Advertisement

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ: ಮರುಪರಿಶೀಲನೆ ಅಗತ್ಯ

06:00 AM Apr 23, 2018 | |

ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಅಧ್ಯಾದೇಶಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಕ್ಕಳ ಮೇಲೆ ಈ ಅಮಾನುಷ ಪಾತಕ ಎಸಗುವವರನ್ನು ನೇಣಿಗೇರಿಸುವುದೇ ಸರಿ ಎಂದು ಕೆಲವರು ವಾದಿಸಿದರೆ ಇನ್ನೂ ಕೆಲವರು ಅಪರಾಧಿಯನ್ನು ಸಾಯಿಸುವುದರಿಂದ ಅಪರಾಧ ಕಡಿಮೆಯಾಗುವುದಿಲ್ಲ ಎಂದು ಈ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಅದರಲ್ಲೂ ಕೆಲವು ಮಕ್ಕಳ ಹಕ್ಕು ಕಾರ್ಯಕರ್ತರೇ ಗಲ್ಲು ಶಿಕ್ಷೆ ವಿಧಿಸುವುದು ಸರಿಯಾದ ಕ್ರಮವಲ್ಲ ಎಂದು ಹೇಳುತ್ತಿದ್ದಾರೆ. ಕಠುವಾದಲ್ಲಿ ಎಂಟರ ಹರೆಯದ ಬಾಲಕಿ ಮೇಲೆ ನಡೆದಿರುವ ಬರ್ಬರ ಅತ್ಯಾಚಾರದ ಹಿನ್ನೆಲೆಯಲ್ಲಿ ಜನರ ಒತ್ತಾಯಕ್ಕೆ ಮಣಿದು ಸರಕಾರ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಅಧ್ಯಾದೇಶ ತಂದಿದೆ. ಇದೀಗ ರಾಷ್ಟ್ರಪತಿಯವರ ಅಂಕಿತವೂ ಬಿದ್ದಿರುವುದರಿಂದ ಇದು ಕಾನೂನು ರೂಪದಲ್ಲಿ ಜಾರಿಗೆ ಬಂದಂತಾಗಿದೆ. ಈ ಮೂಲಕ ಇಂತಹ ಅಪರಾಧ ಕೃತ್ಯಕ್ಕೆ ಮರಣ ದಂಡನೆ ವಿಧಿಸುವ ಬರೀ 13 ದೇಶಗಳ ಸಾಲಿಗೆ ಭಾರತವೂ ಸೇರಿತು. ಚೀನ, ಖತಾರ್‌, ಸುಡಾನ್‌, ಯುಎಇ, ತಜಿಕಿಸ್ಥಾನ್‌, ಟುನಿಶಿಯಾದಂತಹ ಕೆಲ ದೇಶಗಳಲ್ಲಿ ಮಾತ್ರ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣ ದಂಡನೆ ವಿಧಿಸಲಾಗುತ್ತದೆ. 

Advertisement

ಕಠುವಾ, ಉನ್ನಾವೊ ಮತ್ತು ಸೂರತ್‌ನಲ್ಲಿ ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಒತ್ತಡಕ್ಕೆ ಮಣಿದು ಸರಕಾರ ಗಲ್ಲು ಶಿಕ್ಷೆ ವಿಧಿಸುಂತಹ ಮಹತ್ವದ ಕಾನೂನನ್ನು ಅವಸರದಲ್ಲಿ ಜಾರಿಗೆ ತಂದಿರುವಂತೆ ಕಾಣಿಸುತ್ತದೆ. ನಿಜ, ಕೆಲ ದಿನಗಳಿಂದೀಚೆಗೆ ಅತ್ಯಾಚಾರ ಪ್ರಕರಣಗಳು ಭಾರೀ ಸುದ್ದಿ ಮಾಡುತ್ತಿವೆ ಹಾಗೂ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಕೃತ್ಯಗಳಿಂದ ಭಾರತದ ವರ್ಚಸ್ಸಿಗೆ ಹಾನಿಯಾಗಿದೆ. ಹೀಗಾಗಿ ಪ್ರಧಾನಿ ಮೋದಿ ವಿದೇಶದಿಂದ ಆಗಮಿಸಿದ ಕೂಡಲೇ ಅಧ್ಯಾದೇಶವನ್ನು ಸಂಪುಟ ಸಭೆಯಲ್ಲಿ ಮಂಡಿಸಿ ಮಂಜೂರು ಮಾಡಿಕೊಳ್ಳಲಾಗಿದೆ. ಮರುದಿನವೇ ರಾಷ್ಟ್ರಪತಿಯವರು ಅದಕ್ಕೆ ಅಂಕಿತವನ್ನೂ ಹಾಕಿದ್ದಾರೆ. ದಿಲ್ಲಿಯ ನಿರ್ಭಯಾ ಪ್ರಕರಣದಲ್ಲಾಗಿರುವಂತೆ ಜನಾಕ್ರೋಶ ತನ್ನ ವಿರುದ್ಧ ತಿರುಗಬಹುದು ಎಂಬ ಭೀತಿಯೇ ಸರಕಾರ ಇಷ್ಟು ತ್ವರಿತವಾಗಿ ನಿರ್ಧಾರ ಕೈಗೊಳ್ಳಲು ಕಾರಣವಾಗಿರುವ ಸಾಧ್ಯತೆಯೂ ಇದೆ. ಗಲ್ಲು ಶಿಕ್ಷೆಯಂತಹ ಕಾನೂನನ್ನು ಯಾವುದೇ ಚರ್ಚೆಯಿಲ್ಲದೆ, ಸಂಬಂಧಪಟ್ಟ ಕಾರ್ಯಕರ್ತರ, ಕಾನೂನು ತಜ್ಞರ ಸಲಹೆ ಪಡೆದುಕೊಳ್ಳದೆ ಹೀಗೆ ದಿಢೀರ್‌ ಜಾರಿಗೆ ತಂದಿರುವುದು ಸಮರ್ಪಕವಾದ ನಡೆಯಲ್ಲ. 

ಇಷ್ಟಕ್ಕೂ ಮರಣ ದಂಡನೆ ವಿಧಿಸಿದ ಕೂಡಲೇ ಅಪರಾಧಗಳು ಕಡಿಲೆಯಾಗುತ್ತವೆ ಎನ್ನುವುದೇ ಒಂದು ಮಿಥ್ಯೆ. ದೇಶದಲ್ಲಿ ಈಗಾಗಲೇ ಭಯೋತ್ಪಾದನೆ ಮತ್ತು ಕೊಲೆ ಪ್ರಕರಣಗಳಿಗೆ ಮರಣ ದಂಡನೆ ವಿಧಿಸಲಾಗುತ್ತದೆ. ಇದರಿಂದ ಕೊಲೆ ಪ್ರಕರಣಗಳೇನೂ ಕಡಿಮೆಯಾಗಿಲ್ಲ. 2016ರಲ್ಲಿ 136 ಮಂದಿಗೆ ಮರಣ ದಂಡನೆ ವಿಧಿಸಲಾಗಿತ್ತು. ಆದರೆ ಆ ವರ್ಷವೇ 30000ಕ್ಕೂ ಹೆಚ್ಚು ಕೊಲೆಗಳು ಸಂಭವಿಸಿವೆ. ಈ ಸಂದರ್ಭದಲ್ಲಿ ಇಂತಹ ಕೆಲವು ಅಂಕಿಅಂಶಗಳತ್ತಲೂ ಗಮನ ಹರಿಸಬೇಕು. 

ನಿರ್ಭಯಾ ಪ್ರಕರಣದ ಬಳಿಕ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೋ) ಎಂಬ ಕಠಿಣ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಮಕ್ಕಳ ಮೇಲಾದ ಲೈಂಗಿಕ ಆಕ್ರಮಣಗಳ ಪ್ರಕರಣಗಳ ವಿಚಾರಣೆಗಾಗಿ ಪೋಕ್ಸೋ ಕೋರ್ಟ್‌ಗಳನ್ನು ಸ್ಥಾಪಿಸಬೇಕು, ವರ್ಷದೊಳಗೆ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂಬಿತ್ಯಾದಿ ಕಠಿನ ನಿಯಮಗಳು ಈ ಕಾಯಿದೆಯಲ್ಲಿವೆ. ಆದರೆ ಇದರ ಜಾರಿ ಬಳಿಕ 2016ರಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು 1 ಲಕ್ಷ ದಾಟಿವೆ ಹಾಗೂ ಈ ಪೈಕಿ ವಿಚಾರಣೆಗೆ ಬಂದಿರುವುದು 229 ಮಾತ್ರ. ಪೋಕ್ಸೋ ನ್ಯಾಯಾಲಯಗಳಲ್ಲಿ 1 ಲಕ್ಷ ಮೇಲ್ಪಟ್ಟು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಕಾನೂನು ರಚಿಸಿದಷ್ಟು ವೇಗವಾಗಿ ನ್ಯಾಯಾಂಗ ವ್ಯವಸ್ಥೆ ಚಲಿಸುತ್ತಿಲ್ಲ ಎನ್ನುವುದು ಇದರಿಂದ ತಿಳಿಯುತ್ತದೆ. ಈ ಮೂಲಭೂತ ವಿಷಯವನ್ನೇ ಬಿಟ್ಟು ಸರಕಾರ ಮತ್ತೆ ಮತ್ತೆ ಕರಾಳ ಕಾನೂನು ಮೊರೆ ಹೋಗುವುದು ನಿರರ್ಥಕ. 

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ ವರದಿಯ ಪ್ರಕಾರ ಶೇ. 95 ಅತ್ಯಾಚಾರ ಪ್ರಕರಣಗಳಲ್ಲಿ ಸಂಬಂಧಿಕರೇ ಆರೋಪಿಗಳಾಗಿರುತ್ತಾರೆ. ಹೀಗಾಗಿ ಅತ್ಯಾಚಾರಕ್ಕೆ ಮರಣ ದಂಡನೆ ವಿಧಿಸಿದರೆ ಬಹುತೇಕ ಪ್ರಕರಣಗಳು ವರದಿಯಾಗದೇ ಹೋಗುವ ಸಾಧ್ಯತೆಯೂ ಇದೆ. ಬಹುತೇಕ ಅತ್ಯಾಚಾರ ಪ್ರಕರಣಗಳು ಬಿದ್ದು ಹೋಗುವುದು ಸಂತ್ರಸ್ತರು ನ್ಯಾಯಾಲಯಗಳಲ್ಲಿ ಹೇಳಿಕೆ ಹಿಂದೆಗೆಯುವುದರಿಂದ ಇಲ್ಲವೇ ವಿಚಾರಣೆಗೆ ಹಾಜರಾಗದೆ ಇರುವುದರಿಂದ. ಹೀಗಾಗಿ ಮರಣ ದಂಡನೆ ಜಾರಿಯಾದ ಬಳಿಕ ಖುಲಾಸೆ ಪ್ರಮಾಣವೂ ಹೆಚ್ಚಾಗಬಹುದು ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಈ ನಿರ್ಧಾರವನ್ನು ಮರುಪರಿಶೀಲಿಸುವ ಅಗತ್ಯವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next