Advertisement

ಕೈ ಅಭೇದ್ಯಕೋಟೆಗೆ ಕಮಲದ ಕಣ್ಣು

09:53 AM Apr 28, 2019 | Naveen |

ದಾವಣಗೆರೆ: ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭೇದ್ಯಕೋಟೆ ಎಂದೇ ಗುರುತಿಸಲ್ಪಡುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಕಳೆದ 2014ರ ಚುನಾವಣೆಗಿಂತಲೂ ಈ ಬಾರಿ ಕೊಂಚ ಏರಿದೆ.

Advertisement

2014ರ ಲೋಕಸಭಾ ಚುನಾವಣೆಯಲ್ಲಿ ಶೇ. 65.60 ಮತದಾನ ಆಗಿದ್ದರೆ, ಈ ಬಾರಿ ಚುನಾವಣೆಯಲ್ಲಿ ಶೇ. 65.93 ಮತದಾನ ಆಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ 1,91,705 ಮತದಾರರ ಪೈಕಿ 1,25,767 ಮಂದಿ ಮತದಾನ ಮಾಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 1,04,869 ಪುರುಷರು, 1,03,970 ಮಹಿಳೆಯರು ಹಾಗೂ 35 ಇತರರು ಒಳಗೊಂಡಂತೆ 2,08,700 ಮತದಾರರು ಇದ್ದಾರೆ. ಕಳೆದ ಚುನಾವಣೆಗಿಂತ ಈ ಬಾರಿ 16,995 ಮತದಾರರು ಹೆಚ್ಚಾಗಿದ್ದಾರೆ.

ಕಳೆದ ಏ.23ರಂದು ನಡೆದ ಚುನಾವಣೆಯಲ್ಲಿ 1,04,869 ಪುರುಷ ಮತದಾರರಲ್ಲಿ 70,758 ಹಾಗೂ 1,03,976 ಮಹಿಳಾ ಮತದಾರರಲ್ಲಿ 66,844 ಹಾಗೂ 35 ಇತರೆ ಮತದಾರರ ಪೈಕಿ ಒಬ್ಬರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಗಿಂತಲೂ ಈ ಚುನಾವಣೆಯಲ್ಲಿ ದಾಖಲಾಗಿರುವ ಮತಗಳ ಅಂತರ 11,386. ಇನ್ನು ಶೇಕಡಾವಾರು ವ್ಯತ್ಯಾಸ 0.33. ಈ ಕ್ಷೇತ್ರದಲ್ಲೂ ಇದೇ ಪಕ್ಷ ಲೀಡ್‌ ಪಡೆಯಲಿದೆ ಎಂದು ಹೇಳುವಂತೆಯೇ ಇಲ್ಲ.

ಈ ಬಾರಿಯ ಚುನಾವಣೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ಮತದಾನ ಮಾಡಿದ್ದಾರೆ. ಅದರಲ್ಲೂ ಅಲ್ಪಸಂಖ್ಯಾತ ಸಮುದಾಯದವರು ಅತೀ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿರುವುದರಿಂದ ಸಹಜವಾಗಿ ಕಾಂಗ್ರೆಸ್‌-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಗೆ ಲೀಡ್‌ ದೊರೆಯಲಿದೆ ಎಂಬುದು ಉಭಯ ಪಕ್ಷಗಳ ಮುಖಂಡರ ಲೆಕ್ಕಾಚಾರ.

Advertisement

ದಾವಣಗೆರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅಲೆ ಸಾಕಷ್ಟು ಕೆಲಸ ಮಾಡಿದೆ. ಎಲ್ಲಾ ಕಡೆ ಜನರು ಸ್ವಯಂ ಪ್ರೇರಣೆಯಿಂದ ಮತದಾನ ಮಾಡಿದ್ದಾರೆ. ಮುಖ್ಯವಾಗಿ ಯುವ ಜನಾಂಗ ಹೆಚ್ಚು ಮತದಾನ ಮಾಡಿರುವುದು ಪ್ಲಸ್‌ ಪಾಯಿಂಟ್ ಆಗಲಿದೆ. ಈ ಚುನಾವಣೆಯಲ್ಲಿ ತಮಗೆ ಲೀಡ್‌ ಸಿಗುತ್ತದೆ ಎಂಬುದು ಬಿಜೆಪಿಯ ಪಾಳೆಯದ ಅಂದಾಜು.

2008ರಲ್ಲಿ ಅಸ್ತಿತ್ವಕ್ಕೆ ಬಂದಿರುವ ದಾವಣಗೆರ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಹಿರಿಯ ಕಾಂಗ್ರೆಸ್ಸಿಗ ಶಾಮನೂರು ಶಿವಶಂಕರಪ್ಪ ಸತತ ಮೂರು ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಅದಕ್ಕೂ ಮುನ್ನ ನಡೆದ ಅವಿಭಜಿತ ದಾವಣಗೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲೂ ಗೆದ್ದಿದ್ದ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ನಿಗದಿತ ಮತಬ್ಯಾಂಕ್‌ ಕಾಂಗ್ರೆಸ್‌ ಬೆನ್ನಿಗಿರುವುದು ಜಗಜ್ಜಾಹೀರು. ಇದು ಎಲ್ಲಾ ಲೋಕಸಭಾ ಚುನಾವಣಾ ಫಲಿತಾಂಶದಂತೆ ಈ ಚುನಾವಣೆ ಮೇಲೂ ಪರಿಣಾಮ ಬೀರಲಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್‌ 52,822 ಮತ ಪಡೆದಿದ್ದರು. ಕಾಂಗ್ರೆಸ್‌ನ ಎಸ್‌.ಎಸ್‌. ಮಲ್ಲಿಕಾರ್ಜುನ್‌ 64,295 ಮತ ಗಳಿಸಿದ್ದರು. ಇನ್ನು ಜೆಡಿಎಸ್‌ನ ಮಹಿಮ ಜೆ. ಪಟೇಲ್ 3,760 ಮತ ತಮ್ಮದಾಗಿಸಿಕೊಂಡಿದ್ದರು. ಕ್ಷೇತ್ರದಲ್ಲಿ ಕಾಂಗ್ರೆಸ್‌ ಸದಾ ಲೀಡ್‌ ಪಡೆಯುವುದು ವಾಡಿಕೆ ಎನ್ನುವಂತಾಗಿದೆ. ಆದರೆ, ಈ ಚುನಾವಣೆಯಲ್ಲಿ ಅದಕ್ಕೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಕಮಲ ಪಾಳೆಯ ಭಾರೀ ಕಸರತ್ತು ನಡೆಸಿದೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಂತೆಯೂ ಈ ಕ್ಷೇತ್ರದಲ್ಲೂ ಬೆಟ್ಟಿಂಗ್‌ ಛಾಯೆ ಇಲ್ಲ ಎನ್ನುವಂತಿದೆ.

ಈ ಕ್ಷೇತ್ರದಲ್ಲಿ ಮೈತ್ರಿ ಎಫೆಕ್ಟ್ ಇಲ್ಲ. ಇಲ್ಲಿಯೂ ಮೋದಿ ಅಲೆ ಸಾಕಷ್ಟು ಕೆಲಸ ಮಾಡಿದೆ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದಾರೆ. ಮಲ್ಲಿಕಾರ್ಜುನ್‌ ನಿಲ್ಲುತ್ತಾರೆ ಎಂದಿತ್ತು. ಅವರು ಸ್ಪರ್ಧಿಸದೇ ಇರುವುದು ನಮಗೆ ಶೇ.15 ರಿಂದ 20 ಹೆಚ್ಚು ಮತಗಳನ್ನು ತಂದು ಕೊಟ್ಟಿದೆ. ನಾಲ್ಕನೇ ಬಾರಿಯೂ ಸಿದ್ದೇಶ್ವರ್‌ ಗೆಲ್ಲುತ್ತಾರೆ.
ರಾಜನಹಳ್ಳಿ ಶಿವಕುಮಾರ್‌,ಬಿಜೆಪಿ ಅಧ್ಯಕ್ಷ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮೋದಿ ಅಲೆ ಇಲ್ಲ. ಏನಿದ್ದರೂ ಮೈತ್ರಿಯ ಅಲೆ ಇದೆ. ಯಾವುದೇ ಪಕ್ಷಕ್ಕೆ ಆಗಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸಾಕಷ್ಟು ಜಾಗೃತಿ ಮೂಡಿಸಿದ್ದರ ಪರಿಣಾಮ ಮತದಾರರು ಸ್ವಯಂ ಪ್ರೇರಣೆಯಿಂದ ಮತದಾನ ಮಾಡಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪರ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಕ್ಷೇತ್ರದಲ್ಲಿ 35 ಸಾವಿರಕ್ಕೂ ಹೆಚ್ಚು ಲೀಡ್‌ ಪಡೆಯುವುದಲ್ಲದೆ, ಈ ಚುನಾವಣೆಯನ್ನೂ ಗೆಲ್ಲುತ್ತೇವೆ.
ಅಯೂಬ್‌ ಪೈಲ್ವಾನ್‌,ಕಾಂಗ್ರೆಸ್‌ ಅಧ್ಯಕ್ಷ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರು ತಮ್ಮ ಮೇಲಿದ್ದ ಕಳಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸ್ವಯಂ ಪ್ರೇರಣೆಯಿಂದ ಮತದಾನ ಮಾಡಿದ್ದಾರೆ ಎಂಬುದು ವಿಶೇಷ. ಮತದಾನದ ಮೊದಲಿಗಿಂತಲೂ ಆನಂತರ ಒಳ್ಳೆಯ ವಾತಾವರಣ ಇದೆ. ಇಲ್ಲಿ ಮೋದಿ ಅಲೆ ಇಲ್ಲವೇ ಇಲ್ಲ. ಒಳ ಹೊಡೆತವೂ ಇಲ್ಲ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಗೆಲುವು ನಿಶ್ಚಿತ.
• ಜೆ. ಅಮಾನುಲ್ಲಾಖಾನ್‌,ಜೆಡಿಎಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next