Advertisement

ಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿಲ್ಲ

04:19 PM Oct 22, 2021 | Team Udayavani |

ಚಿಕ್ಕಬಳ್ಳಾಪುರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಲಕ್ಷಾಂತರ ರೈತರು ಮತ್ತು ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಡಿಸಿಸಿ ಬ್ಯಾಂಕಿನಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಬದಲಿಗೆ ರಾಜ್ಯ ಬಿಜೆಪಿ ಸರ್ಕಾರ, ನಬಾರ್ಡ್‌, ಆರ್‌ಬಿಐ, ಅಪೆಕ್ಸ್‌ ಬ್ಯಾಂಕಿನಿಂದ 18 ಪ್ರಶಸ್ತಿಗಳು ಬಂದಿದೆ. ರಾಜಕೀಯ ದುರುದ್ದೇಶದಿಂದ ಬ್ಯಾಂಕಿಗೆ ಕಳಂಕ ತರುವ ಕೆಲಸವನ್ನು ಮಾಡುವುದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ಗೆ ಶೋಭೆ ತರುವುದಿಲ್ಲ ಎಂದು ಡಿಸಿಸಿ ಬ್ಯಾಂಕಿನ ನಿರ್ದೇಶಕ ಮೋಹನ್‌ರೆಡ್ಡಿ ತಿರುಗೇಟು ನೀಡಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ಉಪಾಧ್ಯಕ್ಷರು, ನಿರ್ದೇಶಕರ ಶ್ರಮದಿಂದ ಅವಳಿ ಜಿಲ್ಲೆಯ ರೈತರು ಮತ್ತು ಮಹಿಳಾ ಸಂಘ ಸಂಸ್ಥೆಗಳ ಸಹಕಾರದಿಂದ ಡಿಸಿಸಿ ಬ್ಯಾಂಕ್‌ ರಾಜ್ಯದಲ್ಲಿ ನಂಬರ್‌ ಒನ್‌ ಸ್ಥಾನವನ್ನು ಹೊಂದಿದೆ. ಈ ಹಿಂದೆ ಡಿಸಿಸಿ ಬ್ಯಾಂಕಿನ ಮೂಲಕ ನೀಡುತ್ತಿದ್ದ ಸೇವಾ ಸೌಲಭ್ಯಗಳನ್ನು ಹೊಗಳಿ ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಅವರು ಬ್ಯಾಂಕಿನ ಕುರಿತು ಆಧಾರರಹಿತವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ದೂರದರು.

ತನಿಖೆ ಎದುರಿಸಲು ಸಿದ್ಧ: ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮ ಸರ್ಕಾರ ಅಧಿ ಕಾರದಲ್ಲಿದೆ. ತನಿಖೆ ನಡೆಸಲು ಯಾವುದೇ ಅಡ್ಡಿಯಿಲ್ಲ. ಆದರೆ, ಬ್ಯಾಂಕಿನ ಪ್ರಗತಿಯನ್ನು ಸಹಿಸದೆ ಒಂದು ಮಾದರಿಯ 80 ಅರ್ಜಿಗಳನ್ನು ಹಾಕಿ ತನಿಖೆ ಹೆಸರಿನಲ್ಲಿ ತೊಂದರೆ ಕೊಡುತ್ತಿರುವುದನ್ನು ಸಹಿಸದೆ ತಡೆಯಾಜ್ಞೆಯನ್ನು ತಂದಿದ್ದೇವೆ ವಿನಃ, ತನಿಖೆಗೆ ಹೆದರಿ ಅಲ್ಲ ಎಂದು ಸ್ಪಷ್ಟಪಡಿಸಿ, ಡಿಸಿಸಿ ಬ್ಯಾಂಕಿನಲ್ಲಿ ನಡೆದಿರುವ ವ್ಯವಹಾರದ ಕುರಿತು ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧವಿದ್ದೇವೆ ಎಂದು ಸವಾಲು ಹಾಕಿದರು.

ಶೋಭೆ ತರುವುದಿಲ್ಲ: ಡಿಸಿಸಿ ಬ್ಯಾಂಕಿನ ವಿಚಾರ ಮುಂದಿಟ್ಟುಕೊಂಡು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಗೌರಿಬಿದನೂರು ಶಾಸಕ ಶಿವಶಂಕರ್‌ರೆಡ್ಡಿ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಅವರ ಕುರಿತು ಹಗುರವಾಗಿ ಮಾತನಾಡಿರುವುದು ಸಚಿವರ ಗೌರವ ಘನತೆಗೆ ತಕ್ಕುದಲ್ಲ. ಅಸಲಿಗೆ ಬ್ಯಾಂಕಿಗೂ ರಮೇಶ್‌ ಕುಮಾರ್‌, ಶಿವಶಂಕರ್‌ರೆಡ್ಡಿ ಅವರಿಗೆ ಏನು ಸಂಬಂಧ ಎಂದು ಪ್ರಶ್ನಿಸಿದರು.

ಸಾರ್ವಜನಿಕರಿಗೆ ಬಹಿರಂಗ ಪಡಿಸಿ: ಡಿಸಿಸಿ ಬ್ಯಾಂಕ್‌ ನಿರ್ದೇಶಕರು ನಮ್ಮ ಪಕ್ಷದ ನಾಯಕರ ಬಗ್ಗೆ ಆಧಾರರಹಿತವಾಗಿ ಮಾತನಾಡಿದರೆ ಕೇಳಿಸಿಕೊಂಡು ಸುಮ್ನಿರುವುದಿಲ್ಲ, ಡಿಸಿಸಿ ಬ್ಯಾಂಕಿನಲ್ಲಿ ತನಿಖೆಗೆ ತಡೆಯಾಜ್ಞೆ ತಂದಿದ್ದಾರೆ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವರು, ಸೀಡಿ ವಿಚಾರದಲ್ಲಿ ಯಾವ ಉದ್ದೇಶಕ್ಕಾಗಿ ಸಚಿವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂಬುದನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

Advertisement

ನೂರಾರು ಕೋಟಿ ರೂ. ಆಸ್ತಿ ಹೇಗೆ ಬಂತು: ಮಾಜಿ ಜಿಪಂ ಅಧ್ಯಕ್ಷ ಮುನೇಗೌಡ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಅವರು ಹುಟ್ಟುವ ಮುನ್ನವೇ ರಮೇಶ್‌ ಕುಮಾರ್‌ ಅವರು ಶಾಸಕರಾಗಿದ್ದರು. ಅಂತಹ ನಾಯಕರ ಬಗ್ಗೆ ಹಗುರವಾಗಿ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಟೀಕಿಸಿದ ಅವರು, ಒಬ್ಬ ಸಾಮಾನ್ಯ ಶಿಕ್ಷಕನ ಮಗ ನಾನೆಂದು ಡಂಗುರ ಸಾರುವ ಸಚಿವ ಸುಧಾಕರ್‌ಗೆ ಸದಾಶಿವನಗರದ 50 ಕೋಟಿ ರೂ.ನ ಮನೆ, ಪೆರೆಸಂದ್ರದ ನೂರಾರು ಕೋಟಿ ಮೌಲ್ಯದ ಕಾಲೇಜು ಇವುಗಳ ಮೂಲವೇನು? ಕೋಟ್ಯಂತರ ರೂಪಾಯಿ ಆಸ್ತಿ ಹೇಗೆ ಬಂತು? ಅವರ ಆಸ್ತಿ ಆದಾಯಗಳ ಮೂಲವೇನು ಎಂದು ಆ ಪಕ್ಷದ ನಾಯಕರು ಪ್ರಶ್ನಿಸುತ್ತಾರೆ.

ಇದನ್ನೂ ಓದಿ:- ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

ಕಾಂಗ್ರೆಸ್‌ ಪಕ್ಷದಿಂದ ರಾಜಕೀಯವಾಗಿ ಗುರುತಿಸಿಕೊಂಡಿರುವುದು ಅವರು ಮರೆತಿದ್ದಾರೆ ಎಂದು ಟೀಕಿಸಿದರು. ಗೋಷ್ಠಿಯಲ್ಲಿ ವಕೀಲ ನಾರಾಯಣಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯರಾಂ, ಎನ್‌ಎಸ್‌ಯುಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ಮಮತಾ ಮೂರ್ತಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷೆ ಸುಮಿತ್ರಮ್ಮ, ಕಿಸಾನ್‌ ಘಟಕದ ಅಧ್ಯಕ್ಷ ನಾಯನಹಳ್ಳಿ ನಾರಾಯಣಸ್ವಾಮಿ, ಬಾಬಾಜಾನ್‌, ಗೋಪಿ, ಕೋದಂಡ, ಕೃಷ್ಣ ಮತ್ತಿತರರು ಭಾಗವಹಿಸಿದ್ದರು.

ಪ್ರತ್ಯೇಕ ಹಾಲು ಒಕ್ಕೂಟಕ್ಕೆ ವಿರೋಧವಿಲ್ಲ

ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ಮಾಡಲು ಯಾರದು ವಿರೋಧವಿಲ್ಲ, ಯಾರು ಅಡ್ಡಗಾಲು ಹಾಕುತ್ತಿಲ್ಲ, ಮದರ್‌ ಡೇರಿಯನ್ನು ಸೇರಿಸಿಕೊಂಡು ಪ್ರತ್ಯೇಕ ಹಾಲು ಒಕ್ಕೂಟ ರಚಿಸಬೇಕೆಂದು ಸಿಎಂ ಬಸವರಾಜ್‌ ಬೊಮ್ಮಾಯಿ ಅವರನ್ನು ಮನವಿ ಮಾಡಿದ್ದೇವೆ ವಿನಃ, ಯಾರೂ ಅಡ್ಡಿಪಡಿಸಿಲ್ಲ ಎಂದು ಕೋಚಿಮುಲ್‌ ನಿರ್ದೇಶಕ ಭರಣಿ ವೆಂಕಟೇಶ್‌ ಹೇಳಿದರು.

ಒಕ್ಕೂಟ ಪ್ರತ್ಯೇಕಗೊಳಿಸಲು ಈಗಾಗಲೇ ನಿರ್ಣಯ ಅಂಗೀಕರಿಸಲಾಗಿದೆ. ಆದರೆ, ಪ್ರತ್ಯೇಕವಾಗಿ ಒಕ್ಕೂಟವನ್ನು ಮಾಡಲು ಅಗತ್ಯ ಅನುದಾನ, ಹಾಲಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿದ್ದೇವೆ. ಜಿಲ್ಲೆಯ ಹಾಲು ಉತ್ಪಾದಕರ ಹಿತವನ್ನು ರಕ್ಷಣೆ ಮಾಡುವುದೇ ತಮ್ಮ ಮುಖ್ಯ ಗುರಿ, ಹಾಲು ಒಕ್ಕೂಟದ ಹೆಸರಲ್ಲಿ ರಾಜಕಾರಣ ಮಾಡುತ್ತಿಲ್ಲ ಎಂದು ಸಚಿವರಿಗೆ ಟಾಂಗ್‌ ನೀಡಿದರು.

ಕಾಂಗ್ರೆಸ್‌ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಿ, ಆ ಪಕ್ಷದಿಂದ ಸ್ಥಾನಮಾನ ಪಡೆದುಕೊಂಡು ಐತಿಹಾಸಿಕ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುವುದು ಸಚಿವ ಡಾ.ಕೆ. ಸುಧಾಕರ್‌ಗೆ ಶೋಭೆ ತರುವುದಿಲ್ಲ. ಕ್ಷೇತ್ರದ ಜನರಿಗೆ ದಿಕ್ಕುತಪ್ಪಿಸುವ ರಾಜಕಾರಣ ಮಾಡಲು ಹೊರಟಿರುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕ್ಷೇತ್ರದ ಜನರೇ ಸೂಕ್ತ ರೀತಿಯ ಪಾಠ ಕಲಿಸುತ್ತಾರೆ. -ಎಸ್‌.ಎಂ.ಮುನಿಯಪ್ಪ, ಮಾಜಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next