Advertisement

ಆಕರ್ಷಣೀಯ ನೃತ್ಯ ನಿಕೇತನದ ನರ್ತನ ಯಾನ

01:22 AM Jan 17, 2020 | mahesh |

ಶಾಸ್ತ್ರೀಯ ನೃತ್ಯದ ಚೌಕಟ್ಟಿನಲ್ಲಿಯೇ ನಡೆದ ಕೃಷ್ಣ ಲೀಲಾ ವಿನೋದದ ಮೊದಲ ರೂಪಕ ಸಂವಹನದ ಯಾವ ನೆಲೆಯಲ್ಲಿಯೂ ತೊಡಕಾಗದೆ ಆಕರ್ಷಣೀಯವಾಗಿತ್ತು. ಕವಿ ನಾರಾಯಣ ಐತಾಳರ ಸಾಹಿತ್ಯ ಕೃತಿ ರಾಸಲೀಲೆ ಆಧರಿಸಿದ ಈ ರೂಪಕ ತನ್ನ ಚುರುಕು ಸಂಚಾರದಲ್ಲಿ ಅದಕ್ಕೊಪ್ಪುವ ನಾಟ್ಯಬಂಧಗಳೊಂದಿಗೆ ಸೆಳೆಯಿತು.

Advertisement

ವಿ|ಲಕ್ಷ್ಮೀ ಗುರುರಾಜ್‌ ನೇತೃತ್ವದ ನೃತ್ಯನಿಕೇತನ ಉಡುಪಿಯು ತನ್ನ ಸಾಧನೆಯ ಸಂಕೇತವಾಗಿ ನೃತ್ಯಾಸಕ್ತರ ಗಮನ ಸೆಳೆಯುವಂಥ ಕ್ರಿಯಾಶೀಲ ಹೆಜ್ಜೆಯನ್ನಿರಿಸಿದೆ. ಮೂರು ದಶಕಗಳ ತನ್ನ ಅಸ್ತಿತ್ವದ ಸಿಂಹಾವಲೋಕನದೊಂದಿಗೆ ಉತ್ಸಾಹದ ಮುನ್ನೋಟಕ್ಕೆ ಅಣಿಯಾಗಲು ಸಂಭ್ರಮದಿಂದ “ತ್ರಿದಶಮಾನ ನರ್ತನಯಾನ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಿರಿಯ ವಿದ್ವಾಂಸ ಡಾ| ಬನ್ನಂಜೆ ಗೋವಿಂದ ಆಚಾರ್ಯರ ಪ್ರೋತ್ಸಾಹದ ನುಡಿಗಳೊಂದಿಗೆ ಇತ್ತೀಚೆಗೆ ಸಂಯೋಜಿಸಿದೆ. ಲಕ್ಷ್ಮೀ ಗುರುರಾಜ್‌ ತನ್ನ ಸಂಘಟನಾ ಶಕ್ತಿ ಮತ್ತು ಕಲಾಪ್ರತಿಭೆಯನ್ನು ಏಕನಿಟ್ಟಿನಲ್ಲಿ ಶ್ರುತಪಡಿಸಿದರು.

ಉಡುಪಿ ಅಂಬಲಪಾಡಿಯ ಜನಾರ್ದನಸ್ವಾಮಿ ಬಯಲು ರಂಗಮಂದಿರದಲ್ಲಿ ನಡೆದ ಈ ಯಾನದ ಪ್ರಾರಂಭ ಸಂಸ್ಥೆಯ ಮುಂದಿನ ಕನಸುಗಳ ಬಗೆಗೆ ಕುತೂಹಲವನ್ನುಂಟುಮಾಡುವಂತೆ ಮೂಡಿ ಬಂದಿತು. ಸುಮಾರು 150ಕ್ಕೂ ಮಿಕ್ಕಿ ಎಳೆಯ-ಇಂದಿನ, ಹಿಂದಿನ ಶಿಷ್ಯವೃಂದದ ನೃತ್ಯ ಬದ್ಧ ಶೋಭಾಯಾತ್ರೆಯು ದೇವಿಯ ಸನ್ನಿಧಾನದಲ್ಲಿ ಮಂಗಲಾರ್ಪಿತವಾದಾಗ ನೋಟಕರಿಗೆ ಭಾರತೀಯ ನೃತ್ಯದ ಅಧ್ಯಾತ್ಮದ ಬೇರು ಚಿಗುರಿದಂತನ್ನಿಸಿತು.

ಸಭಾಕಾರ್ಯಕ್ರಮದ ಅನಂತರ ರಸಿಕರನ್ನು ರಂಜಿಸಿದ ಎರಡು ನೃತ್ಯರೂಪಕಗಳು ಲಕ್ಷ್ಮೀ ಗುರುರಾಜರ ನೃತ್ಯನೋಟಗಳ ಮತ್ತು ಅಧ್ಯಯನದ ಪರಿಣಾಮಕಾರಿ ಫ‌ಲಿತಾಂಶವಾಗಿ ಪ್ರದರ್ಶನಗೊಂಡಿದೆ. ಶಾಸ್ತ್ರೀಯ ನೃತ್ಯದ ಚೌಕಟ್ಟಿನಲ್ಲಿಯೇ ನಡೆದ ಸುಪರಿಚಿತ ಕೃಷ್ಣ ಲೀಲಾ ವಿನೋದದ ಮೊದಲ ರೂಪಕ ಸಂವಹನದ ಯಾವ ನೆಲೆಯಲ್ಲಿಯೂ ತೊಡಕಾಗದೆ ಆಕರ್ಷಣೀಯವಾಗಿತ್ತು. ಕುಂದಾಪುರದ ಕವಿ ನಾರಾಯಣ ಐತಾಳರ ಸಾಹಿತ್ಯ ಕೃತಿ ರಾಸಲೀಲೆ ಆಧರಿಸಿದ ಈ ರೂಪಕ ತನ್ನ ಚುರುಕು ಸಂಚಾರದಲ್ಲಿ ಅದಕ್ಕೊಪ್ಪುವ ನಾಟ್ಯಬಂಧಗಳೊಂದಿಗೆ ಸಹೃದಯರನ್ನು ಸೆಳೆಯಿತು. ಬಾಲಕೃಷ್ಣನ ತುಂಟತನದ ಅಭಿನಯ ಒಂದು ಮಿತಿಯೊಳಗೆ ವಸ್ತುವಿಗೆ ಮೆರುಗಿನ ಎತ್ತರವನ್ನು ನೀಡಿತು. ಕೃಷ್ಣನ ಕೊಳಲಿನ ಕರೆಗೆ ಆಕರ್ಷಿತರಾಗಿ ರಂಗಕ್ಕೆ ಧುಮುಕಿದ ಗೋಪಗೋಪಿಕೆಯರು ರೂಪಕದುದ್ದಕ್ಕೂ ತಮ್ಮ ಕೃಷ್ಣಾಸಕ್ತಿಯನ್ನು ಭಾವಾಭಿವ್ಯಕ್ತಿಯ ಮೂಲಕ ವ್ಯಕ್ತ ಪಡಿಸುತ್ತಾ ರಂಗಕೃತಿಯ ರಸಕ್ಷಣಗಳನ್ನು ಸಹೃದಯರು ಆಸ್ವಾದಿಸುವಂತೆ ಅಭಿನಯಿಸಿದರು. ಗೋಪಿಕೆಯರ ಕ್ಷಿಪ್ರ ಆದರೆ ಕಲಾತ್ಮಕ ನಡೆ ರಂಗ ಲೇಖನಕ್ಕೆ ಶಿಸ್ತುಬದ್ಧ ವಿನ್ಯಾಸವನ್ನು ನೀಡಿತು.

ಎರಡನೇ ಪ್ರಯೋಗ “ಕನಕಮೃಗ’ (ರಚನೆ: ಡಾ| ಉಪ್ಪಂಗಳ ರಾಮ ಭಟ್‌) ನೃತ್ಯನಾಟಕ ಪರಿಧಿಯಲ್ಲಿ ವಿವಿಧ ರಂಗಶಿಲ್ಪಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು. ರಾಮಾಯಣದ ಸೀತಾಪಹರಣದ ಕಥಾವಸ್ತುವನ್ನೊಳಗೊಂಡ ಈ ರೂಪಕವು ಕಾವ್ಯಧ್ವನಿ – ನೃತ್ಯ ಸಮ್ಮಿಲನದ ಸರಳ ಸುಂದರ ಚೌಕಟ್ಟಿನೊಳಗೆ ನೇರವಾಗಿ ರಸಿಕರನ್ನು ಆಕರ್ಷಿಸಿತು. ಒಂದು ಸಾಹಿತ್ಯಕೃತಿಯನ್ನು ಸರಳವಾಗಿ ದುಡಿಸಿಕೊಳ್ಳುವುದರಲ್ಲಿ ಈ ನೃತ್ಯನಾಟಕ ಯಶಸ್ಸನ್ನು ಕಂಡಿತು. ರಾವಣನ ಪ್ರವೇಶದ ಭ್ರಮರಿ ಮತ್ತು ಕ್ರೌರ್ಯ-ಚಾಂಚಲ್ಯದ ಅಭಿನಯ ಮನಸೆಳೆಯುವಂತಿತ್ತು.

Advertisement

ಎರಡೂ ಪ್ರಯೋಗಗಳಲ್ಲಿ – ಶಾಸ್ತ್ರೀಯ ಚೌಕಟ್ಟನ್ನು ಹೊಂದಿದ್ದರೂ ನೃತ್ಯಾಂಶಗಳ ಪ್ರತಿಪಾದನೆಯ ಕೊರತೆ – ಶಾಸ್ತ್ರೀಯ ನೃತ್ಯಾರಾಧಕರಿಗೆ ತುಸು ನಿರಾಸೆಯನ್ನುಂಟುಮಾಡೀತು. ಆದರೆ ನೃತ್ಯ-ನೃತ್ತದ ವ್ಯಾಕರಣ ಬೇರೆ, ನಾಟಕದ ಪಾತ್ರಾಭಿನಯ ಬೇರೆ ಎಂಬ ಸೂಕ್ಷ್ಮವನ್ನು ಆಹಾರ್ಯದ ಮತ್ತು ರಂಗನಡೆಯ ದೃಷ್ಟಿಯಿಂದ ಚೆನ್ನಾಗಿ ಅಥೆìçಸಿ ನಿರ್ದೇಶಕರು ಈ ದಾರಿಯನ್ನು ಹಿಡಿದಿ¨ªಾರೆ ಎಂದೆನ್ನಿಸಿದರೆ ಈ ಕೊರತೆ ರಸಾಸ್ವಾದನೆಗೆ ಅಡ್ಡಿಯಾಗದು. ನೃತ್ಯದ ಶಾಸ್ತ್ರೀಯತೆಯ ಸೂಕ್ಷ್ಮಗಳನ್ನರಿಯದೆಯೂ ಕಲಾಸಹೃದಯರು ಮತ್ತು ತಮ್ಮ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿರುವ ಅಪಾರ ಸಂಖ್ಯೆಯ ಹೆತ್ತವರು ಆನಂದಿಸಲು ಅನುಕೂಲವಾಗುವಂತೆ ಈ ರೂಪಕಗಳು ಸಂಯೋಜನೆಗೊಂಡಿದ್ದವು.

ಸೂಕ್ತ ಗಾಯನ- ವಾದನಗಳ ಹಿನ್ನೆಲೆ ಪೂರಕ ವಾತಾವರಣದ ನಿರ್ಮಾಣಕ್ಕೆ ಸಹಕಾರಿಯಾಯಿತು. ಎರಡೂ ಪ್ರಯೋಗಗಳಲ್ಲಿ ನವಿಲು ಜಿಂಕೆ ಹಂಸಗಳ ನರ್ತನ ವಿಲಾಸವು ಆಕರ್ಷಣೀಯವಾಗಿ ಮೂಡಿಬಂದಿದೆ.

ಉದ್ಯಾವರ ಮಾಧವ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next