Advertisement

ಮೌಲ್ಯಗಳ ಪುನರುತ್ಥಾನದಿಂದ ಶ್ರೇಯಸ್ಸು

11:39 AM Sep 30, 2019 | Naveen |

ಮಾನವ ಧರ್ಮ ಮಂಟಪ (ದಾವಣಗೆರೆ) : ಮೂಲ ನಂಬಿಕೆಗಳನ್ನು ಜಾಗೃತಗೊಳಿಸಿ ಧರ್ಮ ಸಂಸ್ಕೃತಿ ಮತ್ತು ಆದರ್ಶ ಪರಂಪರೆ ಬೆಳೆಸುವುದೇ ದಸರಾ ಮಹೋತ್ಸವದ ಮೂಲ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.

Advertisement

ಭಾನುವಾರ, ನಗರದ ಸರ್ಕಾರಿ ಹೈಸ್ಕೂಲ್‌ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಶರನ್ನವರಾತ್ರಿ ದಸರಾ ನಾಡಹಬ್ಬಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿಯು ಶಕ್ತಿಯನ್ನು ಆರಾಧಿ ಸುವ ಬಹು ದೊಡ್ಡ ಹಬ್ಬ. ಜೀವನ ಮೌಲ್ಯಗಳ ಪುನರುತ್ಥಾನದಿಂದ ಶ್ರೇಯಸ್ಸು ಕಾಣಲು ಸಾಧ್ಯ ಎಂದು ಪ್ರತಿಪಾದಿಸಿದರು.

ಮನಸ್ಸು, ಬುದ್ಧಿ ಮತ್ತು ಸದ್ವಿಚಾರಗಳು ಹುಲುಸಾಗಿ ಬೆಳೆದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಸಮಾಜದಲ್ಲಿ ಸಾತ್ವಿಕ ಶಕ್ತಿಗಳು ಬೆಳೆಯಬೇಕೆಂಬುದು ನವರಾತ್ರಿಯ ಮೂಲ ಉದ್ದೇಶ. ಮನುಷ್ಯನಲ್ಲಿರುವ ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರ ಎಂಬ ದುರ್ಗುಣಗಳನ್ನು ನಿವಾರಿಸಿ ಸಾತ್ವಿಕ ಸತ್ವ, ಶುದ್ಧ ಗುಣಗಳನ್ನು ಬೆಳೆಸಬೇಕಾಗಿದೆ. ವೀರಶೈವ ಧರ್ಮದಲ್ಲಿ ಶಕ್ತಿಯುಕ್ತನಾದ ಪರಮಾತ್ಮನನ್ನು ಪೂಜಿಸುತ್ತೇವೆ. ಶಿವ ಬಿಟ್ಟು ಶಕ್ತಿ, ಶಕ್ತಿ ಬಿಟ್ಟು ಶಿವನಿಲ್ಲ. ಇವರೀರ್ವರ ಸಾಮರಸ್ಯವೇ ವೀರಶೈವ ಧರ್ಮ ಸಿದ್ಧಾಂತವಾಗಿದೆ. ಶಕ್ತಿ ವಿಶಿಷ್ಟ ಜೀವಾತ್ಮನಿಗೂ ಶಕ್ತಿ ವಿಶಿಷ್ಟ ಶಿವನಿಗೂ ಇರುವ ಸಾಮರಸ್ಯವೇ ಈ ಧರ್ಮದ ತಿರುಳು ಎಂದು ಶ್ರೀಗಳು ಹೇಳಿದರು.

ರಂಭಾಪುರಿ ಜಗದ್ಗುರು ಪೀಠದ ಪೂರ್ವದ ಮಹಾಚಾರ್ಯರು ಭಕ್ತ ಸಂಕುಲದ ಕಲ್ಯಾಣಕ್ಕಾಗಿ ಮೂಲಪೀಠದಲ್ಲಿ ಹಬ್ಬ ಆಚರಿಸಿಕೊಂಡು ಬಂದಿದ್ದಾರೆ. ನವರಾತ್ರಿ ದಸರಾ ಹಬ್ಬವನ್ನು ನಾಡಿನಾದ್ಯಂತ ಆಚರಿಸಿ ಇದರ ಮಹತ್ವ ಸಾರಿದ ಶ್ರೇಯಸ್ಸು ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳಿಗೆ ಸಲ್ಲುತ್ತದೆ. ಪೂರ್ವದ ಆದರ್ಶಗಳನ್ನು ಪರಿಪಾಲಿಸಿಕೊಂಡು ಬಂದ ಶ್ರೀ ಜಗದ್ಗುರು ವೀರರುದ್ರಮುನಿ ಶಿವಾಚಾರ್ಯರು ನವರಾತ್ರಿ ನಾಡಹಬ್ಬಕ್ಕೆ ಬೋಧಾತ್ಮಕ ಶಕ್ತಿ ತುಂಬಿದರು. ಪ್ರಸ್ತುತ ನಾವು ಸಹ ಧರ್ಮ-ಸಂಸ್ಕೃತಿ ಪರಂಪರೆ ಮತ್ತು ಆದರ್ಶ ಮೌಲ್ಯಗಳನ್ನು ಬೆಳೆಸುತ್ತಾ ಬಂದಿದ್ದು, ಈ ಹಿಂದಿನ 27 ವರುಷಗಳ ದಸರಾ ಮಹೋತ್ಸವದ ದಾಖಲೆಗಳನ್ನು ಮೀರಿ ದಾವಣಗೆರೆ ದಸರಾ ಮಹೋತ್ಸವ ಒಂದು ವಿಶಿಷ್ಟ ದಾಖಲೆ ನಿರ್ಮಿಸಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 2019ನೇ ವರುಷದ ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಉದ್ಘಾಟಿಸಿ, ಮಾತನಾಡಿದರು. ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಕೊಲ್ಲಿಪಾಕಿ ಕ್ಷೇತ್ರ ದರ್ಶನ ಕೃತಿ ಬಿಡುಗಡೆ ಮಾಡಿ, ಮಾತನಾಡಿದರು.

Advertisement

ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಸಂಸದ ಜಿ.ಎಂ.ಸಿದ್ಧೇಶ್ವರ್‌, ಶಾಸಕರಾದ ಎಸ್‌.ಎ.ರವೀಂದ್ರನಾಥ್‌, ಪ್ರೊ.ಎನ್‌.ಲಿಂಗಣ್ಣ, ಎಸ್‌.ವಿ.ರಾಮಚಂದ್ರ, ಮಾಡಾಳ್‌ ವಿರೂಪಾಕ್ಷಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್‌, ಮಾಜಿ ಶಾಸಕರಾದ ಎಂ.ಬಸವರಾಜ ನಾಯ್ಕ,ಬಿ.ಪಿಹರೀಶ್‌, ಅ.ಭಾ.ವೀ.ಮ.ಸಭಾ ಉಪಾಧ್ಯಕ್ಷ ಅಥಣಿ ವೀರಣ್ಣ ಇತರರು ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ವಿ.ಆರ್‌.ಎಲ್‌. ಛೇರ್ಮನ್‌ ಡಾ| ವಿಜಯ ಸಂಕೇಶ್ವರಗೆ ಕಾಯಕ ಕಲಾ ಚೈತನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ ಗೌರವ ಶ್ರೀ ರಕ್ಷೆ ಹಾಗೂ ಡಾ| ಎನ್‌.ಎ. ಚರಂತಿಮಠ, ಕೆ.ಎಂ. ಇಮಾಂ, ರಾಜನಹಳ್ಳಿ ರಮೇಶ್‌ಬಾಬು, ದಿನೇಶ್‌ ಕೆ. ಶೆಟಿ,r ಡಾ| ಎಸ್‌.ಆರ್‌.ಹೆಗಡೆ, ರಾಹುಲ್‌ ಸಂಕನೂರು, ಬಿ.ಕೆ. ಸುಭಾಷ್‌ಚಂದ್ರ, ಜಯಪ್ರಕಾಶ್‌ ಅಂಬರಕರ್‌, ವಾಗೀಶ ವಿಶ್ವನಾಥಸ್ವಾಮಿ ಹಿರೇಮಠ, ಡಾ| ಡಿ.ಆರ್‌. ಮಂಜುನಾಥ, ನಂದಾ ಜಗದೀಶ್‌ ಉಪ್ಪಿನ್‌, ಅಂಬಿಕಾದೇವಿ ಬಂಕಾಪುರ ಶಿವಣ್ಣನವರ್‌, ವಾಣಿ ಡಾ| ಸೋಮಶೇಖರ್‌, ಶೈಲಾ ಮಹಾಬಲೇಶ್‌ ಘಟ್ಟದ, ಎಸ್‌.ವಿ.ನಾಗರಾಜಪ್ಪ, ಪಟೇಲ್‌ ಶಿವಕುಮಾರ್‌ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆ ನೀಡಿ ಆಶೀರ್ವದಿಸಿದರು.

ಲಕ್ಷ್ಮೇಶ್ವರದ ಡಾ| ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ನವರಾತ್ರಿಯಲ್ಲಿ ಶಕ್ತಿ ಆರಾಧನೆ ಮಹತ್ವ ಕುರಿತು ಉಪನ್ಯಾಸ ನೀಡಿದರು. ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು.

ಹಾಸನದ ಗಾನವಿ ವೀರಭದ್ರಪ್ಪ ಇವರಿಂದ ಆಕರ್ಷಕ ಭರತ ನಾಟ್ಯ ಜರುಗಿತು. ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದವರಿಂದ ವೇದಘೋಷ ನಡೆಯಿತು. ಅ.ಭಾ. ವೀ.ಮಹಾಸಭಾ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಶಿವಕುಮಾರ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ್‌ ನಿರೂಪಿಸಿದರು. ಗಾನಭೂಷಣ ವೀರೇಶ ಕಿತ್ತೂರ ಸಂಗೀತ ನಡೆಸಿಕೊಟ್ಟರು. ಕೊನೆಯಲ್ಲಿ ನಜರ್‌ ಸಮರ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next