Advertisement

ಮೈತ್ರಿ ತರಲಿದೆಯೇ ಕೈ ಅಭ್ಯರ್ಥಿಗೆ ವರ?

10:21 AM May 03, 2019 | Team Udayavani |

ದಾವಣಗೆರೆ: ದಾವಣಗೆರೆಯಿಂದ ಜಿಲ್ಲೆಯಿಂದ ಬೇರ್ಪಟ್ಟು ತನ್ನ ಮೂಲ ಜಿಲ್ಲೆ ಬಳ್ಳಾರಿ ತೆಕ್ಕೆಗೆ ಸೇರಿದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಇರುವ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2014ರ ಚುನಾವಣೆಗಿಂತ ಈ ಬಾರಿ ಮತದಾನ ಪ್ರಮಾಣದಲ್ಲಿ ಹೇಳಿಕೊಳ್ಳುವಷ್ಟೇನೂ ವ್ಯತ್ಯಾಸ ಆಗಿಲ್ಲ.

Advertisement

ರಾಜ್ಯದ ಅತಿ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಒಂದಾಗಿರುವ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಶೇ. 75.89 ಮತದಾನ ಆಗಿದ್ದರೆ, ಈ ಬಾರಿ ಶೇ. 75.78 ಮತದಾನ ಆಗಿದೆ.

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಒಟ್ಟು 191,177 ಮತದಾರರ ಪೈಕಿ ಒಟ್ಟು 1,45,845 ಮಂದಿ ಮತದಾನ ಮಾಡಿದ್ದರು. ಈ ಬಾರಿಯ ಚುನಾವಣೆಯಲ್ಲಿ 1,04,356 ಪುರುಷರು, 99,739 ಮಹಿಳೆಯರು ಹಾಗೂ 18 ಮಂದಿ ಇತರರು ಒಳಗೊಂಡಂತೆ 2,04,113 ಮತದಾರರು ಇದ್ದರು. ಕಳೆದ ಚುನಾವಣೆಗಿಂತ ಈ ಬಾರಿ 12,936 ಮತದಾರರು ಹೆಚ್ಚಾಗಿದ್ದಾರೆ.

ಕಳೆದ ಏ.23ರಂದು ನಡೆದ ಚುನಾವಣೆಯಲ್ಲಿ 1,04,356 ಪುರುಷ ಮತದಾರರಲ್ಲಿ 80,613 ಹಾಗೂ 99,739 ಮಹಿಳಾ ಮತದಾರರ ಪೈಕಿ 74,073 ಮಂದಿ ಮತದಾನ ಮಾಡಿದ್ದಾರೆ. ಇತರೆ 18 ಮಂದಿಯಲ್ಲಿ ಒಬ್ಬರೂ ಕೂಡ ಮತ ಚಲಾಯಿಸಿಲ್ಲ. ಈ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದಲ್ಲಿ ಒಟ್ಟು 1,54,686 ಮಂದಿ ತಮ್ಮ ಸಂವಿಧಾನಿಕ ಹಕ್ಕು ಚಲಾಯಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಗಿಂತಲೂ ಈ ಬಾರಿ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದವರು 8,841 ಮತದಾರರು ಹೆಚ್ಚಾಗಿದ್ದರೂ ಮತದಾನ ಪ್ರಮಾಣ .11% ಇಳಿಕೆ ಆಗಿದೆ.

Advertisement

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ಭಾರತೀಯ ಜನತಾ ಪಕ್ಷದ ಜಿ.ಕರುಣಾಕರ ರೆಡ್ಡಿ ಶಾಸಕರು. 2018ರಲ್ಲಿ ನಡೆದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಎಂ.ಪಿ.ರವೀಂದ್ರರನ್ನು 9,647 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಆ ಚುನಾವಣೆಯಲ್ಲಿ ಜಿ.ಕರುಣಾಕರ ರೆಡ್ಡಿ 67,603 ಮತ ಪಡೆದಿದ್ದರೆ, ಎಂ.ಪಿ.ರವೀಂದ್ರ 57,956 ಮತ ಗಳಿಸಿದ್ದರು. ಬಿಜೆಪಿ ಟಿಕೆಟ್ ಸಿಗದೇ ಜೆಡಿಎಸ್‌ ಸೇರಿ ಆ ಪಕ್ಷದಿಂದ ಸ್ಪರ್ಧಿಸಿದ್ದ ಅರಸೀಕರೆ ಕೊಟ್ರೇಶ್‌ಗೆ 37,685 ಮತ ದೊರೆತಿದ್ದವು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ಕಣಕ್ಕಿಳಿದಿದ್ದರಿಂದ ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಕಷ್ಟಸಾಧ್ಯ ಎಂಬ ಮಾತು ಆ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್‌ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ್‌ಗಿಂತ 19 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದರು.

ಈಗ ಸದ್ಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಏ.23ರಂದು ನಡೆದ ಲೋಕಸಭಾ ಮತದಾನ ಕುರಿತು ಜಾತಿವಾರು ಲೆಕ್ಕಾಚಾರ ನಡೆಯುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪರ ಪರ ದಿವಂಗತ ಮಾಜಿ ಶಾಸಕ ಎಂ.ಪಿ.ರವೀಂದ್ರರ ಸಹೋದರಿ ಎಂ.ಪಿ.ಲತಾ ಹಾಗೂ ಜೆಡಿಎಸ್‌ನ ಅರಸೀಕೆರೆ ಎನ್‌.ಕೊಟ್ರೇಶ್‌ ಪ್ರಚಾರ ನಡೆಸಿದ್ದಾರೆ.

ಇನ್ನು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್‌ ಪರ ಶಾಸಕ ಜಿ.ಕರುಣಾಕರರೆಡ್ಡಿ ಕ್ಷೇತ್ರದಲ್ಲಿ ಸಂಚರಿಸಿ ಬಡ ಜನರಿಗೆ ಅಕ್ರಮ ಸಕ್ರಮದಡಿಯಲ್ಲಿ ಪಟ್ಟಾ ವಿತರಣೆ, ಅಭಿವೃದ್ಧಿ ಕಾರ್ಯಗಳ ಆಧರಿಸಿ ಮತಯಾಚಿಸಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅಲೆ ಮತ್ತು ಯುವ ಮತದಾರರ ಒಲವು ಕಂಡು ಬರುತ್ತಿರುವುದರಿಂದ ಈ ಬಾರಿಯೂ ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಮುನ್ನಡೆ ಸಾಧಿಸಲಿದ್ದಾರೆ ಎಂಬುದು ಕಮಲ ಪಾಳೆಯದ ಲೆಕ್ಕಾಚಾರ.

ಆದರೆ, ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ ಬಿಟ್ಟರೆ ಸಿದ್ದೇಶ್ವರ್‌ ಪರ ಸ್ಟಾರ್‌ ಪ್ರಚಾರಕರ್ಯಾರೂ ಆಗಮಿಸಲಿಲ್ಲ. ಇನ್ನೊಂದೆಡೆ ಶಾಸಕ ಜಿ.ಕರುಣಾಕರರೆಡ್ಡಿ ಜೊತೆ ಮುನಿಸಿಕೊಂಡಿರುವ ಕ್ಷೇತ್ರದ ಬಿಜೆಪಿ ಪ್ರಭಾವಿ ಮುಖಂಡರು ಪ್ರತ್ಯೇಕವಾಗಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತಬೇಟೆ ನಡೆಸಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಸಭೆ ನಡೆಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕಣಕ್ಕಿಳಿದಿದ್ದರಿಂದ ಕಾಂಗ್ರೆಸ್‌ ಸಂಪ್ರದಾಯಿಕ ಮತಗಳ ಜೊತೆಗೆ ಜೆಡಿಎಸ್‌ ಮತಗಳು ಸೇರುವುದರಿಂದ ಎಚ್.ಬಿ. ಮಂಜಪ್ಪರಿಗೆ ಹೆಚ್ಚು ಲೀಡ್‌ ದೊರೆಯಲಿದೆ ಎಂಬುವುದು ಮೈತ್ರಿ ಪಾಳೆಯದ ಮುಖಂಡರ ಅಭಿಪ್ರಾಯ. ಯಾವ ಅಭ್ಯರ್ಥಿಗೆ ಲೀಡ್‌ ಬರಬಹುದು ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿವೆಯೇ ಹೊರತು ಬೆಟ್ಟಿಂಗ್‌ ಮಾತು ಕೇಳಿ ಬರುತ್ತಿಲ್ಲ.

ಪ್ರತಿ ಬಾರಿಯೂ ಜೆಡಿಎಸ್‌ ಅಭ್ಯರ್ಥಿ ಸ್ಪರ್ಧಿಸುತ್ತಿದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿ ಸೋಲುತ್ತಿದ್ದರು. ಆದರೆ, ಈ ಬಾರಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕಣಕ್ಕಿಳಿದಿರುವುದರಿಂದ ಗೆಲುವು ಖಚಿತ. ಮೈತ್ರಿ ಅಭ್ಯರ್ಥಿ ಪ್ರಭಾವಿ ಅಲ್ಲ ಎಂದು ಬಿಜೆಪಿಯವರು ಉದಾಸೀನ ಮಾಡಿದ್ದಾರೆ. ಮೊಲ, ಆಮೆ ಕಥೆಯಂತೆ ಮೈತ್ರಿ ಅಭ್ಯರ್ಥಿ ವಿಜಯದ ಮಾಲೆ ಧರಿಸಲಿದ್ದಾರೆ. ಎಲ್ಲಾ ವರ್ಗದ ಜನರು ಎಚ್.ಬಿ.ಮಂಜಪ್ಪರನ್ನು ಬೆಂಬಲಿಸಿದ್ದಾರೆ.
ಸ್ವಾಸ್ವಿಹಳ್ಳಿ ಚನ್ನಬಸವನಗೌಡ, ಜೆಡಿಎಸ್‌ ಅಧ್ಯಕ್ಷ 

ಚಿಗಟೇರಿ ಹೋಬಳಿ ಮತ್ತು ಉಚ್ಚಂಗಿದುರ್ಗ ಭಾಗದಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತಗಳು ಲಭಿಸುವ ವಿಶ್ವಾಸವಿದೆ. ಹಾಗೆಯೇ ನೀಲಗುಂದ ಮತ್ತು ತೆಲಿಗಿ ಭಾಗದಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತವಾಗಿದೆ. ಈ ಬಾರಿ 20 ಸಾವಿರಕ್ಕೂ ಅಧಿಕ ಮತಗಳ ಲೀಡ್‌ ಬಿಜೆಪಿಗೆ ಸಿಗಲಿವೆ. ಪಟ್ಟಣದಲ್ಲಿ ನಮ್ಮ ಅಭ್ಯರ್ಥಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಆದರೆ, ಗಾಮೀಣ ಪ್ರದೇಶದಲ್ಲಿ ಬಿಜೆಪಿಯದ್ದೇ ಮೇಲುಗೈ.
•ಸತ್ತೂರು ಹಾಲೇಶ್‌, ಬಿಜೆಪಿ ಅಧ್ಯಕ್ಷ.

ರಾಜ್ಯದಲ್ಲಿ ಮೋದಿ ಅಲೆ ಇಲ್ಲ. ದಾವಣಗೆರೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹಗುರವಾಗಿ ಪರಿಗಣಿಸಿರುವುದೇ ಬಿಜೆಪಿಗೆ ಕೊಡಲಿ ಪೆಟ್ಟು ಬೀಳಲಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲವೊಂದೆಡೆ ಹೆಚ್ಚು ಮತ ಬಂದಿರಲಿಕ್ಕಿಲ್ಲ. ಆದರೆ, ಪಟ್ಟಣದಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಟ್ಟಣದಲ್ಲಿ ಕಾಂಗ್ರೆಸ್‌ಗೆ 5 ಸಾವಿರ ಮತ ಲೀಡ್‌ ಬಂದಿದ್ದು, ಈ ಬಾರಿ ಅದಕ್ಕಿಂತ ಹೆಚ್ಚು ಮತಗಳು ಲಭಿಸಲಿವೆ. ಬಿಜೆಪಿ ಭಿನ್ನಮತ ಮೈತ್ರಿ ಅಭ್ಯರ್ಥಿಗೆ ವರದಾನವಾಗಲಿದೆ.
•ಬೇಲೂರು ಅಂಜಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಎನ್‌.ಆರ್‌. ನಟರಾಜ್‌

Advertisement

Udayavani is now on Telegram. Click here to join our channel and stay updated with the latest news.

Next