Advertisement

ರಮೇಶ-ಆರ್‌ಎಸ್‌ಎಸ್‌ ಮುಖಂಡರ ಭೇಟಿಗೆ ವಿಶೇಷ ಅರ್ಥ ಬೇಡ

05:36 PM Jun 27, 2021 | Team Udayavani |

ಬೆಳಗಾವಿ: ಅಥಣಿಯಲ್ಲಿರುವ ಆರ್‌ಎಸ್‌ಎಸ್‌ ಉತ್ತರ ಪ್ರಾಂತ್ಯದ ಸಂಚಾಲಕ ಅರವಿಂದ ದೇಶಪಾಂಡೆ ಅವರ ನಿವಾಸಕ್ಕೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಭೇಟಿ ಮಾಡಿ ಮಾತುಕತೆ ನಡೆಸಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಆರ್‌ಎಸ್‌ಎಸ್‌ ಮುಖಂಡರನ್ನು ಎಲ್ಲರೂ ಭೇಟಿಯಾಗುತ್ತಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ ನಾಯಕರ ಮಾರ್ಗದರ್ಶನ ಪಡೆದುಕೊಳ್ಳಲು ನಾವು ಆಗಾಗ ಭೆಟ್ಟಿಯಾಗುತ್ತೇವೆ. ಹೀಗಿರುವಾಗ ರಮೇಶ ಜಾರಕಿಹೊಳಿ ಅವರು ಭೇಟಿಯಾಗಿದ್ದನ್ನೇ ಏಕೆ ಹೆಚ್ಚು ಬಿಂಬಿಸಲಾಗುತ್ತಿದೆ ಎಂದು ಪ್ರಶ್ನಿಸಿದರು. ಅಥಣಿಯಲ್ಲಿ ನಮ್ಮ ಆರ್‌ಎಸ್‌ಎಸ್‌ ಪ್ರಮುಖರಿದ್ದಾರೆ. ಹೀಗಾಗಿ ನಾನು ಸಹ ಅಥಣಿಯಲ್ಲಿದ್ದಾಗ ಒಂದು ದಿನವಾದರೂ ಭೇಟಿಯಾಗಿ ಬರುತ್ತೇನೆ. ನಮಗೆ ಸರ್ಕಾರದ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಹೀಗಾಗಿ ರಮೇಶ ಜಾರಕಿಹೊಳಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.

ಶಾಸಕ ಸ್ಥಾನಕ್ಕೆ ರಮೇಶ ಅವರು ರಾಜೀನಾಮೆ ನೀಡುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಅವರು ಸಿಕ್ಕರೆ ವಿಚಾರಿಸುತ್ತೇನೆ ಎಂದು ಸವದಿ ಹೇಳಿದರು. ಇನ್ನು ಕಾಂಗ್ರೆಸ್‌ದಲ್ಲಿ ಮುಂದಿನ ಸಿಎಂ ವಿಚಾರಕ್ಕೆ ನಡೆದಿರುವ ತಿಕ್ಕಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ನಾಯಕರು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸುತ್ತಿದ್ದಾರೆ. ಕೂಸು ಹುಟ್ಟುವುದಿಲ್ಲ, ಕುಲಾವಿ ಹಾಕುವ ಸಂದರ್ಭವೂ ಬರುವುದಿಲ್ಲ ಎಂದು ವ್ಯಂಗವಾಡಿದ ಅವರು, ಇನ್ನುಳಿದ ಎರಡು ವರ್ಷದಲ್ಲಿ ಉತ್ತಮ ಆಡಳಿತ ಕೊಟ್ಟು 2023ರಲ್ಲಿ ಬಿಜೆಪಿ ಸರ್ಕಾರ ಮತ್ತೆ ಆಡಳಿತಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next