Advertisement

ಶೈಕ್ಷಣಿಕ ವಾತಾವರಣ ಹದಗೆಡಿಸುವ ಯತ್ನ ಸಲ್ಲದು

01:05 AM Mar 16, 2022 | Team Udayavani |

ತರಗತಿಗಳಲ್ಲಿ ವಸ್ತ್ರ ಸಂಹಿತೆ/ಸಮವಸ್ತ್ರ ಜಾರಿ ಹಾಗೂ ಹಿಜಾಬ್‌ ಸೇರಿದಂತೆ ಧಾರ್ಮಿಕ ಗುರುತಿನ ವಸ್ತ್ರಧಾರಣೆ ನಿರ್ಬಂಧ ಸಂಬಂಧ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ತ್ರಿಸದಸ್ಯ ಪೀಠ, ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ. ಮಕ್ಕಳಲ್ಲಿ ಸಮಾನತೆಯ ಭಾವವನ್ನು ಬಿತ್ತಲೆಂದೇ ಸಮವಸ್ತ್ರದ ಪರಿಕಲ್ಪನೆ ಮೂಡಿಬಂದಿದೆ ಎಂದಿದೆ.

Advertisement

ಈ ವರ್ಷದ ಆದಿಯಲ್ಲಿ ಉಡುಪಿ ಸರಕಾರಿ ಕಾಲೇಜಿನಲ್ಲಿ ಹಿಜಾಬ್‌ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜಿನ ಆಡಳಿತ ಮಂಡಳಿ, ತರಗತಿ ಪ್ರವೇಶವನ್ನು ನಿರ್ಬಂಧಿಸಿತ್ತು. ಆ ಬಳಿಕ ಪ್ರಕರಣ ತಾರಕಕ್ಕೇರಿತ್ತು. ಹಲವು ಜಿಲ್ಲೆಗಳಲ್ಲಿ ಇದೇ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಲು ಪ್ರಯತ್ನಿಸಿದಾಗ, ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರಲು ಯತ್ನಿಸಿದರು. ಈ ಬೆಳವಣಿಗೆ ರಾಜ್ಯದಲ್ಲಿ ಕೊಂಚ ಅಶಾಂತಿಯ ವಾತಾವರಣವನ್ನು ಸೃಷ್ಟಿಸಿತು. ಸರಕಾರವೂ ಶಾಲಾ-ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಿತು. ಇದನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಇತರರು ಹೈಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಿದರು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ತ್ರಿಸದಸ್ಯ ಪೀಠ ಫೆ.25ರಂದು ತೀರ್ಪನ್ನು ಕಾಯ್ದಿರಿಸಿತ್ತು. ಮಂಗಳವಾರ ತೀರ್ಪನ್ನು ಪ್ರಕಟಿಸಿದ ನ್ಯಾಯಪೀಠವು, ಹಿಜಾಬ್‌ ಧಾರಣೆ ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆ ಅಲ್ಲವಾಗಿದ್ದು ಶಾಲಾ ಸಮವಸ್ತ್ರದ ಕುರಿತಂತೆ ಆದೇಶ ಹೊರಡಿಸಲು ಸರಕಾರ ಮತ್ತು ಶಾಲಾಡಳಿತ ಮಂಡಳಿಗಳಿಗೆ ಪೂರ್ಣ ಅಧಿಕಾರವಿದೆ ಎಂದಿದೆ.

ತೀರ್ಪು ಹೊರಬೀಳುತ್ತಿದ್ದಂತೆಯೇ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತ ವಾಗತೊಡಗಿವೆ. ಅರ್ಜಿದಾರರಲ್ಲಿ ಕೆಲವರು ಸುಪ್ರೀಂ ಕೋರ್ಟ್‌ಗೆ ಮೇ ಲ್ಮನವಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್‌ ಅಭಿಪ್ರಾಯ ನೀಡುವವರೆಗೆ ವಿವಾದಕ್ಕಿಂತ ಮೊದಲಿದ್ದ ಶಾಂತಿಯುತ ಶೈಕ್ಷಣಿಕ ವಾತಾವರಣವನ್ನು ಮರು ಸ್ಥಾಪಿಸಿ ಎಲ್ಲ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಕಾಪಾಡುವುದು ಸರಕಾರ ಸೇರಿದಂತೆ ಎಲ್ಲರ ಕರ್ತವ್ಯವೂ ಸಹ. ಎಲ್ಲ ಸಂಘಟನೆಗಳು, ಸಮುದಾಯದ ಮುಖಂಡರೂ ಈ ವಿಷಯವನ್ನು ಪ್ರತಿಷ್ಠೆಯಾಗಿಸಿಕೊಳ್ಳದೆ ಜವಾಬ್ದಾರಿ ಮೆರೆಯಬೇಕು.

ಈಗ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆಗಳು ಆರಂಭಗೊಂಡಿವೆ. ಈ ಹಂತದಲ್ಲಿನ ಯಾವುದೇ ನಡೆ ಮಕ್ಕಳು,ಪೋಷಕರಲ್ಲಿ ಗೊಂದಲ, ಆತಂಕ ಸೃಷ್ಟಿಸುವಂತಿರಬಾರದು. ಪೋಷಕರು ಹಾಗೂ ವಿದ್ಯಾರ್ಥಿಗಳು ಶೈಕ್ಷಣಿಕ ವಾತಾವರಣ ಹದಗೆಡಿಸುವ ಯಾವುದೇ ಪ್ರಸ್ತಾವವನ್ನೂ ಬೆಂಬಲಿಸಬಾರದು. ಇದುವೇ ವಿವಾದವನ್ನು ಜೀವಂತವಾಗಿರಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುವವರಿಗೆ ಕಲಿಸ ಬಹುದಾದ ಪಾಠ.

ಸರಕಾರವೂ ವಿಷಯ ನ್ಯಾಯಾಲಯದಲ್ಲಿದೆ ಎಂಬ ಕಾರಣಕ್ಕೆ ತರಗತಿ ಗಳನ್ನು ವಜಾಗೊಳಿಸುವ, ಪರೀಕ್ಷೆಗಳನ್ನು ಮುಂದೂಡುವ ತೀರ್ಮಾನಕ್ಕೆ ಬರಬಾರದು. ಇಂಥ ಪರಿಸ್ಥಿತಿಗೆ ಯಾವುದೇ ಸಮುದಾಯವಾಗಲಿ, ಸಂಘಟನೆಯಾಗಲಿ ಆಸ್ಪದ ನೀಡಬಾರದು. ತಾಳ್ಮೆಯಿಂದ ವರ್ತಿಸುವುದು ನಮ್ಮದೇ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಪೂರಕವಾದ ನಡೆ. ಹಾಗಾಗಿ ಈ ಗುರುತರ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವುದೇ ಎಲ್ಲರ ಮುಂದಿರುವ ಸದ್ಯದ ಮಧ್ಯಮ ಮಾರ್ಗ.

Advertisement
Advertisement

Udayavani is now on Telegram. Click here to join our channel and stay updated with the latest news.

Next