Advertisement

ಮನಃಸ್ಥಿತಿ ಬದಲಾದಲ್ಲಿ ಉತ್ತಮ ಜೀವನ

11:31 AM Nov 22, 2019 | Naveen |

ದಾವಣಗೆರೆ: ಲೈಂಗಿಕ ಕಾರ್ಯಕರ್ತೆಯರು ತಮ್ಮ ಜೀವನವಿಷ್ಟೇ ಎಂಬ ನಿರಾಶಾಭಾವ ತೊರೆದು, ಮುಂದಿನ ದಿನಗಳಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುವ ಬಗ್ಗೆ ಆಲೋಚಿಸಿದಾಗ ಮಾತ್ರ ಬದುಕಿನ ದಿಕ್ಕು ಬದಲಾವಣೆ ಸಾಧ್ಯವಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪಾಧ್ರಿ ಕಾರದ ಸದಸ್ಯ ಕಾರ್ಯದರ್ಶಿ ಪ್ರಭು.ಎನ್‌ ಬಡಿಗೇರ್‌ ಹೇಳಿದ್ದಾರೆ.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ದುರ್ಗಾಶಕ್ತಿ ಏಡ್ಸ್‌ ತಡೆಗಟ್ಟುವ ಸಂಘದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಎಡಿಆರ್‌ ಕಟ್ಟಡದಲ್ಲಿ ಗುರುವಾರ ಏರ್ಪಡಿಸಿದ್ದ ದಮನಿತ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯ ಅಸಹಾಯಕ ಪರಿಸ್ಥಿತಿಯನ್ನು ಪುರುಷರು ಬಳಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಇದರ ವಿರುದ್ಧ ಧ್ವನಿ ಎತ್ತಬೇಕು. ಆಗ ಮಾತ್ರ ತಮ್ಮ ಮೇಲಾಗುತ್ತಿರುವ ದೌರ್ಜನ್ಯ, ಶೋಷಣೆ ಮತ್ತು ಅನ್ಯಾಯ ತಡೆಯಬಹುದು. ಅಲ್ಲದೆ ತಮಗಾಗಿರುವ ಅನ್ಯಾಯದ ಬಗ್ಗೆ ಹೇಳಿಕೊಂಡರೆ, ನಾವು ಕಾನೂನು ಕ್ರಮ ಜರುಗಿಸಿ, ನ್ಯಾಯ ಒದಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂರಕ್ಷಣಾಧಿಕಾರಿ ಪೂರ್ಣಿಮ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ದಮನಿತ ಮಹಿಳೆಯರಿಗಾಗಿ ಅನೇಕ ಯೋಜನೆಗಳಿವೆ. ಮಹಿಳೆಯರು ಆರ್ಥಿಕವಾಗಿ ಸದೃಢರಾದರೆ ಶೋಷಣೆಗೆ ಒಳಗಾಗುವುದು ಕಡಿಮೆಯಾಗಲಿದೆ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ.ಮಂಜುನಾಥ್‌ ಮಾತನಾಡಿ, ಮಹಿಳೆಯರು ದಮನಿತರಾಗಲು ನೂರಾರು ಕಾರಣಗಳಿವೆ. ಬಡತನ, ಅನಕ್ಷರತೆ, ಮಹಿಳಾ ದೌರ್ಜನ್ಯಗಳು ಸೇರಿ ಮಹಿಳೆಯರನ್ನು ದಮನಿತರಾನ್ನಾಗಿ ಮಾಡುತ್ತಿವೆ. ಮಹಿಳೆಯರು ಹಿಂದಿನ ಘಟನೆಗಳನ್ನು ಮರೆತರೆ ಸುಂದರ ಮತ್ತು
ಸ್ವಸ್ಥ ಜೀವನ ನಿರ್ಮಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

Advertisement

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣಕುಮಾರ್‌ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳು ಒಂದಲ್ಲಾ ಒಂದು ರೀತಿಯಲ್ಲಿ ಅನಾದಿ ಕಾಲದಿಂದಲೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ಪುರುಷರಿಗೆ ಸಮಾನವಾಗಿ ಮುಂದುವರೆಯುತ್ತಿದ್ದರೂ ಸಹ ಆಕೆ ಪುರುಷರ ಮೇಲೆ ಅವಲಂಬಿತಳಾಗಿರುವುದರಿಂದ ಶೋಷಣೆ ಇಂದಿನ ದಿನಗಳಲ್ಲಿಯೂ ನಡೆಯುತ್ತಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ನಮ್ಮ ವೈದ್ಯಕೀಯ ಕ್ಷೇತ್ರ ಹೆಚ್ಚು ಮುಂದುವರೆದಿದ್ದು, ಏಡ್ಸ್‌ ರೋಗಕ್ಕೆ ಚಿಕಿತ್ಸೆ ಕಂಡು ಹಿಡಿಯಲಾಗಿದೆ. ಆದರೂ ಏಡ್ಸ್‌ ರೋಗ ಇರುವವರನ್ನು ಸಮಾಜದಿಂದ ದೂರವಿಡಲಾಗುತ್ತಿದೆ. ಇಂತಹ ಪರಿಸ್ಥಿತಿ ಬದಲಾಗಬೇಕು. ದಮನಿತರ ಬಗ್ಗೆ ಕಾಳಜಿ ಹೊಂದಿರುವ ದುರ್ಗಾಶಕ್ತಿ ಸಂಘದ ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು.

ಉಪನ್ಯಾಸ ನೀಡಿದ ವಕೀಲೆ ಅನಿತಾ, ಎಲ್ಲರಂತೆ ದಮನಿತರಿಗೂ ಹಕ್ಕುಗಳಿವೆ. ಜೊತೆಗೆ ದಮನಿತರಿಗಾಗಿ ವಿಶೇಷ ಮೀಸಲಾತಿ ಕೂಡ ಇದೆ. ಬಡತನ ಮತ್ತು ಇತರೆ ಕಾರಣಗಳಿಂದ ಕೆಲವು ಮಹಿಳೆಯರು ಲೈಂಗಿಕ ಕಾರ್ಯಕರ್ತೆಯರ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾರೂ ಸಹ ಸ್ವ ಇಚ್ಛೆಯಿಂದ ಇಂತಹ ವೃತ್ತಿಗೆ ಬರುವುದಿಲ್ಲ ಎಂದರು.

ಮಾನವ ಕಳ್ಳಸಾಗಾಣಿಕೆಯಿಂದ ಮಹಿಳೆಯರ ಜೊತೆಗೆ ಮಕ್ಕಳು ಸಹ ಶೋಷಣೆಗೆ ಒಳಾಗಾಗುತ್ತಿದ್ದಾರೆ. ಮಾನವ ಕಳ್ಳಸಾಗಾಣಿಕೆಯು ಕ್ರಿಮಿನಲ್‌ ಅಪರಾಧವಾಗಿದ್ದು ಇಂತಹ ಪ್ರಕರಣಗಳಿಂದ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಲು ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ದಮನಿತರು ತಮ್ಮ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ಮಹಿಳೆಯರು ಆಮಿಷಗಳಿಗೆ ಒಳಗಾಗುವುದರಿಂದಲೂ ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿವೆ. ದಮನಿತ ಮಹಿಳೆಯರು ತಮ್ಮ ಮಕ್ಕಳು ಲೈಂಗಿಕ ವೃತ್ತಿಯಲ್ಲಿ ತೊಡಗುವುದನ್ನು ತಪ್ಪಿಸಲು ಉತ್ತಮ ಶಿಕ್ಷಣ ನೀಡಬೇಕು ಎಂದು ಕಿವಿಮಾತು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾ ನಿರೀಕ್ಷಕಿ ಮಂಜುಳಾ, ದಮನಿತರಿಗಾಗಿ ಇರುವ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ವಕೀಲ ಆಂಜನೇಯ ಗುರೂಜಿ ಮಾತನಾಡಿ, ದಮನಿತರು ಕಳೆದು ಹೋದ ದಿನಗಳ ನೆನೆದು ದುಃಖೀಸದೇ ಮುಂದಿನ ದಿನದಲ್ಲಿ ನಗುತ್ತ ಬಾಳಬೇಕು ಎಂದರು. ದುರ್ಗಾಶಕ್ತಿ ಏಡ್ಸ್‌ ತಡೆಗಟ್ಟುವ ಸಂಘದ ಅಧ್ಯಕ್ಷೆ ಮಂಜುಳಾ, ಜಿಲ್ಲಾ ಕಾನೂನು ಸೇವಾ ಪ್ರಾಧಿ ಕಾರದ ಪ್ಯಾನಲ್‌ ವಕೀಲರು, ದಮನಿತ ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next