Advertisement

ಅಂಬಿಗೆ ದಾವಣಗೆರೆ ಎಂದ್ರೆ ಅಚ್ಚುಮೆಚ್ಚು

02:59 PM Nov 26, 2018 | |

ದಾವಣಗೆರೆ: ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ, ಮಾಜಿ ಸಚಿವ ಅಂಬರೀಷ್‌ಗೆ ದಾವಣಗೆರೆ ಎಂದರೆ ಭಾರೀ ಅಚ್ಚುಮೆಚ್ಚು. ಸಕ್ಕರೆ ನಾಡು ಮಂಡ್ಯದ ಗಂಡು ಅಂಬರೀಷ್‌ ದಾವಣಗೆರೆಯಲ್ಲಿ ಅಪಾರ ಸ್ನೇಹಿತರ ಬಳಗ ಹೊಂದಿದ್ದರು. ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕುಟುಂಬದೊಂದಿಗೆ ಅ ವಿನಾಭಾವ ಸಂಬಂಧ ಹೊಂದಿದ್ದ ಅಂಬರೀಷ್‌ ಶಾಸಕ ಶಾಮನೂರು ಶಿವಶಂಕರಪ್ಪನರವ ಜನ್ಮ ದಿನ(ಜೂ.16) ಸಮಾರಂಭಕ್ಕೆ ತಪ್ಪದೇ ಹಾಜರಾಗುತ್ತಿದ್ದರು. ಸಮಾರಂಭದ ದಿನ ಬರಲಿಕ್ಕೆ ಆಗದೇ ಇದ್ದರೂ ಬೇರೆ ದಿನಗಳಲ್ಲಿ ಬಂದು ಶಾಮನೂರು ಶಿವಶಂಕರಪ್ಪ ಅವರಿಗೆ ಶುಭ ಕೋರುವುದನ್ನು ತಪ್ಪಿಸುತ್ತಿರಲಿಲ್ಲ. 

Advertisement

ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರೊಂದಿಗೆ ಅತ್ಯಂತ ಆತ್ಮೀಯ ಗೆಳೆತನ ಹೊಂದಿದ್ದ ಅವರು ಮಲ್ಲಿಕಾರ್ಜುನ್‌ಗೆ ಪಕ್ಕಾ ಮಂಡ್ಯ ಶೈಲಿಯಲ್ಲಿ… ಮಲ್ಲಿಕಾರ್ಜುನ… ಎಂದೇ ಅಪ್ಯಾಯತೆ ಯಿಂದ ಕರೆಯುತ್ತಿದ್ದರು. ತೀರಾ ಒತ್ತಡ, ಬೇಸರವಾದಾಗಲೆಲ್ಲ ದಾವಣಗೆರೆಗೆ ದೌಡಾಯಿಸಿ ಬರುತ್ತಿದ್ದರು.

ಅಂಬರೀಷ್‌ರವರ 49ನೇ ಜನ್ಮದಿನ ಕಾರ್ಯಕ್ರಮ 2001ರಲ್ಲಿ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿತ್ತು. ಅಂದಿನ ಕಾರ್ಯಕ್ರಮದಲ್ಲಿ ಅಂಬರೀಷ್‌ಗೆ ನಾಗರಿಕ ಸನ್ಮಾನದ ಜೊತೆಗೆ ವಜ್ರದ ಕಿರೀಟ ನೀಡಲಾಗಿತ್ತು. ಅಂಬರೀಷ್‌ರವರ ಕುಚುಕು ಗೆಳೆಯ ಡಾ| ವಿಷ್ಣುವರ್ಧನ್‌ ಸಹ ಆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇಬ್ಬರು ಗೆಳೆಯರು ಕೆಲವಾರು ಹಾಡುಗಳಿಗೆ ಸಖತ್‌ ಸ್ಟೆಪ್‌ ಹಾಕಿದ್ದರು. ಆ ಕಾರ್ಯಕ್ರಮದ ಮಧ್ಯದಲ್ಲಿ ಕೊಂಚ ಗದ್ದಲದ ವಾತಾವರಣ ನಿರ್ಮಾಣವಾಗಿದ್ದಾಗ ಅಂಬರೀಶ್‌ ತಮ್ಮ ಎಂದಿನ ಶೈಲಿಯಲ್ಲಿ ಗದರಿಸುವ ಮೂಲಕ ಗದ್ದಲವನ್ನು ನಿಯಂತ್ರಿಸಿದ್ದರು.

ಶಾಸಕ ಶಾಮನೂರು ಶಿವಶಂಕರಪ್ಪರವರ 75ನೇ ಜನ್ಮದಿನದ ಅಂಗವಾಗಿ 2005ರ ಜೂ. 15 ರಂದು ನಗರಸಭೆಯಿಂದ ಹಮ್ಮಿಕೊಂಡಿದ್ದ ಅಮೂಲ್ಯರತ್ನಗಳು… ಕಾರ್ಯಕ್ರಮದಲ್ಲಿ ಅಂಬರೀಷ್‌ಗೆ ಅಮೂಲ್ಯ ರತ್ನ ಪ್ರಶಸ್ತಿ ಜೊತೆಗೆ ನಾಗರಿಕ ಸನ್ಮಾನ ನೀಡಲಾಗಿತ್ತು ಎಂದು ನಗರಸಭೆ ಮಾಜಿ ಅಧ್ಯಕ್ಷ ಡಿ. ಬಸವರಾಜ್‌ ಸ್ಮರಿಸುತ್ತಾರೆ.
 
ಅಂಬರೀಷ್‌ ದಾವಣಗೆರೆಯಲ್ಲಿ ಅತೀ ಹೆಚ್ಚಿನ ಒಡನಾಟ ಹೊಂದಿದ್ದು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕುಟುಂಬದೊಡನೆ. ಹಾಗಾಗಿ ಅನೇಕ ಸಭೆ, ಸಮಾರಂಭಗಳಲ್ಲಿ ಕುಟುಂಬ ಸದಸ್ಯರಂತೆ ಖಾಯಂ ಆಗಿ ಬರುತ್ತಿದ್ದರು.

ಮಲ್ಲಿಕಾರ್ಜುನ್‌ ಮತ್ತು ಶಾಮನೂರು ಶಿವಶಂಕರಪ್ಪ ಅವರ ಪರ ಚುನಾವಣಾ ಪ್ರಚಾರಕ್ಕೂ ಅಂಬರೀಷ್‌ ಬಂದಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ವಸತಿ ಖಾತೆ ಸಚಿವರಾಗಿದ್ದ ಅಂಬರೀಷ್‌ 2013ರ ಅ. 24 ರಂದು ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. 

Advertisement

ಮಳೆಯಿಂದ ಮನೆ ಕಳೆದುಕೊಂಡಿದ್ದ ಬೆಂಕಿ ನಗರದ ಜನರನ್ನು ಕರೆಸಿ, ಚರ್ಚಿಸಿದ್ದರು. ಇಲಾಖೆಯಿಂದ ಶಾಶ್ವತ ಸೂರು… ಒದಗಿಸುವ ಭರವಸೆ ನೀಡಿದ್ದರು. ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮನೆಗೆ ಬಂದಿದ್ದು ಅಂಬರೀಷ್‌ರವರ ದಾವಣಗೆರೆ ಕೊನೆಯ ಭೇಟಿ. ಅನಾರೋಗ್ಯದ ಹಿನ್ನೆಲೆಯಲ್ಲಿ ಅಂಬರೀಶ್‌ ಸಿಂಗಾಪುರದ ಎಲಿಜಬೆತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ ನೆಚ್ಚಿನ ಗೆಳೆಯನ ನೋಡಲು ಹೋಗಿದ್ದರು. ಅವರಿಬ್ಬರ ನಡುವೆ ಅಷ್ಟೊಂದು ಆತ್ಮೀಯತೆ, ಗೆಳೆತನ ಇತ್ತು. ಅಂತಹ ಅಂಬರೀಷ್‌ ಈಗ ನೆನಪು ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next