Advertisement

35 ಘನತ್ಯಾಜ್ಯ ಘಟಕ ನಿರ್ಮಿಸಲು ನಿರ್ಧಾರ

08:53 AM May 28, 2019 | Suhan S |

ಚಿಕ್ಕಮಗಳೂರು: ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲೂ ಘನತ್ಯಾಜ್ಯ ನಿರ್ವಹಣೆ ಮಾಡಲು ಜಿಲ್ಲಾ ಪಂಚಾಯತ್‌ ಆಲೋಚಿಸಿದೆ. ಈ ವರ್ಷ ಒಟ್ಟು 35 ಘನತ್ಯಾಜ್ಯ ಘಟಕಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

Advertisement

ಸೋಮವಾರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್‌.ಅಶ್ವತಿ, ಪ್ರಾಯೋಗಿಕವಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 11 ಘನತ್ಯಾಜ್ಯ ಘಟಕಗಳನ್ನು ಆರಂಭ ಮಾಡುವುದಾಗಿ ತಿಳಿಸಿದರು.

ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆ ಮತ್ತು ಅಲ್ಲಂಪುರ ಗ್ರಾಮಗಳಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ಇಂದಾವರದಲ್ಲಿ ನಗರಸಭೆ ತ್ಯಾಜ್ಯ ವಿಲೇವಾರಿ ಮಾಡುವ ಜಾಗದಲ್ಲೇ ಸಂಗ್ರಹಿಸಲು ಘಟಕ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಕಡೂರು ತಾಲೂಕಿನ ಸಿಂಗಟಗೆರೆ ಮತ್ತು ಯಗಟಿ ಗ್ರಾಮಗಳಲ್ಲಿ ಹಳೆಯ ಕಟ್ಟಡವೊಂದು ಲಭ್ಯವಿದ್ದು, ಅಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭವಾಗಲಿದೆ. ಮೂಡಿಗೆರೆ ತಾಲೂಕಿನ ಕಳಸಾದಲ್ಲಿ ಘಟಕ ನಿರ್ಮಾಣಕ್ಕೆ ಸ್ಥಳ ಮಂಜೂರಾಗಿದೆ. ಈ ತಾಲೂಕಿನ ಕಿರಗುಂದ, ಚಿನ್ನಿಗ, ಹಂತೂರು ಮತ್ತು ಗೋಣಿಬೀಡು ಗ್ರಾಮಗಳ ಘನತ್ಯಾಜ್ಯವನ್ನು ಕಿರಗುಂದ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುವ ಘಟಕದಲ್ಲಿ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

ನರಸಿಂಹರಾಜಪುರ ಮುತ್ತಿನಕೊಪ್ಪ ಗ್ರಾಮದಲ್ಲೂ ಘನತ್ಯಾಜ್ಯ ವಿಲೇವಾರಿಗೆ ಜಾಗ ಗುರುತಿಸಲಾಗಿದೆ. ತರೀಕೆರೆ ತಾಲೂಕಿನ ಅಮೃತಾಪುರ, ಹಾದಿಕೆರೆ ಮತ್ತು ನೇರಲೆಕೆರೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಹಂತದಲ್ಲಿದೆ. ಅಮೃತಾಪುರಕ್ಕೆ ಈಗಾಗಲೇ 14 ಲಕ್ಷ ರೂ. ಬಿಡುಗಡೆಯಾಗಿದೆ. ಈ ತಾಲೂಕಿನ ಲಕ್ಕವಳ್ಳಿ ಮತ್ತು ಬುಕ್ಕಂಬುದಿಯಲ್ಲಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಜಾಗದಲ್ಲಿ ಘಟಕ ನಿರ್ಮಿಸಲು ಚಿಂತನೆ ಮಾಡಲಾಗಿದೆ. ಈ ಎಲ್ಲಾ ಘಟಕಗಳ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದು ವಿಸ್ತೃತ ಯೋಜನಾ ವರದಿ ತಯಾರಾಗಿದೆ ಎಂದರು.

Advertisement

ಗ್ರಾಮಾಂತರ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣೆಯ ಅಗತ್ಯತೆ, ಉದ್ದೇಶ ಹಾಗೂ ಅನುಕೂಲದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಮನೆಗಳಲ್ಲೇ ಕರಗುವ ಹಾಗೂ ಒಣಕಸ ಬೇರ್ಪಡಿಸಿ ನೀಡುವ ಬಗ್ಗೆ ಮಾಹಿತಿ ನೀಡಿ ಜನರನ್ನು ಮಾನಸಿಕವಾಗಿ ಸಿದ್ಧಪಡಿಸಬೇಕಾಗಿದೆ. ಮೇ ತಿಂಗಳಿನಿಂದಲೇ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಶಿಬಿರಗಳನ್ನು ಆರಂಭಸಲಾಗುವುದು ಎಂದು ತಿಳಿಸಿದರು.

ಈ ಕಾಮಗಾರಿಗೆ ಹಣವನ್ನು ಸ್ವಚ್ಛ ಭಾರತ ಮಿಷನ್‌ ನೀಡಲಿದೆ. ತರಬೇತಿಯನ್ನು ಸಹ ಇದರಲ್ಲಿ ಅನುಭವವಿರುವವರು ಕೊಡುತ್ತಾರೆ. ಜನಕ್ಕೆ ಘನತ್ಯಾಜ್ಯ ನಿವಾರಣೆಯ ಒಳ್ಳೆಯ ಪರಿಣಮಗಳ ಬಗ್ಗೆ ಹಾಗೂ ಭೂಮಿಯಲ್ಲಿ ಕರಗುವ ಕಸ ಮತ್ತು ಕರಗದೆ ಇರುವ ಕಸದ ಬಗ್ಗೆ ವಿವಿರಿಸಿ ಹೇಳುವ ಮೂಲಕ ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡದಿದ್ದರೆ ಆಗುವ ಪರಿಣಾಮಗಳ ಬಗ್ಗೆ ಸಹ ಮನವರಿಕೆ ಮಾಡಬೇಕು. ಇಲ್ಲದಿದ್ದರೆ ಇದು ಈ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಮೊದಲು ತಿಳುವಳಿಕೆ ಶಿಬಿರಗಳನ್ನು ಅಯೋಜಿಸಿದ ನಂತರವಷ್ಟೇ ಕಸ ಸಂಗ್ರಹಣಾ ಕಾರ್ಯಕ್ರಮ ಆರಂಭಿಸುವುದು ಸೂಕ್ತ ಎಂದು ತಿಳಿಸಿದರು.

ಹಸಿ ಹಾಗೂ ಒಣ ಕಸವನ್ನು ಮನೆಗಳ ಹಂತದಲ್ಲೇ ಬೇರ್ಪಡಿಸಿ ನೀಡಿದಾಗ ಹಸಿ ಕಸವನ್ನು ಉತ್ತಮ ಸಾವಯವ ಗೊಬ್ಬರವನ್ನಾಗಿಸಬಹುದು. ಬಳಸಿ ಎಸೆಯುವ ಕೋಳಿಮೊಟ್ಟೆಯ ಕವಚದಿಂದ ಕ್ಯಾಲ್ಸಿಯಂ ಪುಡಿ ತಯಾರಿಸಲು ಸಾಧ್ಯವಿದೆ.

ಪ್ಲಾಸ್ಟಿಕ್‌ನ ಅಪಾಯಗಳನ್ನು ತಿಳಿಸಿ ಸಾಧ್ಯವಾದಷ್ಟು ಬಳಸದಂತೆ ಹಾಗೂ ಅದರ ಪುನರ್‌ಬಳಕೆ ಮತ್ತು ಮರುಬಳಕೆ ಬಗ್ಗೆ ಜಾಗೃತಿ ಮೂಡಿಸಿದಾಗ ಜನರಲ್ಲಿ ಕಸವನ್ನು ಯಾವ ರೀತಿ ವಿಲೇವಾರಿ ಮಾಡಬಹುದೆಂಬುದು ಅರ್ಥವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next