Advertisement

ಡಿಸಿ ಕಟ್ಟುನಿಟ್ಟಿನ ಆದೇಶ ಸ್ವಾಗತಾರ್ಹ; ನಾಗರಿಕರಿಗೆ, ಬಿಲ್ಡರ್‌ಗಳಿಗೆ ಪ್ರಯೋಜನ: ಕ್ರೆಡಾಯ್‌

11:10 AM Mar 15, 2023 | Team Udayavani |

ಮಂಗಳೂರು: ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ಸಮಗ್ರ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಪರ ವಾನಿಗೆ, 8 ದಿನಗಳೊಳಗೆ ಪ್ರವೇಶಪತ್ರ, 7 ದಿನಗಳೊಳಗೆ ಸ್ಥಳ ಪರಿಶೀಲನೆ ನಡೆಸಬೇಕು ಎಂಬ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ದ.ಕ. ಜಿಲ್ಲಾಧಿಕಾರಿಯವರು ಹೊರಡಿಸಿದ ಆದೇಶ ಸ್ವಾಗತಾರ್ಹ. ಇದರಿಂದ ಸಾರ್ವಜನಿಕರು ಹಾಗೂ ನಾಗರಿಕರಿಗೆ ಸಹಾಯವಾಗಲಿದೆ ಎಂದು ಕ್ರೆಡಾಯ್‌ ಮಂಗಳೂರು ಅಧ್ಯಕ್ಷ ಪುಷ್ಪರಾಜ್‌ ಜೈನ್‌ ತಿಳಿಸಿದ್ದಾರೆ.

Advertisement

2017ರಲ್ಲಿಯೇ ಕೇಂದ್ರ ಸರಕಾರ ಈ ಕುರಿತು ಕಾನೂನು ತಂದಿತ್ತು. ಆದರೆ ನಮ್ಮಲ್ಲಿ ಇದುವರೆಗೆ ಜಾರಿಗೆ ಬಂದಿರಲಿಲ್ಲ. ಕ್ರೆಡಾಯ್‌ ಈ ವಿಚಾರವನ್ನು ಡಿಸಿಯವರ ಗಮನಕ್ಕೆ ತಂದಿತ್ತು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಟ್ಟಡ ಪರವಾನಗಿ ಪಡೆಯಲು ವಿವಿಧ ಇಲಾಖೆಗಳಿಂದ ನಿರಾಕ್ಷೇಪಣ ಪತ್ರ, ಸ್ಥಳ ಪರಿಶೀಲನೆ ಇತ್ಯಾದಿ ಕಾರಣಕ್ಕೆ ಕೆಲಸ ವಿಳಂಬವಾಗುತ್ತಿತ್ತು.

ಈ ಹೊಸ ಆದೇಶದಿಂದಾಗಿ ಅನುಕೂಲವಾಗಲಿದೆ. ನಿಗದಿತ ಅವಧಿಯೊಳಗೆ ಅರ್ಜಿ ವಿಲೇವಾರಿ ಯಾಗಬೇಕು ಎಂಬ ಆದೇಶದಿಂದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೂ ಪ್ರಯೋಜನವಾಗಲಿದ್ದು, ಕಟ್ಟಡ ಪರವಾನಿಗೆ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ತಪ್ಪಲಿದೆ ಎಂದರು.

ಡೀಮ್ಡ್ ಎನ್‌ಒಸಿ
ಕಟ್ಟಡ ನಿರ್ಮಾಣಕ್ಕೆ ನಿಗದಿತ ಅವಧಿಯಲ್ಲಿ ಸಂಬಂಧಪಟ್ಟ ಇಲಾಖೆಯು ಒಂದು ವೇಳೆ ನಿರಾಕ್ಷೇಪಣ ಪತ್ರ ನೀಡದಿದ್ದಲ್ಲಿ, ಡೀಮ್ಡ್ ಎನ್‌ಒಸಿ ಎಂದು ಪರಿಗಣಿಸಿ, ಅದರ ಆಧಾರದಲ್ಲಿ ಕಟ್ಟಡ ನಿರ್ಮಿಸಲು ಸ್ಥಳೀಯ ಸಂಸ್ಥೆಗಳು ಪರವಾನಿಗೆ ನೀಡುವಂತೆ ಆದೇಶದಲ್ಲಿದೆ. ಇದೊಂದು ಒಳ್ಳೆಯ ಕ್ರಮ ಎಂದು ಹೇಳಿದರು.

ಏಕಗವಾಕ್ಷಿಯತ್ತ ಹೆಜ್ಜೆ
ಕಟ್ಟಡ ನಿರ್ಮಾಣಕ್ಕೆ ಪರವಾನಿಗೆಗೆ ಪಾಲಿಕೆಗೆ ಅರ್ಜಿ ಸಲ್ಲಿಸುವ ಮುನ್ನ ವಿವಿಧ ಇಲಾಖೆಗಳಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಿ ನಿರಾಕ್ಷೇಪಣ ಪತ್ರ ಪಡೆಯಬೇಕಿತ್ತು. ಇದರಿಂದ ಯೋಜನೆ ವಿಳಂಬವಾಗುತ್ತಿತ್ತು. ಇದನ್ನು ತಪ್ಪಿಸಲು ಕಟ್ಟಡ ಪರವಾನಿಗೆ ಅರ್ಜಿಯನ್ನು ಏಕಗವಾಕ್ಷಿ ಯೋಜನೆ ಯಡಿ ತರಲೂ ಸಭೆಯಲ್ಲಿ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನೂ ಜಾರಿಗೊಳಿಸಲು ವರದಿ ಕೋರಲಾಗಿದೆ ಎಂದರು.

Advertisement

ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಕೋರಿದ ಅರ್ಜಿಗಳನ್ನು 15 ದಿನಗಳಿಗೊಮ್ಮೆ ಪಾಲಿಕೆಯ ಆಯುಕ್ತರು ಅರ್ಜಿದಾರರು, ಎಂಜಿನಿಯರ್‌ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳನ್ನು ಕರೆಸಿ ವಿಚಾರಣೆ ನಡೆಸಬೇಕು ಎಂದೂ ಆದೇಶಿಸಲಾಗಿದೆ.

ದರ ಏರಿಕೆ
ಕೋವಿಡ್‌ ಬಳಿಕ ನಿರ್ಮಾಣ ಕ್ಷೇತ್ರದ ಕಬ್ಬಿಣ, ಸಿಮೆಂಟ್‌ ಮತ್ತಿತರ ಕಚ್ಚಾ ವಸ್ತುಗಳ ದರ ಬಹುತೇಕ ದುಪ್ಪಟ್ಟು ಏರಿಕೆಯಾಗಿರುವುದರಿಂದ ಅನಿವಾರ್ಯವಾಗಿ ಜಿಲ್ಲೆಯಲ್ಲೂ ಕಟ್ಟಡದ ದರ ಚದರಡಿಗೆ ಸರಾಸರಿ 2,500 ರೂ.ಗಳಷ್ಟು ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾರ್ಯದರ್ಶಿ ಪ್ರಶಾಂತ್‌ ಸನಿಲ್‌, ಕೋಶಾಧಿಕಾರಿ ಗುರುಮೂರ್ತಿ, ನಿಯೋಜಿತ ಅಧ್ಯಕ್ಷ ವಿನೋದ್‌ ಪಿಂಟೊ ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಥೆಗಳಿಗೆ ಅನ್ವಯ
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳಾದ ಮಂಗಳೂರು ಪಾಲಿಕೆ, ನಗರಸಭೆ ಗಳು, ಪುರಸಭೆಗಳು, ಪ.ಪಂ., ಗ್ರಾ.ಪಂ. ಗಳು ಮತ್ತು ಎಲ್ಲ ನಗರ ಯೋಜನಾ ಪ್ರಾಧಿಕಾರಗಳು ಕಟ್ಟಡ ಪರವಾನಿಗೆ ನೀಡುವ ಪ್ರಾಧಿಕಾರ ಗಳಾಗಿದ್ದು, ಎಲ್ಲವೂ ಇದೇ ರೀತಿ ಏಕಗವಾಕ್ಷಿ ಯೋಜನೆ ಮಾದರಿಯಲ್ಲಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next