Advertisement

ವರ್ಷಪೂರ್ತಿ ಬೆಂಬಲಿಸಿದ ಅಭಿಮಾನಿಗಳಿಗೆ ದರ್ಶನ್‌ ಥ್ಯಾಂಕ್ಸ್‌

10:23 AM Dec 23, 2019 | Team Udayavani |

ಈ ವರ್ಷ ದರ್ಶನ್‌ ಅಭಿನಯದ ಒಂದಲ್ಲ, ಎರಡಲ್ಲ, ಮೂರು ಚಿತ್ರಗಳು ಬಿಡುಗಡೆಯಾಗಿವೆ. ಹಾಗೆ ನೋಡಿದರೆ, ಕಳೆದ ವರ್ಷ ದರ್ಶನ್‌ ಅಭಿನಯದ ಯಾವ ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬಂದಿರಲಿಲ್ಲ. ಈ ವರ್ಷ “ಯಜಮಾನ’, “ಕುರುಕ್ಷೇತ್ರ’ಹಾಗು “ಒಡೆಯ’ ಸಿನಿಮಾಗಳು ತೆರೆಕಂಡಿವೆ. ಈ ಹಿನ್ನೆಲೆಯಲ್ಲಿ ದರ್ಶನ್‌ ಕೂಡ ಖುಷಿಯಾಗಿದ್ದು, ತಮ್ಮ ಅಭಿಮಾನಿಗಳಿಗೆ ಹಾಗು ಸಿನಿಮಾ ನೋಡಿ ಹರಸಿದ ಪ್ರೇಕ್ಷಕರಿಗೆ ಅಭಿನಂದನೆ ತಿಳಿಸಿದ್ದಾರೆ.

Advertisement

ಈ ಸಂಬಂಧ ಟ್ವೀಟ್‌ ಮಾಡಿರುವ ದರ್ಶನ್‌, “ಕಳೆದ ವರ್ಷ ಯಾವುದೇ ಚಿತ್ರ ಬಿಡುಗಡೆಯಾಗದಿದ್ದರೂ, ತಾಳ್ಮೆಯಿಂದ ಕಾದು ಈ ವರ್ಷ ಬಿಡುಗಡೆಯಾದ ಮೂರು ಚಿತ್ರಗಳಿಗೂ ನೀವು ತೋರಿರುವ ಪ್ರೀತಿ, ಅಭಿಮಾನಕ್ಕೆ ಧನ್ಯವಾದಗಳು. ಮನೆಮಂದಿಯೆಲ್ಲರ ಜೊತೆಗೆ ಬಂದು ಆಶೀರ್ವದಿಸುತ್ತಿರುವ ಪ್ರೇಕ್ಷಕ ಸಮೂಹಕ್ಕೆ ಶುಭಕೋರಿದ ನನ್ನ ಎಲ್ಲಾ ಸೆಲೆಬ್ರಿಟಿಗಳು, ಸ್ನೇಹಿತರಿಗೂ ನಾನು ಸದಾ ಚಿರಋಣಿ.

ನಿಮ್ಮ ದಾಸ ದರ್ಶನ್‌.’ ಎಂದು ಬರೆದುಕೊಳ್ಳುವ ಮೂಲಕ ಅಭಿಮಾನಿ ವರ್ಗಕ್ಕೆ ಧನ್ಯವಾದ ತಿಳಿಸಿದ್ದಾರೆ. ಸದ್ಯಕ್ಕೆ ದರ್ಶನ್‌ ಅಭಿನಯದ “ಒಡೆಯ’ ಸಿನಿಮಾಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಸಿನಿಮಾ ನೋಡಿದವರಿಂದ ಉತ್ತಮ ಪ್ರತಿಕ್ರಿಯೆ ಕೂಡ ಬಂದಿದೆ. ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್‌ ಆಗಿರುವ “ಒಡೆಯ’ ಮೂಲಕ ದರ್ಶನ್‌ ಅವರ ಅಭಿಮಾನಿಗಳಿಗಷ್ಟೇ ಅಲ್ಲ, ಎಲ್ಲಾ ವರ್ಗದವರನ್ನೂ ಖುಷಿಪಡಿಸಿದ್ದಾರೆ.

ಸದ್ಯ “ಒಡೆಯ’ನ ಆರ್ಭಟ ಜೋರಿದೆ.ಇನ್ನು, ತರುಣ್‌ ಸುಧೀರ್‌ ನಿರ್ದೇಶನದ “ರಾಬರ್ಟ್‌’ ಸಿನಿಮಾದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಸದ್ಯಕ್ಕೆ ವಾರಣಾಸಿ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಸಿನಿಮಾ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರದ ಹೊಸ ಸುದ್ದಿಯೆಂದರೆ, ಕ್ರಿಸ್‌ಮಸ್‌ ಹಬ್ಬಕ್ಕೆ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡುವುದಾಗಿ ನಿರ್ದೇಶಕ ತರುಣ್‌ ಸುಧೀರ್‌ ಹೇಳಿದ್ದಾರೆ.

Advertisement

ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, “ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ “ರಾಬರ್ಟ್‌’ ಚಿತ್ರದ ಫ‌ಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಕ್ರಿಸ್ಮಸ್‌ ಹಬ್ಬದಂದು ಬಿಡುಗಡೆ ಮಾಡಲಿದ್ದೇವೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಹೀಗೆ ಇರಲಿ’ ಎಂದಿದ್ದಾರೆ. ಈಗಾಗಲೇ “ರಾಜವೀರ ಮದಕರಿ’ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಅದೊಂದು ಐತಿಹಾಸಿಕ ಚಿತ್ರವಾಗಿ ಹೊರಹೊಮ್ಮಲಿದೆ. ಮುಂದಿನ ವರ್ಷ “ರಾಬರ್ಟ್‌’ ಹಾಗು “ರಾಜವೀರ ಮದಕರಿ’ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next