Advertisement

ಪ್ರಾಮಾಣಿಕ ಕೆಲಸ ಮಾಡಿ ಋಣ ತೀರಿಸುವೆ: ರವೀಂದ್ರನಾಥ್‌

03:13 PM Jun 29, 2018 | |

ದಾವಣಗೆರೆ: ಒಂದು ವರ್ಷದ ಅವಧಿಯಲ್ಲಿ ಶೇ. 90ರಷ್ಟು ಎಲ್ಲ ಕೆಲಸ ಮಾಡುವ ಮೂಲಕ ಜನರ ಋಣ ತೀರಿಸುವೆ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರ ನಾಥ್‌ ಹೇಳಿದ್ದಾರೆ.

Advertisement

ಗುರುವಾರ, ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಎಸ್‌. ನಿಜಲಿಂಗಪ್ಪ ಬಡಾವಣೆಯ ಎಸ್‌ .ಎ. ರವೀಂದ್ರನಾಥ್‌ ಅಭಿಮಾನಿಗಳ ಬಳಗದಿಂದ ಸನ್ಮಾನಿತರಾಗಿ ಮಾತನಾಡಿದ ಅವರು, ಜನರು ಸಾಕಷ್ಟು ಬೇಡಿಕೆ ಮಂದಿಡುತ್ತಿದ್ದಾರೆ. ಆ ಎಲ್ಲ ಬೇಡಿಕೆ ಈಡೇರಿಸಿಯೇ ತೀರುತ್ತೇನೆ. 15 ದಿನದಲ್ಲೇ ಎಲ್ಲಾ ಆಗಲು ಒತ್ತಾಯ ಮಾಡಬೇಡಿ. ಒಂದು ವರ್ಷ ಕಾಲಾವಕಾಶ ಕೊಡಿ. ಶೇ. 90ರಷ್ಟು ಕೆಲಸ ಮಾಡಿ, ಜನರ ಋಣ ತೀರಿಸುತ್ತೇನೆ ಎಂದರು. 

ಅಭಿನಂದನಾ ಸಮಾರಂಭದಲ್ಲಿ ಕೆಲವರು ನನ್ನನ್ನು ಹೊಗಳಿದ್ದಾರೆ. ನಾನು ಅಷ್ಟೊಂದು ಹೊಗಳಿಕೆಗೆ ಅರ್ಹನಲ್ಲ. ಕ್ಷೇತ್ರದ ಜನರು ನೀಡುವ ಸಲಹೆ, ಸೂಚನೆ ಸ್ವೀಕರಿಸಿ, ಕೆಲಸ ಮಾಡುತ್ತೇನೆ. ನಾನು ಸಹ ಬದಲಾಗಿ, ಪ್ರಾಮಾಣಿಕ ಕೆಲಸ ಮಾಡಿ ಋಣ ತೀರಿಸುತ್ತೇನೆ ಎಂದು ತಿಳಿಸಿದರು.

ಬಿಜೆಪಿಯಲ್ಲೇ ಇದ್ದರೆ ಅಧಿಕಾರ ಏನೂ ಸಿಗುವುದೇ ಇಲ್ಲ ಎಂದು ಅನೇಕರು ಬೇರೆ ಪಕ್ಷಕ್ಕೆ ಹೋದರು. ಏನೂ ಸಿಗದ ಪಕ್ಷದಲ್ಲೇ ಇದ್ದ ನಾನು 5 ಬಾರಿ ಶಾಸಕನಾಗಿದ್ದೇನೆ. ಯಾರು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಪಕ್ಷದ ಕೆಲಸ ಮಾಡುತ್ತಾರೋ ಅಂತಹವರನ್ನು ಗುರುತಿಸಿ, ಒಳ್ಳೆಯ ಸ್ಥಾನಮಾನ ಕೊಡುವುದು ಬಿಜೆಪಿಯಲ್ಲಿ ಮಾತ್ರ ಎಂದು ಹೇಳಿದರು. 

ಪಕ್ಷದ ಸಾಮಾನ್ಯ ಕಾರ್ಯಕರ್ತರು ಸಹ ಪ್ರಧಾನಿ ಆಗಬಹುದು ಎಂಬುದು ಸಾಬೀತಾಗಿರುವುದು ಸಹ ಬಿಜೆಪಿಯಲ್ಲಿ ಮಾತ್ರ. ಸಾಮಾನ್ಯ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿಯವರು ಪ್ರಧಾನಿ ಆಗಿರುವುದು ಅದಕ್ಕೆ ಸಾಕ್ಷಿ ಎಂದು ತಿಳಿಸಿದರು.

Advertisement

ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತನಾಡಿ, ಬಿಜೆಪಿ ಮುಖಂಡರಿಗೆ ಗೆಲುವು ಮತ್ತು ಸೋಲು ಎರಡೂ ಒಂದೇ. ಗೆದ್ದಾಗ ಹಿರಿ ಹಿರಿ ಹಿಗ್ಗದೆ, ಸೋತಾಗ ಕುಗ್ಗದೆ ಜನರ ಮಧ್ಯೆ ಇರುತ್ತಾರೆ. ರವೀಂದ್ರನಾಥ್‌ ಸೋತಾಗಲೂ ಮನೆಯಲ್ಲಿ ಕುಳಿತುಕೊಳ್ಳದೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಜನಮುಖೀಯಾಗಿ ಕೆಲಸ ಮಾಡಿದ್ದರಿಂದಲೇ 5 ಬಾರಿ ಶಾಸಕರಾಗಿದ್ದಾರೆ ಎಂದರು.
 
ರವೀಂದ್ರನಾಥ್‌ ಅವರ ಅಭಿನಂದನಾ ಸಮಾರಂಭವನ್ನೇ ಆತ್ಮವಲೋಕನಾ ಸಭೆಯನ್ನಾಗಿ ಭಾವಿಸಿ, ಮುಂದೆ ನಡೆಯುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಜ್ಜಾಗಬೇಕು. ಮೈ ಮರೆಯುವುದೇ ಬೇಡ. ಮೈ ಮರೆತ ಕಾರಣಕ್ಕೆ ಈಗ ನಗರಪಾಲಿಕೆಯಲ್ಲಿ ಕಾಂಗ್ರೆಸ್‌ನವರ ದುಂಡಾವರ್ತನೆ, ಜನರಿಗೆ ತೊಂದರೆ ಕೊಡುವುದನ್ನುಕಾಣುತ್ತಿದ್ದೇವೆ. ವಾರ್ಡ್‌ನಲ್ಲಿ ಯಾವುದೇ ಮೀಸಲಾತಿ ಬರಲಿ. ತಲೆಕೆಡಿಸಿಕೊಳ್ಳದೆ ಒಗ್ಗಟ್ಟಿನಿಂದ ಕೆಲಸ ಮಾಡಿ, ಮಹಾನಗರಪಾಲಿಕೆಯನ್ನ ಬಿಜೆಪಿ ಕೈಗೆ ತೆಗೆದುಕೊಳ್ಳೋಣ ಎಂದು ತಿಳಿಸಿದರು.

ಯುವ ಮುಖಂಡ ಎಚ್‌.ಎಸ್‌. ನಾಗರಾಜ್‌ ಮಾತನಾಡಿ, ದಾವಣಗೆರೆಯಲ್ಲಿ ನಮ್ಮನ್ನು ಸೋಲಿಸುವವರು ಯಾರೂ ಇಲ್ಲ ಎಂಬ ಮನೋಭಾವ ಇದ್ದವರು, ಹೆಂಗಿದ್ದರೂ ಗೆಲ್ಲುತ್ತೇವೆ ಅಂದುಕೊಂಡವರನ್ನು ಜನರು ಮನೆಗೆ ಕಳಿಸಿದ್ದಾರೆ. ರವೀಂದ್ರನಾಥ್‌ ಗೆಲುವು ದಾವಣಗೆರೆ ಜನರು ಮನಸ್ಸು ಮಾಡಿದರೆ ಬದಲಾವಣೆ ಮಾಡಬಲ್ಲರು ಎಂಬುದಕ್ಕೆ ಉದಾಹರಣೆ. ಎಲ್ಲರೂ ಈಗಿನಿಂದಲೇ ಕೆಲಸ ಮಾಡಿದಲ್ಲಿ ಮಹಾನಗರಪಾಲಿಕೆ ಬಿಜೆಪಿ ವಶವಾಗುವುದರಲ್ಲೇ ಅನುಮಾನವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮುಕುಂದಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಪಾಲಿಕೆ ಸದಸ್ಯ ಡಿ.ಎನ್‌. ಕುಮಾರ್‌, ಎಚ್‌.ಎನ್‌. ಶಿವಕುಮಾರ್‌, ಸೊಕ್ಕೆ ನಾಗರಾಜ್‌, ನಿಜಲಿಂಗಪ್ಪ ಲೇಔಟ್‌ ನಾಗರಿಕರ ಹಿತ ರಕ್ಷಣಾ ಸಮಿತಿ ಗೌರವಾಧ್ಯಕ್ಷ ಕೆ.ಸಿ. ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಎಸ್‌. ಸಿದ್ದಣ್ಣ ಇತರರು ಇದ್ದರು. ಪಿ.ಸಿ. ಮಹಾಬಲೇಶ್‌, ಡಾ| ಶಾಂತಾಭಟ್‌, ವೀಣಾ ಅವರನ್ನು ಸನ್ಮಾನಿಸಲಾಯಿತು.

ಎಲ್ಲರ ಕಾಲದಲ್ಲೂ ಅಭಿವೃದ್ಧಿ ಸಚಿವ ರವೀಂದ್ರನಾಥ್‌ ಅವರನ್ನು ಕಾಣಲಿಕ್ಕೆ ಯಾರ ಶಿಫಾರಸು ಬೇಕಾಗಿಯೇ ಇಲ್ಲ. ಅವರನ್ನು ನೇರವಾಗಿಯೇ ಭೇಟಿ ಮಾಡಬಹುದು. ಅದೇ ಹಿಂದಿನ ಸಚಿವರನ್ನು ಭೇಟಿ ಆಗಬೇಕಾದರೆ 5-6 ಜನರ ದಾಟಿ ಹೋಗಬೇಕಾಗುತ್ತಿತ್ತು. ಅಧಿಕಾರದಲ್ಲಿದ್ದಾಗ ಜನರಿಗೆ ಹತ್ತಿರವಾಗಿದ್ದವರಿಗೆ ಒಳ್ಳೆಯದಾಗುತ್ತದೆ ಎಂಬುದಕ್ಕೆ ರವೀಂದ್ರನಾಥ್‌ ಉದಾಹರಣೆ. ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ಜನರು ಸೋಲಿಸಿದ್ದಾರೆ ಎಂದು ಹಿಂದಿನ ಸಚಿವರು ತಿಳಿದಿದ್ದಾರೆ. ಅವರ ಕಾಲದಲ್ಲಿ ಮಾತ್ರ ಅಲ್ಲ, ಎಲ್ಲರ ಕಾಲದಲ್ಲೂ ಅಭಿವೃದ್ಧಿ ಕೆಲಸ ಆಗಿವೆ. ನಾಲ್ಕಾರು ಸಿಮೆಂಟ್‌ ರಸ್ತೆ ಮಾಡುವುದೇ ಅಭಿವೃದ್ಧಿ ಅಲ್ಲ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ವಾಗ್ಧಾಳಿ ನಡೆಸಿದರು. ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರು ಒಂದು ವರ್ಗದವರೇ ಮತ ಹಾಕಿದ್ದರಿಂದಲೇ ಗೆದ್ದಿದ್ದೇನೆ.

ಹಾಗಾಗಿ ನನಗೆ ಸನ್ಮಾನ ಏನು ಬೇಡ. ಮನೆಯ ಗೇಟ್‌ನಿಂದ ಹೊರಗೆ ಇರಿ ಎಂದು ಅವರದ್ದೇ ಪಕ್ಷದವರಿಗೆ ಹೇಳಿರುವುದನ್ನು ಕೇಳಿದರೆ ಆಶ್ಚರ್ಯ ಆಗುತ್ತದೆ. ಒಂದು ವರ್ಗದವರ ಮತಗಳಿಂದಲೇ ಗೆಲ್ಲಲ್ಲಿಕ್ಕೆ ಆಗುವುದೇ ಇಲ್ಲ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next