Advertisement

ಪಕ್ಷೇತರರ ಸೆಳೆಯಲು ಕಸರತ್ತು

12:39 PM Nov 15, 2019 | |

„ಎನ್‌.ಆರ್‌.ನಟರಾಜ್‌
ದಾವಣಗೆರೆ:
ಈ ಬಾರಿಯ ಮಹಾನಗರಪಾಲಿಕೆ ಚುನಾವಣೆಯಲ್ಲಿ ದಾವಣಗೆರೆ ನಗರದ ಮತದಾರರು ಯಾರಿಗೂ ಸ್ಪಷ್ಟ ಒಲವು ವ್ಯಕ್ತಪಡಿಸಿಲ್ಲ. ಒಂದು ರೀತಿ ಅತಂತ್ರ ಫಲಿತಾಂಶ ಹೊರಹೊಮ್ಮಿರುವುದರಿಂದ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳು ತಮ್ಮ ಗೆಲುವಿನಿಂದ ಬೀಗುವ ಸ್ಥಿತಿಯಲ್ಲಿಲ್ಲ.

Advertisement

ಈ ಬಾರಿ ಚುನಾವಣೆಯಲ್ಲಿ ನಮ್ಮ ಪಕ್ಷವೇ ಅಧಿಕ ಸ್ಥಾನಗಳಿಸಲಿದೆ ಎಂಬುದಾಗಿ ಜೋರಾಗಿ ಹೇಳುತ್ತಿದ್ದ ಉಭಯ ಪಕ್ಷಗಳ ಮುಖಂಡರಿಗೂ ಒಂದು ರೀತಿ ಮುಜುಗರ ಉಂಟಾಗಿದೆ. ಮತ್ತೆ ಅಧಿಕಾರದ ಗದ್ದುಗೆ ಏರುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್‌ ಹಾಗೂ ಕೈ ಪಡೆಯಿಂದ ಅಧಿಕಾರ ಕಸಿದುಕೊಳ್ಳುವ ಪಣತೊಟ್ಟಿದ್ದ ಬಿಜೆಪಿ ಮುಂದೇನು ಎಂಬ ಲೆಕ್ಕಾಚಾರದಲ್ಲಿ ತೊಡಗುವಂತಾಗಿದೆ.

ದಾವಣಗೆರೆ ಮಹಾನಗರಪಾಲಿಕೆಯ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಅಗತ್ಯ ಇರುವ ಮ್ಯಾಜಿಕ್‌ ನಂಬರ್‌ ಯಾವ ಪಕ್ಷಕ್ಕೂ ದಕ್ಕಿಲ್ಲ. 45 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 22 ಹಾಗೂ ಬಿಜೆಪಿ 17 ವಾರ್ಡ್‌ಗಳಲ್ಲಿ ಜಯ ಸಾಧಿಸಿವೆ. ಜೆಡಿಎಸ್‌ ಈ ಬಾರಿ ಒಂದು ವಾರ್ಡ್‌ನಲ್ಲಿ ಗೆಲ್ಲುವ ಮೂಲಕ ಖಾತೆ ತೆರೆದಿದೆ.

ಪಾಲಿಕೆಯಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್‌ ಈ ಚುನಾವಣೆಯಲ್ಲಿ 22 ವಾರ್ಡ್‌ಗಳಲ್ಲಿ ಜಯ ಗಳಿಸುವ ಮೂಲಕ ಹೆಚ್ಚು ಸ್ಥಾನ ಪಡೆದ ಪಕ್ಷವಾಗಿ ಹೊರಹೊಮ್ಮಿದ್ದರೂ ಮ್ಯಾಜಿಕ್‌ ನಂಬರ್‌ 23 ಸಂಖ್ಯೆ ಪಡೆಯುವಲ್ಲಿ ವಿಫಲವಾಗಿದೆ. ಕಳೆದ ಬಾರಿ 41 ಸದಸ್ಯ ಬಲದ ಪಾಲಿಕೆಯಲ್ಲಿ 39 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್‌ ಈ ಬಾರಿಯೂ ಅಧಿಕ ಸ್ಥಾನ ಪಡೆಯಲಿದ್ದೇವೆ ಎಂಬ ಅತೀ ವಿಶ್ವಾಸದಲ್ಲಿತ್ತು.

ಆದರೆ, ಆ ಪಕ್ಷಕ್ಕೆ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು ಒಂದು ಸ್ಥಾನದ ಕೊರತೆ ಇದೆ. ಹಾಗಾಗಿ ಕೈ ಪಡೆಗೆ ಪಕ್ಷೇತರ ಸದಸ್ಯನ ಮೊರೆ ಅನಿವಾರ್ಯವಾಗಿದೆ. ಇನ್ನು ಕಳೆದ ಚುನಾವಣೆಯಲ್ಲಿ ಕೇವಲ ಓರ್ವ ಸದಸ್ಯನನ್ನು ಹೊಂದಿದ್ದ ಬಿಜೆಪಿ ಈ ಬಾರಿ 17 ವಾರ್ಡ್‌ಗಳಲ್ಲಿ ಜಯಗಳಿಸುವ ಮೂಲಕ ತನ್ನ ಸಂಖ್ಯಾಬಲವನ್ನೇನೋ ಹೆಚ್ಚಿಸಿಕೊಂಡಿದೆ. ಆದರೆ, ಆ ಪಕ್ಷ ಕೂಡ ಮ್ಯಾಜಿಕ್‌ ನಂಬರ್‌ಗೆ ದೂರವಿದೆ. ಬಿಜೆಪಿ ಟಿಕೆಟ್‌ ಸಿಗದೇ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದವರಲ್ಲಿ ಮೂವರು ಜಯಗಳಿಸಿದ್ದಾರೆ.

Advertisement

ಅವರೇನಾದರೂ ಮರಳಿಗೂಡಿಗೆ ಬಂದಲ್ಲಿ ಆ ಪಕ್ಷದ ಬಲ 20ಕ್ಕೇರಲಿದೆ. ಅತಂತ್ರ ಫಲಿತಾಂಶ ಹೊರಹೊಮ್ಮಿದ ಪಾಲಿಕೆ ಚುನಾವಣೆಯಲ್ಲಿ ಎಲ್ಲರ ಚಿತ್ತ ಪಕ್ಷೇತರರತ್ತ ಎನ್ನುವಂತಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಲವು ಮುಖಂಡರು ಪರಾಜಿತರಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಪಾಲಿಕೆ ಹಿರಿಯ ಸದಸ್ಯ ದಿನೇಶ್‌ ಕೆ.ಶೆಟ್ಟಿ. ನಗರ ಸಭೆ ಮಾಜಿ ಅಧ್ಯಕ್ಷ ಕೆ.ಜಿ.ಶಿವಕುಮಾರ್‌, ಮಾಜಿ ಸದಸ್ಯ ಎಸ್‌.ಮಲ್ಲಿಕಾರ್ಜುನ್‌ ಸೇರಿದಂತೆ ಪಾಲಿಕೆ ಮಾಜಿ ಸದಸ್ಯರು ಸೋತಿರುವುದು ಕೈ ಪಡೆ ಹಿನ್ನಡೆಗೆ ಕಾರಣವಾಗಿದೆ.

ಇನ್ನು ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿನ ಗೆಲುವಿನಿಂದ ಬೀಗುತ್ತಿದ್ದ ಬಿಜೆಪಿ ಪಾಲಿಕೆ ಚುನಾವಣೆಯಲ್ಲಿ ಕಮಲ ಅರಳಲಿದೆ ಎಂಬ ಲೆಕ್ಕಾಚಾರದಲ್ಲಿತ್ತು. ಅವರ ನಿರೀಕ್ಷೆ ಉಲ್ಟಾ ಆಗಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಕಮಲ ಪಡೆ ಸಾಧನೆಯೇನೋ ಉತ್ತಮವಾಗಿದೆ. ಆದರೆ, ಅಧಿಕಾರದ ಚುಕ್ಕಾಣಿ ಹಿಡಿಯುವ ಅವರ ಪ್ರಯತ್ನ ಕೈಗೂಡಲು ಸಾಧ್ಯವಾಗಿಲ್ಲ. ಟಿಕೆಟ್‌ ಸಿಗದೇ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದವರಲ್ಲಿ ಮೂವರು ಜಯ ಸಾಧಿಸಿದ್ದಾರೆ.

22 ಸ್ಥಾನ ಗಳಿಸಿರುವ ಕಾಂಗ್ರೆಸ್‌ ಅಷ್ಟು ಸುಲಭವಾಗಿ ಪಾಲಿಕೆ ಅಧಿಕಾರ ಚುಕ್ಕಾಣಿ ಬಿಟ್ಟು ಕೊಡಲು ತಯಾರಿಲ್ಲ. ಗೆದ್ದಿರುವ ಐವರು ಪಕ್ಷೇತರರಲ್ಲಿ ಇಬ್ಬರು ನಮ್ಮವರೇ ಎಂಬುದಾಗಿ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಜತೆಗೆ ಮೇಯರ್‌ ಚುನಾವಣೆಯಲ್ಲಿ ಶಾಸಕರಿಗೂ ಸಹ ಮತದಾನ ಹಕ್ಕಿದೆ. ಹಾಗಾಗಿ ನಮ್ಮದೇ ಆಡಳಿತ ಎಂಬ ವಿಶ್ವಾಸ ಕಾಂಗ್ರೆಸ್‌ನವರದ್ದು.

ಬಿಜೆಪಿಯವರೂ ಸಹ ಅದೇ ಯೋಜನೆಯಲ್ಲಿದ್ದು. ಪಕ್ಷೇತರಲ್ಲಿ ನಾಲ್ವರು ನಮ್ಮ ಪಕ್ಷದವರೇ. ಮತ್ತೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಲ್ಲಿ ಸಂಖ್ಯಾಬಲ ಕೂಡ ಹೆಚ್ಚಲಿದೆ. ಸಂಸದರು, ಶಾಸಕರಿಗೂ ಮತದಾನದ ಹಕ್ಕು ದೊರೆಯುವುದರಿಂದ ಪಾಲಿಕೆಯಲ್ಲಿ ನಮ್ಮದೇ ಆಡಳಿತ ಎಂಬುದಾಗಿ ಹೇಳುತ್ತಿದ್ದಾರೆ. ಜೆಡಿಎಸ್‌ ಓರ್ವ ಸದಸ್ಯರಿದ್ದರೂ ಸಂಖ್ಯಾಬಲದ ಸಂದರ್ಭದಲ್ಲಿ ಅವರ ಬೆಂಬಲ ಕೂಡ ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ ಪಾಲಿಕೆ ಅಧಿಕಾರ ಗದ್ದುಗೆ ಏರಲು ಈ ಬಾರಿ ಪಕ್ಷೇತರರು ಹಾಗೂ ಜೆಡಿಎಸ್‌ನ ಓರ್ವ ಸದಸ್ಯರಿಗೆ ಡಿಮ್ಯಾಂಡ್‌ ಹೆಚ್ಚಲಿದೆ.

Advertisement

Udayavani is now on Telegram. Click here to join our channel and stay updated with the latest news.

Next