Advertisement

ಭವ್ಯ ಭಾರತ ನಿರ್ಮಾಣಕ್ಕೆ ಪಣ ತೊಡಿ

03:14 PM Aug 16, 2021 | Team Udayavani |

ದಾವಣಗೆರೆ: ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಕಲ ಜಾತಿ, ಧರ್ಮ, ಭಾಷೆ, ಪ್ರದೇಶಗಳ ಜನರೆಲ್ಲರೂ ಒಟ್ಟಾಗಿ ಬೃಹತ್‌ ಪ್ರಜಾಪ್ರಭುತ್ವದ ದೇಶದ ಅಭಿವೃದ್ಧಿ ಮತ್ತು ಯಶಸ್ಸಿಗೆ ಶ್ರಮಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್‌ ಕರೆ ನೀಡಿದರು.

Advertisement

ಭಾನುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ವರ್ಷದ ಸ್ವಾತಂತ್ರ ದಿನದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಬಹುಜನರ ಒಳಿತಿಗಾಗಿ, ಬಹುಜನರ ಕಲ್ಯಾಣಕ್ಕಾಗಿ ಜಗಜ್ಯೋತಿ ಬಸವೇಶ್ವರರ ಮಹಾಮನೆಯ ಮಂತ್ರವನ್ನು ಸಾರುತ್ತಾ ಭವ್ಯ ಭಾರತ ಕಟ್ಟುವ ಸಂಕಲ್ಪ ಮಾಡೋಣ ಎಂದರು.

ಇಡೀ ವಿಶ್ವವೇ ಕೊರೊನಾ ವೈರಸ್‌ ದಾಳಿಯಿಂದ ಆತಂಕದಲ್ಲಿದೆ. ಆದಾಗ್ಯೂ ನಾವು ಎದೆಗುಂದದೆ ಪ್ರಧಾನಮಂತ್ರಿಗಳ ಕರೆಯಂತೆ ಆತ್ಮನಿರ್ಭರ ಭಾರತ ಹಾಗೂ ಆತ್ಮನಿರ್ಭರ ಕರ್ನಾಟಕ ನಿರ್ಮಾಣಕ್ಕೆ ಪಣ ತೊಡಬೇಕಿದೆ ಎಂದು ತಿಳಿಸಿದರು. 150 ವರ್ಷìಗಳ ಕಾಲ ಬ್ರಿಟಿಷರ ಆಡಳಿತದ ವಿರುದ್ಧ ನಡೆದ ನಿರಂತರ ಹೋರಾಟದ ಫಲವಾಗಿ 1947ರ ಆ. 15 ರಂದು ಸರ್ವಸ್ವತಂತ್ರ ರಾಷ್ಟ್ರ ಎಂದು ಘೋಷಿಸಲ್ಪಟ್ಟಿತು. ಇತಿಹಾಸದಲ್ಲಿಯೇ ಸಾಮ್ರಾಜ ಶಾಹಿ ಆಡಳಿತ ಮತ್ತು ಗುಂಡುಗಳಿಗೆ ಎದುರಾಗಿ ಅಹಿಂಸಾತ್ಮಕ ಹೋರಾಟ ನಡೆಸಿ ಸ್ವಾತಂತ್ರ ಗಳಿಸಿದ ಪ್ರಥಮ ದೇಶ ಭಾರತ ಎಂದು ಸ್ಮರಿಸಿದರು.

ಮಹಾತ್ಮ ಗಾಂ ಧೀಜಿಯವರೂ ಸೇರಿದಂತೆ ಹಲವಾರು ಸ್ವಾತಂತ್ರ ಯೋಧರ ಅವಿರತ ಹೋರಾಟದ ಫಲವಾಗಿ ಸ್ವಾತಂತ್ರ ಲಭಿಸಿದೆ. ಸ್ವಾತಂತ್ರ ಹೋರಾಟಗಾರರಿಗೆ ಸರ್ಕಾರ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದೆ. ಆ. 15 ಮತ್ತು ಜ. 26 ಎರಡು ದಿನಗಳನ್ನು ಸಂಗೊಳ್ಳಿ ರಾಯಣ್ಣ ಸಂಸ್ಮರಣೆಯ ದಿನಗಳೆಂದು ಗೌರವ ಸಮರ್ಪಣೆಯ ಆದೇಶ ಹೊರಡಿಸಿದೆ ಎಂದು ಹೇಳಿದರು. ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದ ಜಿಲ್ಲೆಯ ಹೂವು, ಹಣ್ಣು, ತರಕಾರಿ ಬೆಳೆಯುವ 278 ರೈತರಿಗೆ 1.53 ಕೋಟಿ ರೂ. ಪರಿಹಾರ ನೀಡಲಾಗಿದೆ. ನಿರ್ಗತಿಕರು, ಕೂಲಿ ಕಾರ್ಮಿಕರು, ಬಡವರಿಗೆ ಕಳೆದ ಜೂ. 25 ರವರೆಗೆ ಇಂದಿರಾ ಕ್ಯಾಂಟೀನ್‌ ಮೂಲಕ ಉಚಿತವಾಗಿ ಉಪಹಾರ ಹಾಗೂ ಊಟ ಪೂರೈಕೆ ಮಾಡಲಾಗಿದೆ.

ಲಾಕ್‌ಡೌನ್‌ ಕಾರಣ ಆರ್ಥಿಕ ನಷ್ಟ ಅನುಭವಿಸಿದ 498 ಕೈಮಗ್ಗ ನೇಕಾರರಿಗೆ ತಲಾ 2 ಸಾವಿರ ರೂ.ದಂತೆ ಒಟ್ಟು 9.96 ಲಕ್ಷ ರೂ., 67,37 ಕಟ್ಟಡ ಕಾರ್ಮಿಕರಿಗೆ 3 ಸಾವಿರದಂತೆ 20.26 ಕೋಟಿ ರೂ., 5005 ಆಟೋರಿûಾ ಮೋಟಾರು ಮತ್ತು ಮ್ಯಾಕ್ಸಿಕ್ಯಾಬ್‌ ಚಾಲಕರಿಗೆ 1.50 ಕೋಟಿ ರೂ. ಪರಿಹಾರ ನೀಡಿದ್ದು, 80 ಸಾವಿರ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್‌ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

Advertisement

ಜಗಳೂರು ಕ್ಷೇತ್ರದಲ್ಲಿ 660 ಕೋಟಿ ರೂ. ಅನುದಾನದಲ್ಲಿ 57 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ, ಚನ್ನಗಿರಿ ತಾಲೂಕು ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಮುಂದುವರೆದ ಭಾಗಕ್ಕೆ 167 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ವ್ಯಾಪ್ತಿಯ 130 ಕೆರೆಗಳ ನೀರು ತುಂಬಿಸುವ 518 ಕೋಟಿ ರೂ. ಯೋಜನೆಗೆ ಡಿಪಿಆರ್‌ ತಯಾರಿಸಲಾಗುತ್ತಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಕೇಂದ್ರದ 164.76 ಕೋಟಿ ಹಾಗೂ ರಾಜ್ಯದ ಪಾಲು 54.71 ಕೋಟಿ ರೂ. ಸೇರಿದಂತೆ ಒಟ್ಟು 219.47 ಕೋಟಿ ರೂ.ಗಳ ನೆರವನ್ನು ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ.

ಜಲಜೀವನ್‌ ಮಿಷನ್‌ ಯೋಜನೆಯಡಿ 166.74 ಕೋಟಿ ರೂ. ಯೋಜನೆಯಡಿ 225 ಕಾಮಗಾರಿ ಪ್ರಗತಿಯಲ್ಲಿದ್ದು, 9 ಕಾಮಗಾರಿ ಪೂರ್ಣಗೊಂಡಿವೆ. ಜಲಸಿರಿ ಯೋಜನೆಯಡಿ 24-7 ನೀರು ಪೂರೈಸುವ ಕಾಮಗಾರಿಯನ್ನ ಆಗಸ್ಟ್‌ ವೇಳೆಗೆ ಪೂರ್ಣಗೊಳಿಸಿ, ದಾವಣಗೆರೆ ಮಹಾನಜನತೆಗೆ ನಿರಂತರ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಲಾಗುವುದು.

ಸ್ಮಾರ್ಟ್‌ಸಿಟಿ ಯೋಜನೆಯಡಿ 1014 ಕೋಟಿ ರೂಪಾಯಿ ಮೊತ್ತದಲ್ಲಿ 95 ಕಾಮಗಾರಿ ಕೈಗೊಂಡಿದ್ದು, ಈವರೆಗೆ 445 ಕೋಟಿ ರೂ. ವೆಚ್ಚದಲ್ಲಿ 37 ಕಾಮಗಾರಿ ಪೂರ್ಣಗೊಳಿಸಿದೆ. 3.10 ಕೋಟಿ ವೆಚ್ಚದಲ್ಲಿ ನಗರದ ಕಲ್ಯಾಣಿಯನ್ನು ಆಕರ್ಷಕ ಪುಷ್ಕರಣಿಯಾಗಿ ನಿರ್ಮಿಸಲಾಗುತ್ತಿದೆ ಎಂದರು. ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್‌.ಎ. ರವೀಂದ್ರನಾಥ್‌, ಮೇಯರ್‌ ಎಸ್‌.ಟಿ. ವೀರೇಶ್‌, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next