ್ರಸ್ತರಾಗಿದ್ದನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲಿಯೇ ಕೇಂದ್ರ ಸರಕಾರ ಎಐ ಆಧರಿತ ಡೀಪ್‌ಫೇಕ್‌ ತಂತ್ರಜ್ಞಾನಕ್ಕೆ ನಿಯಂತ್ರಣ ಹೇರಲು ಮುಂದಾಗಿದ್ದು, ಗುರುವಾರ ಸಾಮಾಜಿಕ ಜಾಲ ಕಂಪೆನಿಗಳ ಪ್ರತಿನಿಧಿಗಳ ಜತೆಗೆ ಮಾತುಕತೆಯನ್ನೂ ನಡೆಸಿದೆ.

Advertisement

ತಂತ್ರಜ್ಞಾನ ಮುಂದುವರಿದಂತೆ ಅದರಿಂದ ಉಂಟಾಗುವ ಅಪಾಯಗಳೂ ಹೆಚ್ಚಾಗುತ್ತವೆ. ಪ್ರತೀ ತಂತ್ರಜ್ಞಾನದ ಅನ್ವೇಷಣೆ ವೇಳೆಯಲ್ಲಿ ಇಂಥ ಆತಂಕಗಳು ಎದುರಾಗಿ ಅದಕ್ಕೊಂದು ಪರಿಹಾರ ಕಂಡುಕೊಳ್ಳುವುದು ವಾಡಿಕೆಯಾಗಿದೆ. ಆದರೆ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್‌ ತಂತ್ರಜ್ಞಾನ ಬೆಳವಣಿಗೆಯಾದ ಮೇಲೆ ಯಾರ ನಿಯಂತ್ರಣಕ್ಕೂ ಸಿಗದ ರೀತಿಯಲ್ಲಿ ಇದು ಮುಂದುವರಿದು ಬಿಟ್ಟಿದೆ. ಅದರಲ್ಲೂ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್‌ ಫೋನ್‌, ಅದಕ್ಕೆ ತಕ್ಕಂತೆ ಅಂತರ್ಜಾಲ ವ್ಯವಸ್ಥೆಯೂ ಬೆಳೆದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಡೀಪ್‌ಫೇಕ್‌ ಅಥವಾ ಮುಖ ನಕಲು ಮಾಡುವಂಥ ಅಸಂಖ್ಯಾತ ಆ್ಯಪ್‌ಗಳೂ ಇವೆ. ಇಲ್ಲಿ ಯಾರ ದೇಹಕ್ಕೆ, ಬೇರೆಯವರ ಮುಖವನ್ನು ಆರಾಮವಾಗಿ ಜೋಡಿಸಬಹುದು.

ಇಂಥ ಅಪಾಯವನ್ನು ಕೇವಲ ಬಾಲಿವುಡ್‌ ಗಣ್ಯರಷ್ಟೇ ಅಲ್ಲ, ಸ್ವತ ಪ್ರಧಾನಿ ನರೇಂದ್ರ ಮೋದಿಯವರೂ ಹೇಳುವ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಸಿದ್ದರು. ತಮ್ಮ ಧ್ವನಿಯನ್ನು ನಕಲು ಮಾಡಿ ಹಾಡೊಂದನ್ನು ಸಿದ್ಧ ಮಾಡಿಸಿ, ಸಾಮಾಜಿಕ ಜಾಲ ತಾಣದಲ್ಲಿ ಹರಡಿದ್ದನ್ನು ಹೇಳಿದ್ದರು. ಅಲ್ಲದೆ ಬುಧವಾರದ ಜಿ20 ವರ್ಚುವಲ್‌ ಕಾರ್ಯಕ್ರಮದಲ್ಲೂ ಎಐನ ಅಪಾಯದ ಬಗ್ಗೆ ಜಾಗತಿಕ ನಾಯಕರ ಜತೆ ಚರ್ಚೆ ಮಾಡಿದ್ದರು.
ಇಂಥ ತಂತ್ರಜ್ಞಾನಗಳು ಪ್ರಧಾನಮಂತ್ರಿಯಂಥ ಹುದ್ದೆಯಲ್ಲಿ ಇರುವವರನ್ನೂ ಸಂತ್ರಸ್ತರನ್ನಾಗಿ ಮಾಡುತ್ತವೆ ಎಂದರೆ ಅಪಾಯದ ಅರಿವು ಎಲ್ಲರಿಗೂ ಮೂಡಲೇ ಬೇಕು. ಹೀಗಾಗಿ ಕೇಂದ್ರ ಸರಕಾರ ಇವುಗಳ ನಿಯಂತ್ರಣ ನಿಟ್ಟಿನಲ್ಲಿ ಗಟ್ಟಿ ಹೆಜ್ಜೆಯನ್ನು ಇಟ್ಟಿದೆ. ಇನ್ನು 10 ದಿನಗಳಲ್ಲಿ ನಿಯಂತ್ರಣ ನಿಯಮ ಜಾರಿಗೆ ತರುವುದಾಗಿ ಸ್ವತಃ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿ‌ನಿ ವೈಷ್ಣವ್‌ ಅವರೇ ಹೇಳಿದ್ದಾರೆ. ಅಲ್ಲದೆ ಇವುಗಳನ್ನು ಗುರುತಿಸಿ, ತೆಗೆಯುವಂಥ ತಂತ್ರಜ್ಞಾನವನ್ನು ರೂಪಿಸಿಕೊಳ್ಳಲು ಸಾಮಾಜಿಕ ಜಾಲ ಸಂಸ್ಥೆಗಳಿಗೂ ಹೇಳಿದ್ದಾರೆ.
ಏನೇ ಆಗಲಿ, ಇಂಥ ತಂತ್ರಜ್ಞಾನ ಬಳಸಿ ಬೇರೊಬ್ಬರ ವ್ಯಕ್ತಿತ್ವ ಹಾಳು ಮಾಡುವಂಥವರಿಗೆ ಕಠಿನ ಶಿಕ್ಷೆಯಾಗಬೇಕು. ಯಾರೊಬ್ಬರೂ ಡೀಪ್‌ಫೇಕ್‌ನಂಥ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಮೂಹಿಕವಾಗಿ ಚಿಂತನೆ ನಡೆಸಬೇಕಾದದ್ದು ಇಂದಿನ ದಿನದಲ್ಲಿ ಅತ್ಯಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next