Advertisement

Dasara: 600 ಕೆ.ಜಿ.ಹೊತ್ತು ತಾಲೀಮು ಆರಂಭಿಸಿದ ಕ್ಯಾಪ್ಟನ್‌

10:32 AM Sep 16, 2023 | Team Udayavani |

ಮೈಸೂರು: ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆಗೆ ಗುರುವಾರದಿಂದ ಭಾರ ಹೊರಿಸುವ ತಾಲೀಮು ಆರಂಭವಾಗಿದ್ದು, ಮೊದಲ ದಿನವೇ ಕ್ಯಾಪ್ಟನ್‌ ಅಭಿಮನ್ಯು 600 ಕೆ.ಜಿ.ಭಾರ ಹೊತ್ತು ಬನ್ನಿಮಂಟಪದವರೆಗೆ ನಿರಾಯಾಸವಾಗಿ ಹೆಜ್ಜೆ ಹಾಕಿದ.

Advertisement

ತಾಲೀಮು: ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಗುರುವಾರ ಮಧ್ಯಾಹ್ನ 12.30ಕ್ಕೆ ಸಂಪ್ರದಾಯದಂತೆ ಆನೆಗಳ ಬೆನ್ನಿನ ಮೇಲೆ ಇಡುವ ಗಾದಿ, ನಮ್ದಾ ಹಾಗೂ ಅಭಿಮನ್ಯು, ವಿಜಯ ಮತ್ತು ವರಲಕ್ಷ್ಮೀ ಆನೆಗಳ ಪಾದ ತೊಳೆದು ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಸಿಎಫ್ ಮಾಲತಿಪ್ರಿಯಾ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಪಂಚಫ‌ಲದೊಂದಿಗೆ ಬೆಲ್ಲ ಮತ್ತು ಕಬ್ಬನ್ನು ನೀಡಿದರು. ನಂತರ 1 ಗಂಟೆಗೆ ಅಭಿಮನ್ಯು ಬೆನ್ನಿಗೆ 250 ಕೆ.ಜಿ. ತೂಕದ ಗಾದಿ ಮತ್ತು ನಮ್ದಾ ಬಿಗಿದು, ಅದರಲ್ಲಿ ಕಬ್ಬಿಣದ ತೊಟ್ಟಿಲನ್ನು ಇರಿಸಿ 350 ಕೆ.ಜಿ.ಮರಳು ಮೂಟೆ ಇಡಲಾಯಿತು. ಬಳಿಕ 3 ಆನೆಗಳನ್ನು ಅರಮನೆ ಬಳಿಯ ಅಂಬಾರಿ ಕಟ್ಟುವ ಜಾಗಕ್ಕೆ ಕರೆದೊಯ್ದು ತಾಲೀಮು ಆರಂಭಿಸಲಾಯಿತು.

ಮಧ್ಯಾಹ್ನ 2ಕ್ಕೆ ಅರಮನೆಯಿಂದ ರಾಜಮಾರ್ಗದಲ್ಲಿ 600 ಕೆ.ಜಿ. ಭಾರ ಹೊತ್ತು ಹೊರಟ ಕ್ಯಾಪ್ಟನ್‌ ಅಭಿಮನ್ಯುವನ್ನು ವಿಜಯ, ಧನಂಜಯ, ವರಲಕ್ಷ್ಮೀ, ಕಂಜನ್‌, ಭೀಮ, ಮಹೇಂದ್ರ, ಗೋಪಿ ಹಾಗೂ ಅರ್ಜುನ ಆನೆ ಹಿಂಬಾಲಿಸಿದವು.

ನಿರಾತಂಕವಾಗಿ ಸಾಗಿದ ಅಭಿಮನ್ಯು: ವಿಜಯದಶಮಿಯಂದು 750 ಕೆ.ಜಿ.ತೂಕದ ಚಿನ್ನದ ಅಂಬಾರಿಯನ್ನು ಅರಮನೆಯಿಂದ ಬನ್ನಿಮಂಟಪದವರೆಗೆ ಯಾವುದೇ ಸಮಸ್ಯೆ ಇಲ್ಲದೆ ನಿರಾಯಾಸವಾಗಿ ಹೊತ್ತೂಯ್ಯಲು ಅಂಬಾರಿ ಆನೆ ಅಭಿಮನ್ಯು ಸೇರಿ ಪ್ರಮುಖ ಆನೆಗಳಿಗೆ ಒಣ ತಾಲೀಮು, ಭಾರ ಹೊರುವ ತಾಲೀಮು ಹಾಗೂ ಮರದ ಅಂಬಾರಿ ಹೊರುವ ತಾಲೀಮನ್ನು ಹಂತ ಹಂತವಾಗಿ ನಡೆಸಲಾಗುತ್ತದೆ. ಶುಕ್ರವಾರ, ಅಭಿಮನ್ಯು ಬೆನ್ನಿನ ಮೇಲೆ 250 ಕೆ.ಜಿ.ತೂಕದ ಗಾದಿ, ನಮಾª ಹಾಗೂ 350 ಕೆ.ಜಿ. ತೂಕದ ಮರಳು ಮೂಟೆಯನ್ನಿಟ್ಟು ಭಾರ ಹೊರುವ ತಾಲೀಮು ಆರಂಭಿಸಲಾಯಿತು.

ಧನ್ಯತೆ ಮೆರೆದ ವ್ಯಾಪಾರಿಗಳು: ರಾಜಮಾರ್ಗದಲ್ಲಿ ಗಜಪಡೆ ತಾಲೀಮು ನಡೆಸುವಾಗ ರಸ್ತೆ ಬದಿಯಲ್ಲಿ ಹೂ, ಹಣ್ಣು ವ್ಯಾಪಾರಿಗಳು ಆನೆಗಳನ್ನು ಕಂಡು ಕೈಮುಗಿದು, ತಮ್ಮಲ್ಲಿರುವ ಹೂ, ಹಣ್ಣುಗಳನ್ನು ಆನೆಗಳಿಗೆ ನೀಡುವ ಮೂಲಕ ಧನ್ಯತೆ ಮೆರೆದ ದೃಶ್ಯ ಕಂಡು ಬಂದಿತು. ಸಿಎಫ್ ಮಾಲತಿಪ್ರಿಯಾ ಮಾತನಾಡಿ, ಅರ್ಜುನ ಬಿಟ್ಟು 5 ಗಂಡಾನೆಗಳಿಗೆ ಭಾರ ಹೊರಿಸುವ ತಾಲೀಮನ್ನು ರೊಟೇಷನ್‌ ಆಗಿ 5 ದಿನ ನಡೆಸಲಾಗುತ್ತದೆ. ಸೆಪ್ಟೆಂಬರ್‌ ಕೊನೆ ವಾರ 2ನೇ ಹಂತದಲ್ಲಿ 5 ಆನೆಗಳನ್ನು ಕರೆತರಲಾಗುತ್ತದೆ. ಹಂತ ಹಂತವಾಗಿ ಭಾರ ಹೆಚ್ಚಿಸಿದ ನಂತರ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗುತ್ತದೆ ಎಂದು ತಿಳಿಸಿದರು.

Advertisement

ದಸರೆ ಜಂಬೂಸವಾರಿಗೆ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಆನೆಗಳು ಉತ್ತಮ ಪ್ರದರ್ಶನ ನೀಡು ತ್ತಿವೆ. ಮೊದಲ ಬಾರಿಗೆ ಕರೆತಂದಿರುವ ಕಂಜನ್‌ ಆನೆ ನಗರ ವಾತಾವರಣಕ್ಕೆ ಒಗ್ಗಿಕೊಂಡಿದೆ. 2ನೇ ಹಂತದಲ್ಲಿ ರೋಹಿತ, ಲಕ್ಷ್ಮೀ ಹಾಗೂ ಹಿರಣ್ಯಾ ಎಂಬ ಹೊಸ ಆನೆ ಶೀಘ್ರ ತಂಡವನ್ನು ಸೇರಿಕೊಳ್ಳಲಿವೆ ಎಂದರು.

ನಗರದ ವಾತಾವರಣಕ್ಕೆ ಒಗ್ಗಿದ ಕಂಜನ್‌: ಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಕಂಜನ್‌ ಆನೆ ನಗರ ಪರಿಸರಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದು, ಆನೆಗಳ ಜತೆಗೆ ಯಾವುದೇ ಭಯ, ಆತಂಕವಿಲ್ಲದೇ ತಾಲೀಮಿನಲ್ಲಿ ಭಾಗವಹಿಸುತ್ತಿದೆ. ತಾಲೀಮಿನ ವೇಳೆ ಪಕ್ಕದಲ್ಲಿ ಅಧಿಕಾರಿಗಳ ಕಾರು ಸೇರಿ ಏನೇ ಶಬ್ಧವಾದರೂ ಭಯಪಡದೆ ಧೈರ್ಯದಿಂದ ಹೆಜ್ಜೆ ಇಡುವ ಮೂಲಕ ಅಧಿಕಾರಿಗಳಲ್ಲಿ ಭರವಸೆ ಮೂಡಿಸಿದ್ದಾನೆ.

ಅ.24 ರಂದು ದಸರಾ ಜಂಬೂಸವಾರಿ:

ಮೈಸೂರು: ಐತಿಹಾಸಿಕ ಮೈಸೂರು ದಸರಾ ಉತ್ಸವದ ವಿಜಯದಶಮಿ ದಿನದ ಮೆರವಣಿ ಗೆಯ ನಂದೀ ಧ್ವಜ ಪೂಜೆ ಅ.24 ರ ಮಧ್ಯಾಹ್ನ 1.46 ರಿಂದ 2.08ರ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನೆರವೇರಲಿದೆ.

ನಂತರ ಸಂಜೆ 4.40 ರಿಂದ 5 ಗಂಟೆ ಶುಭ ಮೀನ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಗಣ್ಯರು ಚಿನ್ನದ ಅಂಬಾರಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸುವರು. ಅ.15 ರಂದು ಶರನ್ನವರಾತ್ರಿ ಪ್ರಾರಂಭವಾಗಲಿದೆ. ಶೈಲಾವೃತ, ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆಯನ್ನು ಬೆಳಗ್ಗೆ 10.15 ರಿಂದ 10.36 ರ ಶುಭ ವೃಶ್ಚಿಕ ಲಗ್ನದಲ್ಲಿ ನೆರವೇರಿಸಲಾಗುವುದು. ಅ.16 ರಂದು ಬ್ರಹ್ಮಚಾರಿಣಿ, 17 ರಂದು ಚಂದ್ರಘಂಟಾ, 18 ರಂದು ಕೂಷ್ಮಾಂಡ, 19 ರಂದು ಸ್ಕಂದಮಾತಾ, 20 ರಂದು ಕಾತ್ಯಾಯಿನಿ – ಸರಸ್ವತಿ ಪೂಜೆ ನಡೆಯಲಿದೆ. ಅ.21 ರಂದು ಕಾಳರಾತ್ರಿ -ಮಹಿಷಾಸುರ ಸಂಹಾರ, 22 ರಂದು ದುರ್ಗಾಷ್ಟಮಿ – ಸಿದ್ದಿಧಾತ್ರಿ, 23 ರಂದು ಮಹಾನವಮಿ ಆಯುಧ ಪೂಜೆ, ಗಜಶ್ವಾದಿ ಪೂಜೆ ನಡೆಯಲಿದೆ. ಅ.26ರಂದು ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ರಥೋತ್ಸವ ಜರುಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೊದಲ ಹಂತವಾಗಿ ಅಭಿಮನ್ಯು ಆನೆಗೆ 350ಕೆ.ಜಿ. ತೂಕದ ಮರಳು ಮೂಟೆ ಸೇರಿ 600 ಕೆ.ಜಿ. ಭಾರ ಹೊರಿಸಿ ತಾಲೀಮು ನಡೆಸಲಾಗಿದೆ. ಹಂತ ಹಂತವಾಗಿ ತೂಕವನ್ನು ಹೆಚ್ಚಿಸಿ ಜಂಬೂ ಸವಾರಿ ವೇಳೆಗೆ 750ಕೆ.ಜಿ. ಭಾರ ಹೊರಲು ಗಜಪಡೆಯನ್ನು ಸಜ್ಜುಗೊಳಿಸಲಾಗುತ್ತದೆ. ಅದಕ್ಕಾಗಿ ಈಗಾಗಲೇ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಮಾಲತಿಪ್ರಿಯಾ, ಸಿಎಫ್ ಮೈಸೂರು ವೃತ್ತ

Advertisement

Udayavani is now on Telegram. Click here to join our channel and stay updated with the latest news.

Next