ಚಿತ್ರದುರ್ಗ: ರಾಜ್ಯಾದ್ಯಂತ ಕೋವಿಡ್- 19 ಪರೋಕ್ಷ ಸೋಂಕಿತರ ಪರೀಕ್ಷೆ ನಡೆಸಲು ಟಾಸ್ಕ್ ಫೋರ್ಸ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಚಿತ್ರದುರ್ಗದಲ್ಲಿ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈವರೆಗೆ ರಾಜ್ಯದಲ್ಲಿ 247 ಕೋವಿಡ್-19 ಪಾಸಿಟೀವ್ ಪ್ರಕರಣ ಪತ್ತೆಯಾಗಿವೆ. 8 ಜನ ಮೃತಪಟ್ಟಿದ್ದಾರೆ. 60 ಜನ ಗುಣಮುಖರಾಗಿದ್ದಾರೆ ಎಂದರು.
ಇಲ್ಲಿಯತನಕ ಕೋವಿಡ್ -19 ಪರೀಕ್ಷೆಗಳನ್ನು ಪ್ರಾಥಮಿಕ ಹಂತದಲ್ಲಿ ಮಾಡಲಾಗುತ್ತಿತ್ತು. ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೆಕೆಂಡರಿ ಕಾಂಟ್ಯಾಕ್ಟ್ ಟೆಸ್ಟ್ ಮಾಡಿಸುತ್ತಿದ್ದೇವೆ ಎಂದರು.
ಸೋಂಕು ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಸಪ್ತ ಸೂತ್ರಗಳನ್ನು ಕೊಟ್ಟಿದ್ದಾರೆ. ಹಿರಿಯರು, ವಯಸ್ಸಾದವರನ್ನು ಕಾಳಜಿಯಿಂದ ನೊಡಿಕೊಳ್ಳಲು ಹೇಳಿದ್ದಾರೆ. ಹಸಿವಿನಿಂದ ಯಾರೂ ಬಳಲಬಾರದು. ಜನರ ಬಳಿ ಬಿಪಿಎಲ್ ಕಾರ್ಡ್ ಇರಲಿ ಇಲ್ಲದಿರಲಿ ಪಡಿತರ ನೀಡಲು ಸೂಚಿಸಿದ್ದೇವೆ. ಬಡವರು ಶ್ರೀಮಂತರೆಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಆಹಾರ ಒದಗಿಸುತ್ತೇವೆ ಎಂದರು.
ಈ ಹಂತದಲ್ಲಿ ಯಾವುದೇ ಸಂಸ್ಥೆಗಳು ನೌಕರರನ್ನು ಕೆಲಸದಿಂದ ತೆಗೆಯಬಾರದು. N 95 ಮಾಸ್ಕ್ ಗಳನ್ನು ಎಲ್ಲರೂ ಬಳಸುವ ಅಗತ್ಯವಿಲ್ಲ. ವೈದ್ಯಕೀಯ ಸಿಬ್ಬಂದಿ, ಪೊಲೀಸರು ಮಾತ್ರ ಬಳಸಿ. ಉಳಿದವರು ಬಟ್ಟೆ ಮಾಸ್ಕ್ ಬಳಸಬಹುದು ಎಂದು ಹೇಳಿದರು.
ಬ್ಯಾರಿಕೇಡ್ ಗಳನ್ನು ಹಾಕಿ ರೈತರ ಬೆಳೆಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಬೇಕು. ಕೋವಿಡ್19 ಸೋಂಕು ಪತ್ತೆ ಮಾಡಲು ರಾಜ್ಯದಲ್ಲಿ 16 ಪ್ರಯೋಗಾಲಯ ಇವೆ. ಅಗತ್ಯ ಬಿದ್ದರೆ ಮತ್ತಷ್ಟು ಲ್ಯಾಬ್ ತೆರೆಯುತ್ತೇವೆ ಎಂದರು.