Advertisement

ಮೂರು ವಿಭಾಗಕ್ಕೂ ಒಬ್ಬರೇ ಡಿಸಿಪಿ!

04:35 PM May 23, 2017 | Team Udayavani |

ಹುಬ್ಬಳ್ಳಿ: ರಾಜ್ಯದ ಎರಡನೇ ಅತೀ ದೊಡ್ಡ ನಗರ ಹಾಗೂ ಅತೀ ಸೂಕ್ಷ್ಮ ಪ್ರದೇಶವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮೂವರು ಡಿಸಿಪಿ ಹುದ್ದೆಗಳ ಜವಾಬ್ದಾರಿಯನ್ನು ಕಳೆದ 20 ದಿನಗಳಿಂದ ಒಬ್ಬರೇ ಡಿಸಿಪಿ ನಿರ್ವಹಿಸುತ್ತಿದ್ದರೂ, ಸರಕಾರ ಖಾಲಿ ಇರುವ ಎರಡು ಹುದ್ದೆಗಳಿಗೆ ಡಿಸಿಪಿಗಳ ನಿಯೋಜನೆ ಕಾರ್ಯ ಕೈಗೊಂಡಿಲ್ಲವಾಗಿದ್ದು, ಅಪರಾಧ ಪ್ರಕರಣಗಳ ನಿಯಂತ್ರಣ ನಿಟ್ಟಿನಲ್ಲಿ ಇದು ತನ್ನದೇಯಾದ ಪರಿಣಾಮ ಬೀರತೊಡಗಿದೆ. 

Advertisement

ಅವಳಿನಗರದಲ್ಲಿ ಸಿಎಆರ್‌ ವಿಭಾಗದ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗಗಳ ಹುದ್ದೆಗಳು ಖಾಲಿ ಆಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯವರು ತಮ್ಮ ಹುದ್ದೆಯೊಂದಿಗೆ ಇವೆರಡು ಹುದ್ದೆಗಳನ್ನೂ ನಿಭಾಯಿಸುತ್ತಿದ್ದಾರೆ. ಅವಳಿ ನಗರದಲ್ಲಿ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಮನೆಗಳ್ಳತನ, ಸರಗಳ್ಳತನ ಪ್ರಕರಣಗಳು ಹೆಚ್ಚಾಗಿವೆ.

ಈ ದಿನಗಳಲ್ಲಿ ಕಳ್ಳರು ಒಂದೇ ದಿನದಲ್ಲಿ 3-4 ಕಡೆ ತಮ್ಮ ಕೈಚಳಕ ತೋರಿದ್ದಾರೆ. ಆದರೆ ಪೊಲೀಸರಿಗೆ ಮಾತ್ರ ಅವರು ಸುಳಿವು ಇನ್ನು ಪತ್ತೆಯಾಗಿಲ್ಲ. ಇಷ್ಟೆಲ್ಲ ಕಳ್ಳತನ ಸೇರಿದಂತೆ ಇನ್ನಿತರೆ ಪ್ರಕರಣಗಳು ಅವಳಿ ನಗರದಲ್ಲಿ ನಡೆಯುತ್ತಿದ್ದರೂ ಪೊಲೀಸ್‌ ಬಲ ಹೆಚ್ಚಿಸುವಲ್ಲಿ, ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಉತ್ತಮಗೊಳಿಸುವಲ್ಲಿ ರಾಜ್ಯ ಸರಕಾರ ನಿಷ್ಕಾಳಜಿ ತೋರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಸಿಎಆರ್‌ ವಿಭಾಗದ ಡಿಸಿಪಿಯಾಗಿದ್ದ ಎಚ್‌.ಎ. ದೇವರಹೊರು ಅವರು ಏಪ್ರಿಲ್‌ 30ಕ್ಕೆ ಸೇವಾ ನಿವೃತ್ತಿ ಹೊಂದಿದರು. ಆನಂತರ ಅಪರಾಧ ಮತ್ತು ಸಂಚಾರ ವಿಭಾಗದ ಮಲ್ಲಿಕಾರ್ಜುನ ಬಾಲದಂಡಿ ಅವರು ಮೇ 5ರಂದು ಬೆಂಗಳೂರಿಗೆ ಹೆಚ್ಚುವರಿ ಎಸ್‌ಪಿಯಾಗಿ ವರ್ಗಾವಣೆಗೊಂಡರು. ಕಳೆದ 20 ದಿನಗಳಿಂದ ಇವೆರಡು ಸ್ಥಾನಗಳು ಖಾಲಿಯಾಗಿದ್ದರೂ ಸರಕಾರ ಯಾವ ಅಧಿಕಾರಿಗಳನ್ನು ನಿಯುಕ್ತಿಗೊಳಿಸಿಲ್ಲ. 

ಹೆಚ್ಚಿದ ಸರಗಳ್ಳತನ, ಮನೆಗಳ್ಳತನ ಹಾವಳಿ: ಹು-ಧಾ ಪೊಲೀಸ್‌ ಕಮೀಷನರೇಟ್‌ನಲ್ಲಿ ಮೊದಲೇ ಸಿಬ್ಬಂದಿ ಕೊರತೆ ಇದೆ. ಮೇಲಾಗಿ ಅವಳಿ ನಗರದಲ್ಲಿ ಮನೆಗಳ್ಳತನ, ಸರಗಳ್ಳತನ, ಕೊಲೆಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಹು-ಧಾದಲ್ಲಿ 2014ರಲ್ಲಿ ಕೊಲೆ ಪ್ರಕರಣಗಳು 20 ನಡೆದಿದ್ದರೆ, 2015ರಲ್ಲಿ 31, 2016ರಲ್ಲಿ 26 ಮತ್ತು 2017ರ ಫೆಬ್ರವರಿ 28ರವರೆಗೆ 5 ಆಗಿವೆ.

Advertisement

ಇನ್ನು 2014ರಲ್ಲಿ ಕೊಲೆಗೆ ಯತ್ನ 35, 2015ರಲ್ಲಿ 48, 2016ರಲ್ಲಿ 53 ಮತ್ತು 2017ರ ಫೆಬ್ರವರಿವರೆಗೆ 11 ಆಗಿವೆ. ದರೋಡೆಗಳು 2014ರಲ್ಲಿ 4, 2015ರಲ್ಲಿ 3, 2016ರಲ್ಲಿ 9 ಮತ್ತು 2017ರ ಫೆಬ್ರವರಿವರೆಗೆ ಒಂದು ಆಗಿದೆ. ಸರಗಳ್ಳತನವು 2014ರಲ್ಲಿ 49, 2015ರಲ್ಲಿ 29, 2016ರಲ್ಲಿ 77, 2017ರ ಮೇ 20ರವರೆಗೆ ಅಂದಾಜು 20ಕ್ಕೂ ಅಧಿಕವಾಗಿವೆ.

ಅದೇ ರೀತಿ ಇನ್ನಿತರೆ ದರೋಡೆ ಪ್ರಕರಣಗಳು 2014ರಲ್ಲಿ 23, 2015ರಲ್ಲಿ 17, 2016ರಲ್ಲಿ 35, 2017ರ ಫೆಬ್ರವರಿವರೆಗೆ 6  ಆಗಿವೆ. ಹಗಲು ಹೊತ್ತಿನಲ್ಲೆ ಮನೆ ಕೀಲಿ ಮುರಿದು ಕಳ್ಳತನದ ಪ್ರಕರಣಗಳು 2014ರಲ್ಲಿ 22, 2015 ಮತ್ತು 2016ರಲ್ಲಿ ತಲಾ 25, 2017ರ ಫೆಬ್ರವರಿವರೆಗೆ 4 ಹಾಗೂ ರಾತ್ರಿ ಹೊತ್ತಿನಲ್ಲಿ 2014 ಮತ್ತು 2015ರಲ್ಲಿ 119, 2016ರಲ್ಲಿ 122, 2017ರ ಫೆಬ್ರವರಿ ವರೆಗೆ 24 ಆಗಿವೆ. 

ಮನೆಗಳ್ಳತನ ಪ್ರಕರಣಗಳು 2014ರಲ್ಲಿ 32, 2015ರಲ್ಲಿ 49, 2016ರಲ್ಲಿ 25, 2017ರ ಫೆಬ್ರವರಿವರೆಗೆ 7 ಆಗಿವೆ. ವಾಹನಗಳ ಕಳ್ಳತನ ಪ್ರಕರಣಗಳು 2014ರಲ್ಲಿ 194, 2015ರಲ್ಲಿ 237, 2016ರಲ್ಲಿ 237, 2017ರ ಫೆಬ್ರವರಿವರೆಗೆ 30 ಹಾಗೂ ದಾ ಕಳ್ಳತನಗಳು 2014ರಲ್ಲಿ 94,  2015ರಲ್ಲಿ 102, 2016ರಲ್ಲಿ 99, 2017ರ ಫೆಬ್ರವರಿ ವರೆಗೆ 15 ಪ್ರಕರಣಗಳು ಆಯುಕ್ತರ ಕಚೇರಿಯ ದಾಖಲಾತಿಗಳ ಪ್ರಕಾರ ಆಗಿವೆ. 

ಹು-ಧಾ ಅವಳಿ ನಗರದಲ್ಲಿ ಸರಗಳ್ಳರ ಮತ್ತು ಮನೆಗಳ್ಳರ ಹಾವಳಿ ಹೆಚ್ಚಾಗಿದೆ. ಹಗಲು ಹೊತ್ತಿನಲ್ಲೇ ಈ ಸರಗಳ್ಳರ ತಂಡವು ತಮ್ಮ ಕಾರ್ಯಾಚರಣೆಗೆ ಮುಂದಾಗಿದ್ದು, ಗರ್ಭಿಣಿ ಎಂಬ ಮಾನವೀಯತೆಯನ್ನು ಮರೆತು ತಮ್ಮ ಕೈಚಳಕ ತೋರಿದ್ದಾರೆ. ಮೇ 14ರಂದು ಗೋಕುಲ ರಸ್ತೆ ವಾಸವಿ ನಗರ ಸಮೀಪದ ಕಲ್ಯಾಣ ಮಂಟಪ ಹತ್ತಿರ ಬೈಕ್‌ನಲ್ಲಿ ಬಂದ ಖದೀಮರು ಹಾಡಹಗಲೇ ಮಹಿಳೆಯೊಬ್ಬರ ಸುಮಾರು 145 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. 

ಅದರಂತೆ ಮೇ 16ರಂದು ಒಂದೇ ದಿನ ಪ್ರತ್ಯೇಕ ನಾಲ್ಕು ಕಡೆ ಗರ್ಭಿಣಿ ಸೇರಿದಂತೆ ನಾಲ್ವರ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದಾರೆ. ಮೇ ತಿಂಗಳ ಮೊದಲಾರ್ಧದಲ್ಲೇ ಅಂದಾಜು 300ಕ್ಕೂ ಅಧಿಕ ಗ್ರಾಂ ತೂಕವುಳ್ಳ ಮಾಂಗಲ್ಯ ಸರ, ಚಿನ್ನದ ಸರಗಳನ್ನು ಕಳ್ಳರು ದೋಚಿದ್ದಾರೆ. ಆದರೆ ಇದುವರೆಗೂ ಯಾವೊಬ್ಬ ಸರಗಳ್ಳನೂ ಪೊಲೀಸರಿಗೆ ಸಿಕ್ಕಿ ಬಿದ್ದಿಲ್ಲ.

ಹಿರಿಯ ಅಧಿಕಾರಿಗಳ ಹುದ್ದೆಗಳೇ, ಅದರಲ್ಲೂ ಪೊಲೀಸ್‌ ಆಯುಕ್ತರ ನಂತರದ ಉನ್ನತ ಸ್ಥಾನ ಹೊಂದಿರುವ ಡಿಸಿಪಿ ಹುದ್ದೆಗಳೇ ಖಾಲಿ ಉಳಿದಿವೆ. ಅಪರಾಧ ಮತ್ತು ಸಂಚಾರ ವಿಭಾಗದಂತಹ ಪ್ರಮುಖ ಹುದ್ದೆಯೇ ಖಾಲಿಯಿರುವಾಗ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಲು ಹಾಗೂ ಕಳ್ಳರನ್ನು ಹಿಡಿಯಲು ಪೊಲೀಸರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 

ಸರಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಪ್ರಮುಖ ಸ್ಥಾನಗಳ ಹುದ್ದೆಗಳ ಅಧಿಕಾರಿಗಳನ್ನು ಭರ್ತಿ ಮಾಡಲು ಹಿಂದೇಟು ಹಾಕುತ್ತಿರುವಾಗ ಇನ್ನು ಕೆಳ ಹಂತದ ಅಧಿಕಾರಿಗಳು ಹಾಗೂ ಹುದ್ದೆಗಳನ್ನು ತುಂಬಲು ಇನ್ನೆಷ್ಟು ನಿರ್ಲಕ್ಷ ತೋರಲಿಕ್ಕಿಲ್ಲವೆಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. 

ಸರಕಾರ-ಜನಪ್ರತಿನಿಧಿಗಳು ಅವಳಿ ನಗರದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳನ್ನು ಹತೋಟಿಗೆ ತರಲು ಹಾಗೂ ಸರಗಳ್ಳತನ ಹಾವಳಿ ತಡೆಗಟ್ಟಲು ದಕ್ಷ ಅಧಿಕಾರಿಗಳನ್ನು ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ.  

* ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next