Advertisement

ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸಿ, ಯಶಸ್ಸು ಸಾಧಿಸಬೇಕು: ಡಿಸಿಎಂ ಅಶ್ವಥ್‌ನಾರಾಯಣ

09:10 PM Jan 25, 2021 | Team Udayavani |

ಮಂಡ್ಯ: ನಮಗೆ ಸಚಿವ ಸ್ಥಾನ ಎಂಬ ದೊಡ್ಡ ಜವಾಬ್ದಾರಿ ಸಿಕ್ಕ ಮೇಲೆ ಮುಖ್ಯಮಂತ್ರಿಗಳು ಯಾವುದೇ ಖಾತೆ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸಿ, ಅದರಲ್ಲಿ ಯಶಸ್ಸು ಸಾಧಿಸಬೇಕು. ಸಮರ್ಥವಾಗಿ ಕೆಲಸ ಮಾಡಿ ಎಲ್ಲರಿಗೂ ನಾವು ಮಾದರಿಯಾದಾಗ ಮಾತ್ರ ನಮ್ಮ ಮೇಲಿನ ಭರವಸೆ ದುಪ್ಪಟ್ಟಾಗುವುದು ಎಂದು ಹೇಳುವ ಮೂಲಕ ಖಾತೆ ಅಸಮಾಧಾನಿತ ಸಚಿವರಿಗೆ ಉಪಮುಖ್ಯಮಂತ್ರಿ ಡಾ.ಅಶ್ವಥ್‌ನಾರಾಯಣ ಸಲಹೆ ನೀಡಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಂಡ್ಯದವರೇ ಆದ ಕೆ.ಎನ್.ನಾಗೇಗೌಡ ಪಶುಸಂಗೋಪನಾ ಮಂತ್ರಿಯಾಗುವವರೆಗೂ ಆ ಖಾತೆಗೆ ಯಾವುದೇ ಮಹತ್ವವೇ ಇರಲಿಲ್ಲ. ಆದರೆ ಪಶುಸಂಗೋಪನಾ ಇಲಾಖೆಯಲ್ಲಿ ಕ್ರಾಂತಿ ಮಾಡಿದ ನಾಗೇಗೌಡರು ಮಹತ್ವದ ಕೆಲಸಗಳನ್ನು ಮಾಡಿ, ಆ ಖಾತೆ ಪ್ರಭಾವಿ ಖಾತೆಯಾಗುವ ಹಾಗೆ ಮಾಡಿದರು ಎಂದು ಸ್ಮರಿಸಿಕೊಂಡರು.

ಅಧಿಕಾರದ ಸಮರ್ಪಕ ಬಳಕೆಯಾಗಬೇಕು:
ಯಾರೇ ಆದರೂ ಅಧಿಕಾರ ಪಡೆಯುವುದು ಮುಖ್ಯವಲ್ಲ. ಪಡೆದ ಅಧಿಕಾರದಿಂದ ಸಮರ್ಪಕ ಕೆಲಸ ಮಾಡುವುದು ಅತಿಮುಖ್ಯವಾಗಿರುತ್ತದೆ. ಮಂಡ್ಯ ಜಿಲ್ಲೆಯ ಬೇಸಾಯಕ್ಕೆ ಹೆಸರಾದ ಜಿಲ್ಲೆ. ಬೇಸಾಯದಲ್ಲೂ ನಮ್ಮ ರೈತರು ಆಧುನಿಕತೆಯನ್ನು ಮೈಗೂಡಿಸಿಕೊಂಡು ಸಮಗ್ರ ಬೆಳೆ ಬೆಳೆದು ಅಧಿಕ ಲಾಭ ಪಡೆಯಬೇಕೆಂದು ತಿಳಿಸಿದರು.

ಇದನ್ನೂ ಓದಿ:ಹುಣಸೋಡು ಸ್ಫೋಟ ಪ್ರಕರಣ :ಕಲ್ಲುಕ್ವಾರಿ ಮಾಲೀಕ ಸೇರಿ ನಾಲ್ವರನ್ನು ಬಂಧಿಸಿದ ಪೊಲೀಸರು

ವೈಜ್ಞಾನಿಕ ವರ್ಗಾವಣೆಗೆ ಹೊಸ ಕಾನೂನು:
ಬಿಜೆಪಿ ಸರ್ಕಾರ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಬಹಳಷ್ಟು ಶಿಸ್ತು, ಸಂಯಮವನ್ನು ಮೈಗೂಡಿಸಿಕೊಂಡಿದ್ದು, ಪಾರದರ್ಶಕವಾಗಿ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದೆ. ಅಧಿಕಾರಿಗಳ ವೈಜ್ಞಾನಿಕ ವರ್ಗಾವಣೆಗೆ ಹೊಸ ಕಾನೂನು ತರಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.

Advertisement

ಕೆ.ಆರ್.ಪೇಟೆ ಗೆಲುವು ಹುರುಪು ತಂದಿದೆ:
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಬಿಜೆಪಿಯ ಗೆಲುವು ನಮಗೆ ಮತ್ತು ನಮ್ಮ ಕಾರ್ಯಕರ್ತರಿಗೆ ಹೊಸ ಹುರುಪು ತಂದಿದೆ. ದೇಶದ ಮೂಲೆ ಮೂಲೆಯಲ್ಲೂ ಬಿಜೆಪಿ ಗೆದ್ದಿತ್ತು. ಆದರೆ ಮಂಡ್ಯದಲ್ಲಿ ಮಾತ್ರ ಖಾತೆಯನ್ನೇ ತೆರೆದಿರಲಿಲ್ಲ. ಆದರೆ ಅದು ಹುಸಿಯಾಗಿ ನಾವು ದಿಗ್ವಿಜಯ ಸಾಧಿಸಿದ್ದೇವೆ. ಈ ಗೆಲುವು ಜಿಲ್ಲಾದ್ಯಂತ ವಿಸ್ತಾರಗೊಳ್ಳಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ನಾರಾಯಣಗೌಡರಿಂದ ಹೊಸ ನಾಯಕತ್ವ:
ಮಂಡ್ಯ ಜಿಲ್ಲೆಯ ಬಿಜೆಪಿಗೆ ಕೆ.ಸಿ.ನಾರಾಯಣಗೌಡರು ಸಚಿವರಾಗುವ ಮೂಲಕ ಹೊಸ ನಾಯಕತ್ವ ಸಿಕ್ಕಂತಾಗಿದೆ. ಅವರು ಮಂತ್ರಿಯಾಗಿ ಮೂರು ಖಾತೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಮೂರು ಖಾತೆಯಲ್ಲೂ ಮಹತ್ವದ ಕೆಲಸ ಮಾಡುವ ಮೂಲಕ ಜಿಲ್ಲೆಯ ಘನತೆಯನ್ನು ಹೆಚ್ಚಿಸಿದ್ದಾರೆ. ನಾನು ಮಂಡ್ಯ ಜಿಲ್ಲೆಯ ಮೊಮ್ಮಗನಾಗಿದ್ದು, ಜಿಲ್ಲೆಯ ಒಡನಾಟ ಸಾಕಷ್ಟಿದೆ. ಮಂಡ್ಯ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಾನು ಎಲ್ಲಾ ರೀತಿಯ ಸಹಕಾರ ನೀಡಲು ಕಟಿಬದ್ಧನಾಗಿದ್ದೇನೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್, ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುoಡೇಗೌಡ, ಮೈಷುಗರ್ ಅಧ್ಯಕ್ಷ ಶಿವಲಿಂಗಯ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮೇಶ್, ಮುಖಂಡರಾದ ಸಿದ್ದರಾಮಯ್ಯ, ನಾಗಣ್ಣಗೌಡ, ಅಶೋಕ್, ಶ್ರೀಧರ್ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next