Advertisement

ವ್ಯವಸ್ಥೆ ದೂರುವ ಮುನ್ನ ಕರ್ತವ್ಯ ನಿರ್ವಹಿಸಿ

11:31 AM Jan 26, 2020 | Naveen |

ದಾವಣಗೆರೆ: ಪ್ರಜಾಪ್ರಭುತ್ವದ ಬುನಾದಿಯಾದ ಚುನಾವಣಾ ಪ್ರಕ್ರಿಯೆಯಲ್ಲಿ ನಾವು ಪಾಲ್ಗೊಂಡಾಗ ಮಾತ್ರ ವ್ಯವಸ್ಥೆ ಪ್ರಶ್ನಿಸುವಂತಹ ಹಕ್ಕು ನಮಗೆ ಲಭಿಸುತ್ತದೆ. ಆದ್ದರಿಂದ ವ್ಯವಸ್ಥೆ ದೂರುವ ಮುನ್ನ ನಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

Advertisement

ಶನಿವಾರ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಪಾಲಿಕೆ ಸಭಾಂಗಣದಲ್ಲಿ ಏರ್ಪಡಿಸಿದ್ದ 10ನೇ ರಾಷ್ಟ್ರೀಯ ಮತದಾರರ ದಿನ-2020 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವ್ಯವಸ್ಥೆ ಸರಿ ಇಲ್ಲ. ಸರ್ಕಾರ ಸರಿ ಇಲ್ಲ ಎಂಬುದಾಗಿ ಹಲವರು ದೂರುತ್ತಲೇ ಇರುತ್ತಾರೆ. ಆದರೆ, ನಾವು ಎಷ್ಟರ ಮಟ್ಟಿಗೆ ನಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದೇವೆ?, ಪ್ಲಾಸ್ಟಿಕ್‌ ನಿಷೇಧವಿದ್ದರೂ ನಾವು ಬಳಸುತ್ತಿಲ್ಲವೆ?, ಹಸಿ ಕಸ, ಒಣ ಕಸ ಬೇರ್ಪಡಿಸಿ ನೀಡುತ್ತಿದ್ದೇವಾ? ಸ್ವಚ್ಛತೆ ಕಾಪಾಡುತ್ತಿದ್ದೇವಾ? ಹೀಗೆ ಪ್ರಶ್ನೆ ಮಾಡಿಕೊಂಡು, ಗಾಂಧಿಧೀಜಿ ಹೇಳಿದಂತೆ ಮತ್ತೂಬ್ಬರಲ್ಲಿ ಕಾಣಬಯಸುವ ಬದಲಾವಣೆ ಮೊದಲು ನಮ್ಮಲ್ಲಾಗಬೇಕು ಎಂದರು.

ಸದೃಢ ಪ್ರಜಾಪ್ರಭುತ್ವಕ್ಕಾಗಿ ಮತದಾರರ ಸಾಕ್ಷರತೆ ಎಂಬ ಧ್ಯೇಯ ವಾಕ್ಯದೊಂದಿಗೆ 10ನೇ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದ್ದು, ಇಡೀ ಜಿಲ್ಲೆಯಲ್ಲಿ 1949 ಮತಗಟ್ಟೆಗಳಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಯುವ ಮತದಾರರಿಗೆ ಪಿವಿಸಿ ಎಪಿಕ್‌ ಕಾರ್ಡ್‌ ವಿತರಿಸಲಾಗುತ್ತಿದೆ. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಗ್ರಾಮ, ತಾಲೂಕು, ಜಿಲ್ಲಾಮಟ್ಟದಲ್ಲಿ ಪ್ರಬಂಧ, ನಾಟಕ, ಚಿತ್ರಕಲೆ ಹೀಗೆ ವಿವಿಧ ಸ್ಪರ್ಧೆ ಆಯೋಜಿಸುವ ಮೂಲಕ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

2019ರ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಎಷ್ಟೆಲ್ಲಾ ಸೌಲಭ್ಯ ನೀಡಿದರೂ ಮತದಾನ ಕಡಿಮೆಯಾಗಿದೆ. ನಾಡು ಬದಲಾಗಬೇಕಾದರೆ ನಾನು ಬದಲಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕರ್ತವ್ಯ ಪ್ರಜ್ಞೆ ಮೆರೆಯೋಣ. ಮತದಾರರ ಸಾಕ್ಷರತೆಯನ್ನು ಎಲ್ಲರೂ ಕೂಡಿ ಹೆಚ್ಚಿಸೋಣ. ಚುನಾವಣೆ ಎಂಬುದೊಂದು ವಿಶಿಷ್ಟ ಹಬ್ಬ. ಈ ಹಬ್ಬದಲ್ಲಿ ಪ್ರತಿಯೊಬ್ಬರೂ ಭಾಗಿಯಾಗೋಣ ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅಕ್ರಮ, ಮತ್ತಿತರೆ ದೂರುಗಳನ್ನು ಸಲ್ಲಿಸಲು ಸಿ-ವಿಜಿಲ್‌ ಎಂಬ ಅದ್ಭುತ ಆ್ಯಪ್‌ಅನ್ನು ಸರ್ಕಾರ ಪರಿಚಯಿಸುವ ಮೂಲಕ ನಾಗರಿಕರೂ ಸೇರಿದಂತೆ ಎಲ್ಲರೂ ವ್ಯವಸ್ಥೆ ಮೇಲೆ ಹದ್ದಿನ ಕಣ್ಣಿಡುವಂತೆ ಪ್ರೇರೇಪಿಸಿತ್ತು. ಉತ್ತಮ, ಸಮರ್ಪಕ ಮತದಾರರ ಪಟ್ಟಿ ತಯಾರಿಸಲು ಜಿಲ್ಲಾಡಳಿತ, ತಹಶೀಲ್ದಾರರು, ಬಿಎಲ್‌ಓ ಮತ್ತು ಇತರೆ ಅಧಿಕಾರಿಗಳು ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಸಾಲದು ಜಿಲ್ಲೆಯ ಎಲ್ಲ ನಾಗರಿಕರು ಪಾಲ್ಗೊಳ್ಳಬೇಕು. ಪ್ರೌಢಶಾಲೆ ಮತ್ತು ಕಾಲೇಜು ಮಕ್ಕಳನ್ನು ಗುರಿಯಾಗಿಸಿಕೊಂಡು ಅನೇಕ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಏಕೆಂದರೆ ಅವರಿಗೆ ಅವರ ಕುಟುಂಬ ಮತ್ತು ಸುತ್ತಮುತ್ತಲಿನವರನ್ನು ಬದಲಾಯಿಸುವ ಶಕ್ತಿ ಇದೆ ಎಂದು ತಿಳಿಸಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಬುನಾದಿಯೇ ಉತ್ತಮ ಚುನಾವಣೆ ಪ್ರಕ್ರಿಯೆ. ಪ್ರತಿ ಬಾರಿ ಚುನಾವಣಾ ಪ್ರಕ್ರಿಯೆಯಲ್ಲಿ ಬಹಳಷ್ಟು ಉತ್ತಮ ಸುಧಾರಣೆಗಳು ಆಗುತ್ತಲೇ ಇವೆ. ಒಂದು ದೇಶ ಬಲಿಷ್ಠ ಎನಿಸಿಕೊಳ್ಳಲು ಆ ದೇಶಕ್ಕೆ ಬಲಿಷ್ಠ ಚುನಾಯಿತ ಸರ್ಕಾರ ಇರಬೇಕು. ಈ ನಿಟ್ಟಿನಲ್ಲಿ ಎಲ್ಲ ಪ್ರಜ್ಞಾವಂತ ನಾಗರಿಕರು ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಮಾತನಾಡಿ, ಭಾರತ ಹಲವಾರು ಕ್ಷೇತ್ರಗಳಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದ್ದರೂ ಮತದಾನ ಮಾಡುವಲ್ಲಿ ಹಿಂದಿದೆ. ಪ್ರಜ್ಞಾವಂತ ನಾಗರಿಕರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು ಎಂದರು.

ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿ, ಚುನಾವಣಾ
ಆಯೋಗವು ಮತದಾರರನ್ನು ಓಲೈಸುವ ಕಾರ್ಯದ ಜತೆಗೆ 18 ವರ್ಷ ತುಂಬಿದ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಕಾರ್ಯ ಮಾಡುತ್ತಿದೆ. ಕಾಲೇಜಿನಲ್ಲಿ ಮತದಾನದ ಜಾಗೃತಿ ಮೂಡಿಸಲು ರಾಯಭಾರಿಗಳನ್ನು ನೇಮಿಸಲಾಗಿದೆ. ಪ್ರಾಂಶುಪಾಲರು ಮತ್ತು ಶಿಕ್ಷಕರು ಮತದಾನದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಬೇಕು ಎಂದು ಹೇಳಿದರು.

ಜಿಪಂ ಉಪ ಕಾರ್ಯದರ್ಶಿ ಬಿ.ಆನಂದ್‌ ಮಾತನಾಡಿ, ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುತ್ತಿದೆ. ಶಿಕ್ಷಿತ ವರ್ಗದವರು ಇಂದು ಹೆಚ್ಚಾಗಿ ಮತದಾನ ಮಾಡುತ್ತಿಲ್ಲ. ಇದು ಬದಲಾಗಬೇಕು. ಸಂಘಟನೆಗಳು ಮತದಾನದ ಜಾಗೃತಿ ಕಾರ್ಯದಲ್ಲಿ ಭಾಗವಹಿಸಬೇಕು ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಿರಂಜನ್‌ ಮಾತನಾಡಿ, ಮಕ್ಕಳ ಮೂಲಕ ನಾಗರಿಕರಿಗೆ ಮತದಾನದ ಅರಿವು ಮೂಡಿಸಲಾಗುತ್ತಿದೆ. ವಿದೇಶಗಳಿಂದ ಬಂದು ನೆಲೆಸಿದವರು ತಮ್ಮ ಮತ ಚಲಾಯಿಸುತ್ತಾರೆ. ಆದರೆ, ಸ್ಥಳೀಯ ನಾಗರಿಕರು ಮತದಾನಕ್ಕೆ ನಿರಾಸಕ್ತಿ ತೋರುತ್ತಾರೆ. ಅರ್ಹ ಎಲ್ಲಾ ಮತದಾರರು ತಪ್ಪದೇ ಮತದಾನ ಮಾಡಬೇಕು ಎಂದರು.

10ನೇ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಜಿಲ್ಲಾಧಿಕಾರಿಗಳು ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಶಾಲಾ, ಕಾಲೇಜು ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ, ನಾಟಕ, ರಸಪ್ರಶ್ನೆ ಮತ್ತು ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಚುನಾವಣಾ ಪ್ರಕ್ರಿಯೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಬಿಎಲ್‌ಓ ಗಳಾದ ಸಿದ್ದೇಶ್‌ ಎಂ, ಭಾರತಿ ಪ್ರಸಾದ್‌, ಲೋಹಿತ್‌ ಅವರನ್ನು ಸನ್ಮಾನಿಸಲಾಯಿತು. 1.1.2020ಕ್ಕೆ 18 ವರ್ಷ ತುಂಬಿದ ವಿದ್ಯಾರ್ಥಿಗಳಿಗೆ ಎಪಿಕ್‌ ಕಾರ್ಡ್‌ ವಿತರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಪರಿಷತ್‌ ಸದಸ್ಯ ಜಯಣ್ಣ, ದಾವಣಗೆರೆ ತಹಶೀಲ್ದಾರ್‌ ಸಂತೋಷ್‌ಕುಮಾರ್‌, ಚುನಾವಣಾ ತಹಶೀಲ್ದಾರ್‌ ಪ್ರಸಾದ್‌, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಾನಗರಪಾಲಿಕೆ ಉಪ ಆಯುಕ್ತ ನಾಗರಾಜ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next