Advertisement

ಮಳೆಗಾಲದಲ್ಲೂ ಟ್ಯಾಂಕರ್‌ ನೀರೇ ಗತಿ!

03:33 PM Jul 28, 2019 | Naveen |

ದಾವಣಗೆರೆ: ಮಳೆಗಾಲದಲ್ಲೂ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ 80 ಗ್ರಾಮಗಳ ಜನರಿಗೆ ಈಗಲೂ ಟ್ಯಾಂಕರ್‌ ನೀರೇ ಗತಿ!.

Advertisement

ಬೇಸಿಗೆಯಲ್ಲಿ ಮಾತ್ರವಲ್ಲ, ಮಳೆಯ ನಡುವೆಯೂ ಟ್ಯಾಂಕರ್‌ ಗಳ ಸದ್ದು ನಿಂತಿಲ್ಲ. ತೀವ್ರ ಮಳೆ ಕೊರತೆಯ ಪರಿಣಾಮ ಜಲಮೂಲಗಳು ಖಾಲಿ. ಹಾಗಾಗಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ನಿಲ್ಲುವ ಸಾಧ್ಯತೆ ತೀರಾ ಕಡಿಮೆ.

ಜೀವನದಿ ತುಂಗಭದ್ರೆ, ಜೀವನಾಡಿ ಭದ್ರಾ ನಾಲೆ ಹೊಂದಿರುವ ಜಿಲ್ಲೆಯಲ್ಲಿ ಇತ್ತೀಚಿನ ವರ್ಷದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಅನೇಕ ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ನೀರೇ ದೊರೆಯದ ಸ್ಥಿತಿ ಉಲ್ಬಣವಾಗುತ್ತಲೇ ಇದೆ.
ಮೇಲ್ಮೈ ಮಟ್ಟದಲ್ಲಿ ಮಾತ್ರವಲ್ಲ, ಅಂತರ್ಜಲವೂ ಪಾತಾಳಕ್ಕೆ ಕುಸಿಯುತ್ತಿರುವುದು ನೀರಿನ ಸಮಸ್ಯೆಯ ಮೂಲ.

ದಾವಣಗೆರೆ ಜಿಲ್ಲೆಯಲ್ಲಿ ಈಗ ಬರ… ಎನ್ನುವುದು ಕಾಯಂ. ಬರದ ಬೇಗೆಯಿಂದ ಜನ ಮತ್ತು ಜಾನುವಾರುಗಳಿಗೆ ನೀರು ಅಮೃತ ಸಮಾನ. ತೀವ್ರ ಪ್ರಮಾಣದ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್‌ ನೀರೇ ಜನಜೀವನದ ಆಸರೆ. ಎಷ್ಟೋ ಗ್ರಾಮಗಳಲ್ಲಿ ಟ್ಯಾಂಕರ್‌ ನೀರನ್ನು ತೊಟ್ಟಿಗಳಲ್ಲಿ ಹಾಕಿ, ಜಾನುವಾರುಗಳಿಗೆ ನೀರು ಕುಡಿಸಬೇಕಾದ ಸ್ಥಿತಿ ಎದುರಾಗಿದೆ.

ದಾವಣಗೆರೆ ತಾಲೂಕಿನ ಹೆಬ್ಟಾಳು, ಹುಣಸೆಕಟ್ಟೆ, ಕಾಟಿಹಳ್ಳಿ, ಕಾಟಿಹಳ್ಳಿ ಲಂಬಾಣಿಹಟ್ಟಿ, ಹಾಲುವರ್ತಿ, ನೀರ್ಥಡಿ… ಒಳಗೊಂಡಂತೆ
31 ಗ್ರಾಮಗಳಿಗೆ ಈಗಲೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಬುಳ್ಳಾಪುರ ಮತ್ತು ನರಸೀಪುರ ಗ್ರಾಮಗಳಲ್ಲಿ
ಖಾಸಗಿಯವರಿಂದ ಕೊಳವೆ ಬಾವಿ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ದಾವಣಗೆರೆ ತಾಲೂಕಿನ 21 ಗ್ರಾಮಗಳಿಗೆ 39 ಟ್ಯಾಂಕರ್‌ ಮೂಲಕ ಪ್ರತಿ ದಿನ 109 ಟ್ರಿಪ್‌ ಮೂಲಕ ನೀರು
ಸರಬರಾಜು ಮಾಡಲಾಗುತ್ತಿದೆ.

Advertisement

ಅಡಕೆ ನಾಡು… ಚನ್ನಗಿರಿ ತಾಲೂಕಿನ ದೊಡ್ಡಬ್ಬಿಗೆರೆ, ಮತ್ತಿಗೆನಹಳ್ಳಿಯಲ್ಲಿ ಟ್ಯಾಂಕರ್‌ ಮೂಲಕ ನೀರು ಕೊಡುವ ಮೂಲಕ ಸಮಸ್ಯೆ ನೀಗಿಸುವ ಪ್ರಯತ್ನ ಮಾಡಲಾಗುತ್ತಿದೆ.

ಬರಪೀಡಿತ ತಾಲೂಕು ಎಂಬುದಾಗಿ ಶಾಶ್ವತ ಹಣೆಪಟ್ಟಿ ಕಟ್ಟಿಕೊಂಡಿರುವ ಜಗಳೂರು ತಾಲೂಕಿನಲ್ಲಿ ನೀರಿನ ಸಮಸ್ಯೆ ಹೇಳತೀರದ್ದು ಎಂದು ಪ್ರತ್ಯೇಕವಾಗಿ ಹೇಳುವಂತೆಯೇ ಇಲ್ಲ. ಜಗಳೂರು ತಾಲೂಕಿನ ಅಸಗೋಡು ವಡ್ಡರಹಟ್ಟಿ, ಗುತ್ತಿದುರ್ಗ, ಮೆದಗಿನಕೆರೆ, ಹಿರೇ ಅರಕೆರೆ, ಸಾಲಕಟ್ಟೆ, ಸೋಮನಹಳ್ಳಿ, ಜಗಳೂರು
ಗೊಲ್ಲರಹಟ್ಟಿ, ಚದುರಗೊಳ್ಳ, ಚದುರಗೊಳ್ಳ ಗೊಲ್ಲರಹಟ್ಟಿ, ಚಿಕ್ಕಬನ್ನಿಹಟ್ಟಿ, ಮುಚ್ಚನೂರು, ಹಾಲೇಕಲ್ಲು, ಕಸವನಹಳ್ಳಿ, ಉದ್ದಗಟ್ಟ, ರಂಗಾಪುರ, ಚಿಕ್ಕಮಲ್ಲನಹೊಳೆ… ಒಳಗೊಂಡಂತೆ 55 ಗ್ರಾಮಳಿಗೆ 36 ಟ್ಯಾಂಕರ್‌ ಮೂಲಕ ಪ್ರತಿ ದಿನ 330 ಟ್ರಿಪ್‌ಗ್ಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.

ಜಗಳೂರು ತಾಲೂಕಿನ ಬಿಳಿಚೋಡು, ಬಿದರಕೆರೆ, ಪಲ್ಲಾಗಟ್ಟೆ, ಹಿರೇಬನ್ನಿಹಟ್ಟಿ, ಚಿಕ್ಕಮಲ್ಲನಹೊಳೆ, ತಾಯಿಟೋಣಿ, ಅಸಗೋಡು, ಗಡಿಮಾಕುಂಟೆ, ಜ್ಯೋತಿಪುರ…. ಸೇರಿದಂತೆ 30 ಗ್ರಾಮಗಳಲ್ಲಿ ಕೊಳವೆ ಬಾವಿ ಬಾಡಿಗೆಗೆ ತೆಗೆದುಕೊಂಡು ನೀರು ಪೂರೈಸಲಾಗುತ್ತಿದೆ. ಹೊನ್ನಾಳಿ ತಾಲೂಕಿನ ಮಾಚಿಗೊಂಡನಹಳ್ಳಿ, ಸೋಗಿಲು, ಕಂಚಿಗನಾಳ್‌, ಮಲ್ಲಿಗೇನಹಳ್ಳಿ, ಕುಂಕುವ, ಬೆಳಗುತ್ತಿ, ಸುರಹೊನ್ನೆ ಒಳಗೊಂಡಂತೆ 9 ಗ್ರಾಮಗಳಲ್ಲಿ ಕೊಳವೆ ಬಾವಿ ಬಾಡಿಗೆ ಪಡೆದು
ನೀರು ಒದಗಿಸಲಾಗುತ್ತಿದೆ. ಮಳೆಗಾಲದಲ್ಲೂ ಜೀವನದಿ ತುಂಗಭದ್ರೆಯ ಒಡಲಲ್ಲಿ ಇರುವ ಹೊನ್ನಾಳಿ ತಾಲೂಕಿನಲ್ಲೇ ನೀರಿನ ಸಮಸ್ಯೆ ಇರುವುದು ಜನರ ಚಿಂತೆಗೆ ಕಾರಣವಾಗಿದೆ.

ವರ್ಷಗಳ ಇತಿಹಾಸ: ಅನೇಕ ಗ್ರಾಮಗಳಲ್ಲಿ ವರ್ಷಗಳಿಂದ ಟ್ಯಾಂಕರ್‌ ಮೂಲಕ ನೀರು ನೀಡಲಾಗುತ್ತಿದೆ. 1,034 ಜನಸಂಖ್ಯೆ ಹೊಂದಿರುವ
ದಾವಣಗೆರೆ ತಾಲೂಕಿನ ಹುಣಸೆಕಟ್ಟೆ ಗ್ರಾಮಕ್ಕೆ 2018ರ ಡಿ.15 ರಿಂದ, ಜಗಳೂರು ತಾಲೂಕಿನ ಗುತ್ತಿದುರ್ಗದಲ್ಲಿ 2018ರ ಅ.11, ಮೆದಗಿನಕೆರೆಯಲ್ಲಿ ಡಿ.31 ರಿಂದ ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದೆ.

6 ಕೋಟಿ ಹಣ: ನೀರು ಕೊಳ್ಳುವ ಕಾಲ ಬರುತ್ತದೆ… ಎಂದು ಹೇಳಿದಾಗ ಜನರು ಆಶ್ಚರ್ಯದಿಂದ ನೋಡುವ ಕಾಲ ಇತ್ತು. ಆದರೆ, ಈಗ ಅದು ನಿಜವಾಗಿದೆ. ಜಿಲ್ಲೆಯ 80 ಗ್ರಾಮಗಳಲ್ಲಿ 1.1. 2019ರಿಂದ 134 ಟ್ಯಾಂಕರ್‌ಗಳ ಮೂಲಕ ಪ್ರತಿ ದಿನ 469 ಟ್ರಿಪ್‌ನಂತೆ 71,737 ಟ್ರಿಪ್‌ ನೀರು ಸರಬರಾಜಿಗೆ 5,73,89,600 ರೂಪಾಯಿ ಖರ್ಚು ಮಾಡಲಾಗಿದೆ. ಅದೇ ರೀತಿ 44 ಗ್ರಾಮಗಳಲ್ಲಿ 59 ಜನರಿಂದ ಕೊಳವೆಬಾವಿ ಬಾಡಿಗೆ ಪಡೆದು ನೀರು ಪೂರೈಕೆಗೆ 1.1. 2019ರಿಂದ ಈವರೆಗೆ 73.17 ಲಕ್ಷ ವೆಚ್ಚ ಮಾಡಲಾಗಿದೆ. ಒಟ್ಟಾರೆಯಾಗಿ 6,40,06,600 ಖರ್ಚು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next