Advertisement

ಅಚ್ಚರಿ ಫಲಿತಾಂಶದ ಕ್ಷೇತ್ರದಲ್ಲಿ ಯಾರಿಗೆ ಲೀಡ್‌?

11:03 AM Apr 27, 2019 | Naveen |

ದಾವಣಗೆರೆ:  ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಮತಕ್ಷೇತ್ರ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 2014 ಮತ್ತು ಈಗಷ್ಟೇ ಮುಗಿದಿರುವ 2019ರ ಚುನಾವಣೆಯಲ್ಲಿನ ಮತದಾನ ಪ್ರಮಾಣದಲ್ಲಿ ಭಾರೀ ವ್ಯತ್ಯಾಸವೇನು ಇಲ್ಲ.

Advertisement

2008ರಲ್ಲಿ ಅಸ್ತಿತ್ವಕ್ಕೆ ಬಂದಿರುವ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 1,21,501 ಪುರುಷರು ಮತ್ತು 1,22,041 ಮಹಿಳೆಯರು ಹಾಗೂ 32 ಇತರೆ ಒಳಗೊಂಡಂತೆ 2,43,574 ಮತದಾರರು ಇದ್ದಾರೆ.

ಕಳೆದ ಏ.23 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ. 65.71 ಮತದಾನ ಆಗಿದೆ. 81,420 ಪುರುಷರು, 78,644 ಮಹಿಳಾ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಒಟ್ಟಾರೆ ಕ್ಷೇತ್ರದ 2,43,574 ಮತದಾರರ ಪೈಕಿ 1,60,064 ಮಂದಿ ತಮ್ಮ ಸಂವಿಧಾನಿಕ ಹಕ್ಕು ಚಲಾಯಿಸಿದ್ದಾರೆ.

2014ರಲ್ಲಿ ನಡೆದ ಚುನಾವಣೆಯಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಶೇ. 65.13 ಮತದಾನ ಆಗಿತ್ತು. 2,26,924 ಮತದಾರರಲ್ಲಿ 1,48,025 ಮತದಾರರರು ಮತದಾನ ಮಾಡಿದ್ದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಎಸ್‌.ಎ. ರವೀಂದ್ರನಾಥ್‌ 81,434 ಮತ ಗಳಿಸಿದ್ದರು. ಕ್ಷೇತ್ರದ ಶಾಸಕರು ಆಗಿದ್ದಂತಹ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ 58,427 ಮತ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದರು.

Advertisement

ಗಮನಾರ್ಹ ವಿಷಯವೆಂದರೆ ಬಹಳ ವರ್ಷಗಳ ನಂತರ 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಬಿಜೆಪಿಯ ಎಸ್‌.ಎ. ರವೀಂದ್ರನಾಥ್‌ ವಿರುದ್ಧ 53 ಸಾವಿರಕ್ಕೂ ಅಧಿಕ ಮತಗಳಲ್ಲಿ ಗೆಲುವು ಸಾಧಿಸಿದ್ದರು. ಒಂದು ವರ್ಷದ ಅಂತರದಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸ್ವ ಕ್ಷೇತ್ರದಲ್ಲಿ ಭಾರೀ ಹಿನ್ನೆಡೆ ಕಂಡಿದ್ದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮತ್ತು ಬಿಜೆಪಿಯ ಎಸ್‌.ಎ. ರವೀಂದ್ರನಾಥ್‌ ನಡೆದ ರೋಚಕ, ಭಾರೀ ಪೈಪೋಟಿಯಲ್ಲಿ ರವೀಂದ್ರನಾಥ್‌ ಅಚ್ಚರಿಯ ಗೆಲುವು ಸಾಧಿಸುವ ಮೂಲಕ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳುವಂತೆ ಮಾಡಿದರು. ಆ ಫಲಿತಾಂಶ ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಉಂಟು ಮಾಡುವ ಲೆಕ್ಕಾಚಾರ ಇದೆ.

ಕಳೆದ ಬಾರಿ ಚುನಾವಣೆಗಿಂತಲೂ ಈ ಬಾರಿ ಚುನಾವಣೆಯಲ್ಲಿ ಮತದಾನ ಮಾಡಿದವರ ಶೇಕಡಾವಾರು ಪ್ರಮಾಣದಲ್ಲಿ ಶೇ. 0.58 ಮಾತ್ರ ವ್ಯತ್ಯಾಸ. ಶೇಕಡಾವಾರುಗಿಂತಲೂ ಮತದಾರರ ಲೆಕ್ಕ ಹಾಕಿದರೆ ಈ ಬಾರಿ 11,979 ಹೆಚ್ಚು ಮತದಾರರು ತಮ್ಮ ಪರಮೋಚ್ಚ ಅಧಿಕಾರ ಚಲಾಯಿಸಿದ್ದಾರೆ. 11,979 ಮತಗಳು ಫಲಿತಾಂಶದ ಲೆಕ್ಕಾಚಾರವನ್ನೇ ಬುಡಮೇಲು ಮಾಡಬಹುದು ಎಂಬುದು ಗಮನಾರ್ಹ!.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಪ್ರಮಾಣದಲ್ಲಿ ಕಳೆದ ಬಾರಿಯ ಚುನಾವಣೆಗಿಂತ ಅಂತಹ ಭಾರೀ ವ್ಯತ್ಯಾಸ ಇಲ್ಲ. ಹಾಗಾಗಿಯೇ ಇದೇ ಪಕ್ಷ ಲೀಡ್‌ ಪಡೆಯುತ್ತದೆ ಎಂದು ಅಂದಾಜಿಸುವುದು ಸುಲಭ ಅಲ್ಲ.

2018ರ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಜೊತೆಗೆ ಹೊಸದಾಗಿ ಸೇರ್ಪಡೆಯಾಗಿರುವ ಯುವ ಮತದಾರರ ಒಲವಿನ ಬಲದ ಆಧಾರದಲ್ಲಿ ಬಿಜೆಪಿಗೆ ಲೀಡ್‌… ದೊರೆಯಲಿದೆ ಎಂಬುದು ಕಮಲ ಪಾಳೆಯದ ಲೆಕ್ಕಾಚಾರ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕಣದಲ್ಲಿರುವ ಕಾರಣಕ್ಕೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜೊತೆಗೆ ಜೆಡಿಎಸ್‌ ಮತಗಳು ಸೇರುವುದರಿಂದ ಮೈತ್ರಿ ಅಭ್ಯರ್ಥಿಗೆ ಲೀಡ್‌ ದೊರೆಯಲಿದೆ ಎಂಬುದು ಮೈತ್ರಿ ಪಾಳೆಯದ ಅಂದಾಜು. ಬಿಜೆಪಿ ಮತ್ತು ಮೈತ್ರಿ ಅಭ್ಯರ್ಥಿಗಳ ಪರ ಏನೇ ಲೆಕ್ಕಾಚಾರ ಇದ್ದರೂ ಅದು ಪಕ್ಕಾ ಆಗುವುದು ಮೇ 23 ರಂದು ಮತ ಎಣಿಕೆಯ ನಂತರವೇ. ಅಂತಹ ಫೈಟ್… ಇಲ್ಲ ಎಂಬ ಕಾರಣಕ್ಕಾಗಿಯೇ ಏನೋ ಬೆಟ್ಟಿಂಗ್‌ ಸದ್ದು ಇಲ್ಲವೇ ಇಲ್ಲ ಎನ್ನುವಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next