Advertisement

ಭೀಕರ ಬರದಲ್ಲೂ ಕೈಹಿಡಿದ ಡಿಬಿಒಟಿ

04:06 PM May 17, 2019 | Suhan S |

ಗದಗ: ಜಿಲ್ಲೆಯು ಕಳೆದ ಐದಾರು ವರ್ಷಗಳಿಂದ ನಿರಂತರ ಬರಗಾಲಕ್ಕೆ ತುತ್ತಾಗುತ್ತಿದೆ. ಆದರೆ, ಈ ಬಾರಿ ಜಿಲ್ಲೆಯಲ್ಲಿ ಡಿಬಿಒಟಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದಿಂದ ಅಷ್ಟಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೊರದಿರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ಮುಂಗಾರು ಹಿಂಗಾರಿನಲ್ಲಿ ಮಳೆ ಕೊರತೆಯಿಂದಾಗಿ ಜಿಲ್ಲೆಯ ಐದೂ ತಾಲೂಕುಗಳನ್ನು (ಎರಡು ಹೊಸ ತಾಲೂಕುಗಳು ಸೇರಿ) ರಾಜ್ಯ ಸರಕಾರ ಬರ ಪೀಡಿತ ಪ್ರದೇಶ ಎಂದು ಘೋಷಿಸಿದೆ. ಆದರೆ, ಜಿಲ್ಲೆಯಲ್ಲಿ ರಾಜ್ಯ ಸರಕಾರ, ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ 1040 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಿರುವ ಡಿಬಿಒಟಿ ಕುಡಿಯುವ ನೀರಿನ ಯೋಜನೆ ಗ್ರಾಮೀಣ ಜನರ ಕೈ ಹಿಡಿದಿವೆ.

ಜಿಲ್ಲೆಯಲ್ಲಿ ಒಟ್ಟು 342 ಜನ ವಸತಿ ಪ್ರದೇಶಗಳಿಗೆ ನದಿ ನೀರು ಪೂರೈಸುವ ಯೋಜನೆ ಇದಾಗಿದೆ. ಮಲಪ್ರಭಾ ನದಿಯಿಂದ ಪ್ಯಾಕೇಜ್‌-1ರ ಮೂಲಕ ನರಗುಂದ ಮತ್ತು ರೋಣ ತಾಲೂಕು ಹಾಗೂ ಪ್ಯಾಕೇಜ್‌-2 ಅಡಿ ಮುಂಡರಗಿ, ಗದಗ ಹಾಗೂ ಶಿರಹಟ್ಟಿ ತಾಲೂಕಿನ ಹಳ್ಳಿಗಳಿಗೆ ನದಿ ನೀರು ಪೂರೈಸಲಾಗುತ್ತಿದೆ.ಎರಡೂ ಪ್ಯಾಕೇಜ್‌ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ ಅಲ್ಪಸ್ವಲ್ಪ ಕಾಮಗಾರಿ ಬಾಕಿ ಇದ್ದರೂ ಪ್ರಾಯೋಗಿಕವಾಗಿ ನೀರು ಪೂರೈಕೆಯಾಗುತ್ತಿದೆ. ಇನ್ನುಳಿದಂತೆ ಎಲ್ಲ ಹಳ್ಳಿಗಳಿಗೆ ಗರಿಷ್ಠ ವಾರಕ್ಕೊಮ್ಮೆ ನದಿ ನೀರು ಸರಬರಾಜು ಮಾಡಲಾಗುತ್ತಿದೆ. ಗದಗ ನಗರದಲ್ಲಿ 24×7 ಕುಡಿಯುವ ನೀರಿನ ಯೋಜನೆಯಿದ್ದರೂ ನಾಲ್ಕೈದು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ಕೆಲ ಹಳ್ಳಿಗಳ ಕುಡಿಯುವ ನೀರಿನ ಕೆರೆಗಳಿಗೆ ಕಾಲುವೆ ಮೂಲಕ ನದಿ ನೀರು ತುಂಬಿಸಲಾಗಿದೆ. ಜಿಲ್ಲೆಯ ವಿವಿಧೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿದ್ದರ ಹೊರತಾಗಿಯೂ ಇದರಿಂದ ಹಲವೆಡೆ ಜನರಿಗೆ ಅನುಕೂಲವಾಗಿದೆ. ಹೀಗಾಗಿ ಹಿಂದಿನ ಬರಗಾಲದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ. ಈ ಹಿಂದಿನ ವರ್ಷಗಳಲ್ಲಿ ಜಿಲ್ಲೆಯ ಲಕ್ಕಲಕಟ್ಟಿ, ಹಿರೇವಡ್ಡಟ್ಟಿ ಸೇರಿದಂತೆ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ಆದ್ಯತೆ ಮೇರೆಗೆ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ಗ್ರಾಪಂ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಸಂಪರ್ಕ ಕಲ್ಪಿಸಿದ್ದರಿಂದ ಅಲ್ಲೂ ನೀರಿನ ಸಮಸ್ಯೆ ನಿವಾರಿಸಲಾಗಿದೆ ಎನ್ನಲಾಗಿದೆ.

ಪಟ್ಟಣಗಳಲ್ಲಿ ನೀರಿನ ಬವಣೆ: ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ಗಜೇಂದ್ರಗಡ, ರೋಣ ಮತ್ತು ನರೇಗಲ್ಲ ಪಟ್ಟಣಗಳಲ್ಲಿ ನೀರಿನ ಸಮಸ್ಯೆ ತುಸು ಹೆಚ್ಚಿತ್ತು. ಆದರೆ, ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಪಟ್ಟಣ ಪ್ರದೇಶಗಳ ನೀರಿನ ಸಮಸ್ಯೆಯತ್ತ ಗಮನ ಹರಿಸಿರುವ ಜಿಲ್ಲಾಡಳಿತ, ಗಜೇಂದ್ರಗಡದಲ್ಲಿ 8, ರೋಣದಲ್ಲಿ 6 ಹಾಗೂ ನರೇಗಲ್ಲ ಪಟ್ಟಣದಲ್ಲಿ ನಾಲ್ಕು ಕೊಳವೆ ಬಾವಿಗಳನ್ನು ಖಾಸಗಿಯವರಿಂದ ಬಾಡಿಗೆ ಪಡೆದು ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ತುಂಗಭದ್ರಾ ನದಿ ಹಮ್ಮಿಗಿ ಬ್ಯಾರೇಜ್‌ ನಲ್ಲಿ ಸುಮಾರು ಒಂದು ಟಿಎಂಸಿ ಅಡಿಗಿಂತ ಹೆಚ್ಚು ನೀರಿನ ಸಂಗ್ರಹವಿದ್ದು, ಈ ಬಾರಿ ಬೇಸಿಗೆ ಮುಗಿಯುವವರೆಗೆ ನೀರಿನ ಸಮಸ್ಯೆ ತಲೆ ದೋರದು. ಆದರೆ, ಮೇ ತಿಂಗಳ ಕೊನೆಯಲ್ಲಿ ಮಳೆ ಬಾರದಿದ್ದರೆ ಜೀವಜಲಕ್ಕೆ ಪರದಾಟ ತಪ್ಪಿದ್ದಲ್ಲ ಎಂಬ ಆತಂಕವೂ ವ್ಯಕ್ತವಾಗಿದೆ.

ಜಾನುವಾರುಗಳ ಆಹಾರಕ್ಕೂ ತತ್ವಾರ:

Advertisement

ಕಳೆದ ಐದು ವರ್ಷಗಳಿಂದ ಮಳೆ ಅಭಾವದಿಂದ ಜಿಲ್ಲೆಯಲ್ಲಿ ಬೀಕರ ಬರ ಮುಂದುವರಿದಿದೆ. ವಿವಿಧ ಕುಡಿಯುವ ನೀರಿನ ಯೋಜನೆಗಳಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದರೂ ಜಾನುವಾರುಗಳ ಮೇವಿಗೂ ಬರದ ಬಿಸಿ ತಟ್ಟಿದೆ.

ಜಿಲ್ಲಾ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆ ಪ್ರಕಾರ ದನ ಮತ್ತು ಎಮ್ಮೆ ಸೇರಿ 2,03,644 ದನಕರುಗಳು, ಮೇಕೆ 1,06,353, ಕುರಿ 2,59,047 ಹಾಗೂ 23,943 ಇತರೆ ಸೇರಿದಂತೆ ಒಟ್ಟು 5,92,987 ಜಾನುವಾರುಗಳಿವೆ. 2018ರ ಹಿಂಗಾರಿನಲ್ಲಿ ಮಳೆ ಕೈಕೊಟ್ಟಿದ್ದು, ಶೇ.84.70ರಷ್ಟು ಬೆಳೆ ಹಾನಿಯಾಗಿದೆ. ಜಿಲ್ಲೆಯ ಹಿಂಗಾರಿನ ಪ್ರಮುಖದ ಬೆಳೆಗಳಾದ ಜೋಳ, ಶೇಂಗಾ ಹಾಗೂ ಕಡಲೆ ಬೆಳೆಗಳು ಬಹುತೇಕ ಹಾನಿಯಾಗಿದ್ದರಿಂದ ಮೇವಿನ ಸಮಸ್ಯೆ ಉಲ್ಬಣಿಸಿದೆ. ಕಳೆದ ಶನಿವಾರ ನಡೆದ ನಡೆದ ವಾರದ ಸಂತೆಯಲ್ಲಿ ಒಣ ಮೇವು ಟ್ರ್ಯಾಕ್ಟರ್‌ವೊಂದಕ್ಕೆ 4,500ರಿಂದ 7,000 ರೂ. ಬೆಲೆಯಲ್ಲಿ ಮಾರಾಟವಾಗಿದೆ. ಕಡಲೆ ಹೊಟ್ಟು ಟ್ರ್ಯಾಕ್ಟರ್‌ವೊಂದಕ್ಕೆ 4,000 ಸಾವಿರ ರೂ., ಶೇಂಗಾ ಹೊಟ್ಟು 6,000 ರೂ. ಬೆಲೆಯಲ್ಲಿ ರೈತರು ಖರೀದಿದ್ದಾರೆ. ಇನ್ನು, ಮೇವು ಖರೀದಿಸಲಾಗದ ರೈತರು ಅನಿವಾರ್ಯವಾಗಿ ತಮ್ಮ ಎತ್ತು, ಎಮ್ಮೆ ಹಾಗೂ ಜಾನುವಾರುಗಳನ್ನು ಮತ್ತೂಬ್ಬರ ಕೈಗಿಡುವಂತಾಗಿದೆ.

ಮನೆ ಮಗನಂತೆ ಪ್ರೀತಿ, ಅಕ್ಕರೆಯಿಂದ ಬೆಳೆಸಿದ ಎತ್ತುಗಳನ್ನು ರೈತರು ಒಲ್ಲದ ಮನಸ್ಸಿನಿಂದಲೇ ಸಂತೆಗಳಿಗೆ ಎಳೆದು ತರುತ್ತಿದ್ದಾರೆ. ಮಳೆ ಅಭಾವದ ಹಿನ್ನೆಲೆಯಲ್ಲಿ ದನಕರುಗಳನ್ನು ಖರೀದಿಸುವವರಿಲ್ಲ. ಕೇಳಿದವರೂ ಜೋಡಿ ಎತ್ತುಗಳಿಗೆ 25,000ರಿಂದ 60,000 ರೂ. ಬೆಲೆ ಕಟ್ಟುತ್ತಾರೆ. ಆದರೆ, ತಾವು ಜೋಡಿ ಎತ್ತುಗಳನ್ನು 90,000 ರೂ. ಬೆಲೆಯಲ್ಲಿ ಖರೀದಿಸಿದ್ದರೂ ಕೇಳಿದ ಧಾರಣೆಗೆ ನೀಡುವಂತಾಗಿದೆ ಎಂಬುದು ರೈತರ ಮಾತು.

ಗೋಶಾಲೆಗೆ ಮಿಶ್ರ ಪ್ರತಿಕ್ರಿಯೆ: ಬರಗಾಲ ಹಾಗೂ ರೈತರ ಬೇಡಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪಶು ಸಂಗೋಪನಾ ಇಲಾಖೆಗಳ ಸಹಯೋಗದಲ್ಲಿ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಗೋಶಾಲೆ ಪ್ರಾರಂಭಿಸಿದೆ. ಬಿಸಿಲು, ಮಳೆ, ಗಾಳಿಯಿಂದ ರಕ್ಷಣೆಗಾಗಿ ಸುಸಜ್ಜಿತವಾದ ಬೃಹತ್‌ ಪ್ರಮಾಣದ ನಾಲ್ಕು ತಗಡಿನ ಶೆಡ್‌, ನಾಲ್ಕಾರು ನೀರಿನ ತೊಟ್ಟಿ ನಿರ್ಮಿಸಿದೆ. ಒಣ ಮೇವು ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರೂ ರೈತರಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಡಂಬಳ ಸುತ್ತಲಿನ ಹಳ್ಳಿಗಳಲ್ಲಿ ಸುಮಾರು 2,500 ಜಾನುವಾರುಗಳಿವೆ. ಹೀಗಾಗಿ ಕನಿಷ್ಠ ಎಂದರೂ 400 ಜಾನುವಾರುಗಳಿಗೆ ಬರುವ ನಿರೀಕ್ಷೆಯಿತ್ತು. ಆದರೆ, ಗೋಶಾಲೆಗೆ ಬಂದಿರೋದು ಕೇವಲ 41. ಅವುಗಳಲ್ಲಿ 2 ಎತ್ತು, 3 ಎಮ್ಮೆ, 2 ಎಮ್ಮೆ ಕರ ಹಾಗೂ ಇನ್ನುಳಿದಿದ್ದು ಆಕಳ ಮತ್ತು ಆಕಳ ಕರಗಳು ಎನ್ನುತ್ತಾರೆ ಗೋಶಾಲೆ ಸಿಬ್ಬಂದಿ. ಸದ್ಯ ರೈತರ ಬಳಿ ಸುಮಾರು 60,542 ಟನ್‌ ಮೇವು ದಾಸ್ತಾನಿದೆ. ಅಲ್ಲದೇ, ಎರಡು ವರ್ಷಗಳಿಂದೆ ಇದೇ ಗ್ರಾಮದಲ್ಲಿ ಆರಂಭಿಸಿದ್ದ ಗೋಶಾಲೆಯಲ್ಲಿ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು, ನೀರು ಸಿಗದೇ, ಸೊರಗಿರುದ್ದವು. ಹೀಗಾಗಿ ರೈತರು ಗೋಶಾಲೆಯಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗಿದೆ.

24 ಹಳ್ಳಿಗಳಲ್ಲಿ ಮೇವು ಬ್ಯಾಂಕ್‌: ಜಿಲ್ಲೆಯಲ್ಲಿ ಬರಗಾಲದ ಹಿನ್ನೆಲೆಯಲ್ಲಿ ನರಗುಂದ ಹೊರತಾಗಿ ಇನ್ನುಳಿದ ನಾಲ್ಕು ತಾಲೂಕಿನ ಒಟ್ಟು 24 ಗ್ರಾಮಗಳಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಲಾಗಿದೆ. 193 ಟನ್‌ ಮೇವು ದಾಸ್ತಾನು ಮಾಡಿದೆ. ಪ್ರತಿ ಕೆಜಿ 2 ರೂ. ದರದಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಮಾರ್ಕಂಡೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next