Advertisement

ಜಿಲ್ಲೆಯಲ್ಲಿ ಋಣಮುಕ್ತ ಅರ್ಜಿ ವಿತರಣೆ ಆರಂಭ

01:40 PM Sep 01, 2019 | Suhan S |

ರಾಮನಗರ: ಅಡಮಾನ ಸಾಲದಿಂದ ಮುಕ್ತಿ ಹೊಂದಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಕರ್ನಾಟಕ ಋಣಮುಕ್ತ ಕಾಯ್ದೆ ಮೊರೆ ಹೋದ ನಾಗರಿಕರು ಜಿಲ್ಲಾದ್ಯಂತ ಸುಮಾರು 10 ಸಾವಿರ ಮಂದಿ ಅರ್ಜಿ ನಮೂನೆಗಳನ್ನು ಪಡೆದುಕೊಂಡಿದ್ದಾರೆ.

Advertisement

ರಾಮನಗರವೊಂದರಲ್ಲೇ ಎರಡು ದಿನಗಳಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಅರ್ಜಿಗಳನ್ನು ಪಡೆದುಕೊಂಡಿದ್ದಾರೆ. ನಗರದ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ ಶನಿವಾರ ಸರದಿ ಸಾಲಿನಲ್ಲಿ ನಿಂತ 1600ಕ್ಕೂ ಹೆಚ್ಚು ನಾಗರಿಕರಿಗೆ ಅರ್ಜಿ ನಮೂನೆಗಳ ವಿತರಣೆಯಾಗಿದೆ. ಅರ್ಜಿ ನಮೂನೆ ವಿತರಿಸಲು ನಾಲ್ಕು ಕೌಂಟರ್‌ಗಳನ್ನು ತೆರೆಯಲಾಗಿದೆ. ನಾಗರಿಕರ ವಿಳಾಸ, ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು, ಅರ್ಜಿ ನಮೂನೆ ಕೊಡುತ್ತಿದ್ದ ಸಿಬ್ಬಂದಿ ನಂತರ ಉಪವಿಭಾಗಾಧಿಕಾರಿಗಳ ಸೂಚನೆ ಮೇರೆಗೆ ಅರ್ಜಿ ನಮೂನೆಗಳನ್ನು ಹಾಗೆಯೇ ವಿತರಿಸಿದರು.

ಸ್ಟಾಕ್‌ ಕ್ಲೋಸ್‌! ಮಂಗಳವಾರ ಬನ್ನಿ: ಶನಿವಾರ ಸುಮಾರು ಸಾವಿರ ಅರ್ಜಿಗಳನ್ನು ವಿತರಿಸಿದ ನಂತರ ಅರ್ಜಿ ನಮೂನೆಗಳು ಮುಗಿದು ಹೋಗಿವೆ. ಸೆ.3ರ ಮಂಗಳವಾರ ಬನ್ನಿ ಎಂದು ತಾಲೂಕು ಕಚೇರಿ, ಎಸಿ ಕಚೇರಿ ಸಿಬ್ಬಂದಿ ನೂರಾರು ಮಂದಿಯನ್ನು ವಾಪಸ್ಸು ಕಳುಹಿಸಿದ ಪ್ರಸಂಗವೂ ನಡೆಯಿತು. ಮಿನಿ ವಿಧಾನಸೌಧ ಕೆಳ ಮಹಡಿಯಲ್ಲಿ ಒಂದೆಡೆ ಆಧಾರ್‌ ನೋಂದಣಿ ಇನ್ನೊಂದೆಡೆ ಋಣ ಮುಕ್ತ ಕಾಯ್ದೆಯಡಿ ಅರ್ಜಿ ನಮೂನೆ ಪಡೆಯಲು ಸಾಲುಗಟ್ಟಿ ನಿಂತಿದ್ದು ಕಂಡು ಬಂತು.

ಕಂದಮ್ಮಗಳನ್ನು ಹೊತ್ತು ನಿಂತ ತಾಯಂದಿರು, ಬಸವಳಿದ ಹಿರಿಯ ನಾಗರಿಕರು, ಉದ್ಯೋಗಕ್ಕೆ ಹೋಗದೆ ಒಂದು ದಿನದ ಸಂಬಳ ಮಿಸ್‌ ಆಯ್ತಲ್ಲ ಎಂದು ಕೊರಗುತ್ತಾ ನಿಂತ ಕಾರ್ಮಿಕ ವರ್ಗ, ಮಳೆ ಇಲ್ಲದೆ ಕೃಷಿಯೂ ಇಲ್ಲದೆ, ಒಂದಿಷ್ಟು ಹಣ ಉಳಿಯಬಹುದಲ್ಲ ಎಂಬ ವಿಶ್ವಾಸದಲ್ಲಿ ನಿಂತರ ರೈತಾಪಿ ವರ್ಗ ಹೀಗೆ ಜನರ ಸಾಲು ಅರ್ಜಿ ನಮೂನೆ ಕೈಗೆ ಸಿಗುತ್ತಲೇ 2-3 ಗಂಟೆಗಳಲ್ಲೇ ಕರಗಿ ಹೋಯ್ತು. ಇನ್ನೂ ಮೂರು ವಾರ ಅರ್ಜಿ ನಮೂನೆಗಳನ್ನು ವಿತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ತಿಂಗಳ ಕಾಲಾವಕಾಶ: ಋಣಮುಕ್ತ ಕಾಯ್ದೆಯಡಿ ಪರಿಹಾರ ಪಡೆಯಲು ನಾಗರಿಕರು ಕಂದಾಯ ಇಲಾಖೆ ನೀಡಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅಧಿಕಾರಿಗಳಿಗೆ ಸಲ್ಲಿಸಬೇಕಾಗಿದೆ. ಹೀಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಅ.1 ಕೊನೆ ದಿನ.

Advertisement

ಅರ್ಜಿಯಲ್ಲಿ ಅರ್ಜಿದಾರರ ಹೆಸರು, ತಂದೆ ಅಥವಾ ಪತಿ ಹೆಸರು, ದೂರವಾಣಿ ಸಂಖ್ಯೆ, ಆಧಾರ್‌ ಸಂಖ್ಯೆ, ಲೇವಾದೇವಿದಾರರ ಹೆಸರು (ಸಾಲ ಕೊಟ್ಟವರು) ಮತ್ತು ವಿಳಾಸ, ಸಾಲ ಪಡೆದ ರಶೀದಿ ಸಂಖ್ಯೆ ನಮೂದಿಸಿ ಆಧಾರ್‌ ಮತ್ತು ಲೇವಾದೇವಿದಾರರು ನೀಡಿರುವ ರಶೀದಿಯ ಛಾಯಾ ಪ್ರತಿಗಳನ್ನು ಲಗತ್ತಿಸಬೇಕಾಗಿದೆ. ಸಣ್ಣ ರೈತರು ಮತ್ತು ಭೂ ರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗದವರು ಪ್ರತ್ಯೇಕವಾಗಿ ಮಾಹಿತಿ ಕೊಡಬೇಕಾಗಿದೆ.

ಯಾರು ಅರ್ಹರು?: ಭೂ ರಹಿತ ಕೃಷಿ ಕಾರ್ಮಿಕ ಈ ಅಧಿನಿಯಮದ ಪ್ರಾರಂಭದ ದಿನಾಂಕಕ್ಕೆ ಯಾವುದೇ ಭೂಮಿಯನ್ನು ಹೊಂದಿಲ್ಲದ ಮತ್ತು ಜಮೀನಿನಲ್ಲಿ ದೈಹಿಕ ಶ್ರಮ ದುಡಿಮೆಯು ಮುಖ್ಯವಾಗಿದೆ. ಅವನಿಗೆ ಅದು ಜೀವನ ಆಧಾರವಾಗಿರಬೇಕು. ಅಂತಹ ವ್ಯಕ್ತಿಯು ಈ ಕಾಯ್ದೆಯ ವ್ಯಾಪ್ತಿಯಲ್ಲಿ ಅರ್ಹರಿದ್ದಾರೆ. ಸಣ್ಣರೈತ, ಈ ಅಧಿನಿಯಮದ ಪ್ರಾರಂಭದ ದಿನಾಂಕದಂದು, ಎರಡು ಘಟಕಗಳಿಗಿಂತ ಹೆಚ್ಚಿಲ್ಲದ ಜಮೀನನ್ನು, ಅದರ ಮಾಲೀಕನಾಗಿ, ಗುತ್ತಿಗೆದಾರನಾಗಿ ಅಥವಾ ಅಡಮಾನದಾರನಾಗಿ ಅಥವಾ ಭಾಗಶಃ ಒಂದು ಅನುಭವದಲ್ಲಿ ಮತ್ತು ಭಾಗಶಃ ಇನ್ನೊಂದರಲ್ಲಿ ತನ್ನ ಸ್ವಾಧೀನದಲ್ಲಿ ಹೊಂದಿರುವ, ಅದರಿಂದ ಬರುವ ವಾರ್ಷಿಕ ಆದಾಯವು 1.20 ಲಕ್ಷ ರೂ. ಮೀರದಿರುವ ಮತ್ತು ಕೃಷಿಯಿಂದಲ್ಲದೆ ಬೇರೆ ಯಾವ ಮೂಲದಿಂದಲೂ ಆದಾಯಲ್ಲದ ವ್ಯಕ್ತಿಯೂ ಅರ್ಹನಾಗಿರುತ್ತಾನೆ.

ದುರ್ಬಲ ವರ್ಗಗಳ ಜನರು ಅಂದರೆ, ಸಣ್ಣ ರೈತರಲ್ಲದ ಅಥವಾ ಭೂರಹಿತ ಕೃಷಿ ಕಾರ್ಮಿಕರಲ್ಲದ ಅವರ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 1.20 ಲಕ್ಷಗಳನ್ನು ಮೀರದ ಜನರು ಈ ಕಾಯ್ದೆಯ ಪ್ರಯೋಜನವನ್ನು ಪಡೆಬಹುದಾಗಿದೆ.

ಕಾಯ್ದೆಯಡಿ ಬರದ ಸಾಲಗಳು: ಕರ್ನಾಟಕ ಋಣ ಪರಿಹಾರ ಕಾಯ್ದೆಯು ಸಾಲಗಾರನೇ ಬಿಟ್ಟುಕೊಟ್ಟ ಕೃಷಿ ಭೂಮಿಯ ಸ್ವತ್ತಿನಿಂದ ಬಾಕಿ ಇರುವ ಬಾಡಿಗೆ, ಭೂ ಕಂದಾಯದ ಹಿಂಬಾಕಿ ವಸೂಲಿ, ನ್ಯಾಯಾಲಯದ ಬಿಕರಿ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಕ್ಕೆ ಪಾವತಿಸಬೇಕಾದ ಯಾವುದೇ ಕಂದಾಯ, ತೆರಿಗೆ, ನಂಬಿಕೆ ದ್ರೋಹದ ಯಾವುದೇ ಹೊಣೆಗಾರಿಕೆ, ಸಲ್ಲಿಸಿದ ಸೇವೆಗಾಗಿ ಸಂಬಳ, ಸರ್ಕಾರಿ ಕಂಪನಿ, ಭಾರತೀಯ ಜೀವಾ ವಿಮಾ ನಿಗಮ, ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಬ್ಯಾಂಕುಗಳು, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಲ್ಲಿ ನೋಂದಾಯಿತವಾಗಿರುವ ಅತೀ ಸಣ್ಣ ಹಣಕಾಸು ಸಂಸ್ಥೆಗಳು, ಚಿಟ್ ಫ‌ಂಡ್‌ ಕಾಯ್ದೆಯಲ್ಲಿ ನೋಂದಣಿಗೊಂಡ ಚಿಟ್ ಕಂಪನಿಗಳು ಇವುಗಳು ಕರ್ನಾಟಕ ಋಣ ಪರಿಹಾರ ಕಾಯ್ದೆ 2018ರ ವ್ಯಾಪ್ತಿಗೆ ಒಳಪಡುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next