Advertisement

ಅರಸು ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ 

05:04 PM Aug 08, 2018 | |

ಹುಬ್ಬಳ್ಳಿ: ತಾಲೂಕಾಡಳಿತದಿಂದ ಆ. 20ರಂದು ಬೆಳಗ್ಗೆ 10:30 ಗಂಟೆಗೆ ತಾಪಂ ಸಭಾಭವನದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 103ನೇ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.

Advertisement

ಅಪರ ತಹಶೀಲ್ದಾರ್‌ ಪ್ರಕಾಶ ನಾಶಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಪ್ರತಿ ವರ್ಷದಂತೆ ಡಿ. ದೇವರಾಜ ಅರಸು ಭಾವಚಿತ್ರಕ್ಕೆ ಪುಷ್ಪಾರ್ಪಣೆ, ಸಂಪನ್ಮೂಲ ವ್ಯಕ್ತಿಯಿಂದ ಉಪನ್ಯಾಸ ಆಯೋಜಿಸಲಾಗುವುದು. ಹಿಂದುಳಿದ ವರ್ಗದ ವಸತಿ ನಿಲಯದಲ್ಲಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಇಲಾಖೆಯ ಹೊಲಿಗೆ ಕೇಂದ್ರದಲ್ಲಿ ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಗುವುದು ಎಂದರು.

ಸಮಾಜದ ಮುಖಂಡರು ಮಾತನಾಡಿ, ಕಳೆದ ವರ್ಷ ಕೆಲವೊಂದು ಸಮಸ್ಯೆಗಳಾಗಿದ್ದು ಅವುಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಿ ಎಂದರು. ಕಳೆದ ವರ್ಷ ಆಗಮಿಸಿದ ಜನರಿಗೆ ಕುಳಿತುಕೊಳ್ಳಲು ಆಗದಂತಹ ಸ್ಥಿತಿ ಇತ್ತು. ಸೌಂಡ್‌ ಸಿಸ್ಟ್‌ಂ ವ್ಯವಸ್ಥೆ ಸರಿ ಇರಲಿಲ್ಲ. ಈ ಬಾರಿ ಅಂತಹ ಸಮಸ್ಯೆ ಮರುಕಳಿಸದಂತೆ ಉತ್ತಮ ರೀತಿಯಲ್ಲಿ ಆಚರಣೆ ಮಾಡೋಣ ಎಂದರು.

ಡಿ. ದೇವರಾಜ ಅರಸು ಅವರ ವಿಚಾರಧಾರೆಗಳು, ಅವರು ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ತಿಳಿಸುವ ಮಾಹಿತಿಯುಳ್ಳ ಕೈಪಿಡಿಯನ್ನು ಆಗಮಿಸಿದ ಜನರಿಗೆ ನೀಡಬೇಕು ಎಂದು ಮುಖಂಡರು ಹೆಳಿದರು. ಇದಕ್ಕೆ ಇಲಾಖೆಯಿಂದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹಿಂದುಳಿದ ಇಲಾಖೆಯ ಅಧಿಕಾರಿ ಶಶಿಕಲಾ ಬಿರಾದಾರ ಹೇಳಿದರು. ಬಾಬು ಪೂಜಾರ, ವೈ.ಎನ್‌. ಬಾಗಲಕೋಟೆ, ಸಂಜಯ ಬುಗಡಿ, ಪವನಕುಮಾರ, ಡಿ.ಟಿ. ಪಾಟೀಲ ಸೇರಿದಂತೆ ತಾಲೂಕು ಆಡಳಿತ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next