Advertisement

ನೃತ್ಯಲೋಕಾಂತರ್ಗತ ಗುರು  ಕೆ. ಮುರಲೀಧರ ರಾವ್‌ 

03:45 AM May 12, 2017 | Team Udayavani |

ಓರ್ವ ನೃತ್ಯಸೇವಕನಾಗಿ, ಪರಿವ್ರಾಜಕನಾಗಿ 94ರ ಹರೆಯದ ಸಾರ್ಥಕ ಜೀವನವನ್ನು ಅನುಭವಿಸಿ ಅಸ್ತಮಿಸಿದವರು ಭರತನಾಟ್ಯ ವಿದ್ವಾನ್‌ ಕೆ. ಮುರಳೀಧರ ರಾವ್‌. 1923ರಲ್ಲಿ ಕಾಸರಗೋಡಿನಲ್ಲಿ ಜನಿಸಿದ ಮುರಳೀಧರ ರಾಯರು ತನ್ನ ತಂದೆಯವರಿಂದ ನೃತ್ಯಾಭ್ಯಾಸಕ್ಕೆ ಸ್ಫೂರ್ತಿ ಪಡೆದರು. ಬಾಲ್ಯದ ಬಡತನದಿಂದಾಗಿ ಎಸ್‌ಎಸ್‌ಎಲ್‌ಸಿ, ಬೆರಳಚ್ಚು, ಶೀಘ್ರಲಿಪಿ ಶಿಕ್ಷಣಗಳೊಂದಿಗೆ ತನಗೆ ಅಪರಿಮಿತ ಆಸಕ್ತಿಯಿದ್ದ ನೃತ್ಯ, ಯಕ್ಷಗಾನ, ಚಿತ್ರಕಲೆ, ಛಾಯಾಗ್ರಹಣ ಮೊದಲಾದ ಕಲೆಗಳಲ್ಲಿಯೂ ವೃತ್ತಿಪರ ಮಟ್ಟದ ಪರಿಶ್ರಮವನ್ನು ಅವರು ಸಂಪಾದಿಸಿದ್ದು ಸ್ವಾಧ್ಯಾಯ, ಸ್ವಸಾಮರ್ಥ್ಯಗಳಿಂದ. ಮಂಗಳೂರಿನಲ್ಲಿ ರೆವಿನ್ಯೂ ವಿಭಾಗ ದಲ್ಲಿ ವೃತ್ತಿಜೀವನ ಆರಂಭಿಸಿದರೂ ಕಲಾಪ್ರಪಂಚದ ಒಳ- ಹೊರಗನ್ನು ಇನ್ನಷ್ಟು ಗ್ರಹಿಸಬೇಕೆಂಬ ಹಠದಿಂದ ಮುಂಬಯಿ, ಮದ್ರಾಸುಗಳಲ್ಲಿ ಅಲೆದರು. ಅಶನ, ವಸನಕ್ಕೆ ತೊಂದರೆಯಾದರೂ ಅಡ್ಡಿಯಿಲ್ಲ ಎಂಬಂತೆ ಗ್ರಂಥ ಖರೀದಿ, ಅಧ್ಯಯನಕ್ಕೆ ಹಣ ವ್ಯಯಿಸಿದರು. ಈ ತಿರುಗಾಟದಲ್ಲಿ ಅನೇಕರ ಪರಿಚಯ, ಒಡನಾಟದಿಂದ ಹಲವಾರು ಭಾಷೆಗಳಲ್ಲಿ ಪರಿಣತಿ ಪಡೆದರು. ಮುಂಬಯಿ ಯಲ್ಲಿ ಪರಿಚಿತರಾದ ಕಥಕ್ಕಳಿ ನೃತ್ಯಕೋವಿದ ರಾಜನ್‌ ಅಯ್ಯರ್‌ ಅವರಲ್ಲಿ ವಿಧ್ಯುಕ್ತವಾಗಿ ನೃತ್ಯ ಕಲಿಕೆ ಆರಂಭಿಸಿದರು. ಬಳಿಕ ಗುರುವಿನೊಡನೆ ಮಂಗಳೂರಿಗೆ ಮರಳಿ, ನೆಲೆಸಿದರು.

Advertisement

ಮಂಗಳೂರಿನಲ್ಲಿ ಈ ಗುರು-ಶಿಷ್ಯರು ಒಡಗೂಡಿ ಲಲಿತಕಲಾ ಕೇಂದ್ರವೆಂಬ ಕಲಾಸಂಸ್ಥೆಯನ್ನು ಆರಂಭಿಸಿದ್ದು ಈ ಭಾಗದ ನೃತ್ಯಾಸಕ್ತರ ಸೌಭಾಗ್ಯ. ಆದರೆ ಶುದ್ಧ, ಸಂಪ್ರದಾಯಶಿಷ್ಟ ನೃತ್ಯವನ್ನು ಪಡೆಯಬೇಕೆಂಬ ಮುರಳೀಧರ ರಾಯರ ಛಲ, ಬದ್ಧತೆ ಇನ್ನೂ ಇಂಗಿರಲಿಲ್ಲ. ಮತ್ತೆ ಮದರಾಸಿಗೆ ತೆರಳಿದರು, ಪ್ರಖ್ಯಾತ ನೃತ್ಯಪಟು ಚೊಕ್ಕಲಿಂಗಂ ಪಿಳ್ಳೆಯವರಲ್ಲಿ ಅಭ್ಯಾಸ ಆರಂಭಿಸಿದರು. ಆದರೆ ಪಂದ ನಲ್ಲೂರು ಶೈಲಿಯ ನೃತ್ಯಾಭ್ಯಾಸವನ್ನು ಆ ಗುರುಗಳಲ್ಲಿ ಸುಖ ಸಂವಹನದ ಮೂಲಕ ನಡೆಸಲು ಅಸಾಧ್ಯವಾದಾಗ, ಗುರುಗಳ ಆದೇಶದ ಮೇರೆಗೆ ಅವರದ್ದೇ ಶಿಷ್ಯ, ಕೊಚ್ಚಿಯ ಅಭಿನಯ ಶಿರೋಮಣಿ ರಾಜರತ್ನಂ ಪಿಳ್ಳೆಯವರ ಶಿಷ್ಯತ್ವ ಸ್ವೀಕರಿಸಿದರು. ಆದರೆ ಅಲ್ಲಿಯೂ ಹೆಚ್ಚು ಕಾಲ ಅಭ್ಯಾಸ ಸಾಧ್ಯವಾಗಲಿಲ್ಲ.

ಮುಂದಿನದೆಲ್ಲ ಮುರಳೀಧರ ರಾಯರ ಏಕಲವ್ಯ ಸಾಧನೆ. ಸ್ವಾಧ್ಯಾಯ, ಕಠಿನ ಪರಿಶ್ರಮದಿಂದ ಭರತನಾಟ್ಯದ ಶಾಸ್ತ್ರ ಮತ್ತು ಪ್ರಯೋಗದ ವಿವಿಧ ಮಜಲುಗಳನ್ನು ಗ್ರಹಿಸುತ್ತಾ ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡರು. ನೃತ್ತ ಹಾಗೂ ಅಭಿನಯ ವಿಭಾಗಗಳಲ್ಲಿ ಸಿದ್ಧಹಸ್ತರಾದರು. ತಾವು ಗಳಿಸಿದ ಅಪಾರ ಜ್ಞಾನಸಂಪತ್ತನ್ನು ಶಿಷ್ಯರಿಗೆ ಧಾರೆಯೆರೆಯುವುದರಲ್ಲಿ, ಭರತ ನಾಟ್ಯದ ಶಾಸ್ತ್ರ ಮತ್ತು ಪ್ರಯೋಗ ವಿಭಾಗಗಳೆರಡರಲ್ಲೂ ಸಮನಾಗಿ ಶಿಷ್ಯರನ್ನು ತಯಾರುಗೊಳಿಸುವುದರಲ್ಲಿ ಮುರಳೀ ಧರ ರಾಯರಿಗೆ ಅವರೇ ಸಾಟಿ. ಹೀಗೆ ಶಿಷ್ಯವರ್ಗವನ್ನು ಭರತನಾಟ್ಯ ಶಾಸ್ತ್ರ ಮತ್ತು ಪ್ರಯೋಗ ಎರಡರಲ್ಲೂ ಸಮನಾಗಿ ತರಬೇತಿಗೊಳಿಸಿದ್ದರಿಂದಲೇ ಅವರು ಅನ್ವರ್ಥ “ಗುರು’.

ಮುರಳೀಧರ ರಾಯರು ಅನೇಕ ವಿದ್ಯಾಸಂಸ್ಥೆಗಳ ವಿದ್ಯಾರ್ಥಿನಿಯರಿಗೆ ನೃತ್ಯ ಸಂಯೋಜನೆ, ನೃತ್ಯ ನಾಟಕಗಳ ರಂಗನಿರ್ದೇಶನ ಮಾಡುತ್ತಾ ಪ್ರಸಿದ್ಧಿ ಪಡೆದರು. ಈ ಸಮಯ ದಲ್ಲಿ ಅವರ ಶಿಷ್ಯೆಯಾಗಿ ಕಲಿತ ಮೂಡಬಿದ್ರೆಯ ವಸುಂಧರಾ ಇಂದು ಅತ್ಯಂತ ಉನ್ನತ ಮಟ್ಟದ ನೃತಾಂಗನೆ ಆಗಿದ್ದಾರೆ. ಸಾಮಾನ್ಯ ನೃತ್ಯದ ಬಂಧಗಳಲ್ಲದೆ, ಕರ್ನಾಟಕ ಶಾಸ್ತ್ರೀಯ ಸಂಗೀತದ ಹಲವಾರು ಕೃತಿಗಳಿಗೆ, ಹಲವಾರು ತಮಿಳು ಪದಂಗಳಿಗೆ, ಜಾವಳಿ, ಜಯದೇವನ ಅಷ್ಟಪದಿಗಳಿಗೆ ಇವರು ನೃತ್ಯ ಸಂಯೋಜಿಸಿದ ಶೈಲಿ ಅನನ್ಯ. ಈ ಸಂಯೋಜನೆಯಲ್ಲಿ ನೃತ್ತ ಮತ್ತು ಅಭಿನಯ ಸಮಪಾಕದಲ್ಲಿದ್ದುದು ವಿಶೇಷ. 

ತಾನು ಅನ್ಯಾನ್ಯ ಗುರುಗಳಿಂದ, ಸ್ವಾಧ್ಯಾಯದಿಂದ ಕಲಿತೆ ಎಂಬುದನ್ನು ಮರೆಯದ ಮುರಳೀಧರ ರಾಯರು ಯಾವುದೇ ಜ್ಞಾನದಾಹಿ ವಿದ್ಯಾರ್ಥಿ ತನ್ನ ಬಳಿ ಬಂದಾಗಲೂ ನಿರ್ವಂಚನೆಯಿಂದ ತನ್ನಲ್ಲಿದ್ದ ಎಲ್ಲ ವಿದ್ಯೆಯನ್ನು ಧಾರೆಯೆರೆ ಯುವ ನಿರ್ಮಲ ಮನಸ್ಸಿನವರಾಗಿದ್ದರು. ವಿದ್ಯಾರ್ಥಿಗಳಿಗೆ ಒಂದು ನೃತ್ಯಬಂಧದ ಪರಿಪೂರ್ಣ ಜ್ಞಾನ, ಸನ್ನಿವೇಶ, ಮನೋಧರ್ಮ ಅಭಿನಯಗಳ ಬೋಧನೆಯೊಂದಿಗೆ ಅದಕ್ಕೆ ಸಂಬಂಧಿಸಿ ಶಾಸ್ತ್ರದ ನೆಲೆಗಟ್ಟನ್ನೂ ಪರಿಚಯ ಮಾಡಿಸಿ ಕೊಡುತ್ತಿದ್ದುದು ಅವರ ಮುಖ್ಯ ಗುಣ. ಹೀಗೆ “ಮುರಳಿ ಮಾಸ್ಟ್ರ’ ನೃತ್ಯ ಗರಡಿಯಲ್ಲಿ ರೂಪುಗೊಂಡ ನೃತ್ಯ ಕಲಾವಿದರಲ್ಲಿ ಮೈಸೂರಿನ ನಂದಿನಿ ಅಯ್ಯಂಗಾರ್‌, ವಾಣಿ ರಮೇಶ್‌, ಕೃಪಾ ಪಡೆ, ವಸುಂಧರಾ ದೊರೆಸ್ವಾಮಿ, ಮಂಗಳೂರಿನ ಶ್ರೀವಿದ್ಯಾ, ವಿದ್ಯಾಶ್ರೀ ಹಾಗೂ ಫ್ರಾನ್ಸಿನ ಮನೋಚ್ಛಾಯಾ ಎದ್ದು ಕಾಣುವ ಹೆಸರುಗಳು. ಕರ್ನಾಟಕ ಸಂಗೀತ -ನೃತ್ಯದ ಬೋರ್ಡ್‌ ಪರೀಕ್ಷೆಗಳು ಪ್ರಾರಂಭವಾದ ಸಮಯದಲ್ಲಿ ಕರಾವಳಿಯ ನೃತ್ಯೋತ್ಸುಕರೆಲ್ಲ ಸಿದ್ಧರಾಗುತ್ತಿದ್ದಾಗ, ಮೈಸೂರಿಗೆ ತೆರಳಿ ಮುರಳೀಧರ ರಾಯರ ಮಾರ್ಗದರ್ಶನ ಪಡೆದ ದಿನಗಳಿನ್ನೂ ನೆನಪಿನಲ್ಲಿವೆ. ಆಗ ನಮಗೆಲ್ಲ ಶಾಸ್ತ್ರದ ಬಗ್ಗೆ ವಿಶೇಷವಾದ ಮಾಹಿತಿಗಳನ್ನು ನೀಡಿ, ಹರಸಿದ್ದು ಈ ಮಹಾನ್‌ ವ್ಯಕ್ತಿಯ ಬಹು ಸರಳ ಗುಣಕ್ಕೆ ಸಾಕ್ಷಿಯಂತಿತ್ತು. 

Advertisement

ಮುರಳೀಧರ ರಾಯರು ಮಂಗಳೂರಿನಲ್ಲಿ ಬಹುಕಾಲ ಇದ್ದು ಮುಂದೆ ತಮ್ಮ ವಾಸವನ್ನು ಕಾರಣಾಂತರಗಳಿಂದ ಮೈಸೂರಿಗೆ ಸ್ಥಳಾಂತರಿಸಿದರು. ಅಲ್ಲಿಯೂ ನೃತ್ಯ ಶಿಕ್ಷಣವನ್ನೇ ಪ್ರಧಾನವಾಗಿರಿಸಿಕೊಂಡರು. ಮೈಸೂರಿನಲ್ಲಿ ದಿಗ್ಗಜ ಸಾಹಿತಿಗಳ ಪರಿಚಯ -ಒಡನಾಟಗಳಿಂದ ಇವರ ಸಾಧನೆ ನೃತ್ಯದಿಂದಾಚೆಗೆ ಸಾಹಿತ್ಯಲೋಕಕ್ಕೂ ವಿಸ್ತರಿಸಿತು. ಅಲ್ಲಿ ಅವರಿಗೆ ಅನೇಕ ಶಿಕ್ಷಣತಜ್ಞರ ಗೆಳೆತನವೂ ಒದಗಿತು. ಹೀಗಾಗಿ ಮೈಸೂರು ವಿವಿ ಪ್ರಕಟಿಸಿದ ಕಿರಿಯರ ಮತ್ತು ಪ್ರೌಢರ ವಿಶ್ವಕೋಶಗಳಲ್ಲಿ ಮುರಳೀಧರ ರಾಯರ ರೇಖಾ ಚಿತ್ರಗಳು, ನೃತ್ಯಭಂಗಿಗಳ ಅಪೂರ್ವ ಛಾಯಾಚಿತ್ರಗಳು ಕಂಗೊಳಿಸುವಂತಾಯಿತು; ನೃತ್ಯಗುರು ವಾಗಿಯಷ್ಟೇ ಮಾನ್ಯರಾಗಿದ್ದ ಅವರ ಪ್ರತಿಭೆಯ ಇನ್ನೊಂದು ಆಯಾಮವೂ ಲೋಕಮುಖಕ್ಕೆ ತಿಳಿಯುವಂತಾಯಿತು. 

ಯುವಕನಾಗಿದ್ದಾಗಿನಿಂದಲೂ ಓದುವುದು, ಓದಿದ್ದರ ಸಾರವನ್ನು ದಾಖಲಿಸುವುದು ಅವರ ಹವ್ಯಾಸ. ಈ ಅಪರೂಪದ ಗುಣದಿಂದಾಗಿಯೇ ನಾಟ್ಯಶಾಸ್ತ್ರದಂತಹ ಉದ್ಧಾಮ ಗ್ರಂಥಗಳ ಹತ್ತು ಹಲವು ವಿಷಯಗಳು, ಅಪೂರ್ವ ಒಳನೋಟಗಳು ಕ್ರಮಬದ್ಧ ಟಿಪ್ಪಣಿಗಳಾಗಿ ದಾಖಲುಗೊಂಡು ಇವೆ. ಹೀಗೆ ಗ್ರಂಥಸ್ಥ ವಿಚಾರಗಳೊಡನೆ ತಮ್ಮ ಅಭಿಪ್ರಾಯ ಗಳನ್ನೂ ಕ್ರೋಢೀಕರಿಸಿ ಅವರು ದಾಖಲಿಸಿರುವ ಟಿಪ್ಪಣಿ ಪುಸ್ತಕಗಳು ಒಂದು ಅಪೂರ್ವ ನಿಧಿ. ತಮ್ಮ ಮುತ್ತಿನಂಥ ಅಕ್ಷರಗಳಲ್ಲಿ ಬರೆದು, ಅಗತ್ಯವಿದ್ದಲ್ಲಿ ಕೆಂಪು- ಕಪ್ಪು ಮಸಿಯಲ್ಲಿ ಗುರುತು ಮಾಡಿರುವ; ಪೀಠಿಕೆ, ಅಧ್ಯಾಯ, ಅನುಕ್ರಮಣಿಕೆ, ಪುಟಸಂಖ್ಯೆಗಳು ಉಲ್ಲೇಖಗೊಂಡು, ಅಲ್ಲಲ್ಲಿ ಸ್ವರಚಿತ ರೇಖಾಚಿತ್ರಗಳೊಂದಿಗೆ ಶೋಭಿಸುವ ಈ ಪುಸ್ತಕಗಳು ಬೃಹತ್‌ ಸಂಪತ್ತು. ಯಾರೇ ತಮ್ಮ ಬಳಿ ಅಭ್ಯಾಸಿಯಾಗಿ ಬಂದರೂ ತಾವೇ ರಚಿಸಿದ ಈ ಪುಸ್ತಕಗಳನ್ನು ಕೊಟ್ಟು, ಚರ್ಚಿಸಿ ಮನ ದಟ್ಟು ಮಾಡುವುದು ಅವರ “ಗುರುತ್ವ’ದ ಲಕ್ಷಣವಾಗಿತ್ತು. 

ತಮ್ಮ ನೃತ್ಯ ಬದುಕಿನ ಉಚ್ಛಾ†ಯ ಸ್ಥಿತಿಯಲ್ಲಿ ಮೈಸೂರಿ ನಲ್ಲಿದ್ದ ಮುರಳೀಧರ ರಾಯರು ತಮ್ಮ ಇಳಿವಯಸ್ಸಿನಲ್ಲಿ ಮಂಗಳೂರಿಗೆ ಮರಳಿದರು. ಅಖಂಡ ಬ್ರಹ್ಮಚಾರಿಯಾಗಿ, ನಿಸ್ವಾರ್ಥಿಯಾಗಿ ಬದುಕಿದ ಅವರು ನಿಜಾರ್ಥದಲ್ಲಿ ಅನಿಕೇತನರು. ಪುಸ್ತಕಗಳೇ ಅವರ ಆಸ್ತಿಯಾಗಿತ್ತು. ಮಂಗಳೂರಿನಲ್ಲಿದ್ದ ಕುಟುಂಬಿಕರೂ ದೂರದಲ್ಲಿ ನೆಲೆಸಿದಾಗ, ತಮ್ಮ ಆಪ್ತ ಶಿಷ್ಯೆಯರಲ್ಲೇ ಅವರು ನೆಲೆ ಕಂಡುಕೊಂಡರು. ಅಂತಹ ಶಿಷ್ಯಶ್ರೇಷ್ಠರಲ್ಲಿ ಎದ್ದುಕಾಣುವ ಶ್ರೀವಿದ್ಯಾ ಮುರಲೀ ಧರ್‌, ವಿದ್ಯಾಶ್ರೀ ರಾಧಾಕೃಷ್ಣ, ಸುಜಾತಾ ಶ್ಯಾಂಸುಂದರ್‌ ಹಾಗೂ ಶಾರದಾಮಣಿ ಶೇಖರ್‌ ಗುರು-ಶಿಷ್ಯ ಬಾಂಧವ್ಯಕ್ಕೆ ನಿದರ್ಶನ ಪ್ರಾಯರೂ ಹೌದು. ಬದುಕಿನ ಕೊನೆಯ ಹತ್ತು ವರ್ಷಗಳ ಕಾಲ ಮಂಗಳೂರಿನಲ್ಲಿ, ಸನಾತನ ನಾಟ್ಯಾಲಯದ ರೂವಾರಿ ಶಾರದಾಮಣಿ -ಚಂದ್ರಶೇಖರ್‌ ದಂಪತಿಯ ನಿವಾಸದಲ್ಲಿ ಅತ್ಯಂತ ಸಂತೃಪ್ತಿ ನೆಮ್ಮದಿಗಳಿಂದ ಬದುಕಿದ್ದ ಮುರಳೀಧರ ರಾಯರು ಬ್ರಹ್ಮಚಾರಿಯಾದರೂ ಒಂಟಿಯಾಗಿರದೆ ಎಲ್ಲರೊಡನೆ ಒಂದಾಗಿ ಬೆರೆತವರು. 

ದೃಢ, ಆಜಾನುಬಾಹು ಶರೀರ, ನಸು ಶ್ಯಾಮಲ ವರ್ಣ, ಪ್ರಖರ ಕಣ್ಣುಗಳು, ಸರಳವಾದ ಜುಬ್ಟಾ ಪೈಜಾಮಾ ಪೋಷಾಕು, ಎತ್ತಿ ಹಿಂದಕ್ಕೆ ಬಾಚಿಕೊಂಡ ಕೇಶರಾಶಿ- ನೋಡಿ ದೊಡನೆ ನಮಿಸಬೇಕೆಂಬ ತುಡಿತವನ್ನು ಉಂಟುಮಾಡುತ್ತಿದ್ದ  ಸುಸ್ವರೂಪಿ ಅವರು. ಒಲಿದು ಬಂದ ಪ್ರಶಸ್ತಿಗಳನ್ನು ಎಂದೂ ವೈಭವೀಕರಿಸದಿದ್ದ ನಿರಾಡಂಬರ ವ್ಯಕ್ತಿತ್ವ. ಮಗುವಿನಿಂದ ತೊಡಗಿ ಸಮವಯಸ್ಕರ ತನಕ ಸ್ವಾರಸ್ಯಪೂರ್ಣವಾಗಿ ಸಂಭಾಷಿಸುವ ಪ್ರವೃತ್ತಿ, ನೃತ್ಯ -ಸಂಗೀತಗಳ ವಿಷಯ ಬಂದಾಗ ದಿನಗಟ್ಟಲೆ ಚರ್ಚಿಸಬಲ್ಲಷ್ಟು ವಿದ್ವತ್ತು, ದೇಹಿ ಎಂದ ಜ್ಞಾನದಾಹಿಗಳಿಗೆ ಅರಿವನ್ನು ಮೊಗೆದುಕೊಡುವ ಗುರುತ್ವ ಹೊಂದಿದ್ದ; ನೃತ್ಯಕ್ಕಾಗಿ ಬದುಕಿದ ಕಲಾಋಷಿ. ನಮಗಾಗಿ ಅವರು ಉಳಿಸಿ ಹೋಗಿರುವ ಅಪಾರ ಜ್ಞಾನ, ಪುಸ್ತಕರಾಶಿ ಮತ್ತು ಅವರು ಸದಾ ಪ್ರತಿಪಾದಿಸುತ್ತಿದ್ದ ಶಾಸ್ತ್ರ – ಪ್ರಯೋಗ ಸಮ್ಮಿಳಿತವಾದ ಸಂಪ್ರದಾಯಬದ್ಧ ಭರತನಾಟ್ಯವನ್ನು ಎಚ್ಚರದಿಂದ ಕಾಪಿಡುವುದೇ ನಾವು ಅವರಿಗೆ ಸಲ್ಲಿಸಬಹುದಾದ ಅತ್ಯುಚ್ಚ ಗೌರವ. 

ಇಹವನ್ನು ತ್ಯಜಿಸುವ ಕೆಲವೇ ದಿನಗಳಿಗೆ ಮುನ್ನ ಶಾರದಾ ಮಣಿ -ಚಂದ್ರಶೇಖರ್‌ ದಂಪತಿಯ ಪುತ್ರಿ ಶುಭಾಮಣಿಯ ಭರತನಾಟ್ಯ ಪ್ರದರ್ಶನವನ್ನು ಕಣ್ತುಂಬಿಕೊಂಡು, ಆ ಎಳೆಯ ನೃತ್ಯಾಂಗನೆಯನ್ನು ಆಶೀರ್ವದಿಸಿದ್ದು “ಉಸಿರು ಇರುವ ತನಕ ಈ ಜೀವಿತ ನೃತ್ಯಾರ್ಪಿತ’ ಎಂಬುದಕ್ಕೆ ಸಂಕೇತವಲ್ಲದೆ ಇನ್ನೇನು! 

ಪ್ರತಿಭಾ ಎಂ.ಎಲ್‌. ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next