Advertisement

ಡೇಟಿಂಗ್‌ ವಿತ್‌ ಜ್ವಾಲಾಮುಖೀ, ಬೆಂಕಿ ಉಗುಳುವ ಬೆಟ್ಟದಲ್ಲಿ ಟೆಕ್ಕಿ

11:55 AM Jun 13, 2017 | Harsha Rao |

ಬೆಂಕಿ ಉಗುಳುವ ಅಗ್ನಿಪರ್ವತದ ಮೇಲೆ ಮೋಹ ಬೆಳೆಸಿಕೊಂಡವರು ತೀರಾ ಕಡಿಮೆ. ಆದರೆ, ಇಲ್ಲೊಬ್ಬ ಟೆಕ್ಕಿ ಅಗ್ನಿಪರ್ವತ ಚಾರಣಪ್ರಿಯ! ಜೀವವನ್ನೇ ನುಂಗುವ ಜ್ವಾಲಾಮುಖೀ ಜತೆ ಸರಸವಾಡುವುದು ಈತನಿಗೇನೋ ಖುಷಿ. ಇವನ ಹೆಸರು, ಸಾಯಿತೇಜ. ಆಂಧ್ರದ ಗುಂಟೂರಿನವನು. ಅಗ್ನಿಪರ್ವತಗಳ ಚಾರಣದಲ್ಲಿ ಇವನ ಹೆಜ್ಜೆ ಹೆಜ್ಜೆಗೂ ಭಯಾನಕ ಕಥೆಗಳುಂಟು. “ಜೋಶ್‌’ಗಾಗಿ ಕೊಟ್ಟ ವಿಶೇಷ ಸಂದರ್ಶನದಲ್ಲಿ ಸಾಯಿತೇಜ, ಒಂದಿಷ್ಟು ಸೋಜಿಗಗಳನ್ನು ಸ್ಫೋಟಿಸಿದರು…

Advertisement

“ಚಂದ್ರ ತಣ್ಣಗಿದ್ದಾನೆ’ ಎನ್ನುತ್ತಾ, ಚಿಕ್ಕಂದಿನಿಂದ ಅಮ್ಮ ನನ್ನನ್ನು ನಂಬಿಸಿಬಿಟ್ಟಳು. ಚಂದ್ರನ ನೆಲದ ಮೇಲೆ ಒಂದಿಬ್ಬರು ಕಾಲಿಟ್ಟಿದ್ದಾರೆ ಅಂತ ವಿಜ್ಞಾನ ಮೇಷ್ಟ್ರು ಹೇಳಿದಾಗ, ನನಗೆ ಅಂತಹ ಅಚ್ಚರಿ ಆಗಲಿಲ್ಲ. “ಕಾಲಿಟ್ಟರೆ ಕಾದ ಭೂಮಿಯ ಮೇಲೆಯೇ…’ ಎಂಬ ಹಠ ಸಣ್ಣಂದಿನಿಂದಲೇ ಮೊಳೆಯಿತು. ಅದಕ್ಕಾಗಿ ನಾನು “ವನೌಟು’ಗೆ ಹೊರಟಿದ್ದೇನೆ…
ಇಪ್ಪತ್ತೈದು ವರುಷದ ಹುಡುಗ ಹೇಳಿದ ಆ “ವನೌಟು’ ಇರುವುದು, ಗುರುವಿನಲ್ಲೋ, ಮಂಗಳನಲ್ಲೋ ಅಲ್ಲ. ಅದು ಇರುವುದು, ಭೂಮಿ ಮೇಲಿನ “ಶಾಂತ ಸಾಗರ’ ಎಂದು ಕರೆಸಿಕೊಳ್ಳುವ ಪೆಸಿಫಿಕ್‌ ಸಮುದ್ರದ ನಡುವೆ. ಪೆಸಿಫಿಕ್‌ ತಣ್ಣಗಿದ್ದರೆ, ವನೌಟು ಕುದಿಯುವ ಕೆಂಡ. ಕಾರಣ, ಅದರ ಒಡಲಲ್ಲಿರುವ “ಆ್ಯಂಬ್ರಿಮ್‌’ ಎನ್ನುವ ಭಯಾನಕ ಜ್ವಾಲಾಮುಖೀ! “Top 10 dangerous volcanoes’ ಎಂದು ಗೂಗಲ್‌ನಲ್ಲಿ ಟೈಪಿಸಿದರೆ, ಆ್ಯಂಬ್ರಿಮ್‌ನ ಹೆಸರೂ ಅಲ್ಲಿ ಕಾಣಿಸುತ್ತದೆ. ಲಾವಾರಸವನ್ನು ಎಲೆಅಡಕೆಯಂತೆ ಉಗುಳುವ ಅದರ ವಿಡಿಯೋಗಳನ್ನು ಕಂಡಾಗ, ಕುಳಿತಲ್ಲೇ ಕಣ್ಣಂಚು ಬಿಸಿಯಾಗುತ್ತದೆ. ಈ ಬೆಂಕಿಭೂಮಿಯ ತಾಪಮಾನ ಕನಿಷ್ಠ 800ರಿಂದ 1000 ಡಿಗ್ರಿ ಸೆಲ್ಸಿಯಸ್! ಡಿಸ್ಕವರಿ ಚಾನೆಲ್‌ಗೆ “ಡೇಂಜರ್‌ಮ್ಯಾನ್‌’ ಸರಣಿ ನಡೆಸಿಕೊಟ್ಟ ಜಿಯೋಫ್ ಮ್ಯಾಕ್ಲೆಯ ಹೊರತಾಗಿ, ಇದರ ಜ್ವಾಲೆಯನ್ನು ಹತ್ತಿರದಿಂದ ನೋಡಿದ ವ್ಯಕ್ತಿ ಮತಾöರೂ ಸಿಗುವುದಿಲ್ಲ. “ಆಗಸ್ಟ್‌ನಲ್ಲಿ ನಿನ್‌ ಮಗ ಅಲ್ಲಿಗೆ ಹೋಗ್ತಾನಂತೆ’ ಅಂತ ಯಾರೋ ಈ ಹುಡುಗನ ತಾಯಿಗೆ ಹೇಳಿಬಿಟ್ಟಿದ್ದಾರೆ. ಅದನ್ನು ಕೇಳಿಯೇ, ಆ ತಾಯಿ ಈಗ ಆಸ್ಪತ್ರೆಯ ಬೆಡ್ಡಿನ ಮೇಲೆ ಮಲಗಿದ್ದಾರೆ! ಕೊನೆಗೂ ತಾಯಿಯನ್ನು ಪುಸಲಾಯಿಸಿ, ಒಪ್ಪಿಸಿರುವ ಮಗ, ಆಗಸ್ಟ್‌ನಲ್ಲಿ “ಆಂಬ್ರಿಮ್‌’ಗೆ ಹೊರಟಿದ್ದಾನೆ.

ಈ ಹುಡುಗನ ಹೆಸರು ಸಾಯಿತೇಜ. ಊರು, ಆಂಧ್ರಪ್ರದೇಶದ ಗುಂಟೂರು. ಬೆಂಗಳೂರಿನ ಐಟಿ ಕಂಪನಿಯೊಂದರ ಇಂಟರ್‌ವ್ಯೂಗೆ ಬಂದಾಗ, ಯಾರೋ ಕುಮಾರಪರ್ವತಕ್ಕೆ ಟ್ರೆಕ್ಕಿಂಗ್‌ಗೆ ಕರೆದೊಯ್ದ ನೆನಪು ತೆಗೆಯುತ್ತಾನೆ. ಈ ಸಾಫ್ಟ್ವೇರ್‌ ಕೆಲಸ, ವೀಕೆಂಡಿನಲ್ಲಿ ಆ ಟ್ರೆಕ್ಕಿಂಗ್‌ಗಳು ಆನಂದ ನೀಡದೇ ಇದ್ದಾಗ, ಪ್ರಪಂಚದ ಅಗ್ನಿಪರ್ವತಗಳು ಹಿಮಾಲಯದಂತೆ ಸೆಳೆದವು. ನಾಲ್ಕೈದು ಅಗ್ನಿಪರ್ವತಗಳಿಗೆ ಹೋಗಿಬಂದ ಈತನ ಬಿಸಿ ಬಿಸಿ ಅನುಭವಗಳು, ಹಾಲಿವುಡ್‌ನ‌ ಅಡ್ವೆಂಚರ್‌ ಸಿನಿಮಾಗಳಿಗೆ ವಸ್ತುವಾಗಬಲ್ಲವೇನೋ. “ಜೋಶ್‌’ಗಾಗಿ ಕೊಟ್ಟ ಸಂದರ್ಶನದಲ್ಲಿ ಸಾಯಿತೇಜ, ಒಂದಿಷ್ಟು ಸೋಜಿಗಗಳನ್ನು ಸ್ಫೋಟಿಸಿದರು…

– ತುಂಬಾ ರಿಸ್ಕಿ ಹಾಬಿ ನಿಮ್ದು
ಜೀವನದಲ್ಲಿ ನಾನು ಬಹಳ ಗೊಂದಲದಲ್ಲಿದ್ದೆ. ಯಾವುದೇ ಸಾಹಸದಲ್ಲೂ ಸಮಾಧಾನ ಸಿಗುತ್ತಿರಲಿಲ್ಲ. ಎಲ್ಲಾ ಟೆಕ್ಕಿಗಳಂತೆ ಜೀವನ ನಡೆಸಲು ನನ್ನಿಂದ ಆಗದು ಎಂದುಕೊಂಡು, ಮೊದಲು ಬೈಕ್‌ ರೈಡಿಂಗ್‌ ಮಾಡಿದೆ. ನಂತರ ಟ್ರೆಕ್ಕಿಂಗ್‌… ಅಲ್ಲೂ ಜೋಶ್‌ ಸಿಗಲಿಲ್ಲ. ಅಗ್ನಿಪರ್ವತಗಳ ವಿಡಿಯೋಗಳನ್ನು ನೋಡಿದಾಗ, ಬಯಕೆ ಹುಟ್ಟಿತು. ಜ್ವಾಲಾಮುಖೀಯ ಬಳಿ ಹೋಗಿಬಂದವರ ವಿಡಿಯೋ ನೋಡಿದಾಗ, ಪ್ರಪಂಚದಲ್ಲಿ ಇಂಥವರೂ ಇದ್ದಾರೆ ಅಂತ ಗೊತ್ತಾಯಿತು. ಆದರೆ, ಭಾರತದಲ್ಲಿ ಅಂಥವರಾರೂ ಇಲ್ಲವಲ್ಲ ಎಂಬ ಬೇಸರವೂ ಜತೆಗೇ ನುಗ್ಗಿತು. ದೇಶದ “ಆ ಪ್ರಥಮ’ಕ್ಕೆ ಸಾಕ್ಷಿ ಆಗಲು ನಾನು ಅಗ್ನಿಪರ್ವತಗಳ ಬುಡಕ್ಕೆ ಹೊರಟೆ!

– ಟೆಕ್ಕಿಗೇಕೆ ಬೇಕಿತ್ತು ಇಂಥ ಕೆಲ್ಸ?
ಶಾಲೆಯಲ್ಲಿ “ಬೆಟ್ಟ ಬೆಂಕಿ ಉಗುಳುತ್ತೆ’ ಎಂದು ಮೇಷ್ಟ್ರು ಹೇಳಿದಾಗ, ಎಲ್ಲರೂ ಹೆದರುತ್ತಿದ್ದರು. ಆದರೆ, ಅಂಥ ಭಯ ಮಾತ್ರ ನನಗೆ ಆಗಲೇ ಇಲ್ಲ. ಬಹುಶಃ ಅದೇ ಧೈರ್ಯ ನನ್ನನ್ನು ಕೈಹಿಡಿದು ನಡೆಸುತ್ತಿದೆ. ಬಿ.ಟೆಕ್‌ ಕ್ಲಾಸಿನಲ್ಲಿನ ಬೋಧನೆ ಕೇಳುತ್ತಾ ಕುಳಿತರೆ, ಲೋಕದ ವಿಸ್ಮಯಗಳ ಅನುಭವ ಸಿಗುವುದಿಲ್ಲ ಅಂತನ್ನಿಸಿ, ಬಿ.ಟೆಕ್‌ ಅನ್ನು ಡ್ರಾಪ್‌ಔಟ್‌ ಮಾಡಿ, ಅಗ್ನಿಪರ್ವತಗಳತ್ತ ಹೊರಟೆ.

Advertisement

– ಅಗ್ನಿಪರ್ವತದ ಬುಡದಲ್ಲಿ ಭೀಕರತೆ ಹೇಗಿರುತ್ತೆ?
ಅಗ್ನಿಪರ್ವತಗಳು, ಎಲ್ಲ ಕಾಲದಲ್ಲೂ ಭೀಕರ ಅವತಾರ ತಾಳುವುದಿಲ್ಲ. ಆದರೆ, ಜೀವಂತ ಅಗ್ನಿಪರ್ವತಗಳನ್ನು ನಂಬಲಾಗದು. ಲಾವಾ ಬಾಂಬ್‌ಗಳನ್ನು ಅವು ಸದಾ ಉಗುಳುತ್ತಲೇ ಇರುತ್ತವೆ. ಕೆಲವೊಮ್ಮೆ ಅವುಗಳ ಮೇಲ್ಲೆ$¾„ ಉಷ್ಣಾಂಶ, 1000 ಡಿಗ್ರಿ ಸೆಲಿÒಯಸ್‌ ತಲುಪಬಹುದು. ಅವುಗಳ ಬಿಸಿ ಹೊಗೆ, ನಮ್ಮ ಉಸಿರಲ್ಲಿ ಬೆರೆತರೆ, ಕತೆ ಮುಗಿದಂತೆ. ಡುಕೊನೊ, ಕವಾಹ್‌ ಐಜೆನ್‌ಗೆ ಹೋದಾಗ, ಜಾಗರೂಕತೆಯಿಂದಲೇ ನಡೆದಿದ್ದೆ.

– ಡುಕೊನೊ ಅಗ್ನಿಪರ್ವತ ಅಷ್ಟು ಡೇಂಜರ್ರಾ?
ಅದು ಯಮನ ಅಂಗಳವೇ. ಪ್ರಾಣವನ್ನು ಕೈಯಲ್ಲಿ ಹಿಡಿದೇ ನಡೆಯಬೇಕು. ಡುಕೊನೊ, ಇಂಡೋನೇಷ್ಯಾದ ರಿಮೋಟ್‌ ಏರಿಯಾದಲ್ಲಿದೆ. ಅಲ್ಲಿಗೆ ಸಾಹಸಿಗಳು ಹೋಗುವುದು ವಿರಳ. ಏಕೆಂದರೆ, ಅದೊಂದು ಜೀವಂತ ಅಗ್ನಿಪರ್ವತ. ಲಾವಾ ಬಾಂಬ್‌ಗಳನ್ನು ಸಹಿಸಿಕೊಳ್ಳುವುದು ಕಷ್ಟ. ಇನ್ನೊಂದು ಸವಾಲೆಂದರೆ, ಈ ಪರ್ವತಕ್ಕೆ ಹೋಗಲು ದಟ್ಟಾರಣ್ಯವನ್ನು ದಾಟಿ ಹೋಗಬೇಕು. ಆ ಕಾಡೋ… ಹತ್ತು ಮೀಟರ್‌ ನಡೆದರೆ, ಒಂದೊಂದು ಹಾವು ಕಾಣಿಸುವ ಜಾಗ. ಈ ಹಾದಿಯಲ್ಲಿ, ಯಾರೂ ಇಂಗ್ಲಿಷ್‌ ಬಲ್ಲವರಿಲ್ಲ. ಅಲ್ಲಿನ ಜನರ ಬಳಿ ದಾರಿ ಕೇಳುವಾಗ, ನಾನು ಒದ್ದಾಡಿಬಿಟ್ಟೆ. ಇನ್ನೊಂದು ಸಮಸ್ಯೆ, ಅಲ್ಲಿ ಕುಡಿಯಲು ನೀರೂ ಸಿಗುವುದಿಲ್ಲ. ಡುಕೊನೊ ಸಮೀಪವಿರುವ ನೀರೆಲ್ಲ, ಅಗ್ನಿಪರ್ವತದ ಬೂದಿಯಿಂದ ಮಿಶ್ರಿತಗೊಂಡಿತ್ತು. ಇದು ಕುಡಿಯಲು ಯೋಗ್ಯವಲ್ಲ. ಈ ಪರ್ವತದ ಮೇಲ್ಮೆ„ ತುಂಬಾ ಅಪಾಯಕಾರಿ. ಇದು ಬೂದಿಯಿಂದ ಮುಚ್ಚಿದ್ದು, ಪ್ರತಿ ಹೆಜ್ಜೆ ಇಡುವಾಗ ಹತ್ತು ಬಾರಿ ಪರೀಕ್ಷಿಸಿಯೇ ಮುನ್ನಡೆಯಬೇಕು. ಅಲ್ಲಲ್ಲಿ ಲಾವಾ ಬಾಂಬ್‌ ಬಿದ್ದು, ಗುಂಡಿಗಳಾಗಿವೆ. ಆ ಗುಂಡಿಯಲ್ಲಿ ಲಾವಾ ಬೂದಿ ತುಂಬಿರುತ್ತಿತ್ತು. ಅಕಸ್ಮಾತ್‌, ಅದರೊಳಗೆ ಬಿದ್ದರೆ ಕನಿಷ್ಠ 600 ಡಿಗ್ರಿ ಸೆಲಿÒಯಸ್‌ ಉಷ್ಣಾಂಶದಲ್ಲಿ ಬೆಂದು ಹೋಗುವ ಅಪಾಯವಿತ್ತು. ಇಷ್ಟೆಲ್ಲ ಅಪಾಯವನ್ನು ದಾಟಿ, ಡುಕೊನೊ ಪ್ರಯಾಣ ಮುಗಿಸಿದ್ದೆ.

– ಒಂದು ಅಪಾಯಕಾರಿ ಪ್ರಸಂಗ ಹೇಳುವುದಾದರೆ…
ಡುಕೊನೊಗೆ ಹೋಗುವಾಗ ಸಿಕ್ಕ ಕಾಡಿನಲ್ಲಿ, ನಾನೊಂದು ಗುಂಡಿಗೆ ಬಿದ್ದುಬಿಟ್ಟೆ. ಅದು ಜ್ವಾಲಾ ಬಾಂಬಿನಿಂದ ಆದ ಗುಂಡಿ ಅಲ್ಲ. ಅದನ್ನು ಬಹುಶಃ ಬೇಟೆಗಾರರು ಮಾಡಿದ್ದರು. ಒಳಗೆ ಬಿದ್ದವನು, ಒಂದು ಗಂಟೆ ಕಾಲ ಕೂಗಿಕೊಳ್ಳುತ್ತಲೇ ಇದ್ದೆ. ಮೇಲೆ ಹತ್ತಲು ಯತ್ನಿಸಿದರೆ, ಮತ್ತೆ ಕುಸಿತ! ಅಲ್ಲಿಂದ ಹೊರಬರಲು ಸ್ಥಳೀಯರು ತುಂಬಾ ನೆರವಾದರು. ಭಾಷೆ, ಜನಾಂಗ ಗೊತ್ತಿಲ್ಲದ ಅವರು ನನ್ನ ಜೀವ ಉಳಿಸಿದ ದೇವರೇ ಆಗಿಬಿಟ್ಟರು. ಕೊನೆಗೆ ಅಂದುಕೊಂಡಂತೆ, ಡುಕೊನೊ ತಲುಪಿದೆ. ರಾತ್ರಿ ನಾನು ತಂಗಿದ್ದ ಟೆಂಟ್‌ನಿಂದ ಕೇವಲ 10 ಮೀಟರ್‌ ದೂರದಲ್ಲಿ ಲಾವಾ ಬಾಂಬ್‌ ಬಿದ್ದಿತ್ತು. ಅದು ನನಗೆ ಗೊತ್ತಾಗಿದ್ದು, ಬೆಳಗ್ಗೆ ಎದ್ದಾಗ! 

– ಇಷ್ಟೆಲ್ಲ ಗೊತ್ತಿದ್ದೂ, ಡುಕೊನೊ ಸೆಳೆಯಿತೇಕೆ?
ಡುಕೊನೊ ಶಿಖರಕ್ಕೆ ಹೋಗಿ, ನಾನು ಭಾರತದ ಬಾವುಟ ಹಾರಿಸಬೇಕಿತ್ತು. ಮೊದಲೇ ಹೇಳಿದಂತೆ, ಇದನ್ನು ಏರಲು ಏಳುಬೀಳು ಕಂಡಿದ್ದೆ. ಪರ್ವತದ ಕೊನೆಯ ಹಂತದ ಪಯಣದಲ್ಲಿ ನನ್ನ ಸುರಕ್ಷಾ ಉಡುಪನ್ನು ನಾನು ಕಳೆದುಕೊಂಡಿದ್ದೆ. ಆದರೂ, ಛಲ ಬಿಡದೆ ಕೇವಲ ಗ್ಯಾಸ್‌ ಫಿಲ್ಟರ್‌ ಧರಿಸಿಯೇ ಮುನ್ನುಗ್ಗಿದೆ. ಭಾರತದ ತ್ರಿವರ್ಣ ಧjಜವನ್ನು ಹಾರಿಸಿದಾಗ ನನಗಾದ ಹೆಮ್ಮೆಯನ್ನು ವಾಕ್ಯದಲ್ಲಿ ಬಣ್ಣಿಸಲು ಸಾಧ್ಯವೇ ಇಲ್ಲ.

– ಕವಾಹ್‌ ಐಜೆನ್‌ ಅಗ್ನಿಪರ್ವತದ ಕತೆ ಹೇಳಿ…
ಇದು ಪೂರ್ವ ಜಾವಾದಲ್ಲಿನ ಜ್ವಾಲಾಮುಖೀ. ನೀಲಿ ಲಾವಾ ಹೊಮ್ಮಿಸುವ ಏಕೈಕ ಜ್ವಾಲಾಮುಖೀ. ಇದರ ಸಮೀಪ ಹೋಗಲು ನನಗೆ ಅನುಮತಿಯೇ ಸಿಗಲಿಲ್ಲ. ಕಾರಣ, ನಾನು ಅಲ್ಲಿಗೆ ಹೋದ ಕೆಲವೇ ದಿನಗಳ ಹಿಂದಷ್ಟೇ ಮೂವರ ಮೇಲೆ ಜ್ವಾಲಾ ಬಾಂಬು ಬಿದ್ದು, ಅವರು ಸಾವನ್ನಪ್ಪಿದ್ದರು. ಅಲ್ಲಿ ವಾಲ್ಕೆನೋ ಸ್ಕ್ವಾಡ್‌ನ‌ ಕಣ್ಗಾವಲು ಇದ್ದಿದ್ದರಿಂದ ಸ್ವಲ್ಪ ದೂರದಲ್ಲಿ ನೋಡಿ ಬರುವುದು ಅನಿವಾರ್ಯವಾಯಿತು.

– ರಿಸ್ಕಿ ಪ್ರವಾಸಕ್ಕೆ ಹೊರಟಾಗ, ಮನೆಯಲ್ಲಿ ರಿಯಾಕ್ಷನ್‌ ಹೇಗಿರುತ್ತೆ?
ಆರಂಭದಲ್ಲಿ ಮನೆಯಲ್ಲಿ ಬಹಳ ವಿರೋಧ ಬಂತು. ಆದರೆ, ಹುಚ್ಚು ಸಾಹಸ ನನ್ನನ್ನು ಸುಮ್ಮನೆ ಕೂರಲು ಬಿಡಲಿಲ್ಲ. ಎದ್ದು ಹೊರಟೇ ಬಿಟ್ಟೆ. ಆದರೆ, ಆ್ಯಂಬ್ರಿಮ್‌ಗೆ ಹೋಗುತ್ತೇನೆಂದು ಸುದ್ದಿಯಾದಾಗ, ಯಾರೋ ಅದರ ಭಯಾನಕ ವಿಡಿಯೋವನ್ನು ನನ್ನ ಅಮ್ಮನಿಗೆ ತೋರಿಸಿದ್ದಾರೆ. ಅವಳಿಗೆ ಜ್ವರ ಬಂದು, ಈಗಷ್ಟೇ ಆಸ್ಪತ್ರೆಯಿಂದ ಹೊರಬಂದಿದ್ದಾಳೆ. “ತುಮ್‌ ಚಿಂತಾ ಮತ್‌ ಕರೋ, ಜೋ ಕುಛ… ಭೀ ಹೋತಾ ಹೈ ಹಮ್‌ ದೇಕಲೆಂಗೆ’ ಎಂದು ತಾಯಿಗೆ ಸಮಾಧಾನ ಹೇಳಿ ಒಪ್ಪಿಸಿದ್ದೇನೆ. ಹರಸಿದ್ದಾಳೆ. ಅವಳ ಆಶೀರ್ವಾದವೊಂದಿದ್ದರೆ, ನನ್ನ ಮೇಲೆ ಅಗ್ನಿಜ್ವಾಲೆ ಬೀಳುವುದಿಲ್ಲ.

– ಆ್ಯಂಬ್ರಿಮ್‌ ಪರ್ವತದ ಚಾರಣಕ್ಕೆ ತಯಾರಿ ಹೇಗಿದೆ?
ವನೌಟು ದ್ವೀಪ ಸಮೂಹಗಳಲ್ಲಿ ಆ್ಯಂಬ್ರಿಮ್‌ ಜ್ವಾಲಾಮುಖೀ ಇದೆ. ಕನಿಷ್ಠ 800 ಡಿಗ್ರಿ ಸೆಲಿÒಯಸ್‌ ತಾಪಮಾನ ಅಲ್ಲಿರುತ್ತದೆ. ಇದನ್ನು ತಡೆದುಕೊಳ್ಳಲು ಕನಿಷ್ಠ 5ಕ್ಕಿಂತಲೂ ಹೆಚ್ಚು ಪದರವಿರುವ ಉಷ್ಣ ನಿರೋಧಕ ಉಡುಪನ್ನು ಧರಿಸಬೇಕಾಗುತ್ತದೆ. ಇಲ್ಲಿಯವರೆಗಿನ ಪ್ರಯಾಣದಲ್ಲಿ ಸಾಮಾನ್ಯ ಮೂವೀ ಕ್ಯಾಮೆರಾ ಬಳಸುತ್ತಿದ್ದೆ. ಆದರೆ, ಆ್ಯಂಬ್ರಿಮ್‌ನಲ್ಲಿ ಇಂಥ ಕ್ಯಾಮೆರಾಗಳು ಕೆಲಸ ಮಾಡುವುದಿಲ್ಲ. ಸಾಕಷ್ಟು ದೈಹಿಕ ಹಾಗೂ ಮಾನಸಿಕ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇನೆ. ಇದಾದ ಬಳಿಕ ಅಂಟಾರ್ಟಿಕದ “ಎರೆಬಸ್‌’ ಜ್ವಾಲಾಮುಖೀಗೆ ಹೋಗುವೆನು.

 - ರಂಗನಾಥ್‌ ಹಾರೋಗೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next