Advertisement

ದಸರಾಗೆ ರಂಗು ತಂದಿರುವ ಬೊಂಬೆಗಳ ಪ್ರದರ್ಶನ; ಕಳೆದ 40 ವರ್ಷಗಳಿಂದ ಪ್ರದರ್ಶನ

11:56 AM Oct 04, 2022 | Team Udayavani |

ರಬಕವಿ-ಬನಹಟ್ಟಿ: ದಸರಾ ಎಂದು ಕೂಡಲೇ ಪ್ರಮುಖವಾಗಿ ನೆನಪಿಗೆ ಬರುವುದು ಜಂಬೂ ಸವಾರಿ ಹಾಗೂ ಕುಸ್ತಿಗಳು. ಅದೇ ರೀತಿ ಮನೆಯಲ್ಲಿ ಗಟ್ಟ ಕಟ್ಟಿ ಬೊಂಬೆಗಳ ಪ್ರದರ್ಶನ ಮಾಡುವುದು. ಇದು ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಬೊಂಬೆ ಪ್ರದರ್ಶನ ಈಗ ಉತ್ತರ ಕರ್ನಾಟಕದ ಬಹುತೇಕ ಕಡೆ ಬೊಂಬೆ ಪ್ರದರ್ಶನ ನಡೆಯುತ್ತಿದ್ದು, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಮೋಹನ ಮಹಾದೇವಪ್ಪ ಪತ್ತಾರ ಕುಟುಂಬದವರು ಸುಮಾರು 40 ವರ್ಷಗಳಿಂದ ದಸರಾ ಹಬ್ಬದಲ್ಲಿ ಬೊಂಬೆ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಇದೀಗ ಅವರ ಮನೆಯಲ್ಲಿ ದಸರೆಯ ನಿಮಿತ್ತ ಗೊಂಬೆಗಳ ಪ್ರದರ್ಶನ ಈ ಭಾಗದಲ್ಲಿ ದಸರೆಯ ವೈಭವವನ್ನು ಸಾರುತ್ತಿದೆ.

Advertisement

ಗೊಂಬೆಗಳ ಉತ್ಸವವು ತಮ್ಮ ಪರಿಕಲ್ಪನೆ, ಆಸಕ್ತಿಗೆ ಅನುಗುಣವಾಗಿ ವಿವಿಧ ಮಾದರಿಯ ಗೊಂಬೆಗಳನ್ನು ಸಂಗ್ರಹಿಸಿ, ಅವುಗಳನ್ನು ಮನೆಯ ಸ್ಥಳಾವಕಾಶವನ್ನು ನೋಡಿಕೊಂಡು ಜೋಡಿಸಿ ಬೆಳಕು ಮತ್ತಿತರ ವಸ್ತುಗಳಿಂದ ಶೃಂಗಾರಿಸಿ ಪ್ರದರ್ಶನಕ್ಕಿಡುತ್ತಾರೆ.

ದಸರಾ ಹಬ್ಬದ ನಿಮಿತ್ತ ಬನಹಟ್ಟಿಯ ಪತ್ತಾರ ಕುಟುಂಬದವರು ತಮ್ಮ ಮನೆಯಲ್ಲಿ ಸುಂದರವಾಗಿ ಗೊಂಬೆಗಳ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ. ವೈವಿಧ್ಯಮಯವಾದ ಗೊಂಬೆಗಳು, ಮೈಸೂರು ದಸರಾ ಮೆರವಣಿಗೆಯ ಆನೆಗಳು, ಸೇರಿದಂತೆ ಹತ್ತಾರು ಗೊಂಬೆಗಳನ್ನು ಇಟ್ಟಿದ್ದು, ಇವುಗಳಿಗೆ ಲೈಟಿಂಗ್ ಮಾಡಿ ಮತ್ತಷ್ಟು ಗಮನ ಸೆಳೆಯುವಂತೆ ಮಾಡಿದ್ದಾರೆ. ಸದ್ಯ ಬೊಂಬೆಗಳ ಸಂಖ್ಯೆ 200ಕ್ಕೂ ಹೆಚ್ಚು ಇದ್ದು, ಪ್ರತಿ ವರ್ಷ 4-5 ಬೊಂಬೆಗಳನ್ನು ಹೆಚ್ಚು ಹೆಚ್ಚು ಮಾಡುತ್ತಾ ಬರುತ್ತಿದ್ದಾರೆ.

ಮನೆಯ ಸದಸ್ಯರಾದ ಗೀತಾ, ಕಲಾ, ಶ್ರುತಿ, ಸ್ನೇಹಾ ಹಾಗೂ ಮಕ್ಕಳು ಈ ಗೊಂಬೆಗಳನ್ನು ಅಚ್ಚುಕಟ್ಟಾಗಿ ಇಡಲು ಸಾಕಷ್ಟು ಪರಿಶ್ರಮ ವಹಿಸಿರುತ್ತಾರೆ. ಈ ಬಾರಿಯ ಪ್ರದರ್ಶನದಲ್ಲಿ ನವದುರ್ಗೆಯರು, ವಿಷ್ಣುವಿನ ಅವತಾರ, ಕೃಷ್ಣನ ದಶಾವತಾರ, ನಾಟ್ಯ ಗಣಪತಿ, ಮದುವೆ ಮಂಟಪ, ಕೃಷ್ಣನ ರಾಸಲಿಲೇಗಳು, ಚೆನ್ನಪಟ್ಟಣದ ಬೊಂಬೆಗಳು, ಪಟ್ಟದ ಬೊಂಬೆಗಳು, ಮೈಸೂರು ಅರಮನೆ ಜಂಬೂ ಸವಾರಿ, ತೋಪುಗಳು, ಕಾಮದೇನು ಆಕಳು, ರಾಜಸ್ಥಾನದ ಬೊಂಬೆಗಳು ಸೇರಿದಂತೆ ಅನೇಕ ಪ್ರಕಾರದ ಬೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವುದು ನೋಡುಗರನ್ನು ಆಕರ್ಷಿಸಿದೆ.

ಯಾರು ಹಿಂದಿನಿಂದಲೂ ಈ ಸಂಪ್ರದಾಯವನ್ನು ಆಚರಿಸುತ್ತಾ ಬಂದಿದ್ದಾರೋ, ಅಂತಹವರ ಮನೆಯಲ್ಲಿ ಈ ಗೊಂಬೆ ಇಡುವುದನ್ನು ಈಗಲೂ ನೋಡಬಹುದು. ನಮ್ಮ ದೇಶದ ಪೌರಾಣಿಕ ಹಿನ್ನೆಲೆ, ಕಲೆ, ಸಂಪ್ರದಾಯ, ಜನ ಜೀವನವನ್ನು ದಸರಾ ಬೊಂಬೆಗಳು ಸಾರುತ್ತವೆ.

Advertisement

ಮನೆಗಳಲ್ಲಿ ಗೊಂಬೆ ಕೂರಿಸುವಾಗ ಸ್ಥಳಾವಕಾಶ ನೋಡಿಕೊಂಡು 3,5,7,9 ಹಂತಗಳಲ್ಲಿ ಕೂರಿಸುತ್ತಾರೆ. ಹೆಚ್ಚು ಗೊಂಬೆಗಳು ಹಾಗೂ ಸ್ಥಳಾವಕಾಶ ಇದ್ದವರು 9 ಹಂತಗಳಲ್ಲಿ ಕೂರಿಸಿದರೆ, ಇನ್ನು ಕೆಲವರು 7 ಹಂತಗಳಲ್ಲಿ, ಕೆಲವರು 5 ಹಂತಗಳಲ್ಲಿ ಕೂರಿಸುತ್ತಾರೆ. ಮೊದಲ ಅಂತಸ್ತಿನಲ್ಲಿ ಪಟ್ಟದ ಬೊಂಬೆ, ಕಲಶ, ಗಣಪತಿ, ಮನೆ ದೇವರು, ದೀಪಗಳು ಇವುಗಳನ್ನಿಟ್ಟು, ಎರಡು, ಮೂರು ಉಳಿದ ಅಂತಸ್ತುಗಳಲ್ಲಿ ಇತರ ಬೊಂಬೆಗಳನ್ನು ಜೋಡಿಸುತ್ತಾರೆ.

ಗೊಂಬೆ ಕೂರಿಸುವವರು ಪ್ರತೀ ವರ್ಷ ಹಳೆಯ ಗೊಂಬೆಯ ಜೊತೆಗೆ ಒಂದು ಜೋಡಿ ಹೊಸ ಗೊಂಬೆಯನ್ನು ಸೇರಿಸಿ ಗೊಂಬೆ ಕೂರಿಸಬೇಕು ಎನ್ನುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆಯಾಗಿದ್ದು, ಹಾಗಾಗಿ ಪ್ರತಿಯೊಬ್ಬರು ಹಳೆ ಗೊಂಬೆ ಜೊತೆಗೆ ಹೊಸ ಗೊಂಬೆಯನ್ನು ಕೂರಿಸುತ್ತಾರೆ.  ಇತ್ತೀಚೆಗೆ ಹಳೆ ಸಂಪ್ರದಾಯದ ಬೊಂಬೆಗಳ ಜೊತೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ. ಮರದ, ಮಣ್ಣಿನ ಗೊಂಬೆ ಜೊತೆಗೆ ಆಧುನಿಕ ಬೊಂಬೆಗಳನ್ನು ಪ್ರದರ್ಶನದಲ್ಲಿ ಬಳಸುತ್ತಿದ್ದಾರೆ. ಒಟ್ಟಾರೆ ಇಂತಹ ಪ್ರದರ್ಶನಗಳು ನಮ್ಮ ಪರಂಪರೆ, ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ನಮ್ಮ ಮನೆಯಲ್ಲಿ ಸುಮಾರು 40 ವರ್ಷಗಳಿಂದ ದಸರಾ ಸಂದರ್ಭದಲ್ಲಿ ಬೊಂಬೆಗಳನ್ನು ಕೂರಿಸುವ ಸಂಪ್ರದಾಯವಿದ್ದು, ಕಳೆದ 20 ವರ್ಷದಿಂದ ಹೊಸ ಮನೆಯಲ್ಲಿ ಜಾಗೆ ಹೆಚ್ಚಳವಾಗಿದ್ದರಿಂದ ಅದನ್ನು ಅಚ್ಚು ಕಟ್ಟಾಗಿ 7 ಹಂತದಲ್ಲಿ ಜೋಡಿಸಿ ಪ್ರದರ್ಶನ ಮಾಡುತ್ತೇವೆ. ನಮ್ಮ ಪರಂಪರೆ ಸಂಸ್ಕೃತಿ ಉಳಿದು ಬೆಳೆಯಲಿ ಎಂಬುದು ನಮ್ಮ ಆಶಯ. ಪ್ರದರ್ಶನ ನೋಡಲು ನಮ್ಮ ಆಪ್ತರು, ಸಂಬಂಧಿಕರು ಬಂದು ನೋಡಿ ಖುಷಿ ಪಡುತ್ತಾರೆ. – ಕಲಾ ರವಿ ಪತ್ತಾರ, ಬನಹಟ್ಟಿ

ಕಿರಣ ಶ್ರೀಶೈಲ ಆಳಗಿ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next