Advertisement

ಭೂಮಾಪಕರ ಮುಷ್ಕರಕ್ಕೆ ಬೆಂಬಲ

10:01 AM Aug 03, 2019 | Naveen |

ದಾವಣಗೆರೆ: ರಾಜ್ಯದ ಭೂಮಾಪಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸೆ.4 ರಂದು ಬೆಂಗಳೂರಿನ ಕೆ.ಆರ್‌. ವೃತ್ತದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಜಿಲ್ಲಾ ಸರ್ಕಾರಿ ನೌಕರರ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಬಿ. ಪಾಲಾಕ್ಷಿ ತಿಳಿಸಿದ್ದಾರೆ.

Advertisement

ಮೂಲಭೂತ ಸೌಲಭ್ಯದ ಕೊರತೆಯ ನಡುವೆ ಅಗಾಧ ಕೆಲಸದ ಒತ್ತಡದಿಂದ ರಾಜ್ಯದ್ಯಾಂತ ಭೂಮಾಪಕರು ನರಕಯಾತನೆ ಅನುಭವಿಸುತ್ತಿದ್ದಾರೆ. ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ರಾಜ್ಯ ಸಂಘ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಘ ಬೆಂಬಲ ನೀಡುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉಡುಪಿ ಜಿಲ್ಲೆಯ ಅಜ್ಜರಕಾಡು ಪ್ರದೇಶದಲ್ಲಿ ಬ್ರಹ್ಮಾವರ ಸರ್ವೇ ಕಚೇರಿಯ ಭೂಮಾಪಕ ಅಶೋಕ ಭೆೈರವಾಡಗಿ ಕಚೇರಿ ಅಧಿಕಾರಿಗಳ ಒತ್ತಡದಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಒಳಗಾಗಿದ್ದಾರೆ. ಅವರ ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಭೂಮಾಪಕರು ಪ್ರತಿ ಮಾಹೆ 30 ಅಳತೆ ಪ್ರಕರಣ ಇತ್ಯರ್ಥ ಮಾಡಲೇಬೇಕು. ರಜೆ, ಸ್ವಂತ ರಜೆ ಯಾವುದೂ ಲೆಕ್ಕವನ್ನು ತೆಗೆದುಕೊಳ್ಳುವುದೇ ಇಲ್ಲ. ತಿಂಗಳಿಗೆ 30 ಕಡತ ವಿಲೇವಾರಿ ಮಾಡುವುದು ಬಹಳ ಕಠಿಣ. ಅನೇಕ ಕಚೇರಿಯಲ್ಲಿ ಭೂಮಾಪಕರಿಗೆ ಕುಳಿತುಕೊಳ್ಳಲಿಕ್ಕೆ ಜಾಗವೇ ಇಲ್ಲ. ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಇಲ್ಲ. 1863ರಲ್ಲಿ ಬ್ರಿಟಿಷರ ಕಾಲದಲ್ಲಿ ತಯಾರಾದ ದಾಖಲೆ ಹುಡುಕಿ, ಅಳತೆ ಕೆಲಸ ಮಾಡುವುದು. ಅದನ್ನ ಅಪ್‌ಲೋಡ್‌ ಮಾಡುವುದು ಕಷ್ಟವಾಗುತ್ತದೆ. ಸರ್ಕಾರ ಈ ಎಲ್ಲಾ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಭೂಮಾಪಕರ ಸಂಘದ ಕಾರ್ಯದರ್ಶಿ ಡಾ| ಎಸ್‌. ರಂಗನಾಥ್‌ ಮಾತನಾಡಿ, ಪ್ರತಿ ತಿಂಗಳು ಆಟೋಮ್ಯಾಟೆಡ್‌ ಫೈಲ್ ಸಿಸ್ಟಂ ಮೂಲಕ ಎಲ್ಲಾ ಭೂಮಾಪಕರಿಗೆ ಪ್ರತಿ ತಿಂಗಳು 30 ಕಡತ ನೀಡಲಾಗುತ್ತದೆ. ಅಳತೆ ಮಾಡುವ ಒಂದು ವಾರದ ಮುನ್ನ ರೈತರಿಗೆ ನೋಟಿಸ್‌ ನೀಡಬೇಕು. ಆದರೆ, ಬಾಂದ್‌ ಜವಾನರ ಕೊರತೆಯಿಂದ ಅದು ಸಾಧ್ಯ ಆಗುವುದೇ ಇಲ್ಲ. ಇನ್ನು ಅಳತೆ ಮಾಡಿ, ಅಂದೇ ಕಂಪ್ಯೂಟರ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಕಚೇರಿಯಲ್ಲಿ ಯಾವುದೇ ಮೂಲಭೂತ ಸೌಲಭ್ಯವೇ ಇಲ್ಲ. ಅಂತಹ ಪರಿಸ್ಥಿತಿ ನಡುವೆ ಸದಾ ಒತ್ತಡದಲ್ಲೇ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

Advertisement

ಯಾವ ಕಡತಗಳು ಬರುತ್ತದೋ ಗೊತ್ತೇ ಆಗುವುದಿಲ್ಲ. ಆ ಕಡತಕ್ಕೆ ಸಂಬಂಧಿಸಿದ ದಾಖಲೆ ಹುಡುಕಿ, ರೈತರ ಗ್ರಾಮ, ಜಮೀನು ಹುಡುಕಿ, ಹೋಗಿ ಅಳತೆ ಮಾಡುವ ಹೊತ್ತಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಏನೇ ಸಮಸ್ಯೆಇದ್ದರೂ ಅಂದೇ ಅಪ್‌ಲೋಡ್‌ ಮಾಡಬೇಕು. ಇಲ್ಲದೇ ಹೋದರೆ ಅಮಾನತು, ಇತರೆ ಶಿಕ್ಷೆ ಖಾಯಂ. ಹಾಗಾಗಿಯೇ ಅನೇಕ ಭೂಮಾಪಕರು ಒತ್ತಡಕ್ಕೆ ಸಿಲುಕಿ, ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ತಿಳಿಸಿದರು.

ಭೂಮಾಪಕರು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಸರ್ಕಾರದ ಗಮನ ಸೆಳೆದು, ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಡಾ| ಡಿ. ಉಮೇಶ್‌, ಎನ್‌. ಮಾರುತಿ, ಬಿ. ಶಿವಣ್ಣ, ಆರ್‌. ರವಿ, ತಿಪ್ಪೇಸ್ವಾಮಿ, ತಮ್ಮಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next