Advertisement

ನಗರದ ವಿವಿಧೆಡೆ ಮರ, ತಡೆಗೋಡೆ ಬಿದ್ದು ಹಾನಿ

11:46 PM Jul 10, 2019 | Team Udayavani |

ಮಹಾನಗರ: ನಗರದ ಜನರು ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಧಾರಾಕಾರ ಮಳೆ ಮಂಗಳವಾರ ರಾತ್ರಿಯಿಂದ ಆರಂಭವಾಗಿದ್ದು, ಪರಿಣಾಮವಾಗಿ ಕೆಲವು ಪ್ರದೇಶಗಳಲ್ಲಿ ಮರ ಬಿದ್ದು ಮನೆಗೆ ಹಾನಿ, ತಡೆ ಗೋಡೆ ಕುಸಿದು ಕೆಳ ಭಾಗದ ಮನೆಯ ಕೊಠಡಿಗೆ ಹಾನಿ, ರಸ್ತೆಗೆ ಮಣ್ಣು ಬಿದ್ದು ಟ್ರಾಫಿಕ್‌ ಜಾಮ್‌, ಮರ ಬಿದ್ದು ವಿದ್ಯುತ್‌ ಕಂಬಗಳಿಗೆ ಹಾನಿ ಮತ್ತಿತರ ಹಲವು ಘಟನೆಗಳು ಸಂಭವಿಸಿವೆ.


Advertisement

ಆಕಾಶಭವನದ ಆನಂದನಗರದಲ್ಲಿ ಮಂಗಳ ವಾರ ರಾತ್ರಿ ಜಯಶ್ರೀ ಅವರ ಮನೆ ಮೇಲೆ ಪಕ್ಕದ ಮನೆಯ ಆವರಣದಲ್ಲಿದ್ದ ಮರ ಬಿದ್ದು, ಅಡುಗೆ ಕೋಣೆ, ಬೆಡ್‌ ರೂಂಗಳಿಗೆ ಹಾನಿಯಾಗಿದೆ. ಯಾರಿಗೂ ಅಪಾಯ ಸಂಭವಿಸಿಲ್ಲ. ಅಗ್ನಿಶಾಮಕ ದಳದವರು ತೆರಳಿ ಮರವನ್ನು ತೆರವುಗೊಳಿಸಿದರು.

ಬುಧವಾರ ಬೆಳಗ್ಗೆ ಆಕಾಶಭವನದ ಪರಪಾ ದೆಯಲ್ಲಿ ಶುಭಾ ಅವರ ಮನೆಗೆ ಪಕ್ಕದ (ಹಿಂಬದಿ) ಗುಡಿಯೊಂದರ ತಡೆಗೋಡೆ ಕುಸಿದು ಬಿದ್ದು, ಶೌಚಾಲಯ ಮತ್ತು ಬೆಡ್‌ರೂಂಗೆ ಹಾನಿಯಾಗಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮನೆಯ ಹಿಂಭಾಗದಲ್ಲಿ ಎತ್ತರದಲ್ಲಿ ಗುಡಿ ಇದ್ದು, ಅಲ್ಲಿ ಕಲ್ಲುಗಳನ್ನು ಉಪಯೋಗಿಸಿ ತಡೆಗೋಡೆ ನಿರ್ಮಿಸಲಾಗಿತ್ತು. ಆಗಿಂದಾಗ್ಗೆ ಸುರಿದ ಮಳೆನೀರು ತಡೆ ಗೋಡೆಯ ಅಂಚಿಗೆ ಬಿದ್ದು, ಮಣ್ಣಿನ ಒಳಗೆ ಸೇರಿ ಬಿರುಕು ಸೃಷ್ಟಿಯಾಗಿ ಬುಧವಾರ ಬೆಳಗ್ಗೆ ಕುಸಿದಿದೆ.

ಈ ಎರಡೂ ಘಟನೆಗಳ ಸುದ್ದಿ ತಿಳಿದು ಸ್ಥಳೀಯ ಮಾಜಿ ಕಾರ್ಪೊರೇಟರ್‌ ದೀಪಕ್‌ ಪೂಜಾರಿ ಸ್ಥಳಕ್ಕೆ ತೆರಳಿ ಪಾಲಿಕೆಯ ಅಧಿಕಾರಿಗಳನ್ನು ಕರೆಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ನೆರವಾದರು. ಅಗ್ನಿಶಾಮಕ ದಳದವರೂ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು.

ಎನ್‌ಡಿಆರ್‌ಎಫ್‌ ತಂಡ, ಪಾಲಿಕೆಯ ಕಂದಾಯ ಅಧಿಕಾರಿಗಳು, ಜೂನಿಯರ್‌ ಎಂಜಿನಿಯರ್‌ ಯಶವಂತ್‌ ಸ್ಥಳಕ್ಕೆ ತೆರಳಿದ್ದರು.

Advertisement

ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ
ವಾಮಂಜೂರು ಸಮೀಪದ ಪಚ್ಚನಾಡಿಯ ಮಂಗಳ ಜ್ಯೋತಿ ಬಳಿ ಮಂಗಳವಾರ ಎರಡು ಮರಗಳು ಉರುಳಿ ವಿದ್ಯುತ್‌ ಕಂಬಗಳ ಮೇಲೆ ಬಿದ್ದ ಕಾರಣ ವಿದ್ಯುತ್‌ ಕಂಬಗಳೂ ಧರಾಶಾಯಿಯಾಗಿ ಈ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಬೈಕ್‌ ಸವಾರನಿಗೆ ಗಾಯ
ಪಡೀಲ್‌ ಸಮೀಪದ ಕಣ್ಣೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಳೆ ನೀರು ಹರಿದು ಹೋಗಲು ಅವ ಕಾಶ ಇಲ್ಲದೆ ರಸ್ತೆಯಲ್ಲಿ ನೀರು ನಿಂತ ಕಾರಣ ಲಾರಿ ಯೊಂದಕ್ಕೆ ಹಿಂಬದಿಯಿಂದ ಬೈಕ್‌ ಢಿಕ್ಕಿ ಹೊಡೆದು ಸವಾರ ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ನೀರು ತುಂಬಿದ್ದರಿಂದ ಚಾಲಕ ಲಾರಿಯನ್ನು ನಿಧಾನಗೊಳಿಸಿದ್ದು, ಹಿಂಬದಿ ಇದ್ದ ಬೈಕ್‌ ಲಾರಿಗೆ ಢಿಕ್ಕಿ ಹೊಡೆದಿದೆ.

ಟ್ರಾಫಿಕ್‌ ಜಾಮ್‌
ಬೆಳಗ್ಗಿನ ಹೊತ್ತು ಎಡೆಬಿಡದೆ ಮಳೆ ಬಂದ ಕಾರಣ ವಾಹನಗಳು ಅಧಿಕ ಸಂಖ್ಯೆಯಲ್ಲಿ ರಸ್ತೆಗಿಳಿದ ಹಿನ್ನೆಲೆಯಲ್ಲಿ ಕಂಕನಾಡಿ ಕರಾವಳಿ ವೃತ್ತ ಮತ್ತು ಜ್ಯೋತಿ ಜಂಕ್ಷನ್‌ ಬಳಿ ಟ್ರಾಫಿಕ್‌ ಜಾಮ್‌ ಕಂಡು ಬಂದಿತ್ತು. ಇದರಿಂದಾಗಿ ಪಂಪ್‌ವೆಲ್‌ನಿಂದ ಕಂಕನಾಡಿ ಕರಾವಳಿ ವೃತ್ತದ ಕಡೆಗೆ ಸಂಚರಿಸ ಬೇಕಾದ ಕೆಲವು ಬಸ್‌ಗಳನ್ನು ಚಾಲಕರು ನಂತೂರು – ಕದ್ರಿ ಮಲ್ಲಿಕಟ್ಟೆ – ಬೆಂದೂರು ಮಾರ್ಗದಲ್ಲಿ ಚಲಾಯಿಸಿದರು.

ಬಿಜೈ ವೃತ್ತದಿಂದ ಕೆಎಸ್‌ಆರ್‌ಟಿಸಿ ಕಡೆಗೆ ಸಾಗುವ ಮುಖ್ಯ ರಸ್ತೆಯ ಚರಂಡಿಗೆ ಕಾಂಕ್ರೀಟ್‌ ಸ್ಲಾ Âಬ್‌ ಹಾಕಿ ಫುಟ್‌ಪಾತ್‌ ನಿರ್ಮಿಸುವ ಕಾಮಗಾರಿ ಇನ್ನೂ ಪೂರ್ತಿ ಗೊಳ್ಳದೆ, ಚರಂಡಿಯ ಚೇಂಬರ್‌ಗಳು ಬಾಯ್ದೆ ರೆದು ಅಪಾಯಕಾರಿಯಾಗಿ ಪರಿಣ ಮಿಸಿವೆ. ಮಳೆ ಬಂದಾಗ ರಸ್ತೆ ಬದಿ ಹರಿ ಯುವ ನೀರು ಈ ಚೇಂಬರ್‌ ಮೂಲಕ ಒಳಗೆ ಚರಂಡಿಗೆ ಸೇರುತ್ತಿದ್ದು, ಚರಂಡಿ ಯಲ್ಲಿ ನೀರು ತುಂಬಿರುವುದರಿಂದ ಹೊಂಡ ಇರುವ ಜಾಗ ಕಾಣಿಸದೆ ಪಾದಚಾ ರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಈ ಹೊಂಡಕ್ಕೆ ಬೀಳುವ ಅಪಾಯ ವಿದೆ. ನಗರದ ಹಲವೆಡೆ ಮಳೆ ನೀರು ಚರಂಡಿಗೆ ಹರಿದು ಹೋಗಲು ಸೂಕ್ತ ಅವಕಾಶಗಳು ಇಲ್ಲದಂತಾಗಿದೆ.

ಮುಂದಿನ ದಿನಗಳಲ್ಲಿ ಮಳೆ ತೀವ್ರವಾದಾಗ ಇನ್ನಷ್ಟು ಅನಾಹುತಗಳು ಸಂಭವಿಸಿಸುವ ಎಲ್ಲ ಸಾಧ್ಯತೆಗಳಿವೆ.

ಪಡೀಲ್‌ ರಸ್ತೆಯಲ್ಲಿ ಕೆಸರು
ಪಡೀಲ್‌ ರೈಲ್ವೇ ಮೇಲ್ಸೇತುವೆ ಇರುವ ತಾಣದಲ್ಲಿ ಮಳೆಯಿಂದಾಗಿ ಮೇಲ್ಭಾಗದ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಬುಧವಾರ ಬೆಳಗ್ಗೆ ಸೇತುವೆಯ ಒಳ ಭಾಗದ ರಸ್ತೆಯಲ್ಲಿ ಕೆಸರು ತುಂಬಿತ್ತು. ಮಳೆ ಸುರಿಯುತ್ತಲೇ ಇದ್ದ ಕಾರಣ ಕೆಸರು ತುಂಬಿದ ಸೇತುವೆಯ ಒಳಭಾಗದಲ್ಲಿ ಸಂಚರಿಸಲು ದ್ವಿಚಕ್ರ ವಾಹನ ಸವಾರರು ಪರದಾಡಿದರು. ಕಾರು, ಇತರ ಲಘು ವಾಹನಗಳ ಸುಗಮ ಸಂಚಾರಕ್ಕೂ ಅಡಚಣೆ ಉಂಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next