Advertisement

ಕೋವಿಡ್‌ನಿಂದ ಕ್ಷಯರೋಗಿಗಳು ಬಚಾವ್‌

10:09 PM Jun 02, 2021 | Team Udayavani |

„ಎಚ್‌.ಕೆ. ನಟರಾಜ

Advertisement

ದಾವಣಗೆರೆ: ಶ್ವಾಸಕೋಶದ ಮೇಲೆ ದಾಳಿ ಇಡಬಹುದಾದ ಕ್ಷಯರೋಗ ಹಾಗೂ ಕೋವಿಡ್‌-19 ಎರಡನೇ ಅಲೆ ಹೊಡೆತಕ್ಕೆ ಸಿಲುಕಿದ ಜಿಲ್ಲೆಯ ಆರು ಜನರು ಎರಡೂ ಮಹಾಮಾರಿಗಳ ವಿರುದ್ಧ ಹೋರಾಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊರೊನಾ ಎರಡನೇ ಅಲೆಯ ಸೋಂಕು ಜಿಲ್ಲೆಯ ಒಟ್ಟು ಎಂಟು ಜನ ಕ್ಷಯರೋಗಿಗಳಿಗೆ ಹಬ್ಬಿತ್ತು. ಇವರಲ್ಲಿ ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಉಳಿದಂತೆ ಇದೇ ಅವಧಿಯಲ್ಲಿ ಕೊರೊನಾ ಸೋಂಕಿಗೆ ಒಳಗಾಗದಿದ್ದರೂ 46 ಜನರು ಕ್ಷಯರೋಗಿಗಳು ಕ್ಷಯದ ತೀವ್ರತೆ ಹೆಚ್ಚಾಗಿ ಮೃತಪಟ್ಟಿದ್ದಾರೆ. ಕ್ಷಯರೋಗದ ಪ್ರಾಥಮಿಕ ಲಕ್ಷಣಗಳು ಲಕ್ಷಣಗಳನ್ನೇ ಹೋಲುವ ಲಕ್ಷಣಗಳೊಂದಿಗೆ ಬಂದೆರಗಿದ ಕೋವಿಡ್‌-19 ಎರಡನೇ ಅಲೆಯ ಸೋಂಕು ಕ್ಷಯರೋಗಿಗಳಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಮೊದಲ ಅಲೆಯಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಿದ್ದ ಕ್ಷಯರೋಗಿಗಳು, ಎರಡನೇ ಅಲೆಯ ಈ ಸಂದರ್ಭದಲ್ಲಿಯೂ ಹೆಚ್ಚಿನ ಸುರಕ್ಷತೆಗೆ ಮುಂದಾಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿಲ್ಲ .

ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಒಟ್ಟು 696 ಕ್ಷಯರೋಗಿಗಳು ಪತ್ತೆಯಾಗಿದ್ದಾರೆ. 640 ಕ್ಷಯರೋಗಿಗಳು ಈವರೆಗೆ ಕೋವಿಡ್‌-19 ವೈರಸ್‌ ತಮ್ಮತ್ತ ಸುಳಿಯದಂತೆ ಸುರಕ್ಷತಾ ಕ್ರಮಗಳನ್ನು ವಹಿಸಿ ತಮ್ಮ “ಶ್ವಾಸ’ ಕಾಪಾಡಿಕೊಂಡಿದ್ದಾರೆ.

ಕೊರೊನಾ ಗೆದ್ದ ಕ್ಷಯರೋಗಿಗಳು: ಜಿಲ್ಲೆಯ ದಾವಣಗೆರೆ ಗ್ರಾಮಾಂತರದ ಒಬ್ಬರು, ದಾವಣಗೆರೆ ನಗರದ ಮೂವರು, ಹರಿಹರ ಹಾಗೂ ಹೊನ್ನಾಳಿ ತಾಲೂಕಿನ ತಲಾ ಇಬ್ಬರು ಸೇರಿದಂತೆ ಒಟ್ಟು ಎಂಟು ಕ್ಷಯರೋಗಿಗಳು ಈವರೆಗೆ ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿದ್ದಾರೆ.

Advertisement

ಇವರಲ್ಲಿ ದಾವಣಗೆರೆ ಗ್ರಾಮಾಂತರದ ಒಬ್ಬರು, ದಾವಣಗೆರೆ ನಗರದ ಇಬ್ಬರು, ಹರಿಹರ ತಾಲೂಕಿನ ಒಬ್ಬರು ಹಾಗೂ ಹೊನ್ನಾಳಿ ತಾಲೂಕಿನ ಇಬ್ಬರು ಕೊರೊನಾ ಸೋಂಕಿನ ವಿರುದ್ಧ ಹೋರಾಡಿ ಜೀವ ಕಾಪಾಡಿಕೊಂಡಿದ್ದಾರೆ. ದಾವಣಗೆರೆ ಗ್ರಾಮಾಂತರ ಹಾಗೂ ಹರಿಹರದ ತಲಾ ಒಬ್ಬರು ಸೇರಿ ಒಟ್ಟು ಇಬ್ಬರು ಕ್ಷಯ ರೋಗಿಗಳು ಕೊರೊನಾ ಮಹಾಮಾರಿ ಎದುರಿಸಲಾಗದೆ ಮೃತಪಟ್ಟಿದ್ದಾರೆ.

ಚನ್ನಗಿರಿ ತಾಲೂಕಿನ 101, ದಾವಣಗೆರೆ ಗ್ರಾಮೀಣ ಭಾಗದ 81, ದಾವಣಗೆರೆ ನಗರ ಭಾಗದ 249, ಹರಿಹರ ತಾಲೂಕಿನ 62, ಹೊನ್ನಾಳಿ ತಾಲೂಕಿನ 80, ಜಗಳೂರು ತಾಲೂಕಿನ 67 ಕ್ಷಯರೋಗಿಗಳು ಕೊರೊನಾ ತಮ್ಮತ್ತ ಸುಳಿಯದಂತೆ ಅಗತ್ಯ ಸುರಕ್ಷತಾ ಕ್ರಮ ಪಾಲನೆಯೊಂದಿಗೆ ಕೊರೊನಾ ಸೋಂಕಿನಿಂದ ದೂರ ಇದ್ದಾರೆ. ಕೊರೊನಾ ಎರಡನೇ ಅಲೆಯ ಆರ್ಭಟ ಇಳಿಯುವವರೆಗೂ ಈ ಕ್ಷಯರೋಗಿಗಳು ಸುರಕ್ಷತೆ, ಜಾಗರೂಕತೆಯನ್ನು ಮರೆಯದೆ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿದೆ.

ಒಟ್ಟಾರೆ ಜಿಲ್ಲೆಯಲ್ಲಿರುವ ಬಹುತೇಕ ಕ್ಷಯರೋಗಿಗಳು ಕೋವಿಡ್‌ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸುವ ಮೂಲಕ ಕೊರೊನಾ ಮಹಾಮಾರಿಯಿಂದ ತಮ್ಮನ್ನು ತಾವು ರಕ್ಷಿಸಿಕೊಂಡಿರುವುದು ಸಮಾಧಾನಕರ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next