Advertisement

ಶತಮಾನದ ನಂತರ ಶುರುವಾಗಿದೆ ದ್ಯಾಮವ್ವನ ಜಾತ್ರೆ

07:56 PM May 10, 2019 | Sriram |

ನಾಡಿನ ಹಲವು ಜಿಲ್ಲೆ, ತಾಲೂಕು, ಪಟ್ಟಣ ಹಾಗೂ ಪುಣ್ಯ ಕ್ಷೇತ್ರಗಳಲ್ಲಿ ಪ್ರತಿ ವರ್ಷವೂ ಜಾತ್ರೆ ನಡೆಯುತ್ತದೆ ತಾನೆ? ಬೆಳಗಾವಿ ಚೆನ್ನಮ್ಮನ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿ 100 ವರ್ಷದ ಹಿಂದೊಮ್ಮೆ ಜಾತ್ರೆ ನಡೆದಿತ್ತಂತೆ! ಶತಮಾನದ ನಂತರ, ಇದೀಗ ಮತ್ತೆ ಆ ಜಾತ್ರೆ ಆರಂಭವಾಗಿದೆ.

Advertisement

ಉತ್ತರ ಕರ್ನಾಟಕದ ಪ್ರತಿಯೊಂದು ಹಳ್ಳಿಯಲ್ಲೂ ಹಳ್ಳಿಗಳಲ್ಲೂ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಭಕ್ತರು ದೇವಿ ಆರಾಧನೆ ಮಾಡುವುದು ರೂಢಿ. ಅದರಲ್ಲೂ ಆದಿಶಕ್ತಿ ದೇವತೆಗಳ ಜಾತ್ರೆಗಂತೂ ವಿಶೇಷ ಮಹತ್ವ ಇರುತ್ತದೆ. ಆದರೆ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಬೈಲೂರಿನ ಗ್ರಾಮ ದೇವತೆ ಈ ಊರಿನ ದ್ಯಾಮವ್ವನ ಜಾತ್ರೆ ಆಗಿದ್ದು ಗ್ರಾಮದ ಯಾರೊಬ್ಬರಿಗೂ ಗೊತ್ತಿಲ್ಲ. ಕಾರಣ, ಜಾತ್ರೆ ನಡೆದು 100 ವರ್ಷಕ್ಕೂ ಹೆಚ್ಚು ದಿನ ಆಗಿದೆಯಂತೆ. ಇದೀಗ ಮತ್ತೆ ಗ್ರಾಮದೇವತೆಯ ಉತ್ಸವ ಆಚರಿಸಲು ಇಡೀ ಊರಿಗೆ ಊರೇ ಸಜ್ಜಾಗಿದೆ. ತಳಿರು-ತೋರಣಗಳಿಂದ ಗ್ರಾಮವನ್ನು ಸಿಂಗರಿಸಲಾಗಿದೆ. ಮನೆಗಳನ್ನು ಸುಣ್ಣ-ಬಣ್ಣದಿಂದ ಅಲಂಕರಿಸಲಾಗಿದೆ. ಬೈಲೂರಿನ ದ್ಯಾಮವ್ವನ ಜಾತ್ರೆ ಈಗಾಗಲೇ ಆರಂಭವಾಗಿದ್ದು ಮೇ 17ರ ವರೆಗೆ ಜಾತ್ರೆ ನಡೆಯಲಿದೆ.

ಬೈಲೂರಿನ ಸುತ್ತಮುತ್ತಲಿನ ದ್ಯಾಮವ್ವ, ದುರ್ಗವ್ವ, ಕರೆವ್ವ ಸೇರಿದಂತೆ ಆದಿಶಕ್ತಿ ದೇವತೆಗಳ ಜಾತ್ರೆ ಸಂಭ್ರಮ ನಡೆಯುತ್ತಿರುತ್ತವೆ. ಆದರೆ ಇಲ್ಲಿ ಮಾತ್ರ ಜಾತ್ರೆಯ ಕುರುಹುಗಳೇ ಇಲ್ಲದಿರುವುದರಿಂದ ಗ್ರಾಮಸ್ಥರಲ್ಲಿ ಕಸಿವಿಸಿಗೆ ಕಾರಣವಾಗುತ್ತಿತ್ತು.

100 ವರ್ಷಕ್ಕಿಂತಲೂ ಮುಂಚೆ ಜಾತ್ರೆ ಮಾಡಿರುವ ಬಗ್ಗೆ ಇಲ್ಲಿಯ ಹಿರಿಯರು ನೆನಪಿಸಿಕೊಳ್ಳುತ್ತಾರೆ. 81 ವರ್ಷ ವಯಸ್ಸಿನ ನಿವೃತ್ತ ಶಿಕ್ಷಕ ಕೆ.ಎಸ್‌. ಕುರಗುಂದ ಅವರ ಅಜ್ಜನ ಕಾಲದಲ್ಲಿ ಜಾತ್ರೆ ಮಾಡಿರುವ ಬಗ್ಗೆ ಉದಾಹರಣೆ ಇದೆ. ಆಗಿನ ಕಾಲದಲ್ಲಿ ಮಾಡಿದ್ದ ತೇರಿನಲ್ಲಿಯೇ(ರಥ) ದೇವಿಯ ಮೆರವಣಿಗೆ ಮಾಡಲಾಗಿತ್ತು. ಸಾಮನ್ಯವಾಗಿ ಆದಶಕ್ತಿ ದೇವಿಯ ಮಂದಿರಗಳು ಊರಿನ ಮಧ್ಯಭಾಗದಲ್ಲಿ ಇರುತ್ತವೆ. ಆದರೆ ಬೈಲೂರಿನ ದ್ಯಾಮವ್ವನ ಗುಡಿ(ದೇವಸ್ಥಾನ) ಗ್ರಾಮದ ಹೊರ ಭಾಗದಲ್ಲಿದೆ. ಎಷ್ಟೋ ವರ್ಷಗಳ ಹಿಂದೆಯೇ ಈ ದೇವಸ್ಥಾನ ಮುರಿದು ಬಿದ್ದಿದೆ. ಹೊಸ ದೇವಸ್ಥಾನವನ್ನು ಮೂಲ ಸ್ಥಳದಲ್ಲಿಯೇ ಕೆಲವರು ಜೀರ್ಣೋದ್ಧಾರ ಮಾಡಬೇಕೆಂದು ಹಠ ಹಿಡಿದಿದ್ದರೆ, ಇನ್ನೂ ಕೆಲವರು ಗ್ರಾಮದೊಳಗೆ ನಿರ್ಮಾಣ ಮಾಡಲು ಪಟ್ಟು ಹಿಡಿದಿದ್ದರು. ಹೀಗಾಗಿ ಇಬ್ಬರ ನಡುವಿನ ಪರಸ್ಪರ ವೈರುಧ್ಯದಿಂದಾಗಿ ದೇವಸ್ಥಾನವೂ ಇಲ್ಲ, ಜಾತ್ರೆಯೂ ಇಲ್ಲದಂತಾಗಿತ್ತು.

ಈ ಜಾತ್ರೆಗೆ ಮಾಂಸಾಹಾರ ಸಂಪೂರ್ಣ ನಿಷೇಧವಿದೆ. ಗ್ರಾಮ ದೇವರ ಜಾತ್ರೆಗೆ ಪ್ರಾಣೀ ಬಳಿ ಕೊಡುವುದು ಸಹಜ. ಆದರೆ ಇಲ್ಲಿ ಪ್ರಾಣಿ ಬಲಿ ಇಲ್ಲ. ಊರ ಅಗಸಿಯಲ್ಲಿರುವ ಪಾದಗಟ್ಟಿಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ದರ್ಶನಕ್ಕೆ ಇಡಲಾಗುತ್ತದೆ. ಮೇ 16ರಂದು ದೇವಿ ಸೀಮೆಗೆ ಹೋಗಿ ಅಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆದು ಜಾತ್ರೆ ಸಂಪನ್ನಗೊಳ್ಳಲಿದೆ.

Advertisement

ರಥಕ್ಕೆ ಕಳಶವಿಲ್ಲ, ನವಿಲು ಇದೆ
ಹಿಂದೊಮ್ಮೆ ಗ್ರಾಮ ದೇವತೆ ಶ್ರೀ ದ್ಯಾಮವ್ವನ ಜಾತ್ರೆ ಮಾಡಲಾಗಿದೆ. ಆಗಿನ ಕಾಲದಲ್ಲೂ ದೇವಿಯ ಹೊನ್ನಾಟ ಹಾಗೂ ರಥದಲ್ಲಿ ದೇವಿಯ ಮೆರವಣಿಗೆ ನಡೆಸಲಾಗಿದೆ. ವಿಶೇಷವೆಂದರೆ, ಇಲ್ಲಿರುವ ರಥಕ್ಕೆ ಚಿನ್ನ, ಬೆಳ್ಳಿ ಅಥವಾ ತಾಮ್ರದ ಕಳಶವಿಲ್ಲ. ಕಳಶದ ಪರಂಪರೆ ಇಲ್ಲಿ ಬೆಳೆದು ಬಂದಿಲ್ಲ. ಕಟ್ಟಿಗೆಯಲ್ಲಿ ತಯಾರಿಸಿರುವ ದೊಡ್ಡದಾಕಾರದ ನವಿಲು ಚಿಹ್ನೆಯನ್ನು ರಥದ ಮೇಲ್ಭಾಗದಲ್ಲಿ ಇಡಲಾಗುತ್ತದೆ. ಬೈಲೂರು ಸುತ್ತಮುತ್ತ ದಟ್ಟ ಅರಣ್ಯವಿದೆ. ಇಲ್ಲಿ ನವಿಲು ಸಂತತಿ ಹೆಚ್ಚಾಗಿರುವುದರಿಂದ ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಯಲಿ ಎಂಬ ಉದ್ದೇಶದಿಂದ ರಥಕ್ಕೆ ನವಿಲು ಅಳವಡಿಸಲಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ಸಣ್ಣವರ ಮೇಲೆ ಜವಾಬ್ದಾರಿ ಇದೆ
“ಬೈಲೂರ ದ್ಯಾಮವ್ವನ ಜಾತ್ರಿ ನಮ್ಮ ಅಜ್ಜಾರ ಕಾಲದಾಗ ಆಗಿತ್ತಂತ ಹೇಳ್ತಿದ್ರು, ಸುಮಾರು 100 ವರ್ಷಗಳ ಹಿಂದ ಜಾತ್ರಿ ಆಗೈತಿ. ಆವಾಗಿನಿಂದ ಒಂದೂ ದಿನ ದ್ಯಾಮ್ಮವ್ವನ ಜಾತ್ರಿ ಮಾಡಾಕ ಆಗಿರಲಿಲ್ಲ. ಈಗ ನಮ್ಮೂರ ದ್ಯಾಮವ್ವ ಊರ ಮಂದಿ ತೆಲ್ಯಾಗ ಹಾಕಿ ಜಾತ್ರಿ ಮಾಡಸಾಕತ್ತಾಳ. ಇನ್ನ ಮುಂದ ಈ ಪದ್ಧತಿ ಮುಂದುವರಿಸಿಕೊಂಡ ಹೋಗೋ ಜವಾಬ್ದಾರಿ ನಮ್ಮ ಸಣ್ಣಾವರ ಮ್ಯಾಲ ಐತಿ’
– ಕೆ.ಎಸ್‌. ಕುರಗುಂದ, 81 ವರ್ಷ ವಯಸ್ಸಿನ ಹಿರಿಯರು

-ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next