Advertisement

ಪಾಲಿಕೆಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ

03:45 PM Feb 28, 2021 | Team Udayavani |

ದಾವಣಗೆರೆ: ಕಾನೂನಾತ್ಮಕವಾಗಿ ಸಂಪೂರ್ಣ ಅಭಿವೃದ್ಧಿಪಡಿಸದ 52 ಎಕರೆ ವಿಸ್ತೀರ್ಣದ ಹಲವು ಬಡಾವಣೆಗಳಲ್ಲಿ ಅಕ್ರಮವಾಗಿ ಡೋರ್‌ ನಂಬರ್‌ ನೀಡುವ ಮೂಲಕ ಮಹಾನಗರ ಪಾಲಿಕೆಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ದೂರು ಸಲ್ಲಿಸಲಾಗುವುದು ಎಂದು ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್‌ ಶೆಟ್ಟಿ ತಿಳಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಗಂಭೀರ ಆರೋಪ ಮಾಡಿದರು. ಮಾಜಿ ಮೇಯರ್‌ ಅವಧಿಯಲ್ಲಿ ಅಕ್ರಮವಾಗಿ ಮನೆ ನಂಬರ್‌ ಕೊಟ್ಟಿರುವ 52 ಎಕರೆ ಬಡಾವಣೆಗಳಲ್ಲಿ 21 ಎಕರೆ ಬಡಾವಣೆ ಸ್ವತಃ ಮಾಜಿ ಮೇಯರ್‌ ಅವರಿಗೇ ಸೇರಿದ್ದಾಗಿವೆ. ತಮ್ಮ ಆಡಳಿತಾವಧಿಯಲ್ಲಿ ಯಾರಿಂದಲೂ ಒಂದು ಕಪ್‌ ಚಹಾ ಕುಡಿಯದೆ ಜನರ ಕೆಲಸ ಮಾಡಿದ್ದೇನೆ ಎನ್ನುವ ಅವರು, ಈ ವಿಚಾರದಲ್ಲಿ ಭಾರೀ ಭೋಜನವನ್ನೇ ಸವಿದಿದ್ದಾರೆ ಎಂದು ಟೀಕಿಸಿದರು.

ದೂಡಾ ಕಾಯ್ದೆ ಪ್ರಕಾರ ಬಡಾವಣೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಿದ ಬಳಿಕವೇ ಡೋರ್‌ ನಂಬರ್‌ ಕೊಡ  ಬೇಕೆಂಬ ನಿಯಮವಿದೆ. ಆದರೆ ಇಲ್ಲಿ ಒಳಚರಂಡಿ, ಡಾಂಬರ್‌ ರಸ್ತೆ, ವಿದ್ಯುತ್‌ ಸಂಪರ್ಕ ಸೇರಿದಂತೆ ವಿವಿಧ ಮೂಲಭೂತ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಇದ್ದರೂ ಡೋರ್‌ ನಂಬರ್‌ಕೊಟ್ಟು ಭ್ರಷ್ಟಾಚಾರ ಮಾಡಲಾಗಿದೆ. ಈ ಕುರಿತು ಸಮಗ್ರ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು ನ್ಯಾಯಾ ಲಯಕ್ಕೆ ದೂರು ಸಲ್ಲಿಸಲಾಗುವುದು ಎಂದರು.

ಮಿತಿ ಮೀರಿ ತೆರಿಗೆ ಹೆಚ್ಚಳ: ಹಿಂದಿನ ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಕ್ಷಾಮವಿದ್ದರೂ ಆಸ್ತಿ ತೆರಿಗೆ ಏರಿಕೆ ಮಾಡದೆ ಜನರಿಗೆ ಅನುಕೂಲ ಕಲ್ಪಿಸಲಾಗಿತ್ತು. ಆದರೆ ಕೊರೊನಾ ಸಂಕಷ್ಟದಲ್ಲಿಯೂ ಬಿಜೆಪಿಯವರು ಕಾನೂನು ಮೀರಿ ಅತ್ಯಧಿಕ ತೆರಿಗೆ ಹೆಚ್ಚಿಸಿದ್ದಾರೆ. ಗೃಹ ತೆರಿಗೆ ಶೇ. 20, ವಾಣಿಜ್ಯ ತೆರಿಗೆ ಶೇ. 24ರಷ್ಟು ಹೆಚ್ಚಳ ಮಾಡಿದ್ದಾರೆ ಎಂದು ಆರೋಪಿಸಿದ ದಿನೇಶ್‌ ಶೆಟ್ಟಿ, “ಮನೆ ಬಾಗಿಲಿಗೆ ಮಹಾನಗರಪಾಲಿಕೆ’ ಕಾರ್ಯಕ್ರಮ ಕೇವಲ ಪ್ರಚಾರಕ್ಕಾಗಿ ಮಾಡಿದ ಕಾರ್ಯಕ್ರಮವಾಯಿತು. ಇದರಿಂದ ಒಂದಿಷ್ಟು ಕಂದಾಯ ವಸೂಲಿ ಮಾಡಿರುವುದನ್ನು ಬಿಟ್ಟರೆ ಸಾರ್ವಜನಿಕರಿಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಈ ಕಾರ್ಯಕ್ರಮ ಒಂದು ವೇಳೆ ಯಶಸ್ವಿಯಾಗಿದ್ದರೆ ಸಮಾರೋಪ ಸಮಾರಂಭಕ್ಕೆ ಜನರ ಕೊರತೆ ಕಾಣುತ್ತಿರಲಿಲ್ಲ ಎಂದು ಹೇಳಿದರು.

ಕ್ರಮ ಏನಾಗುತ್ತೋ ನೋಡೋಣ: ಮಹಾನಗರ ಪಾಲಿಕೆ ವಿರೋಧಪಕ್ಷದ ನಾಯಕ ಎ.ನಾಗರಾಜ್‌ ಮಾತನಾಡಿ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಈ ಹಿಂದೆ ದೇವರಮನಿಯವರು ಪಡೆದಿರುವ ಅಕ್ರಮ ನಿವೇಶನಗಳನ್ನು ವಾಪಸ್‌ ಪಡೆಯುವುದಾಗಿ ಹೇಳಿದ್ದರು. ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದರು. ದೇವರಮನಿಯವರು ಈಗ ಬಿಜೆಪಿಗೆ ಸೇರಿದ್ದರಿಂದ ಅವರ ಮೇಲೆ ದೂಡಾ ಅಧ್ಯಕ್ಷರು ಯಾವ ಕ್ರಮ ಕೈಗೊಳ್ಳುತ್ತಾರೋ ನೋಡೋಣ. ಈ ಬಗ್ಗೆ ನಾವೂ ಕಾಯುತ್ತಿದ್ದೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next