Advertisement

ದಸರಾ ವೆಬ್‌ಸೈಟ್‌, ಭಿತ್ತಿಚಿತ್ರ ಅನಾವರಣ

09:19 PM Aug 31, 2019 | Lakshmi GovindaRaj |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ರೂಪಿಸಿರುವ ದಸರಾ ಮಹೋತ್ಸವ-2019ರ ವೆಬ್‌ಸೈಟ್‌ ಹಾಗೂ ಭಿತ್ತಿಚಿತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬಿಡುಗಡೆ ಮಾಡಿದರು. ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ವೆಬ್‌ಸೈಟ್‌ www.mysoredasara.gov.in ಅನಾವರಣ ಹಾಗೂ ಭಿತ್ತಿಚಿತ್ರ ಬಿಡುಗಡೆ ಗೊಳಿಸಿ ಮಾತನಾಡಿದರು.

Advertisement

ದಸರಾ ಮಹೋತ್ಸವಕ್ಕೆ ಬರುವ ಪ್ರವಾಸಿಗರಿಗೆ ದಸರಾ ಕಾರ್ಯಕ್ರಮಗಳ ಬಗ್ಗೆ ತಿಳಿಸಲು ಮೈಸೂರು ನಗರದ ಟ್ರಿಣ್‌ಟ್ರಿಣ್‌ ಸೈಕಲ್‌ ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆ ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ದಸರಾ ಪ್ರಚಾರದ ಹೋರ್ಡಿಂಗ್ಸ್‌ಗಳನ್ನು ಅಳವಡಿಸಲಾಗುವುದು. ದಸರಾ ಮಹೋತ್ಸವದ ವೆಬ್‌ಸೈಟ್‌ನಲ್ಲಿ ಕನ್ನಡ, ಇಂಗ್ಲಿಷ್‌ ಮಾತ್ರವಲ್ಲದೇ ಇತರೆ ಹತ್ತು ಭಾಷೆಗಳಲ್ಲಿ ಮಾಹಿತಿ ಲಭ್ಯವಿರುತ್ತದೆ. ವೆಬ್‌ಸೈಟ್‌ ಕಂಪ್ಯೂಟರ್‌, ಮೊಬೈಲ್‌, ಟ್ಯಾಬ್‌ಗಳಲ್ಲಿ ಪುಶ್‌ನೋಟಿಫೀಕೇಶನ್‌ ವ್ಯವಸ್ಥೆ ಹೊಂದಿದ್ದು, ಅಲರ್ಟ್‌ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ವೆಬ್‌ಸೈಟ್‌ನಲ್ಲಿ ದಸರಾ ಪೋಲ್‌ ಆಯ್ಕೆಯಿದ್ದು ಪ್ರವಾಸಿಗರು ತಮಗೆ ಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಬಹುದು. ದಸರಾ ಕಾರ್ಯಕ್ರಮಗಳಿಗೆ ಗೂಗಲ್‌ ಕ್ಯಾಲೆಂಡರ್‌ ಜೊತೆ ಇಂಟಿಗ್ರೇಟ್‌ ಮಾಡಲಾಗಿದೆ. ಮೈಸೂರು ಹಾಗೂ ಸುತ್ತಮುತ್ತಲಿನ ಎಲ್ಲಾ ಪ್ರವಾಸಿ ತಾಣಗಳ ಮಾಹಿತಿಯನ್ನು ನೀಡಲಾಗಿದೆ. #MysuruDasara ಬಳಸಿ ದಸರಾ ಛಾಯಾಚಿತ್ರಗಳನ್ನು ಪ್ರವಾಸಿಗರು ಅಪ್‌ಲೋಡ್‌ ಮಾಡಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ದಸರಾ ಟಿಕೆಟ್‌ಗಳನ್ನು ಖರೀದಿಸಬಹುದು ಹಾಗೂ ದಸರಾದ ಪ್ರಮುಖ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡಲಾಗುವುದು ಎಂದರು.

ರಸಪ್ರಶ್ನೆ ಸ್ಪರ್ಧೆ: ಈ ಬಾರಿಯ ದಸರಾದಲ್ಲಿ 5 ಆನ್‌ಲೈನ್‌ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಪ್ರತಿ ಕ್ವಿಜ್‌ ನಿಂದ 5 ಮಂದಿ ವಿಜೇತರನ್ನು ಆಯ್ಕೆ ಮಾಡಿ ದಸರಾ ನೆನಪಿನ ಕಾಣಿಕೆಯನ್ನು ಬಹುಮಾನವಾಗಿ ನೀಡಲಾಗುವುದು.

ದಸರಾ ಕಾಲ್‌ಸೆಂಟರ್‌: ದಸರಾ ಮಹೋತ್ಸವದ ಎಲ್ಲ ಕಾರ್ಯಕ್ರಮಗಳ ಬಗ್ಗೆ ನಿರಂತರವಾಗಿ ಮಾಹಿತಿ ನೀಡಲಾಗುವುದು. ಪ್ರವಾಸಿಗರು ದಸರಾ ಮಹೋತ್ಸವದ ಬಗ್ಗೆ ಸಲಹೆ, ಅಭಿಪ್ರಾಯ ಹಂಚಿಕೊಳ್ಳಲು ಪ್ರತ್ಯೇಕ ವೆಬ್‌ಪುಟವನ್ನು ಮೀಸಲಿರಿಸಲಾಗಿದೆ ಹಾಗೂ ದಸರಾದ ಎಲ್ಲಾ ಉಪಸಮಿತಿಗಳ ಬಗ್ಗೆ ಮಾಹಿತಿ, ವಿವಿಧ ಪ್ರಮುಖ ಇಲಾಖೆಗಳ ಜಾಲತಾಣಗಳಿಗೆ ಲಿಂಕ್‌ ಕಲ್ಪಿಸಲಾಗಿದ್ದು ಪ್ರವಾಸಿಗರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದ ಅವರು, ಸೆ.5ರಂದು ದಸರಾ ಕಾಲ್‌ಸೆಂಟರ್‌ ಉದ್ಘಾಟನೆ ಮಾಡಲಾಗುವುದು ಎಂದರು.

Advertisement

ಈ ಸಂದರ್ಭದಲ್ಲಿ ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಜಿಪಂ ಸಿಇಒ ಕೆ.ಜ್ಯೋತಿ, ಅಪರ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ, ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ, ಮುಡಾ ಆಯುಕ್ತ ಪಿ.ಎಸ್‌.ಕಾಂತರಾಜು, ಮಹಾ ನಗರಪಾಲಿಕೆ ಆಯುಕ್ತ ಗುರುದತ್‌ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next