ಸಿರುಗುಪ್ಪ: ತಾಲೂಕಿನ ಉತ್ತನೂರು ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿ ಕಾರಿಗಳ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪವನ್ಕುಮಾರ ಮಾಲಪಾಟಿ ಗ್ರಾಮಕ್ಕೆ ಬೆಳಗ್ಗೆ ಭೇಟಿ ನೀಡಿ ಮನೆ ಮನೆಗೆ ತೆರಳಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.
ಗ್ರಾಮದ 3ನೇ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ತೂಕದ ಪುಸ್ತಕದಲ್ಲಿ ಮಕ್ಕಳ ತೂಕದ ಬಗ್ಗೆ 2018ರಿಂದ ಇಲ್ಲಿಯವರೆಗೆ ದಾಖಲಿಸದೆ ಇರುವುದನ್ನು ಕಂಡ ಜಿಲ್ಲಾಧಿ ಕಾರಿಗಳು ಸಿಡಿಪಿಒ ಜಲಾಲಪ್ಪರನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಿಡಿಪಿಒ ಮತ್ತು ಮೇಲ್ವಿಚಾರಕಿಗೆ ನೋಟಿಸ್ ಜಾರಿಮಾಡಿ, ಅಂಗನವಾಡಿ ಕಾರ್ಯಕರ್ತೆಯ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಸಹಾಯಕ ಆಯುಕ್ತ ರಮೇಶ ಕೋನಾರೆಡ್ಡಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೆಲ ಸಮಸ್ಯೆಗಳಾದ ಪಡಿತರ ಚೀಟಿ, ವೃದ್ಧಾಪ್ಯ ವೇತನ ಇನ್ನಿತರೆ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಹಾಜರಿದ್ದ ಅ ಧಿಕಾರಿಗಳಿಗೆ ತಿಳಿಸಿ ಪರಿಹರಿಸಿದರು. ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ಅಂಗವಿಕಲ, ವಿಧವಾ ವೇತನ ಸರಿಯಾದ ಸಮಯಕ್ಕೆ ಬರುತ್ತದೆ. ಆದರೂ ಅಂಚೆ ಕಚೇರಿಯಿಂದ ವಿತರಿಸುವವರು 20 ರೂ.ರಿಂದ 100ರೂವರೆಗೆ ತೆಗೆದುಕೊಳ್ಳುತ್ತಿದ್ದಾರೆಂದು ಬಹುತೇಕ ಫಲಾನುಭವಿಗಳು ಜಿಲ್ಲಾ ಧಿಕಾರಿಗಳ ಗಮನಕ್ಕೆ ತಂದರು. ಹೊಲಗಳಿಗೆ ಕೂರಿಗನೂರು ಕಾಲುವೆಯಿಂದ ಸರಿಯಾಗಿ ನೀರು ಬರುತ್ತಿಲ್ಲ. ಕಳೆದ 10 ವರ್ಷದಿಂದ ನೀರಿನ ಸಮಸ್ಯೆಯಿಂದಾಗಿ ಬೆಳೆಗೆ ನೀರು ಸಿಗುತ್ತಿಲ್ಲ. ಇದರಿಂದಾಗಿ ಊರು ಬಿಟ್ಟು ಗುಳೆ ಹೋಗಿ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದಯವಿಟ್ಟು ನಮ್ಮ ಹೊಲಗಳಿಗೆ ನೀರು ಕೊಡಿಸುವ ವ್ಯವಸ್ಥೆ ಮಾಡಿದರೆ ನಮ್ಮೂರಲ್ಲೇ ಇದ್ದು, ವ್ಯವಸಾಯ ಮಾಡಿ ಜೀವನ ಸಾಗಿಸಲು ಸಹಕಾರಿಯಾಗಲಿದೆ ಎಂದು ಮನವಿ ಮಾಡಿದರು.
ನಿಮ್ಮ ಮನವಿ ಪರಿಶೀಲಿಸಿ ಸಂಬಂಧಿ ಸಿದ ಅಧಿ ಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡಲಾಗುವುದೆಂದು ಜಿಲ್ಲಾಧಿಕಾರಿಗಳು ರೈತರಿಗೆ ತಿಳಿಸಿದರು. ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆರಿಗೆಗೆ ಹೋದರೆ ಆಸ್ಪತ್ರೆ ಸಿಬ್ಬಂದಿ 3 ಸಾವಿರ ರೂ. ಕೇಳುತ್ತಿದ್ದಾರೆ. ಇದರಿಂದಾಗಿ ನಾವು ಸರ್ಕಾರಿ ಆಸ್ಪತ್ರೆಗೆ ಹೋಗಿ ಹೆರಿಗೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಡವರಾದ ನಾವು ಅವರಿಗೆ ಎಲ್ಲಿಂದ ಹಣ ಕೊಡಬೇಕು. ಇದು ಖಾಸಗಿ ಆಸ್ಪತ್ರೆಯೋ ಅಥವಾ ಸರ್ಕಾರಿ ಆಸ್ಪತ್ರೆಯೋ ತಿಳಿಯುತ್ತಿಲ್ಲ ಎಂದು ಗ್ರಾಮದ ಮಹಿಳೆಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಆಸ್ಪತ್ರೆ ಸಿಬ್ಬಂದಿ ಯನ್ನು ಕರೆಸಿ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಗ್ರಾಮದಲ್ಲಿ ನಾವು 9 ಜನ ಮಾಜಿ ದೇವದಾಸಿಯರಿದ್ದು, ನಮಗೆ ವಾಸಮಾಡಲು ಮನೆಗಳಿಲ್ಲದೆ ಒಂದೇ ಮನೆಯಲ್ಲಿ 5ರಿಂದ 6ಕುಟುಂಬಗಳು ವಾಸಮಾಡುತ್ತಿದ್ದೇವೆ. ದಯವಿಟ್ಟು ಸರ್ಕಾರದಿಂದ ನಮಗೆ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು. ನಿಮ್ಮಲ್ಲಿರುವ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಅವುಗಳನ್ನು ಪರಿಶೀಲಿಸಿ ಮನೆಗಳ ನಿರ್ಮಾಣಮಾಡಿಕೊಡುವ ಬಗ್ಗೆ ಗಮನಹರಿಸಲಾಗುವುದೆಂದು ಜಿಲ್ಲಾ ಧಿಕಾರಿಗಳು ಮಾಜಿ ದೇವದಾಸಿಯರಿಗೆ ತಿಳಿಸಿದರು.
ಗ್ರಾಮದಲ್ಲಿ ಕೇವಲ 37 ಮನೆಗಳ ನಿರ್ಮಾಣಕ್ಕೆ ಅವಕಾಶವಿದೆ. ಆದರೆ 207 ಅರ್ಜಿಗಳು ಬಂದಿವೆ. ಇಷ್ಟು ಮನೆಗಳನ್ನು ನಿರ್ಮಿಸಲು ಆಗುತ್ತಿಲ್ಲವೆಂದು ಪಿಡಿಒ ರಾಜಕುಮಾರ್ನಾಯ್ಕ ಜಿಲ್ಲಾ ಧಿಕಾರಿಗಳ ಗಮನಕ್ಕೆ ತಂದರು. ಗ್ರಾಮದ ಹತ್ತಿರ ವಾಸಿಸಲು ಯೋಗ್ಯವಾದ 12 ಎಕರೆ ಜಮೀನು ಖರೀದಿಸಿ ಮನೆಗಳನ್ನು ನಿರ್ಮಿಸಲು ಸೂಕ್ತಕ್ರಮ ಕೈಗೊಳ್ಳಲು ಸಹಾಯಕ ಆಯುಕ್ತ ರಮೇಶಕೋನಾರೆಡ್ಡಿಗೆ ಸೂಚಿಸಿದರು. ತಹಶೀಲ್ದಾರ್ ಎಸ್.ಬಿ. ಕೂಡಲಗಿ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.