Advertisement

ದರ್ಶನ್‌ಗೆ ಸಿಕ್ಕ ತಮ್ಮಂದಿರಿವರು …

11:20 AM Aug 30, 2018 | Team Udayavani |

ದರ್ಶನ್‌ ನಾಯಕರಾಗಿರುವ “ಒಡೆಯ’ ಚಿತ್ರದ ಮುಹೂರ್ತ ಇತ್ತೀಚೆಗೆ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆದಿರುವುದು ನಿಮಗೆ ಗೊತ್ತೇ ಇದೆ. ಸೆಪ್ಟೆಂಬರ್‌ 10 ರಿಂದ ಚಿತ್ರೀಕರಣ ಆರಂಭವಾಗಲಿದೆ. ನಿರ್ದೇಶಕ ಎಂ.ಡಿ.ಶ್ರೀಧರ್‌ ಚಿತ್ರದ ಪೂರ್ವತಯಾರಿಯಲ್ಲಿ ಬಿಝಿಯಾಗಿದ್ದಾರೆ. ಈಗಾಗಲೇ ಒಂದಷ್ಟು ಮಂದಿ ಕಲಾವಿದರ ಆಯ್ಕೆ ಪ್ರಕ್ರಿಯೆ ಕೂಡಾ ನಡೆಯುತ್ತಿದೆ. ನಿಮಗೆ ಗೊತ್ತಿರುವಂತೆ “ಒಡೆಯ’ ತಮಿಳಿನ “ವೀರಂ’ ಚಿತ್ರದ ರೀಮೇಕ್‌.

Advertisement

ತಮಿಳಿನಲ್ಲಿ ಅಜಿತ್‌ ಮಾಡಿರುವ ಪಾತ್ರವನ್ನು ಇಲ್ಲಿ ದರ್ಶನ್‌ ಮಾಡುತ್ತಿದ್ದಾರೆ. ಮೂಲ ಚಿತ್ರದಲ್ಲಿ ಹೀರೋಗೆ ನಾಲ್ವರು ತಮ್ಮಂದಿರುತ್ತಾರೆ. ಹಾಗಾದರೆ, ಇಲ್ಲಿ ಆ ಪಾತ್ರಗಳನ್ನು ಯಾರು ಮಾಡುತ್ತಾರೆಂಬ ಕುತೂಹಲ ಸಹಜವಾಗಿ ಇರುತ್ತದೆ. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಯಶಸ್‌, ಪಂಕಜ್‌, ನಿರಂಜನ್‌ ಹಾಗೂ ಸಮರ್ಥ್ ಮಾಡುತ್ತಿದ್ದಾರೆ. ಈಗಾಗಲೇ ದರ್ಶನ್‌ ಅವರ ಕೆಲವು ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಅವರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿರುವ ಯಶಸ್‌, “ಒಡೆಯ’ದಲ್ಲಿ ದರ್ಶನ್‌ ತಮ್ಮನಾಗಿ ನಟಿಸುತ್ತಿದ್ದಾರೆ.

ಈ ಮೂಲಕ ದರ್ಶನ್‌ ಅವರ ಮತ್ತೂಂದು ಸಿನಿಮಾದಲ್ಲಿ ಯಶಸ್‌ಗೆ ಅವಕಾಶ ಸಿಕ್ಕಂತಾಗಿದೆ. ಇನ್ನು, ಹಿರಿಯ ನಿರ್ದೇಶಕ ಎಸ್‌. ನಾರಾಯಣ್‌ ಅವರ ಪುತ್ರ ಪಂಕಜ್‌ ಕೂಡಾ ದರ್ಶನ್‌ ತಮ್ಮನಾಗಿ ನಟಿಸುತ್ತಿದ್ದಾರೆ. ಉಳಿದಂತೆ ನಿರಂಜನ್‌ ಹಾಗೂ ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರ ತಮ್ಮನ ಮಗ ಸಮರ್ಥ್ ಕೂಡಾ ದರ್ಶನ್‌ ತಮ್ಮನಾಗಿ ನಟಿಸುತ್ತಿದ್ದಾರೆ. ಈ ಮೂಲಕ “ಒಡೆಯ’ನಿಗೆ ನಾಲ್ವರು ತಮ್ಮಂದಿರು ಸಿಕ್ಕಿದ್ದಾರೆ. 

ಇನ್ನು ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. ದರ್ಶನ್‌ ಎತ್ತರಕ್ಕೆ ಹೊಂದುವ ನಾಯಕಿಯನ್ನು ಚಿತ್ರತಂಡ ಹುಡುಕುತ್ತಿದ್ದು, ಸದ್ಯದಲ್ಲೇ ಅಂತಿಮವಾಗಲಿದೆ. ಉಳಿದಂತೆ ಚಿತ್ರದಲ್ಲಿ  ರವಿಶಂಕರ್‌, ದೇವರಾಜ್‌, ಚಿಕ್ಕಣ್ಣ, ಸಾಧು ಕೋಕಿಲ ನಟಿಸುತ್ತಿದ್ದಾರೆ. ಇನ್ನು, ಮೊದಲ ಹಂತದ ಚಿತ್ರೀಕರಣ ಮೈಸೂರಿನಲ್ಲೇ 35 ರಿಂದ 40 ದಿನಗಳ ಕಾಲ ನಡೆಯಲಿದೆ. ಬಳಿಕ ಬೆಂಗಳೂರು, ಹೈದ್ರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next