Advertisement

ಜಲ ಸಂರಕ್ಷಣೆಯೇ ಇಂದಿನ ತುರ್ತು ಕಾರ್ಯ

03:15 PM Jul 24, 2019 | Naveen |

ದಾವಣಗೆರೆ: ನೀರಿಲ್ಲದೆ ಜೀವನವಿಲ್ಲ. ಜಲ ಸಂರಕ್ಷಣೆ ಪ್ರಸ್ತುತದ ತುರ್ತು ಕಾರ್ಯವಾಗಿದ್ದು, ಸಾಂಪ್ರದಾಯಿಕ ಜಲಮೂಲಗಳನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎಂದು ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಹೇಳಿದ್ದಾರೆ.

Advertisement

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಮಂಗಳವಾರ ಜಲಶಕ್ತಿ ಅಭಿಯಾನ ಅನುಷ್ಠಾನ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲಶಕ್ತಿ ಅಭಿಯಾನವು ಐದು ಮುಖ್ಯ ಕಾರ್ಯಕ್ರಮಗಳಾದ ನೀರು ಸಂರಕ್ಷಣೆ ಮತ್ತು ಮಳೆಕೊಯ್ಲು, ಸಾಂಪ್ರದಾಯಿಕ ನೀರಿನ ಮೂಲಗಳ ನವೀಕರಣ, ನೀರಿನ ಮರುಬಳಕೆ ಮತ್ತು ಮರುಪೂರಣ, ಜಲಾನಯನ ಅಭಿವೃದ್ಧಿ ಹಾಗೂ ಅರಣ್ಯೀಕರಣ ಕುರಿತು ಜಿಲ್ಲೆಯಲ್ಲಿ ಸಾಧಿಸಬಹುದಾದಂತಹ ಪ್ರಗತಿ ಕುರಿತು ಇನ್ನು ಮೂರು ದಿನಗಳ ಕ್ರಿಯಾಯೋಜನೆ ರಚಿಸಬೇಕು. ಸಂಬಂಧಿಸಿದ ಇಲಾಖೆಗಳು ತಾವು ಸಾಧಿಸಿದ ಪ್ರಗತಿ ಕುರಿತು ಕಡ್ಡಾಯವಾಗಿ ಜಲಶಕ್ತಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದರು.

ಜಲ ಸಂರಕ್ಷಣೆ ವಿಚಾರದಲ್ಲಿ ನಮ್ಮ ರಾಜ್ಯ ಉತ್ತಮ ಸ್ಥಾನದಲ್ಲಿದೆ. ಟಾಪ್‌ 20 ಜಿಲ್ಲೆಯಲ್ಲಿ ದಾವಣಗೆರೆ 12ನೇ ಸ್ಥಾನದಲ್ಲಿದೆ. ಜಿಲ್ಲೆಯ ಚನ್ನಗಿರಿ, ಜಗಳೂರು ಮತ್ತು ದಾವಣಗೆರೆ ತಾಲ್ಲೂಕುಗಳನ್ನು ಮೊದಲನೇ ಹಂತದಲ್ಲಿ ಈ ಅಭಿಯಾನಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು, ಇನ್ನು ಮೂರು ತಿಂಗಳ ಒಳಗೆ ಯೋಜನೆ ರೂಪುಗೊಂಡು, ಅದರ ಪ್ರಕಾರ ಕೆಲಸಗಳು ಪೂರ್ಣಗೊಳ್ಳಬೇಕಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಪ್ರತಿ ಜಿಲ್ಲೆಗೆ ಅಧಿಕಾರಿಗಳನ್ನು ನಿಯೋಜಿಸಿದ್ದು, ಅವರು ಮೊದಲ ಭೇಟಿಯಲ್ಲಿ ಸ್ಥಳಗಳನ್ನು ಗುರುತಿಸಿ ಆಗಬೇಕಾದ ಕೆಲಸಗಳ ಬಗ್ಗೆ ಸೂಚನೆ ನೀಡುವರು. ನಂತರ ಕಾರ್ಯ ಪ್ರಗತಿ ಹಾಗೂ ಸಾಧಿಸಿದ ಕೆಲಸಗಳ ಬಗ್ಗೆ ಪರಿಶೀಲಿಸುವರು.

ಈಗಾಗಲೇ ತಡವಾಗಿದೆ. ಆದ್ದರಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜಲಸಂರಕ್ಷಣೆ ಕುರಿತು ಕ್ರಿಯಾಯೋಜನೆ ರೂಪಿಸಬೇಕು. ಈ ಅಭಿಯಾನದಡಿ ಪ್ರತ್ಯೇಕ ಅನುದಾನ ನೀಡಲಾಗಿಲ್ಲ. ಆದ್ದರಿಂದ ತಮ್ಮ ಇಲಾಖೆಯ ಅನುದಾನದಲ್ಲೇ ಹೊಂದಿಸಿಕೊಂಡು ಕಾರ್ಯ ನಿರ್ವಹಿಸಬೇಕು. ದಾನಿಗಳು ದೊರೆತರೆ ಅವರಿಂದ ನೆರವು ಪಡೆಯಬಹುದು ಎಂದು ತಿಳಿಸಿದರು.

ಸರ್ಕಾರಿ ಕಟ್ಟಡಗಳಲ್ಲಿ ಮಳೆಕೊಯ್ಲು ಹಾಗೂ ಅರಣ್ಯೀಕರಣವನ್ನು ವ್ಯಾಪಕವಾಗಿ ಕೈಗೊಳ್ಳಬೇಕು. ಕಾರ್ಯವೆಸಗುವ ಮುನ್ನ ಮತ್ತು ಕಾರ್ಯ ಸಾಧನೆಯ ನಂತರ ಛಾಯಾಚಿತ್ರಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ತಿಳಿಸಿದರು.

Advertisement

ಜಲಶಕ್ತಿ ಅಭಿಯಾನದಡಿ ಜಿಲ್ಲೆಯಲ್ಲಿ ಸಾಧಿಸಬಹುದಾದ ಪ್ರಗತಿ ಕುರಿತು ಪಿಪಿಟಿ ಪ್ರದರ್ಶನದ ಮೂಲಕ ವಿವರಿಸಿದ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ವಿಶ್ವದ ಜನಸಂಖ್ಯೆಯಲ್ಲಿ ಶೇ.17ರಷ್ಟು ಭಾರತೀಯರಿದ್ದಾರೆ. ಆದರೆ ಶೇ.8ರಷ್ಟು ಮಾತ್ರ ಮಳೆ ನೀರು ಬಳಕೆಯಾಗುತ್ತಿದೆ. ಇನ್ನು ಶೇ.92ರಷ್ಟು ಪೋಲಾಗುತ್ತಿದೆ. ಮಳೆನೀರನ್ನು ಹೇಗೆ ಸಂರಕ್ಷಿಸಬೇಕು, ಜಲಸಂರಕ್ಷಣೆ ಏಕೆ ಮತ್ತು ಹೇಗೆ ಮಾಡಬೇಕೆಂಬ ಬಗ್ಗೆ ವಿವರಿಸಿದರು.

ಜಲ ಸಂರಕ್ಷಣೆ ಮತ್ತು ನೀರು ಮಿತಬಳಕೆಗೆ ಆದ್ಯತೆ ನೀಡಬೇಕು. ಬೋರ್‌ವೆಲ್ ರೀಚಾರ್ಜ್‌, ನೀರಿನ ಮರುಬಳಕೆ, ಸರ್ಕಾರಿ ಜಾಗ-ಕಚೇರಿ, ಶಾಲಾ ಕಾಲೇಜು, ಆಸ್ಪತ್ರೆಗಳಲ್ಲಿ ಗಿಡ ನೆಡುವಿಕೆ, ಮನೆಗಳಲ್ಲಿ ಮಳೆಯಕೊಯ್ಲು ಕೈಗೊಳ್ಳಬೇಕು ಎಂದು ಹೇಳಿದರು.

ಶಾಲೆಗಳಲ್ಲಿ ಕಾರ್ಯಸ್ಥಗಿತವಾಗಿರುವ ಮಳೆಕೊಯ್ಲಿಗೆ ಚಾಲನೆ ನೀಡಲು ಡಿಡಿಪಿಐ ಕ್ರಿಯಾಯೋಜನೆ ತಯಾರಿಸಬೇಕು. ಸರ್ಕಾರಿ ಭೂಮಿಗಳಲ್ಲಿ ಅರಣ್ಯೀಕರಣ ಹಾಗೂ ಮುಖ್ಯವಾಗಿ ಐಇಸಿ ಚಟುವಟಿಕೆ ಕೈಗೊಳ್ಳಬೇಕು. ಯಾವುದೇ ಕೆಲಸಗಳು ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಲಸಂರಕ್ಷಣೆಗೆ ಕೈಜೋಡಿಸಬೇಕಿದೆ ಎಂದು ಹೇಳಿದರು.

ಡಿಯುಡಿಸಿ ಯೋಜನಾ ನಿರ್ದೇಶಕಿ ನಜ್ಮಾ, ಜಿಪಂ ಸಹಾಯಕ ಯೋಜನಾಅಧಿಕಾರಿ ಶಶಿಧರ್‌, ಡಿಎಚ್ಓ ಡಾ|ರಾಘವೇಂದ್ರಸ್ವಾಮಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯ್ಕ, ಡಿಡಿಪಿಐ ಸಿ.ಆರ್‌.ಪರಮೇಶ್ವರಪ್ಪ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next