Advertisement

Maharashtra ಮರಾಠ ಮೀಸಲು ದಶಕಗಳ ಗುದ್ದಾಟ; ಯಾರಿದು ಮನೋಜ್‌ ಜಾರಂಗೆ?

12:45 AM Nov 03, 2023 | Team Udayavani |

ಮಹಾರಾಷ್ಟ್ರದಲ್ಲಿ ಬಹುಸಂಖ್ಯಾಕರಿರುವ ಮರಾಠಿಗರ ಮೀಸಲಾತಿಗಾಗಿ ದಶಕಗಳಿಂದಲೇ ಹೋರಾಟ ನಡೆಯುತ್ತಿದೆ. ಈಗ ಮರಾಠ ನಾಯಕ ಮನೋಜ್‌ ಜಾರಂಗೆ ಎಂಬವರು ಹೋರಾಟದ ನೇತೃತ್ವ ವಹಿಸಿದ್ದು, ಸರಕಾರದ ಭರವಸೆ ಹಿನ್ನೆಲೆಯಲ್ಲಿ ಗುರುವಾರ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಹಿಂಸಾಚಾರವೂ ನಡೆದಿದೆ. ಮಹಾರಾಷ್ಟ್ರದ ಸರ್ವಪಕ್ಷ ಸಭೆಯಲ್ಲೂ ಮರಾಠಿಗರಿಗೆ ಮೀಸಲು ನೀಡುವ ಸಂಬಂಧ ಸರ್ವಸಮ್ಮತ ನಿರ್ಧಾರ ತೆಗೆದುಕೊಳ್ಳಲಾಗಿದೆ.

Advertisement

ಮರಾಠ ವರ್ಸಸ್‌ ಮರಾಠಿಗ

ಮಹಾರಾಷ್ಟ್ರದ ಜನಸಂಖ್ಯೆಯಲ್ಲಿ ಮರಾಠಿಗರ ಸಂಖ್ಯೆಯೇ ಶೇ.33ರಷ್ಟಿದೆ. ಇಲ್ಲಿ ಜಮೀನ್ದಾರರಿಂದ ರೈತರು, ವಾರಿಯರ್ಸ್‌ವರೆಗೂ ಮರಾಠರಿದ್ದಾರೆ. ಇದರಲ್ಲಿ ವಿವಿಧ ಜಾತಿಗಳು ಇವೆ ಎಂಬುದು ವಿಶೇಷ. ಮರಾಠ ಕ್ಷತ್ರಿಯರಲ್ಲಿ ದೇಶ್‌ಮುಖ್‌, ಭೋನ್ಸೆ, ಮೋರೆ, ಶಿರ್ಕೆ ಮತ್ತು ಜಾಧವ ಎಂಬ ಸರ್‌ನೇಮ್‌ ಉಳ್ಳವರಿದ್ದಾರೆ. ಉಳಿದವರು ಕುಣಬಿ ಎಂಬ ಉಪಜಾತಿಗೆ ಸೇರಿದವರೂ ಇದ್ದಾರೆ. ಮರಾಠ ಸಾಮ್ರಾಜ್ಯದ ಕಾಲದಿಂದಲೂ ಕ್ಷತ್ರಿಯ ಮತ್ತು ಕುಣಬಿ ನಡುವೆ ವ್ಯತ್ಯಾಸಗಳಿದ್ದವು. ಆದರೆ ಈಗ ಬಹುತೇಕ ಮರಾಠರು ವ್ಯವಸಾಯದಲ್ಲಿ ನಿರತರಾಗಿದ್ದಾರೆ. ವಿಶೇಷವೆಂದರೆ ಎಲ್ಲ ಮರಾಠರು ಮರಾಠಿಗರು. ಆದರೆ ಎಲ್ಲ ಮರಾಠಿಗರು ಮರಾಠರಲ್ಲ! ಇವರನ್ನು ಬೇರೆ ಮಾಡುವುದು ಜಾತಿಗಳು. ಒಟ್ಟಾರೆಯಾಗಿ 91 ಕುಲಗಳಿವೆ ಎಂಬ ವಾದವಿದೆ.

ಮೀಸಲಾತಿಗಾಗಿ ಬೇಡಿಕೆ ಏಕೆ?

ಮಹಾರಾಷ್ಟ್ರ ಜನಸಂಖ್ಯೆಯಲ್ಲಿ ಶೇ.33ರಷ್ಟಿರುವ ಮರಾಠಿಗರು ಅತ್ಯಂತ ಪ್ರಭಾವಿ ಸಮುದಾಯಕ್ಕೆ ಸೇರಿದವರು. ದೇಶ ಮತ್ತು ರಾಜ್ಯದ ರಾಜಕೀಯದಲ್ಲೂ ತಮ್ಮದೇ ಆದ ಪ್ರಭಾವ ಇರಿಸಿಕೊಂಡಿದ್ದಾರೆ. 31 ವರ್ಷಗಳ ಕಾಲ ಈ ರಾಜ್ಯಕ್ಕೆ ಮರಾಠಿಗರೇ ಸಿಎಂಗಳಾಗಿದ್ದಾರೆ. ವಿಶೇಷವೆಂದರೆ, ಮರಾಠಿಗರ ಜನಸಂಖ್ಯೆ ಹೆಚ್ಚಾಗಿದ್ದರೂ, ಇವರಲ್ಲಿ ಬಹುತೇಕ ಮಂದಿ ಕಡಿಮೆ ಭೂಮಿ ಹೊಂದಿದವರಾಗಿದ್ದು, ಸಣ್ಣ ಪುಟ್ಟ ಪ್ರಮಾಣದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಮಳೆ ಹೋದಾಗಲೆಲ್ಲ ರೈತರು ಭಾರೀ ಪ್ರಮಾಣದಲ್ಲಿ ಕಷ್ಟ ಅನುಭವಿಸುತ್ತಾರೆ. ಹೀಗಾಗಿಯೇ ನಮಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಬೇಕು ಎಂಬುದು ಅವರ ಬೇಡಿಕೆ. ಸದ್ಯ ಮಹಾರಾಷ್ಟ್ರ ಸರಕಾರವು ಮರಾಠವಾಡದಲ್ಲಿರುವ ಮರಾಠಿಗರಿಗೆ ಕುಣಬಿ ಮೀಸಲಾತಿ ಪ್ರಮಾಣ ಪತ್ರ ನೀಡಲು ಮುಂದಾಗಿದೆ. ಆದರೆ ಮನೋಜ್‌ ಜಾರಂಗೆ ಅವರು ಎಲ್ಲ ಮರಾಠಿಗರಿಗೂ ಮೀಸಲಾತಿ ನೀಡುವ ವರೆಗೆ ಹೋರಾಟ ಕೈಬಿಡಲ್ಲ ಎಂದು ಹೇಳುತ್ತಿದ್ದಾರೆ.

Advertisement

ಹೋರಾಟದ ಹಾದಿ

1982: ಮೀಸಲಾತಿಗಾಗಿ ಮರಾಠರು ನಡೆಸುತ್ತಿರುವ ಹೋರಾಟ ಇಂದು, ನಿನ್ನೆಯದಲ್ಲ. 1982 ರಿಂದ ಈ ಹೋರಾಟ ನಡೆದಿದೆ. ಆ ವರ್ಷ ಕಾರ್ಮಿಕ ಹೋರಾಟಗಾರ ಅಣ್ಣಾ ಸಾಹೇಬ್‌ ಆರ್ಥಿಕತೆ ಆಧಾರದಲ್ಲಿ ಮರಾಠರಿಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದರು. ಮೀಸಲು ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಣ್ಣಾ ಸಾಹೇಬ್‌ ಬೆದರಿಕೆ ಹಾಕಿದ್ದರು. ಆದರೆ ಕಾಂಗ್ರೆಸ್‌ ಸರಕಾರ ಈ ಬೆದರಿಕೆಗೆ ಕಿವಿಗೊಡಲಿಲ್ಲ. ಕಡೆಗೆ ಅಣ್ಣಾ ಸಾಹೇಬ್‌ ಆತ್ಮಹತ್ಯೆ ಮಾಡಿಕೊಂಡಿದ್ದರು.

1990ರಲ್ಲಿ ಮಂಡಲ್‌ ಆಯೋಗ ಜಾರಿಯಾದ ಮೇಲೆ ಆರ್ಥಿಕತೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂಬ ವಾದ ಕಡಿಮೆಯಾಯಿತು.

2004ರಲ್ಲಿ ಮಹಾ ಸರಕಾರ ಮರಾಠ-ಕುಣಬಿ ಮತ್ತು ಕುಣಬಿ-ಮರಾಠಿಗರನ್ನು ಇತರ ಹಿಂದುಳಿದ ವರ್ಗಕ್ಕೆ ಸೇರಿಸಿತು. ಈ ಸಂದರ್ಭದಲ್ಲಿ ಮರಾಠ ಎಂದು ಗುರುತಿಸಿಕೊಂಡವರನ್ನು ಪಟ್ಟಿಯಿಂದ ಕೈಬಿಡಲಾಯಿತು. ಹೀಗಾಗಿ ಕುಣಬಿ ಜನಾಂಗ ಈಗಾಗಲೇ ಒಬಿಸಿಯಲ್ಲಿ ಸೇರ್ಪಡೆಯಾಗಿದೆ. ಮರಾಠ ಮುಖಂಡರು, ತಮ್ಮ ಜನಾಂಗವನ್ನು ಒಬಿಸಿಗೆ ಸೇರಿಸಬೇಕು ಎಂದು ಆಗ್ರಹಿಸುತ್ತಲೇ ಇದ್ದಾರೆ.

2014ರಲ್ಲಿ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ನಾರಾಯಣ ರಾಣೆ ಅವರು ಮರಾಠರಿಗೆ ಶೇ.16 ಮತ್ತು ಮುಸ್ಲಿಮರಿಗೆ ಶೇ.5ರಷ್ಟು ಮೀಸಲಾತಿ ನೀಡಿದ್ದರು. ಈ ನಿರ್ಧಾರವನ್ನು ಬಾಂಬೆ ಹೈಕೋರ್ಟ್‌ ವಜಾ ಮಾಡಿತು.

2018ರಲ್ಲಿ ಮಹಾರಾಷ್ಟ್ರ ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಮೀಸಲಾತಿಗಾಗಿ ಮರಾಠ ಸಮುದಾಯ ತೀವ್ರತರನಾದ ಹೋರಾಟ ನಡೆಸಿದರೆ, ಇದಕ್ಕೆ ಪ್ರತಿಯಾಗಿ ಮೀಸಲಾತಿ ನೀಡಬಾರದು ಎಂದು ಪ್ರತಿಹೋರಾಟಗಳೂ ನಡೆದವು. ಆಗ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸರಕಾರವಿತ್ತು. ದೇವೇಂದ್ರ ಫ‌ಡ್ನವೀಸ್‌ ಮುಖ್ಯಮಂತ್ರಿಯಾಗಿದ್ದರು. 2018ರ ನ.30ರಂದು ಮರಾಠರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.16ರಷ್ಟು ಮೀಸಲಾತಿ ನೀಡಲು ಒಪ್ಪಿಗೆ ನೀಡಲಾಯಿತು.

ಕೋರ್ಟ್‌ನಲ್ಲಿ ತಡೆ

ಮೀಸಲಾತಿ ಕೊಟ್ಟಾಗಲೆಲ್ಲ ಕೋರ್ಟ್‌ಗಳು ಇದಕ್ಕೆ ತಡೆ ನೀಡಿವೆ. ಮೊದಲಿಗೆ ಬಾಂಬೆ ಹೈಕೋರ್ಟ್‌ ನಾರಾಯಣ ರಾಣೆ ಸರಕಾರದಲ್ಲಿ ನೀಡಲಾಗಿದ್ದ ಮೀಸಲಾತಿಯನ್ನು ರದ್ದು ಮಾಡಿತ್ತು. ದೇವೇಂದ್ರ ಫ‌ಡ್ನವೀಸ್‌ ಸರಕಾರದ ವೇಳೆ ಕೊಟ್ಟ ಮೀಸಲಾತಿ ನಿರ್ಧಾರವನ್ನೂ ಬಾಂಬೆ ಹೈಕೋರ್ಟ್‌ ಎತ್ತಿ ಹಿಡಿದು, ಉದ್ಯೋಗದಲ್ಲಿ ಶೇ.13 ಮತ್ತು ಶಿಕ್ಷಣದಲ್ಲಿ ಶೇ.12ರಷ್ಟು ಮೀಸಲಾತಿ ನೀಡಬಹುದು ಎಂದಿತ್ತು.  ಆದರೆ, ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿ, ಶೇ.50ರ ಮೀಸಲಾತಿ ಮಿತಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಸುದೀರ್ಘ‌ವಾಗಿ ವಿಚಾರಣೆ ನಡೆಸಿ ತೀರ್ಪು ನೀಡಿತ್ತು. ಈಗ ಮಹಾ ಸರಕಾರ ಮತ್ತೆ ಕ್ಯುರೇಟಿವ್‌ ಅರ್ಜಿ ದಾಖಲಿಸಿದ್ದು, ವಿಚಾರಣೆಗೆ ಬರಬೇಕಿದೆ.

ಯಾರಿದು ಮನೋಜ್‌ ಜಾರಂಗೆ?

ಮರಾಠ ಮೀಸಲಾತಿ ಹೋರಾಟದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿರುವ ಹೆಸರೇ ಮನೋಜ್‌ ಜಾರಂಗೆ ಪಟೇಲ್‌. ಅತ್ಯಂತ ಹೆಮ್ಮೆಯ ಮರಾಠಿಗ, ಸರಣಿ ಪ್ರತಿಭಟನಕಾರ ಮತ್ತು ಹಿಂದೊಮ್ಮೆ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದ ಮನೋಜ್‌ ಜಾರಂಗೆ ಈಗ ಮರಾಠವಾಡ ಜಿಲ್ಲೆಯಲ್ಲಿ ಅತೀದೊಡ್ಡ ಹೆಸರು. ಶಾಂತಿಯುತ ಪ್ರತಿಭಟನೆಯೇ ತಮ್ಮ ಧ್ಯೇಯ ಎಂದು ಹೇಳುವ ಜಾರಂಗೆ ಅವರಿಗೆ ಅಭೂತಪೂರ್ವ ಜನಬೆಂಬಲವೂ ಇದೆ.  ಈ ಹಿಂದಿನಂತೆ ಈ ಬಾರಿಯೂ ಮನೋಜ್‌ ಜಾರಂಗೆ ಅವರು ಮೊದಲ ಹಂತದಲ್ಲಿ ಆ.29ರಿಂದ ಮೀಸಲಾತಿಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಸಿಎಂ ಏಕನಾಥ ಶಿಂಧೆ ಅವರ ಭರವಸೆ ಹಿನ್ನೆಲೆಯಲ್ಲಿ ಮೊದಲ ಹಂತದ ಹೋರಾಟದಿಂದ ಹಿಂದೆ ಸರಿದಿದ್ದರು. ಆದರೆ ಮೊದಲ ಹಂತದಲ್ಲಿ ನೀಡಲಾಗಿದ್ದ ಭರವಸೆ ಈಡೇರಿಸಿಲ್ಲ ಎಂಬ ಕಾರಣಕ್ಕಾಗಿ ಮತ್ತೆ ಅ.25ರಂದು ಮನೋಜ್‌ ಜಾರಂಗೆ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿ, ಗುರುವಾರ ಸಂಜೆ ವಾಪಸ್‌ ತೆಗೆದುಕೊಳ್ಳಲಾಗಿದೆ. ಈಗ ಒಂದಷ್ಟು ಹಿಂಸಾಚಾರ ನಡೆದಿದ್ದು, ಪ್ರತಿಭಟನೆಯ ಕಾವು ಜೋರಾಗಿದೆ. ಸರ್ವಪಕ್ಷಗಳ ಸಭೆ ನಡೆದು, ಮರಾಠಿಗರಿಗೆ ಮೀಸಲಾತಿ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next