Advertisement

ಗ್ರಾಮೀಣ ಪ್ರದೇಶದ ಕೋವಿಡ್ ಸೋಂಕಿತರಿಗೆ ತ್ವರಿತ ಚಿಕಿತ್ಸೆ ನೀಡಿ: ಡಿಸಿಎಂ ಕಾರಜೋಳ

04:57 PM May 22, 2021 | Team Udayavani |

ವಿಜಯಪುರ: ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್  ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿರುವ ಕಾರಣ ಸೋಂಕಿತರಿಗೆ ತ್ವರಿತ ಚಿಕಿತ್ಸೆ ನೀಡಬೇಕು ಎಂದು  ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಜಯಪುರ ಜಿಲ್ಲೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡದರು.

Advertisement

ಶನಿವಾರ ನಗರದ ನೂತನ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡರಸಿದ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಭೆಯಲ್ಲಿ ಈ ಸೂಚನೆ ನೀಡಿದ ಡಿಸಿಎಂ ಕಾರಜೋಳ, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಪುಟ್ಟ ಮನೆಗಳಲ್ಲಿ ಗ್ರಾಮಸ್ಥರು ವಾಸಿಸುತ್ತಾರೆ. ಅಂಥ ಕುಟುಂಬದ ಸದಸ್ಯರಲ್ಲಿ ಕೋವಿಡ್ ವೇಗವಾಗಿ ಹರಡಲು ಕಾರಣವಾಗುತ್ತಿದೆ. ಹೀಗಾಗಿ ಕೋವಿಡ್ ಲಕ್ಷಣಗಳು ಕಂಡುಬಂದ ತಕ್ಷಣ ಗ್ರಾಮೀಣ ಪರಿಸರದ ಸೋಂಕಿತರಿಗೆ ನಿಗದಿತ ಔಷಧಿ ನೀಡುವ ಜೊತೆಗೆ ಸ್ವೀಕರಿಸಲು ಮನವರಿಕೆ ಮಾಡಬೇಕು ಎಂದು ಸೂಚಿಸಿದರು.

ಪಾಸಿಟಿವ್ ಪ್ರಕರಣ ಕಂಡು ಬಂದ ತಕ್ಷಣ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ, ನಿಗದಿತ ಆಸ್ಪತ್ರೆ, ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸುವಂತೆ ನಿರ್ದೇಶನ ನೀಡಿದರು.

ಇದನ್ನೂ ಓದಿ:ಮಂಡ್ಯ: ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಆದೇಶ

ವಿಜಯಪುರ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿ ಮನೆಯಲ್ಲಿ ಕೋವಿಡ್ ಲಕ್ಷಣ ಇರುವವರನ್ನು ಗುರುತಿಸುವ ಕಾರ್ಯ ಮಾಡಬೇಕು. ಕೋವಿಡ್ ಲಕ್ಷಣ ಇದ್ದವರಿಗೆ ಆರ್ ಎಂಪಿ ವೈದ್ಯರ ಚಿಕಿತ್ಸೆ ಒದಗಿಸುವ ನೆಪದಲ್ಲಿ ವಿನಾಕಾರಣ ಕಾಲಹರಣ ಮಾಡುವುದನ್ನು ತಪ್ಪಿಸಬೇಕು. ಇಂತಹ ವೈದ್ಯರು ತೀವ್ರ ಉಸಿರಾಟ ತೊಂದರೆ, ತೀವ್ರತರ ಕೋವಿಡ್ ಲಕ್ಷಣ ಉಳ್ಳವರಿಗೆ ಆರ್.ಎಂ.ಪಿ ವೈದ್ಯರು ಚಿಕಿತ್ಸೆ ಮಾಡದಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

Advertisement

ಕೋವಿಡ್ ಲಕ್ಷಣಗಳಿಗೆ ಗ್ರಾಮಸ್ಥರು ಸ್ಥಳೀಯ ಔಷಧಿ ಬಳಸದೇ ನಿಗದಿತ ಔಷಧಿ, ಮಾತ್ರೆಗಳನ್ನು ಮಾತ್ರ ಬಳಸಲು ಮನವರಿಕೆ ಮಾಡಬೇಕು. ಕೋವಿಡ್ ನಿವಾರಣೆಗಾಗಿ ಇರುವಂತಹ ನಿಗದಿತ ಔಷಧಿ ಪೂರೈಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದವರನ್ನು ತಕ್ಷಣ ನಿಗದಿತ ಆಸ್ಪತ್ರೆಗೆ ಸ್ಥಳಾಂತರಿಸಿ, ಚಿಕಿತ್ಸೆಗೆ ಒಳಪಡಿಸಬೇಕು. ಜಿಲ್ಲಾ ಆಸ್ಪತ್ರೆ ಮೇಲಿನ ಒತ್ತಡ ಕಡಿತಗೊಳಿಸಲು ಆಯಾ ತಾಲೂಕು ಆರೋಗ್ಯ ಕೇಂದ್ರ ,ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಮತ್ತು ಇತರೆ  ಸೌಲಭ್ಯವಿರುವಂತೆ ನೋಡಿಕೊಳ್ಳಲು ತಾಕೀತು ಮಾಡಿದರು.

ಇದನ್ನೂ ಓದಿ: ಭಾರತದಲ್ಲಿ ಆಗಸ್ಟ್ ನಿಂದ ಸ್ಫುಟ್ನಿಕ್ ಲಸಿಕೆ ತಯಾರಿಕೆ; 850 ಮಿಲಿಯನ್ ಡೋಸ್ ಉತ್ಪಾದನೆ ಗುರಿ

ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ 6 ಕೆಎಲ್. ಆಕ್ಸಿಜನ್ ಟ್ಯಾಂಕ್ ಲಭ್ಯವಿದ್ದು, ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೂ 6 ಕೆಎಲ್ ಆಕ್ಸಿಜನ್ ಟ್ಯಾಂಕ್ ಅಳವಡಿಸುವ ಕುರಿತು ಪ್ರಸ್ತಾವನೆ ಸಲ್ಲಿಸಬೇಕು. ಈ ಕುರಿತು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಕೇಂದ್ರ ಸರ್ಕಾರ ಬೆಳಗಾವಿ, ಹುಬ್ಬಳ್ಳಿ ಮತ್ತು ಇತರೆ ಜಿಲ್ಲೆಗಾಗಿ ಆಕ್ಸಿಜನ್ ಪೂರೈಕೆ 6  ಟ್ಯಾಂಕರ್ ಗಳನ್ನು ನೀಡಿದ್ದು, ವಿಜಯಪುರ ಜಿಲ್ಲೆಯ ನೆರವಿಗಾಗಿ ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಆಕ್ಸಿಜನ್ ಟ್ಯಾಂಕರ್ ನೆರವು ಪಡೆಯುವಂತೆ ಸೂಚಿಸಿದರು.

ಕೋವಿಡ್ ರೋಗಿಗಳಿಗೆ ನಿಗದಿತ ಔಷಧಿ ಸೇರಿದಂತೆ ಔಷಧಿ ಕಿಟ್ ಗಳನ್ನು ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಲಕ್ಷಣ ಕಂಡು ಬಂದವರಿಗೆ ಒದಗಿಸಬೇಕು. ಈಗಾಗಲೇ ಗ್ರಾಮೀಣ ಭಾಗದಲ್ಲಿ ಕಾರ್ಯಪಡೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ತಾ.ಪಂ. ಇಒ ಗಳು, ಗ್ರಾ.ಪಂ. ಪಿಡಿಒ- ಮತ್ತು ಕಾರ್ಯದರ್ಶಿ ಇನ್ನಷ್ಟು ಚುರುಕಾಗಿ ಕೆಲಸ ಮಾಡುವಂತೆ ಉಪ ವಿಭಾಗ ಅಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕೋವಿಡ್ ಕಾರಣಕ್ಕೆ ಸಂಭವಿಸುವ ಸಾವಿನ ಕುರಿತು ಹಾಗೂ ಕೊರೋನಾ ವಾರಿಯರ್ಸಗಳಿಗೆ ಮೆಡಿಕಲ್ ರೀಅಂಬರ್ಸಮೆಂಟ್ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸುವ ಭರವಸೆ ನೀಡಿದರು.

ವಿಜಯಪುರ ಜಿಲ್ಲೆಯ 40 ಆಕ್ಸಿಜನ್ ಕಾನ್ಸಂಟ್ರೇಟರ್ ಹಂಚಿಕೆ ಸಹ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಸುನಿಲಕುಮಾರ ಸಭೆಗೆ ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತು ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ 1300 ಕ್ಕೂ ಹೆಚ್ಚು ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಅನ್ಯ ಜಿಲ್ಲೆಗಳಿಂದಲೂ ಸುಮಾರು 100 ರೋಗಿಗಳು ವಿಜಯಪುರ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗಾಗಿ ಬೇರೆ ಜಿಲ್ಲೆಯಿಂದ ರೋಗಗಳು ಬರುತ್ತಿರುವ ಕಾರಣ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಇಳಿಮುಖವಾಗುತ್ತಿದೆ. ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಗಮನ ನೀಡಲಾಗಿದೆ. ವಿನೂತನ ತಂತ್ರಾಂಶದ ಮೂಲಕ ಬೆಡ್ ನಿರ್ವಹಣೆ ಅತ್ಯುತ್ತಮ ಕಾರ್ಯ ಬೆಂಗಳೂರು ನಂತರ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಜೊತೆಗೆ ರಾಜ್ಯದ ಇತರೆ ಜಿಲ್ಲೆಗಳಿಗೆ ನಮ್ಮ ತಂತ್ರಾಂಶ ಮಾದರಿಯಾಗಿದೆ ಎಂದು ಹೇಳಿದರು.

ಜಿ.ಪಂ ಸಿಇಒ ಗೋವಿಂದರೆಡ್ಡಿ ಮಾತನಾಡಿ, ವಿಜಯಪುರ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ರೋಗಿಗಳ ಪತ್ತೆಹಚ್ಚಲು ಕಾರ್ಯ ಪಡೆಗಳು ಸಕ್ರಿಯವಾಗಿವೆ. ಲಕ್ಷಣ ಉಳ್ಳವರಿಗೆ ನಿಗದಿತ ಔಷಧಿ ಮಾತ್ರೆ ಪೂರೈಸುತ್ತಿವೆ .ಈವರೆಗೆ 328 ಕೋವಿಡ್ ಪಾಸಿಟಿವ್ ರೋಗಿಗಳನ್ನು ಗುರುತಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಮೀಪದಲ್ಲಿಯೇ ವಸತಿ ನಿಲಯಗಳಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಕೋವಿಡ್ ರೋಗಿಗಳಿಗೆ ಟಂಟಂ, ಕ್ರೂಜರ್, ಆಂಬುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ರವಾನಿಸಲು ಆಯಾ ಪಿಡಿಒ ಗಳಿಂದಕ್ರಮ ಕೈಗೊಂಡಿದೆ ಎಂದು ಹೇಳಿದರು.

ಸಭೆಯಲ್ಲಿ ಎಸ್ಪಿ ಅನುಪಮ್ ಅಗರವಾಲ್, ಎಡಿಸಿ ರಮೇಶ ಕಳಸದ, ಡಿಎಚ್ಒ ಡಾ.ಮಹೇಂದ್ರ ಕಾಪಸೆ, ಸರಕಾರಿ ಜಿಲ್ಲಾ ಆಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ. ಡಾ. ಗಲಗಲಿ, ಡಾ.ಲಕ್ಕಣ್ಣವರ, ಡಾ.ಎಂ.ಬಿ.ಬಿರಾದರ. ಡಾ.ಮಹೇಶ ನಾಗರಬೆಟ್ಟ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next