Advertisement

ಡಿಸಿ ಗ್ರಾಮ ವಾಸ್ತವ್ಯ; ಸಿಗುವುದೇ ಪರಿಹಾರ? ಪಹಣಿ ದೋಷಕ್ಕೆ ಸಿಗುವುದೇ ಕಾಯಕಲ್ಪ?

01:49 PM Feb 19, 2022 | Team Udayavani |

ವಾಡಿ: ಗ್ರಾಮೀಣ ಜನರ ಕುಂದು ಕೊರತೆಗಳನ್ನು ಸ್ಥಳದಲ್ಲೇ ಬಗೆಹರಿಸುವ ರಾಜ್ಯ ಸರ್ಕಾರದ ಪರಿಕಲ್ಪನೆಯ “ಜಿಲ್ಲಾಧಿಕಾರಿ ನಡೆ-ಹಳ್ಳಿಯ ಕಡೆ’ ಕಾರ್ಯಕ್ರಮ ಸಾಕಾರಕ್ಕೆ ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್‌ ಮುಂದಾಗಿದ್ದು, ಫೆ.19ರಂದು ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದಲ್ಲಿ ವಾಸ್ತವ್ಯ ಹೂಡುವ ಮೂಲಕ ತಮ್ಮ ಜಿಲ್ಲಾ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲಿದ್ದಾರೆ.

Advertisement

ಜಿಲ್ಲಾಧಿಕಾರಿಯ ವಾಸ್ತವ್ಯಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆ ಇದ್ದರೂ ಗ್ರಾಮದ ಪ್ರತಿಷ್ಠಿತ ಪರ್ತಾನಿ ರಾಜಗೋಪಾಲ ಶಾರದಾ ದೇವಿ ಕಾನ್ವೆಂಟ್‌ ಶಾಲೆ ಗುರುತಿಸಿರುವ ತಾಲೂಕು ಆಡಳಿತ, ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿದೆ. ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಮತ್ತು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಹನುಮಾನ ದೇವಸ್ಥಾನದ ಸಭಾಂಗಣ
ಶುಚಿಗೊಳಿಸಲಾಗಿದೆ. ರಸ್ತೆ ಬದಿಯಲ್ಲಿ ಬೆಳೆದ ಮುಳ್ಳುಕಂಟಿಗಳನ್ನು ಕತ್ತರಿಸಿ ಸುಡಲಾಗುತ್ತಿದೆ. ಜೆಸ್ಕಾಂ ಸಿಬ್ಬಂದಿ ಗ್ರಾಮದಲ್ಲಿ ನೇತಾಡುತ್ತಿರುವ ವಿದ್ಯುತ್‌ ತಂತಿಗಳ ದುರಸ್ತಿ ಕಾರ್ಯದಲ್ಲಿ ತೊಡಗಿರುವುದು ಶುಕ್ರವಾರ ಕಂಡು ಬಂದಿತು. ಸಹಾಯಕ ಆಯುಕ್ತರು, ತಹಶೀಲ್ದಾರರು, ವಿವಿಧ ಇಲಾಖೆ ಅಧಿಕಾರಿಗಳು, ಅಭಿಯಂತರರು ಡಿಸಿ ಜತೆಗೆ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಕಳೆದ ಹಲವು ದಶಕಗಳಿಂದ ಹೋರಾಟ ನಡೆಸಿದರೂ ಬಗೆಹರಿಯಲಾಗದ ನೂರಾರು ಜಟಿಲ ಸಮಸ್ಯೆಗಳ ಜತೆಗೆ ಬೇಸರದ ಬದುಕು ಸವೆಸುತ್ತಿರುವ ನಾಲವಾರ ಹೋಬಳಿ ವಲಯದ ಕೊಂಚೂರು, ಬಳವಡಗಿ, ಹಳಕರ್ಟಿ, ಕಡಬೂರ, ಚಾಮನೂರ ಸೇರಿದಂತೆ ಇತರ ಗ್ರಾಮಗಳ ರೈತರು, ಜಿಲ್ಲಾಧಿಕಾರಿಗಳ ಕೊಂಚೂರು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಾದರೂ ನಮ್ಮ
ಜೀವನ ಸಂಗಾತಿ ಸಂಕಷ್ಟಗಳಿಗೆ ಪರಿಹಾರ ಸಿಗಬಹುದಾ? ಎಂದು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ : ಪಾತಕಿ ದಾವೂದ್ ನಿಂದ ಹೊಸ ಟೀಮ್ ರಚನೆ; ಭಾರತದ ರಾಜಕಾರಣಿಗಳು, ಉದ್ಯಮಿಗಳೇ ಟಾರ್ಗೆಟ್: NIA

ಕೊಂಚೂರಿನ ಸಹೋದರ ಗ್ರಾಮ ಬಳವಡಗಿಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಹಳ್ಳ ಉಕ್ಕೇರಿ ಭೀಕರ ಜಲ ಪ್ರವಾಹ ಉಂಟಾಗುತ್ತಿದೆ. ಗ್ರಾಮದ ಸುತ್ತ ಜಲ ದಿಗ್ಬಂಧನ ಏರ್ಪಟ್ಟು, ಊರು ಅಕ್ಷರಶಃ ನಡುಗಡ್ಡೆಯಂತೆ ಗೋಚರಿಸುತ್ತದೆ. ವಾಡಿ-ಕೊಂಚೂರು ಸೇತುವೆ ಮುಳುಗಿ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಗ್ರಾಮದ ಶೇ.70 ರಷ್ಟು ಜನರು ಮನೆಯ ಮಾಳಿಗೆಯಲ್ಲಿ ರಕ್ಷಣೆ ಪಡೆಯುತ್ತಾರೆ. ಮನೆಯ ದವಸಧಾನ್ಯಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತವೆ. ಮೋಡಗಳು ಗುಡುಗಿದರೆ ಸಾಕು ಬಳವಡಗಿ ಗ್ರಾಮಸ್ಥರು ಬೆಚ್ಚಿಬೀಳುತ್ತಾರೆ. ರಾತ್ರಿಯಲ್ಲ ಜಾಗರಣೆ
ಮಾಡುತ್ತಾರೆ. ಅಕ್ರಮವಾಗಿ ಒತ್ತೂವರಿಗೆ ಸಿಲುಕಿರುವ ಹಳ್ಳ ಜಲಯಪ್ರಣಯ ಸೃಷ್ಟಿಸುತ್ತಿದೆ. ಜಿಲ್ಲಾಧಿ ಕಾರಿಗಳು ಈ ಗಂಭೀರ ಸಮಸ್ಯೆಗೆ ಏನು ಪರಿಹಾರ ಸೂಚಿಸುತ್ತಾರೆ ಎಂಬ ಕುತೂಹಲ ಕೆರಳಿಸಿದೆ. ಹಳಕರ್ಟಿ ಗ್ರಾಮದ ಶೇ.100ರಷ್ಟು ರೈತರ ಜಮೀನುಗಳ ಪಹಣಿ ದೋಷ, ಡಬಲ್‌ ಪಹಣಿ, ಆಕಾರಬಂದ್‌ ದೋಷದಿಂದ ಕೂಡಿದ್ದು, ರೈತರು ಕಳೆದ 50 ವರ್ಷಗಳಿಂದ ಈ ಜಟಿಲವಾದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಪಹಣಿ ದೋಷಗಳಿಂದ ನಮಗೆ ಮುಕ್ತಿ ಕೊಡಿ. ಜಮೀನು ಖರೀದಿ, ಮಾರಾಟ ಸಾಧ್ಯವಾಗದೇ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲಾಗದೇ ತೊಂದರೆ ಅನುಭವಿಸುತ್ತಿದ್ದೇವೆ ಎಂದು ರೈತರು ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿದರೂ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಗ್ರಾಮಸ್ಥರ ಶತಮಾನದ ಗೋಳಿಗೆ ಪರಿಹಾರ ಒದಗಿಸುವುದೇ ಕಾಯ್ದು ನೋಡಬೇಕು.

Advertisement

ಭೀಮಾನದಿ ದಂಡೆಯ ಚಾಮನೂರು, ಕಡಬೂರ ಗ್ರಾಮಸ್ಥರ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಕೊಂಚೂರು-ವಾಡಿ ಹದಗೆಟ್ಟ ರಸ್ತೆ, ಕೊಂಚೂರಿನಲ್ಲಿ ನೇತಾಡುತ್ತಿರುವ ಅಪಾಯಕಾರಿ ವಿದ್ಯುತ್‌ ತಂತಿಗಳ ಸಮಸ್ಯೆ, ಹಳ್ಳ ಹಿಡಿದ ಸಿಂಗಾಪುರ ಶೌಚಾಲಯಗಳ ಯೋಜನೆ, ಬಸ್‌ ಸೌಲಭ್ಯವನ್ನೇ ಕಾಣದ ಗ್ರಾಮಗಳ ಸಾರಿಗೆ ಸಮಸ್ಯೆ, ಸರ್ಕಾರಿ ಶಾಲೆಗಳ ಶಿಥಿಲ ಕಟ್ಟಡಗಳು, ಸ್ಥಗಿತವಾದ ವೃದ್ಧರ-ವಿಧವೆಯರ ಪಿಂಚಣಿ, ಹೀಗೆ ಹಲವು ಸಮಸ್ಯೆಗಳು ಈ ಭಾಗದ ಗ್ರಾಮೀಣ ಜನರನ್ನು ಕಾಡುತ್ತಿವೆ.

– ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next