Advertisement

ಮಹಿಳಾ ಕಾರ್ಮಿಕರಿಗೆ ಸೌಲಭ್ಯ ದೊರಕಲಿ

01:04 PM May 16, 2019 | Naveen |

ದಾವಣಗೆರೆ: ವಿವಿಧ ಕ್ಷೇತ್ರಗಳಲ್ಲಿ ತಮ್ಮ ಆರ್ಥಿಕ ಸಬಲತೆಗೆ ದುಡಿಯುತ್ತಿರುವ ಮಹಿಳಾ ಕಾರ್ಮಿಕರಿಗೆ ಸುರಕ್ಷತೆ, ಭದ್ರತೆ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಕಾರ್ಮಿಕ ಇಲಾಖೆ ದೊರಕಿಸಬೇಕು ಎಂದು 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಈ. ಚಂದ್ರಕಲಾ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ ಮಯೂರ ಆಪರೆಲ್ಸ್ನಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಮಯೂರ ಆಪರೆಲ್ಸ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಮಿಕ ಕಾನೂನುಗಳು ಹಾಗೂ ಸರಕು ವಾಹನದಲ್ಲಿ ಕಾರ್ಮಿಕರ ಸಾಗಾಣಿಕೆ ತಡೆ ಕುರಿತು ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರ ದುಡಿಮೆಯೇ ಇಂದು ಮೂಲಭೂತ ಸೌಲಭ್ಯಗಳ ಸ್ಥಾಪನೆಗೆ ಕಾರಣವಾಗಿದೆ. ಆದರೆ, ಅಂತಹ ಮಹಿಳಾ ಕಾರ್ಮಿಕ ವರ್ಗಕ್ಕೆ ಅಗತ್ಯ ರಕ್ಷಣೆ, ಭದ್ರತೆ, ಸೌಲಭ್ಯ ದೊರಕುತ್ತಿಲ್ಲ. ಈ ಧೋರಣೆ ಬದಲಾಗಬೇಕು.

ಮಹಿಳಾ ಕಾರ್ಮಿಕರು ಒಗ್ಗಟ್ಟಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು. ಕಾರ್ಮಿಕ ಇಲಾಖೆಯು ಮಹಿಳಾ ಕಾರ್ಮಿಕರಿಗೆ ಕಾನೂನಡಿ ದೊರಕಬೇಕಾದ ಸೌಲಭ್ಯ ಕಲ್ಪಿಸಬೇಕು ಎಂದರು.

ಜನತೆ ಕಾನೂನು ಚೌಕಟ್ಟಿನಲ್ಲಿ ನಡೆದಾಗ ಅವರಿಗೆ ಕಾನೂನು ನೆರವಾಗುತ್ತದೆ. ಇಂದಿನ ದಿನಗಳಲ್ಲಿ ಮಹಿಳಾ ಕಾರ್ಮಿಕರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಆರ್ಥಿಕ ಸಬಲತೆಗೆ ಹಾಗೂ ಕುಟುಂಬ ನಿರ್ವಹಣೆಗೆ ದುಡಿಯುತ್ತಿದ್ದು, ಅವರಿಗೆ ನ್ಯಾಯಯುತವಾಗಿ ಸೌಲಭ್ಯ ದೊರೆಯಬೇಕು ಎಂದು ಹೇಳಿದರು. ಕಾರ್ಮಿಕರು ತಮ್ಮ ಕೆಲಸಗಳಿಗೆ ಹೋಗುವ ಸಂದರ್ಭದಲ್ಲಿ ಪ್ರಯಾಣಿಕರಿಗಾಗಿ ಇರುವ ವಾಹನಗಳಲ್ಲಿ ಪ್ರಯಾಣಿಸಬೇಕು. ಸರಕು ವಾಹನಗಳಲ್ಲಿ ಪ್ರಯಾಣಿಸುವುದು ಕಾನೂನು ಬಾಹಿರವಾಗಿದ್ದು, ಸರಕು ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಆಗುವ ಅವಘಡ, ಅಪಘಾತಗಳಿಗೆ ಕಾನೂನಿನಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

Advertisement

ಮಹಿಳೆಯರಿಂದು ಕೈಗಾರಿಕೆ, ಆಸ್ಪತ್ರೆ, ಶಾಲಾ-ಕಾಲೇಜು, ಕಾರ್ಖಾನೆ, ಗಣಿ ಮತ್ತು ಚಹಾ ತೋಟಗಳಲ್ಲಿ ದುಡಿಯುತ್ತಿದ್ದು, ಇವರಲ್ಲಿ ಒಗ್ಗಟ್ಟು, ಸಂಘಟನೆ ಬಲವಾಗಿರುವ ಶ್ರಮಶಕ್ತಿಯ ಫಲವಾಗಿ ಪ್ರಯೋಜನಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಮಹಮದ್‌ ಜಹೀರ್‌ ಬಾಷಾ ಮಾತನಾಡಿ, ಕಾರ್ಮಿಕರು ತಮ್ಮ ಕಾರ್ಖಾನೆ ಸೇರಿದಂತೆ ಬೇರೆ ಕಡೆ ಕೆಲಸ ಮಾಡುವ ಸ್ಥಳಗಳಲ್ಲಿ ತಮ್ಮ ಸುರಕ್ಷತೆಗಾಗಿ ಇರುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ತಮಗೆ ಬರಬೇಕಾದ ನ್ಯಾಯಯುತ ವೇತನ, ಪಿಎಫ್‌, ಬೋನಸ್‌ ಸೇರಿದಂತೆ ಇತರೆ ಸೇವೆಗಳ ಬಗ್ಗೆ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಬೇಕಾದುದು ಅಗತ್ಯ ಎಂದರಲ್ಲದೇ, ಮಹಿಳಾ ಕಾರ್ಮಿಕರಿಗಾಗಿ ಅಗತ್ಯವಿರುವ ವಾಹನ ಸೌಲಭ್ಯ ಕಲ್ಪಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೊಂದಿಗೆ ಮಾತುಕತೆ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್‌ಕುಮಾರ್‌ ಮಾತನಾಡಿ, ಕಾರ್ಮಿಕರಿಗಾಗಿ 45 ಕಾನೂನುಗಳು ಜಾರಿಗೆ ಬಂದಿದ್ದು, ಅಗತ್ಯ ಸೌಲಭ್ಯ, ಪರಿಹಾರ ದೊರಕಿಸುವಲ್ಲಿ ನೆರವಾಗುತ್ತಿವೆ. ದೇಶದ ಅಭಿವೃದ್ಧಿ, ಉತ್ಪಾದನೆಯಲ್ಲಿ ಮಹಿಳಾ ಕಾರ್ಮಿಕರ ಶ್ರಮ ಅಪಾರವಾಗಿದೆೆ. ದೇಶ ಕಾರ್ಮಿಕರು ಮತ್ತು ರೈತರಿಂದ ಮಾತ್ರ ಮುನ್ನಡೆಯಲು ಸಾಧ್ಯಎಂದರು.

ಇಂದು ಕಾರ್ಮಿಕ ಕ್ಷೇತ್ರ ಬಹುಪಾಲು ಅಸಂಘಟಿತರಿಂದಲೇ ಆವೃತಗೊಂಡಿದೆ. ಇಂದು ಸಂಘಟಿತ ಕಾರ್ಮಿಕ ವರ್ಗವು ತಂತ್ರಜ್ಞಾನ, ಬದಲಾಗುತ್ತಿರುವ ಉದ್ಯೋಗ ಲಕ್ಷಣ, ಹೊಸ ಆರ್ಥಿಕ ನೀತಿ, ಕಾರ್ಮಿಕ ಕಾನೂನು ಮಾರ್ಪಾಡಿನಿಂದ ಸವಾಲುಗಳನ್ನು ಎದುರಿಸುತ್ತಿದೆ. ಇವುಗಳ ಬಗ್ಗೆ ಕಾರ್ಮಿಕ ವರ್ಗಕ್ಕೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಲ್ಮಾಕ್ಸ್‌ ಅವರು ಶ್ರಮಿಕ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಹೋರಾಡಿದಂತವರು. ಅವರ ಚಿಂತನೆ ಫಲವಾಗಿ ದೇಶದಲ್ಲಿ ಕಾರ್ಮಿಕರ ಹೋರಾಟ ರೂಪುಗೊಂಡಿದೆ. ಆದರೆ, ಕಾನೂನು ಸುಧಾರಣೆ ಹೆಸರಿನಲ್ಲಿ ಇಡೀ ದೇಶವನ್ನೇ ಖಾಸಗೀಕರಿಸುವಂತಹ ಆರ್ಥಿಕ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾದೇಶಿಕ ಸಾರಿಗೆ ಇಲಾಖೆಯ ಸಾರಿಗೆ ನಿರೀಕ್ಷಕ ಮಹಮ್ಮದ್‌ ಖಾಲೀದ್‌ಸಾಬ್‌, ಸರಕು ವಾಹನದಲ್ಲಿ ಕಾರ್ಮಿಕರ ಸಾಗಾಣಿಕೆ ತಡೆ ಕುರಿತು ಮಾತನಾಡಿದರು. ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂ ಸಾಬ್‌, ಕಾರ್ಮಿಕರ ನಿರೀಕ್ಷಕರಾದ ಮುಮ್ತಾಜ್‌ ಬೇಗಂ, ವೇಮಣ್ಣ, ಯೋಜನಾ ನಿರ್ದೇಶಕ ಪ್ರಸನ್ನಕುಮಾರ್‌ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೆಎಸ್‌ಆರ್‌ಟಿಸಿಬಸ್‌ ಸೌಲಭ್ಯ ಕಲ್ಪಿಸಿ
ಕರೂರು ಇಂಡಸ್ಟ್ರೀಯಲ್ ಪ್ರದೇಶದಲ್ಲಿ ಈಗ ಸಾಕಷ್ಟು ಗಾರ್ಮೆಂಟ್ಸ್‌ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಜಿಲ್ಲೆಯ ವಿವಿಧೆಡೆಯಿಂದ ಮಹಿಳಾ ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ಅವರಿಗೆ ಬರಲು ಸುರಕ್ಷಿತ ಸಾರಿಗೆ ವ್ಯವಸ್ಥೆಯಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳಾ ಕಾರ್ಮಿಕರು ಸುರಕ್ಷಿತವಾಗಿ ಗಾರ್ಮೆಂಟ್ಸ್‌ ತಲುಪಿ, ಪುನಃ ತಮ್ಮ ಊರಿಗೆ ಮರಳಲು ಸೂಕ್ತ ಕೆಎಸ್‌ಆರ್‌ಟಿಸಿ ಸಾರಿಗೆ ಸೌಲಭ್ಯ ಒದಗಿಸಲು ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಅನುಗ್ರಹ ಗಾರ್ಮೆಂಟ್ಸ್‌ ಮಾಲೀಕ ರಘು ಮೊಸಳೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಕಾರ್ಮಿಕರು ಸಂಘಟಿತರಾಗಿ
ದೇಶದ ಒಟ್ಟು ರಾಷ್ಟ್ರೀಯ ಉತ್ಪಾದನೆಯಲ್ಲಿ ಸಂಘಟಿತ ಕಾರ್ಮಿಕರ ಕೊಡುಗೆ ಶೇ. 45ರಷ್ಟಿದೆ. ಸಮೀಕ್ಷೆಗಳ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕಾರ್ಮಿಕರ ಸಂಖ್ಯೆ ಶೇ. 35ರಷ್ಟಿದ್ದರೂ, ಸಂಘಟಿತ ಕಾರ್ಮಿಕರ ಸಂಖ್ಯೆ ಕೇವಲ ಶೇ. 3ರಷ್ಟಿದೆ. ನಗರ ಪ್ರದೇಶಗಳಲ್ಲಿ ಇರುವ ಎಲ್ಲಾ ಕಾರ್ಮಿಕರೂ ಕೂಡ ಸಂಘಟಿತರಾಗಿಲ್ಲ. ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವ ಮೂಲಕ ಕಾರ್ಮಿಕ ವರ್ಗ ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಗುರಿ ತಲುಪಬೇಕಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್‌ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next