Advertisement

ಅಂಗವಿಕಲರ ಬಗೆಗಿನ ದೃಷ್ಟಿಕೋನ ಬದಲಾಗಲಿ

01:19 PM Jun 16, 2019 | Naveen |

ದಾವಣಗೆರೆ: ಅಂಗವಿಕಲರನ್ನು ನೋಡುವ ದೃಷ್ಟಿಕೋನ ಮೊದಲು ಬದಲಾಗಬೇಕು. ಅವರ ಬಗ್ಗೆ ಸಾಮಾನ್ಯ ಅರಿವು ಮೂಡಿಸುವ ಮತ್ತು ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಸಮಾಜದ ಪ್ರತಿಯೊಬ್ಬರ ಪಾತ್ರವಿದೆ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ವಿ.ಎಸ್‌. ಬಸವರಾಜು ಹೇಳಿದ್ದಾರೆ.

Advertisement

ಅಂಗವಿಕಲ ವ್ಯಕ್ತಿಗಳ ಅಧಿನಿಯಮ-2016ರ ಪರಿಣಾಮಕಾರಿ ಅನುಷ್ಠಾನ ಮತ್ತು ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಶನಿವಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಹಿಂದೆ ಅಂಗವಿಕಲರಿಗೆ ಒಂದಿಷ್ಟು ಪಿಂಚಣಿ, ವಿದ್ಯಾರ್ಥಿ ವೇತನ, ಜೊತೆಗೆ ಸ್ವಲ್ಪ ಅನುಕಂಪ ತೋರಿಸಿದರೆ ಸಾಕು ಎಂಬ ಮನೋಭಾವ ಇತ್ತು. ಆದರೆ , ದೃಷ್ಟಿಕೋನ ಇಂದು ಬದಲಾಗಬೇಕಿದೆ ಎಂದರು.

ಎಲ್ಲ ಮೂಲಭೂತ ಸೌಕರ್ಯಗಳು ಅವರ ಹಕ್ಕಾಗಿದ್ದು, ಈ ನಿಟ್ಟಿನಲ್ಲಿ ಸಮಾಜ, ಸರ್ಕಾರ, ವಿವಿಧ ಸಂಸ್ಥೆಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ತಯಾರಿ ನಡೆಸಿಕೊಂಡು ಅವುಗಳನ್ನು ಅವರಿಗೆ ಒದಗಿಸಬೇಕಿದೆ ಎಂದರು.

ಅಂಗವಿಕಲರಿಗೆ ಅಗತ್ಯ ಸೌಕರ್ಯ ಹಾಗೂ ಅವುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಸಮಾಜದಲ್ಲಿ ಇನ್ನೂ ಅರಿವಿನ ಕೊರತೆ ಇದೆ. ಅವರ ಹಕ್ಕುಗಳನ್ನು ನೀಡುವಲ್ಲಿ ಮೊದಲು ಸಾರ್ವಜನಿಕ ತಿಳಿವಳಿಕೆ ಹೆಚ್ಚಬೇಕಿದೆ. ಇದಕ್ಕೆ ಸರ್ಕಾರ, ಸಮಾಜ ಹಾಗೂ ಸಂಘ-ಸಂಸ್ತೆಗಳ ಸಹಕಾರ ಅತ್ಯವಶ್ಯಕ ಎಂದು ಅವರು ಹೇಳಿದರು.

ದಾವಣಗೆರೆ ವಿನೋಬನಗರದ ಚಿಗಟೇರಿ ವೀರಭದ್ರಪ್ಪ ಮಾದರಿ ಶಾಲೆಯಲ್ಲೇ 23 ಅಂಗವಿಕಲರಿದ್ದು, ಅವರಿಗೆ ವಿಶೇಷ ಥೆರಪಿ ಸೌಲಭ್ಯ ಇದೆ. ಕಳೆದ ಸಾಲಿನಲ್ಲಿ ಈ ಶಾಲೆಯ ಶ್ರವಣದೋಷದ ಮಗು ಉತ್ತಮ ಫಲಿತಾಂಶ ಪಡೆದಿದೆ. ನಗರದಲ್ಲಿ ಈ ರೀತಿಯ 15 ಮಾದರಿ ಶಾಲೆಗಳಿವೆ. ಎಡಿಪಿ ಸಂಸ್ಥೆಯವರು ಸಹ ಅಂಗವಿಕಲರ ಅಭಿವೃದ್ಧಿಗೆ ಸಹರಿಸಿದ್ದಾರೆ. ಈ ರೀತಿಯ ಸಮನ್ವಯ ಹಾಗೂ ಗುಣಮಟ್ಟದ ಶಿಕ್ಷಣ ಎಲ್ಲೆಡೆ ಲಭ್ಯವಾದಲ್ಲಿ ಬದಲಾವಣೆ ಸಾಧ್ಯ ಎಂದು ತಿಳಿಸಿದರು.

Advertisement

5-6 ವರ್ಷಗಳ ಹಿಂದೆ ದಾವಣಗೆರೆಯ ಶ್ರವಣದೋಷದ ಮಗು ರಚಿಸಿದ ಹುಲಿಯ ಚಿತ್ರವನ್ನು ಅಂಚೆ ಇಲಾಖೆಯು ಸ್ಟಾ ್ಯಂಪ್‌ ಆಗಿ ಬಿಡುಗಡೆಗೊಳಿಸಿದೆ. ಈ ಬಾಲಕ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇದೊಂದು ರಾಷ್ಟ್ರಮಟ್ಟದ ಸಾಧನೆಯಾಗಿದ್ದು, ಇಂತಹ ಪ್ರತಿಭೆ ಎಲ್ಲ ಅಂಗವಿಕಲ ಮಕ್ಕಳಲ್ಲೂ ಇದೆ. ಅದನ್ನು ನಾವು ಗುರುತಿಸಿ, ಪ್ರೋತ್ಸಾಹಿಸಿದಲ್ಲಿ ಬದಲಾವಣೆ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಪ್ರತಿ ಅಂಗವಿಕಲ ವ್ಯಕ್ತಿ /ಮಗುವಿನ ಅವಶ್ಯಕತೆಗೆ ಪೂರಕವಾದ ಯೋಜನೆ ರೂಪಿಸಬೇಕು. ಎಲ್ಲರಿಗೂ ಒಂದೇ ರೀತಿಯ ವ್ಹೀಲ್ಚೇರ್‌, ಪರಿಕರ ನೀಡಿದರೆ ಆಗದು. ಜಿಲ್ಲೆಯಲ್ಲಿ ನೀಡಲಾದ ಯೋಜನೆಗಳ ಪುನರ್‌ ರೂಪಿಸಲು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪ್ರಮುಖವಾಗಿ ಅಂಕಿ-ಅಂಶಗಳ ಸುಧಾರಣೆ ಆಗಬೇಕಿದೆ. ಅವು ನಿಖರವಾಗಿದ್ದಲ್ಲಿ ಸೂಕ್ತ ಯೋಜನೆ ಸಿದ್ಧಪಡಿಸಲು ಸಹಕಾರಿಯಾಗಲಿದೆ ಎಂದು ಆಯುಕ್ತರು ಹೇಳಿದರು.

ಅಂಗವಿಕಲ ವ್ಯಕ್ತಿಗಳ ಅವಶ್ಯಕತೆಗನುಗುಣವಾದ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಚಿಂತನೆ ಆಗಬೇಕು. ಅಂಗವಿಕಲರ ಪುನರ್ವಸತಿಗಾಗಿ ದೇವರಾಜ ಅರಸು ಬಡಾವಣೆಯಲ್ಲಿ ಸಂಯುಕ್ತ ಪ್ರಾದೇಶಿಕ ಕೇಂದ್ರ (ಕಾಂಪೋಸಿಟ್ ರೀಜನಲ್ ಸೆಂಟರ್‌) ಇದೆ. ಅಲ್ಲಿ 19 ಅನುಭವಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈ ಕೇಂದ್ರದಲ್ಲಿ ಇನ್ನಷ್ಟು ಸೌಲಭ್ಯ ಕಲ್ಪಿಸಲು ನಾಗನೂರಿನಲ್ಲಿ 7.5 ಎಕರೆ ಜಾಗ ಮಂಜೂರಾಗಿದೆ. ಕೇಂದ್ರದಲ್ಲಿ ಸಕಲ ಸೌಲಭ್ಯ ಒದಗಿಸಲು 60 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಆ ಕೇಂದ್ರದಿಂದ ಜಿಲ್ಲೆಗೆ ಮಾತ್ರವಲ್ಲ, ಸುತ್ತಮುತ್ತಲಿನ ಪ್ರದೇಶಗಳ ಅಂಗವಿಕಲರಿಗೂ ಸಹಕಾರಿಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಸೌಲಭ್ಯ ವಂಚಿತರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಆಸ್ಪತ್ರೆಗಳಲ್ಲಿ ವೈದ್ಯರು ಅಥವಾ ಇತರೆ ಅಧಿಕಾರಿಗಳು ಸೌಲಭ್ಯ ನೀಡುವಲ್ಲಿ ವಂಚನೆ, ವಿಳಂಬ ತೋರಿದಲ್ಲಿ ಆ ಬಗ್ಗೆ ಲಿಖೀತ ರೂಪದಲ್ಲಿ ತಮಗೆ ನೀಡಿದರೆ ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಹಿಮೋಫೀಲಿಯಾ ರೋಗಿಗಳು ಸ್ವಸಹಾಯ ಗುಂಪು ರಚಿಸಿಕೊಂಡರೆ ಸಹಕಾರಿಯಾಗಲಿದೆ ಎಂದು ಹೇಳಿದರು.

ರಾಜ್ಯಾದ್ಯಂತ 2016ರ ಅಧಿನಿಯಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರವಾಸ ಕೈಗೊಂಡಿದ್ದು, ದಾವಣಗೆರೆ 24ನೇ ಜಿಲ್ಲೆಯಾಗಿದೆ. 2 ತಿಂಗಳಲ್ಲಿ ಬಾಕಿ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಳ್ಳಲಾಗುವುದು. ಅಂಗವಿಕಲರ ಕುರಿತಾದ ವರದಿ, ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸೌಲಭ್ಯ ನೀಡುವಲ್ಲಿ ಲೋಪ, ವಿಳಂಬ ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಶಶಿಧರ್‌, ಜಿಲ್ಲೆಯಲ್ಲಿ ಅಂಗವಿಕಲರ ಸಹಾಯವಾಣಿ (08192 263939) ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಸಹಾಯಕ ಆಯುಕ್ತ ಪದ್ಮನಾಭ, ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಸಲಹೆಗಾರ ಡಾ| ಸುರೇಶ್‌ ಹನಗವಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪ ನಿರ್ದೇಶಕಿ ಭಾರತಿ ಬಣಕಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next