Advertisement
ಸಚಿವ ಜಗದೀಶ್ ಶೆಟ್ಟರ್ ಅವರು ಶ್ರೀರಾಮುಲು ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ತಾನೂ ಹಿರಿಯ ನಾಗಿದ್ದು, ತನಗೂ ಅವಕಾಶ ಸಿಗಬೇಕಿತ್ತು ಎಂದಿದ್ದಾರೆ. ಸಚಿವ ಸಿ.ಟಿ. ರವಿ ಅವರು ಉಪ ಮುಖ್ಯಮಂತ್ರಿ ಹುದ್ದೆ ಹೆಚ್ಚಾದಷ್ಟು ಮಹತ್ವ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಾಲ್ಮೀಕಿ ಜನಾಂಗದ ಪ್ರಭಾವಿ ನಾಯಕರಾದ ಶ್ರೀರಾಮುಲು ಹಿಂದಿನಿಂದಲೂ ಡಿಸಿಎಂ ಸ್ಥಾನದ ಆಕಾಂಕ್ಷಿ. 2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹೊತ್ತಿನಲ್ಲೇ ಶ್ರೀರಾಮುಲು ಡಿಸಿಎಂ ಆಗಲಿದ್ದಾರೆ ಎಂದು ಬಿಂಬಿಸಲಾಗಿತ್ತು. ಆದರೆ ಬಿಜೆಪಿಗೆ ಮ್ಯಾಜಿಕ್ ಸಂಖ್ಯೆ ಸಿಗದ ಕಾರಣ ವಿಪಕ್ಷವಾಗಿ ಇರುವಂತಾಯಿತು. ಈ ಬಾರಿ ಬಿಜೆಪಿ ಸರಕಾರ ರಚನೆಯಾದಾಗಲೂ ಶ್ರೀರಾಮುಲು ಡಿಸಿಎಂ ಆಗುತ್ತಾರೆ ಎನ್ನಲಾದರೂ ಅವಕಾಶ ಕೈತಪ್ಪಿತ್ತು. ಬಳಿಕ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ಅವರಿಗೆ ಹುದ್ದೇ ಸಿಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಈಗ ಬಿಜೆಪಿ ಸರಕಾರ ಸುಭದ್ರವಾಗಿದ್ದು, ಶ್ರೀರಾಮುಲುಗೆ ಡಿಸಿಎಂ ಸ್ಥಾನ ಸಿಗಬೇಕು ಎಂಬುದು ವಾಲ್ಮೀಕಿ ಸಮುದಾಯ, ಬೆಂಬಲಿಗರ ಆಗ್ರಹ.
ಬಿಜೆಪಿ ಸರಕಾರ ರಚನೆಗೆ ಕಾರಣರಾದವರಲ್ಲಿ ಪ್ರಮುಖರಾದ ರಮೇಶ್ ಜಾರಕಿಹೊಳಿ ಕೂಡ ಉಪ ಚುನಾವಣೆಯಲ್ಲಿ ಗೆದ್ದರೆ ಉಪ ಮುಖ್ಯ ಮಂತ್ರಿ ಆಗಲಿದ್ದಾರೆ ಎಂಬ ಮಾತು ದಟ್ಟವಾಗಿ ಕೇಳಿಬಂದಿತ್ತು. ಅವರೂ ವಾಲ್ಮೀಕಿ ಸಮುದಾಯ ದವರೇ ಆಗಿರುವುದರಿಂದ ಡಿಸಿಎಂ ಸ್ಥಾನ ದೊರೆತರೆ ಪಕ್ಷ ಸಂಘಟನೆಗೆ ಬಲ ಬರಲಿದೆ ಎಂಬುದು ಬೆಂಬಲಿಗರ ವಾದ. ಪಕ್ಷವು ಮೂಲ ಬಿಜೆಪಿಗರಿಗೆ ಅವಕಾಶ ನೀಡುವುದೋ ವಲಸಿಗ ಶಾಸಕರಿಗೆ ಮಣೆ ಹಾಕುವುದೋ ಎಂಬ ಕುತೂಹಲ ಮೂಡಿದೆ.