Advertisement

ಉತ್ತಮ ತರಬೇತಿಯಿಂದ ಅಪಘಾತಕ್ಕೆ ತಡೆ

09:32 PM Mar 22, 2021 | Team Udayavani |

ಚಿತ್ರದುರ್ಗ: ಅಪಘಾತಗಳ ಪ್ರಮಾಣ ಕಡಿಮೆಯಾಗಲು ಚಾಲಕರಿಗೆ ಉತ್ತಮ ತರಬೇತಿ ಅಗತ್ಯ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

Advertisement

ಹೊಳಲ್ಕೆರೆ ತಾಲೂಕಿನ ಬಸಾಪುರ ಬಳಿ ಭಾನುವಾರ ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗದಿಂದ ಹಮ್ಮಿಕೊಂಡಿದ್ದ ಚಾಲಕರ ತರಬೇತಿ ಕೇಂದ್ರದ ಉದ್ಘಾಟನೆ ಹಾಗೂ ನೂತನ ಬಸ್‌ ಘಟಕದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ದೇಶದಲ್ಲಿ ಪ್ರತಿ ವರ್ಷ 1.50 ಲಕ್ಷ ಜನ ರಸ್ತೆ ಅಪಘಾತದಲ್ಲಿ ಅಸುನೀಗುತ್ತಿದ್ದಾರೆ. ಹಾಗಾಗಿ ಚಾಲಕ ರಿಗೆ ಉತ್ತಮ ತರಬೇತಿ ನೀಡಿದರೆ ಅಪಘಾತ ಸಂಖ್ಯೆ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ಬೆಂಗಳೂರು, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ ಮತ್ತಿತರ ಕಡೆಗಳಲ್ಲಿ ಚಾಲಕರ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು. ಕೊರೊನಾದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಬಹಳಷ್ಟು ತೊಂದರೆಯಾಯಿತು. ವಿಶೇಷವಾಗಿ ಸಾರಿಗೆ ಇಲಾಖೆಗೆ ಹೆಚ್ಚಿನ ತೊಂದರೆಯಾಗಿದೆ. ಎರಡು ತಿಂಗಳ ಲಾಕ್‌ಡೌನ್‌ ಭಾರೀ ಸಂಕಷ್ಟ ತಂದೊಡ್ಡಿತು. ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ನಾಲ್ಕು ನಿಗಮಗಳಿದ್ದು, 1.30ಲಕ್ಷ ಸಿಬ್ಬಂದಿ ಇದ್ದಾರೆ. ವರ್ಷಕ್ಕೆ ನಾಲ್ಕು ಸಾವಿರ ಕೋಟಿ ಆದಾಯದ ನಿರೀಕ್ಷೆ ಇತ್ತು. ಇದು ಸಂಪೂರ್ಣ ನಿಂತು ಹೋಯಿತು. ಸುಮಾರು ಮೂರು ಸಾವಿರ ಕೋಟಿಯಷ್ಟು ನಷ್ಟ ಅನುಭವಿಸಬೇಕಾಯಿತು. ಈ ಪರಿಸ್ಥಿತಿಯಲ್ಲಿ ಸಾರಿಗೆ ಸಿಬ್ಬಂದಿ ಆತಂಕಕ್ಕೆ ಒಳಗಾದರು. ಆದರೆ ಸರ್ಕಾರದಿಂದ 1900 ಕೋಟಿ ರೂ. ಪಡೆದು ಎಲ್ಲಾ ಸಿಬ್ಬಂದಿಗಳಿಗೆ ಒಂದು ರೂಪಾಯಿಯನ್ನೂ ಕಡಿತ ಮಾಡದೆ ವೇತನ ನೀಡಲಾಗಿದೆ. ಈಗ ಬರುತ್ತಿರುವ ಆದಾಯ ಇಂಧನ ತುಂಬಿಸಲೂ ಸಾಕಾಗುತ್ತಿಲ್ಲ ಎಂದರು.

ನಿಗಮಗಳನ್ನು ಲಾಭದತ್ತ ಮುನ್ನಡೆಸುವ ಗುರಿ: ಸಾರಿಗೆ ಇಲಾಖೆಯ ನಾಲ್ಕು ನಿಗಮಗಳನ್ನು ಸದೃಢಗೊಳಿಸುವ ಅಗತ್ಯವಿದೆ. ನಿಗಮದ ನೌಕರರು ಆತಂಕಕ್ಕೆ ಒಳಗಾಗಬಾರದು. ಮುಂದಿನ ದಿನಮಾನಗಳಲ್ಲಿ ನಾಲ್ಕು ನಿಗಮಗಳನ್ನು ಹಾನಿಯಿಂದ ಹೊರಗಡೆ ತಂದು ಲಾಭದಾಯಕ ನಿಗಮಗಳನ್ನಾಗಿ ಮಾಡುವುದರ ಜೊತೆಗೆ ಸಾರಿಗೆ ನೌಕರರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಹೊಳಲ್ಕೆರೆ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ. ಚಂದ್ರಪ್ಪ ಮಾತನಾಡಿ, ಚಾಲಕರ ತರಬೇತಿ ಕೇಂದ್ರದ ಎದುರಿನಲ್ಲಿ ಬಸ್‌ ಡಿಪೋ ನಿರ್ಮಾಣಕ್ಕೆ ಆರು ಎಕರೆ ಜಮೀನು ನೀಡಲಾಗಿದೆ. ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಬಸ್‌ ಡಿಪೋದಲ್ಲೂ ಕೆಲಸ ಮಾಡುವ ಅವಕಾಶ ಸಿಗಬೇಕು ಎಂದು ಉದ್ದೇಶವಿದೆ ಎಂದರು.

ಕುಡಿಯುವ ನೀರಿಗಾಗಿ ಸರ್ಕಾರ 319 ಕೋಟಿ ರೂ. ಅನುದಾನ ನೀಡಿದೆ. ಚಿಕ್ಕಜಾಜೂರು ಪಕ್ಕದ ಕೋಟಿಹಾಳ್‌ ಹತ್ತಿರ 250 ಕೋಟಿ ರೂ. ವೆಚ್ಚವದಲ್ಲಿ 220 ಮೆಗಾ ವ್ಯಾಟ್‌ವಿದ್ಯುತ್‌ ಸರಬರಾಜು ಮಾಡುವ ಕೆಲಸ ನಡೆದಿದೆ. ತಾಲೂಕಿನ ಎಲ್ಲ ಕೆರೆಗಳಿಗೆ ಮುಂದಿನ ದಿನಗಳಲ್ಲಿ ನೀರು ತುಂಬಿಸುವ ಕೆಲಸವಾಗಲಿದೆ ಎಂದರು. ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾ ಧಿಕಾರಿ ಜಿ. ವಿಜಯಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ವಿಭಾಗ ಪ್ರಾರಂಭವಾದ ನಂತರ ಸುಮಾರು 295 ಬಸ್ಸುಗಳಲ್ಲಿ 260 ಬಸ್ಸುಗಳು ಕಾರ್ಯಾಚರಣೆ ಮಾಡುತ್ತಿವೆ. ಸುಮಾರು 75 ಸಾವಿರ ಜನರಿಗೆ ಸಾರಿಗೆ ಸೌಲಭ್ಯ ನೀಡಲಾಗುತ್ತಿದೆ. ಚಾಲಕರ ತರಬೇತಿ ಕೇಂದ್ರ 9.36 ಎಕರೆ ವಿಸ್ತೀರ್ಣ ಹೊಂದಿದ್ದು, 16 ಕೋಟಿ ರೂ. ವೆಚ್ಚದಲ್ಲಿ ತರಬೇತಿ ಕೇಂದ್ರ ನಿರ್ಮಾಣ ಮಾಡಲಾಗಿದೆ. ಇಲ್ಲಿ ಪ್ರತಿ ತಿಂಗಳು ಭಾರೀ ವಾಹನ ಹಾಗೂ ಲಘು ವಾಹನ ತರಬೇತಿ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.

Advertisement

ಜಿ.ಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಖನಿಜ ನಿಗಮದ ಅಧ್ಯಕ್ಷ ಎಸ್‌. ಲಿಂಗಮೂರ್ತಿ, ತಾಪಂ ಅಧ್ಯಕ್ಷೆ ಸುಜಾತಾ ಧನಂಜಯ ನಾಯ್ಕ, ಜಿಪಂ ಸದಸ್ಯರಾದ ಕೆ.ಸಿ. ಮಹೇಶ್ವರಪ್ಪ, ತಿಪ್ಪೇಸ್ವಾಮಿ, ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ ಮತ್ತಿತರರು ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next