Advertisement

ಕೆಎಂಸಿಯಲ್ಲಿ ಕೋವಿಡ್‌ ಪರೀಕ್ಷಾ ಲ್ಯಾಬ್‌ ಆರಂಭಕ್ಕೆ ಕೇಂದ್ರ ಸಚಿವರೊಂದಿಗೆ ಚರ್ಚೆ

11:13 PM Apr 17, 2020 | Sriram |

ಉಡುಪಿ: ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷಾ ಲ್ಯಾಬ್‌ ತೆರೆಯುವ ಬಗ್ಗೆ ಕೇಂದ್ರದ ಆರೋಗ್ಯ ಸಚಿವರೊಂದಿಗೆ ಚರ್ಚಿಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

Advertisement

ಶುಕ್ರವಾರ ಜಿ.ಪಂ. ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೋವಿಡ್‌ 19 ನಿಯಂತ್ರಣ ಕುರಿತು ತೆಗೆದುಕೊಂಡಿರುವ ಕ್ರಮಗಳ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷಾ ಲ್ಯಾಬ್‌ ಆರಂಭಿಸುವುದರಿಂದ ತ್ವರಿತವಾಗಿ ಕೋವಿಡ್‌ ಪರೀಕ್ಷಾ ಫ‌ಲಿತಾಂಶ ಪಡೆಯಲು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ತಪಾಸಣೆ ನಡೆಸಲು ಸಾಧ್ಯವಾಗಲಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ, ಅನುಮತಿಗೆ ಪ್ರಯತ್ನಿಸಲಾಗುವುದು. ಜಿಲ್ಲೆಯಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯದಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸುವಂತೆ ಅವರು ಸೂಚಿಸಿದರು.

ಅಗತ್ಯ ಕ್ರಮಕ್ಕೆ ಸೂಚನೆ
ಮಣಿಪಾಲದ ಕೆಎಂಸಿಗೆ ತುರ್ತು ಚಿಕಿತ್ಸೆಗೆ ಆಗಮಿಸುವ ಹೊರಜಿಲ್ಲೆಗಳ ರೋಗಿಗಳಿಗೆ ಜಿಲ್ಲೆಯೊಳಗೆ ಪ್ರವೇಶಿಸಲು ಅನುಮತಿ ನೀಡುವಂತೆ ಹಾಗೂ ರೋಗಿಗಳ ಜತೆಯಲ್ಲಿ ಕೇವಲ ಒಬ್ಬರು ಅಥವಾ ಅನಿವಾರ್ಯವಿದ್ದಲ್ಲಿ ಗರಿಷ್ಠ ಇಬ್ಬರು ಸಹಾಯಕರು ಮಾತ್ರ ಬರುವ ಕುರಿತಂತೆ ನಿಯಮ ಮಾಡಬೇಕು.ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಯಾವುದೇ ಕೊರತೆಯಾದಗಂತೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದರು ಸೂಚಿಸಿದರು.

ಹೂ ಮಾರಾಟ ಮಾಡಬಹುದು
ಹೂವಿನ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ ಶಾಸಕ ಕೆ.ರಘುಪತಿ ಭಟ್‌ ಹಾಗೂ ಮರಣ ಸಂದರ್ಭದಲ್ಲಿ ಪ್ರಯಾಣಿಸಲು ಶೀಘ್ರ ಅನುಮತಿ ನೀಡುವಂತೆ ಶಾಸಕ ಲಾಲಾಜಿ ಮೆಂಡನ್‌ ಕೋರಿದರು. ಜಿಲ್ಲೆಯಲ್ಲಿ ಈಗಾಗಲೇ ದಿನನಿತ್ಯದ ಸಾಮಗ್ರಿಗಳ ಖರೀದಿಗೆ ಬೆಳಗ್ಗೆ 7 ರಿಂದ 11ರ ವರೆಗೆ ಸಮಯ ನಿಗದಿಪಡಿಸಿದ್ದು, ಈ ಅವಧಿಯಲ್ಲಿ ಹೂ ಮಾರಾಟ ಮಾಡಬಹುದಾಗಿದೆ. ಮರಣದ ಸಂದರ್ಭದಲ್ಲಿ ಪ್ರಯಾಣಕ್ಕೆ ಅನುಮತಿಯನ್ನು ನೀಡಲಾಗುತ್ತಿದೆ ಎಂದು ಡಿಸಿ ತಿಳಿಸಿದರು.

Advertisement

ಅಗತ್ಯ ರಸ್ತೆ ನಿರ್ಮಾಣಕ್ಕೆ ಅನುಮತಿ
ಜಿಲ್ಲೆಯಲ್ಲಿ ಮಳೆಗಾಲದ ಕಾರಣದಿಂದ ತುರ್ತಾಗಿ ನಡೆಯಬೇಕಿದ್ದ ಸೇತುವೆ ನಿರ್ಮಾಣ ಕಾಮಗಾರಿಗಳ ಅರಂಭಕ್ಕೆ ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ರಸ್ತೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

394 ವರದಿಗಳು ನೆಗೆಟಿವ್‌
ಜಿಲ್ಲೆಯಿಂದ ಪರೀಕ್ಷೆಗೆ ಕಳುಹಿಸಿದ್ದ 409 ವರದಿಗಳಲ್ಲಿ ಇಂದು 394 ವರದಿಗಳು ನೆಗೆಟಿವ್‌ ಬಂದಿವೆ. 15 ಮಾತ್ರ ಬಾಕಿ ಇವೆ. ಒಬ್ಬ ಕೋವಿಡ್‌ 19 ರೋಗಿ ಮಾತ್ರ ಜಿಲ್ಲೆಯಲ್ಲಿದ್ದು, ಭಟ್ಕಳದ ಮಹಿಳೆಯ ಆರೋಗ್ಯದಲ್ಲಿ ಸುಧಾರಣೆ ಇದೆ ಎಂದು ಜಿಲ್ಲಾ ಕೋವಿಡ್‌ 19 ನೋಡೆಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌ ಮಾಹಿತಿ ನೀಡಿದರು. ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹೊÉàಟ್‌, ಎಸ್ಪಿ ವಿಷ್ಣುವರ್ಧನ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲೆಯ ತಹಶೀಲ್ದಾರ್‌ಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಕೋವಿಡ್‌ 19 ನಿಯಂತ್ರಣ ರಚಿಸಿರುವ ವಿವಿಧ ಸಮಿತಿಗಳ ಮುಖ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

ಔಷಧ ಕೊರತೆ ಇಲ್ಲ
ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಸಾರ್ವಜನಿಕರನ್ನು ಜಿಲ್ಲಾಡಳಿದ ಮೂಲಕ ಗುರುತಿಸಿ ಈಗಾಗಲೇ ಮೊದಲ ಹಂತದಲ್ಲಿ 5,388 ಆಹಾರದ ಕಿಟ್‌ಗಳನ್ನು ವಿತರಿಸಲಾಗಿದೆ. 658 ನಿರಾಶ್ರಿತರಿಗೆ ಶೆಲ್ಟರ್‌ ರೂಂಗಳಲ್ಲಿ ಅಗತ್ಯ ವ್ಯವಸ್ಥೆ ಒದಗಿಸಿದ್ದು, ಅವರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಸಹ ಮಾಡಲಾಗುತ್ತಿದೆ. 2ನೇ ಹಂತದಲ್ಲಿ ಈಗಾಗಲೇ 5000 ಮಂದಿಗೆ ಜಿಲ್ಲೆಯ ವಿವಿಧ ದೇವಾಲಯಗಳ ಮೂಲಕ ಆಹಾರದ ಕಿಟ್‌ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಸಂಬಂಧಪಟ್ಟ ತಹಶೀಲ್ದಾರ್‌ಗಳ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಔಷಧಗಳ ದಾಸ್ತಾನು ಇದೆ. ಕೊರತೆ ಇಲ್ಲ. ಇನ್ಫೋಸಿಸ್‌, ಡಾ| ಜಿ.ಶಂಕರ್‌ ಸೇರಿದಂತೆ ವಿವಿಧ ದಾನಿಗಳ ನೆರನಿಂದ ವೈದ್ಯಕೀಯ ಸಲಕರಣೆಗಳ ನೆರವು ದೊರೆತಿದೆ. ಪಾರ್ಲೆಜಿ ಅವರಿಂದ 4 ಲಕ್ಷ ಬಿಸ್ಕೆಟ್‌ ಪ್ಯಾಕ್‌ಗಳ ಪೂರೈಕೆ ಸಹಆಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

ಗಡಿಗಳಲ್ಲಿ ಬಿಗಿ ತಪಾಸಣೆ
ಜಿಲ್ಲೆಯಲ್ಲಿ 19 ದಿನಗಳಿಂದ ಕೋವಿಡ್‌ 19 ಪಾಸಿಟಿವ್‌ ಕಂಡು ಬಂದಿಲ್ಲ. 28 ದಿನಗಳಾದಲ್ಲಿ ಜಿಲ್ಲೆ ಗ್ರೀನ್‌ ಝೊàನ್‌ ವ್ಯಾಪ್ತಿಗೆ ಬರಲಿದೆ. ಜಿಲ್ಲೆಯ ಒಳಗೆ ಕೋವಿಡ್‌ 19 ಪ್ರಕರಣಗಳು ಕಂಡು ಬರುವ ಸಾಧ್ಯತೆಗಳ ಕಡಿಮೆ ಇವೆ. ಹೊರಗಿನಿಂದ ಮಾತ್ರ ಬರುವ ಸಾಧ್ಯತೆಗಳಿರುವುದರಿಂದ ಜಿಲ್ಲೆಯ ಗಡಿಗಳನ್ನು ಅತ್ಯಂತ ಬಿಗಿಗೊಳಿಸಲಾಗಿದೆ, ಜಿಲ್ಲೆಯೊಳಗೆ ಪ್ರವೇಶಿಸಲು ಯತ್ನಿಸುತ್ತಿರುವವರ ಯಾವುದೇ ಒತ್ತಡಗಳಿಗೆ, ಜಿಲ್ಲೆಯ ನಾಗರಿಕರ ಆರೋಗ್ಯ ದೃಷ್ಟಿಯಿಂದ ಅವಕಾಶ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next