Advertisement

ಸಿಬ್ಬಂದಿ ವಿರುದ್ಧ ಡೀಸಿ ಸಿಡಿಮಿಡಿ

03:03 PM May 17, 2019 | Team Udayavani |

ಕೋಲಾರ: ನಗರದ ಅಂಗಡಿ ಮಾಲಿಕರು 2 ದಿನದೊಳಗೆ ತೆರಿಗೆ ಪಾವತಿಸಿ ಟ್ರೇಡ್‌ ಲೈಸನ್ಸ್‌ ನವೀಕರಣ ಮಾಡಿಕೊಳ್ಳದಿದ್ದರೆ ಅಂಗಡಿಗಳಿಗೆ ಬೀಗ ಮುದ್ರೆ ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಜನತೆ ಸಮಯಕ್ಕೆ ಸರಿಯಾಗಿ ಆಸ್ತಿ ತೆರಿಗೆ ಪಾವತಿಸಲು ಮನವಿ ಮಾಡಿದರು.

Advertisement

ಗುರುವಾರ ನಗರಸಭೆಗೆ ಹಠಾತ್‌ ಭೇಟಿ ನೀಡಿ, ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಸಂಪನ್ಮೂಲ ಕ್ರೋಢೀಕರಣ ದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೇಳಿದರು.

ನಗರದಲ್ಲಿ ಸುಮಾರು 2500 ಅಂಗಡಿಗಳಿದ್ದು, ಮಾರ್ಚ್‌ ಅಂತ್ಯಕ್ಕೆ ಟ್ರೇಡ್‌ ಲೈಸನ್ಸ್‌ ಮುಗಿದಿದೆ, ಏಪ್ರಿಲ್ ಒಂದರಿಂದಲೇ ನವೀಕರಣ ಮಾಡಿಕೊಳ್ಳ ಬೇಕಿದ್ದರೂ, ಕೇವಲ 200 ಅಂಗಡಿಗಳು ಮಾತ್ರ ನವೀಕರಣ ಮಾಡಿಕೊಂಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಹಾಜರಾತಿ ಹಿಡಿದು ಮಾಹಿತಿ ಸಂಗ್ರಹಣೆ: ಡೀಸಿ ಯವರು ಮೊದಲು ಸಿಬ್ಬಂದಿ ಹಾಜರಾತಿ ಪುಸ್ತಕ ಹಿಡಿದು ಒಂದೊಂದೇ ವಿಭಾಗದ ಸಿಬ್ಬಂದಿಯನ್ನು ಕರೆದು ಅವರು ನಿರ್ವಹಿಸುತ್ತಿರುವ ಕೆಲಸ ಮತ್ತು ಹೊಣೆ ಕುರಿತು ವಿವರಣೆ ಪಡೆದುಕೊಂಡರು.

ಈ ವೇಳೆ ದೂರು ನಿರ್ವಹಣೆ, ಯುಜಿಡಿ ಸ್ವಚ್ಛತೆಗೆ ಕೈಗೊಂಡಿರುವ ಕ್ರಮ, ಸ್ವಚ್ಛತೆ, ಕುಡಿಯುವ ನೀರು,ಬೀದಿ ದೀಪಗಳ ನಿರ್ವಹಣೆ, ಕಂದಾಯ ಇಲಾಖೆಯಲ್ಲಿ ತೆರಿಗೆ ಸಂಗ್ರಹ ಮತ್ತಿತರ ಅಂಶಗಳ ಕುರಿತು ಪರಿಶೀಲನೆ ನಡೆಸಿದರು.

Advertisement

ಆಸ್ತಿ ತೆರಿಗೆಪಾವತಿಸಿ: ನಗರಸಭೆಯಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಡೀಸಿ, ನಗರಸಭೆ ಅವಧಿ ಮುಗಿದಿದ್ದು, ಚುನಾವಣೆ ನಡೆಯಬೇಕಿತ್ತು ಆದರೆ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಬೇಕಾ ಗಿದೆ ಎಂದರು.

ನಗರಸಭೆ ಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಬೇಕು, ಆಸ್ತಿ ತೆರಿಗೆ ಸರಿಯಾಗಿ ಪಾವತಿಸಿ ದಲ್ಲಿ ಮಾತ್ರವೇ ಉತ್ತಮ ಸೇವೆ ನೀಡಲು ಸಾಧ್ಯ. ಅಂಗಡಿಗಳ ಟ್ರೇಡ್‌ ಲೈನಸ್ಸ್ ನವೀಕರಣಕ್ಕೂ 2 ದಿನ ಅವಕಾಶ ನೀಡಿ ಅಂಗಡಿಗಳಿಗೆ ಬೀಗ ಹಾಕಲು ಸೂಚಿಸಿದ್ದೇನೆ. ಸಂಪನ್ಮೂಲ ಕ್ರೋಢೀಕರಣಕ್ಕೆ ಕೆಲವು ಕಠಿಣ ಕ್ರಮಗಳು ಅನಿವಾರ್ಯ ಎಂದರು.

ಉಳಿದಂತೆ ಖಾತೆ ಸಮಸ್ಯೆ, ನೀರಿನ ಸಮಸ್ಯೆ, ಯುಜಿಡಿ ದುರಸ್ಥಿತಿ ಮತ್ತಿತರ ಜನರ ಸಮಸ್ಯೆಗಳ ನಿವಾರಣೆಗೆ ಕಾಲಮಿತಿಯಲ್ಲಿ ಕ್ರಮವಹಿಸಲು ಸೂಚಿಸಿದ್ದೇನೆಂದರು.

ನಾಗರಿಕರ ದೂರು: ಇದೇ ಸಂದರ್ಭದಲ್ಲಿ ನಗರ ಸಭೆಯಲ್ಲಿ ಹಾಜರಿದ್ದ ನಾಗರಿಕರು ಹಾಗೂ ವಿವಿಧ ಬಡಾವಣೆಗಳ ನಿವಾಸಿಗಳು ಅಸಮರ್ಪಕ ಕುಡಿ ಯುವ ನೀರು ಸರಬರಾಜು, ತಿಂಗಳಾದರೂ ಕೊಳಾಯಿಗಳಲ್ಲಿ ಬಾರದ ನೀರು, ಯುಜಿಡಿ ಸಮಸ್ಯೆ ನಿರ್ವಹಣೆಯಲ್ಲಿ ವೈಫ‌ಲ್ಯದಿಂದಾಗಿ ನಗ ರದ ವಿವಿಧ ರಸ್ತೆಗಳಲ್ಲಿ ಮ್ಯಾನ್‌ಹೋಲ್ಗಳು ತುಂಬಿ ಕೊಳಕು ರಸ್ತೆಗೆ ಹರಿಯುತ್ತಿದ್ದರೂ, ಕ್ರಮ ಕೈಗೊಳ್ಳದ ಕುರಿತು ಜಿಲ್ಲಾಧಿಕಾರಿ ಮಂಜುನಾಥ್‌ ಅವರ ಗಮನಕ್ಕೆ ತಂದರು.

ವಸತಿ ವಿಭಾಗದ ಜೀವನ್‌, ಕಂದಾಯ ವಿಭಾಗದ ನಟರಾಜ್‌ರನ್ನು ಅರ್ಜಿ ವಿಲೇವಾರಿಯಲ್ಲಿನ ವೈಫ‌‌ಲ್ಯಗಳ ಕುರಿತು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ನೀರಿನ ಸಮಸ್ಯೆ, ಯುಜಿಡಿ ಬ್ಲಾಕ್‌ ಕುರಿತು ಸಂಬಂಧಿಸಿದ ಎಂಜಿನಿಯರ್‌ಗಳನ್ನು ಪ್ರಶ್ನಿಸಿ ನೀವು ಕಚೇರಿಯಲ್ಲಿ ಕುಳಿತು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ, ಮಳೆ ಬರುತ್ತದೆ ಎಂಬ ಅರಿವಿರುವಾಗ ನೀರು ಮನೆಗಳಿಗೆ ನುಗ್ಗದಂತೆ ಕೈಗೊಳ್ಳಬೇಕಾದ ಕ್ರಮಗಳಿಗೆ ಒತ್ತು ನೀಡಬೇಕಲ್ಲವೇ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಆರ್‌ಐ ತ್ಯಾಗ ರಾಜ್‌, ಕಂದಾಯ ಅಧಿಕಾರಿ ಚಂದ್ರಶೇಖರ್‌, ಶಿವಪ್ರಕಾಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next