Advertisement

 ಸ್ಮಾರಕ ಒತ್ತುವರಿ ಮಾಡಿದವರ ವಿರುದ್ಧ ಕ್ರಮಕ್ಕೆ ಡಿಸಿ ಸೂಚನೆ

08:06 PM Apr 05, 2021 | Team Udayavani |

ವಿಜಯಪುರ: ನಗರದಲ್ಲಿರುವ ಐತಿಹಾಸಿಕ ಸ್ಮಾರಕಗಳು ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ದುಃಸ್ಥಿತಿಯಲ್ಲಿರುವ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸುನೀಲಕುಮಾರ ಸಂಬಂ ಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಭಾನುವಾರ ತಮ್ಮ ಅಧ್ಯಕ್ಷತೆಯಲ್ಲಿ ಪಾರಂಪರಿಕ ನಡಿಗೆ ಅಂಗವಾಗಿ ಎರಡನೇ ಬಾರಿಗೆ ನಗರದಲ್ಲಿರುವ ವಿವಿಧ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರಕ್ಕೆ ಅಂಟಿಕೊಂಡಿರುವ ಸಾಠ್ ಖಬರ್‌, ಸುರಂಗ ಬೌಡಿ, ಜಿಲ್ಲಾಸ್ಪತ್ರೆ ಪ್ರದೇಶದಲ್ಲಿರುವ ಸ್ಮಾರಕ, ಚಾಂದ್‌ಬೌಡಿ, ಇಬ್ರಾಹಿಂ ರೋಜಾ, ಮಲಿಕ್‌ ಮೈದಾನ ತೋಪ್‌, ಉಪರಿ ಬುರ್ಜ್‌ ಸೇರಿದಂತೆ ಐತಿಹಾಸಿಕ ಏಳು ಸ್ಮಾರಕಗಳ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಸಾಠ್ ಖಬರ್‌ ಸ್ಮಾರಕ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಸದರಿ ಸ್ಮಾರಕ ಕೇಂದ್ರ ಸರ್ಕಾರದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀನದ ನಿರ್ವಹಣೆಯಲ್ಲಿದ್ದರೂ ಅಧಿಕಾರಿಗಳ ನಿರ್ಲಕ್ಷದಿಂದ ಸ್ಮಾರಕ ಪ್ರದೇಶದಲ್ಲಿನ ದುಃಸ್ಥಿತಿಗೆ ಬೇಸರ ವ್ಯಕ್ತಪಡಿಸಿದರು. ಸದರಿ ಸ್ಮಾರಕಕ್ಕೆ ಭೇಟಿ ನೀಡಲು ಕನಿಷ್ಟ ಉತ್ತಮ ರಸ್ತೆಯೂ ಇಲ್ಲದೇ ಮೂಲಸೌಕರ್ಯ ವಂಚಿತ ಸ್ಮಾರಕ ಪ್ರದೇಶದಲ್ಲಿ ತಕ್ಷಣ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ಸ್ಮಾರಕ ಪ್ರದೇಶಕ್ಕೆ ಭೇಟಿ ನೀಡಲು ಅಗತ್ಯ ಇರುವ ಸೂಚನಾ ಫಲಕಗಳ ಅಳವಡಿಕೆ, ಲೈಟಿಂಗ್‌ ವ್ಯವಸ್ಥೆ ಮಾಡಬೇಕು. ಅಕ್ರಮವಾಗಿ ಐತಿಹಾಸಿಕ ಸ್ಮಾರಕಗಳ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟವರಿಗೆ ಸೂಚಿಸಿದರು.

ಸುರಂಗ ಮಾರ್ಗ ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾಧಿ  ಕಾರಿ ನೇತೃತ್ವದ ಅ ಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿ ಗಳ ತಂಡ ಸುರಂಗ ಮಾರ್ಗ ಪ್ರದೇಶ ಅಭಿವೃದ್ಧಿ ಪರಿಶೀಲಿಸಿದರು. ನೂತನ ಪ್ರವಾಸಿ ಮಂದಿರ ವ್ಯಾಪ್ತಿಯ ಸುರಂಗ ಮಾರ್ಗದ ವಾಯುಕಿಂಡಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸರ್ಕಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ನವ್ರಿ ಸ್ಮಾರಕಕ್ಕೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸದರಿ ಸ್ಮಾರಕ ಪ್ರದೇಶದಲ್ಲಿರುವ ಐತಿಹಾಸಿಕ ಬಾವಿಯ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಜಿಲ್ಲಾಸ್ಪತ್ರೆಯ ಸರ್ಜನ್‌ ಡಾ|ಶರಣಪ್ಪ ಅವರಿಗೆ ಸೂಚಿಸಿ, ಸದರಿ ಪ್ರದೇಶದಲ್ಲಿ ಸ್ವತ್ಛತೆಗೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಿದರು.

Advertisement

ಇಬ್ರಾಹಿಂ ರೋಜಾ ಸ್ಮಾರಕ ಪ್ರದೇಶಕ್ಕೆ ಭೇಡಿ ನೀಡಿದ ನಿರ್ವಹಣೆಯ ಮತ್ತು ಸಮಸ್ಯೆ ಬಗ್ಗೆ ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಮಾಹಿತಿ ಪಡೆದರು. ಉದ್ಯಾನವನ ನಿರ್ವಹಣೆಗೆ ಸಿಬ್ಬಂದಿಯ ಕೊರತೆ ನೀಗಲು ಹೊರ ಗುತ್ತಿಗೆ ಆಧಾರದ ಸಿಬ್ಬಂದಿ ನೇಮಕಕ್ಕೆ ಸೂಚಿಸಿದರು. ಮಲಿಕ್‌ ಮೈದಾನ್‌ ತೋಪ್‌, ಉಪರಿ ಬುರ್ಜ್‌ ಸ್ಮಾರಕಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿ  ಕಾರಿ, ಉಪರಿ ಬುರುಜ್‌ ವಿಜಯಪುರ ನಗರವನ್ನು ಎತ್ತರ ಪ್ರದೇಶದಿಂದ ವೀಕ್ಷಿಸುವ ಸುಂದರ ಸ್ಮಾರಕವಾಗಿದ್ದು, ಇದರ ಅಭಿವೃದ್ಧಿಗೆ ಆದ್ಯತೆ ನೀಡುವ ಜತೆಗೆ ಪ್ರವಾಸಿಗರಿಗೆ ಇದರ ಮಹತ್ವ ತಿಳಿಸುವ ಕೆಲಸ ಮಾಡಬೇಕೆಂದು ಸೂಚಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ, ಉಪ ವಿಭಾಗಾ ಧಿಕಾರಿ ಬಲರಾಮ ಲಮಾಣಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಪ್ರವಾಸೋದ್ಯಮ ಅಭಿವೃದ್ಧಿ ಸಲಹಾ ಸಮಿತಿ ಸದಸ್ಯರಾದ ಪೀಟರ್‌ ಅಲೆಕ್ಸಾಂಡರ್‌, ಅಮೀನ್‌ ಹುಲ್ಲೂರ್‌, ಪ್ರವಾಸಿ ತಾಣಗಳ ಪ್ರಚಾರಕ ಸಂಸ್ಥೆಯ ಹಮಜಾ ಮೆಹಬೂಬ್‌, ಅಮಿತ್‌ ಹುದ್ದಾರ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next