Advertisement

CM Siddaramaiah: ತಜ್ಞರ ವರದಿಯಂತೆ ಅಣೆಕಟ್ಟು ನಿರ್ವಹಣೆ

11:31 PM Sep 22, 2024 | Team Udayavani |

ಕೊಪ್ಪಳ: ತುಂಗಭದ್ರಾ ಜಲಾಶಯ ನಿರ್ಮಾಣವಾಗಿ 68 ವರ್ಷ ಗತಿಸಿವೆ. ಪ್ರತಿ 50 ವರ್ಷಕ್ಕೆ ಡ್ಯಾಂ ಗೇಟ್‌ಗಳನ್ನು ಬದಲಿಸಬೇಕು. ಆದರೆ ತುಂಗಭದ್ರಾ ಡ್ಯಾಂ ಗೇಟ್‌ ನಿರ್ವಹಣೆ ಸರಿಯಾಗಿ ಮಾಡಿದ್ದರಿಂದ 68 ವರ್ಷಗಳ ಬಾಳಿಕೆ ಬಂದಿದೆ. ಗೇಟ್‌ ಮುರಿದ ಬಳಿಕ ತಜ್ಞರ ಸಮಿತಿ ರಚಿಸಿದ್ದು, ಅವರು ಕೊಟ್ಟಿರುವ ವರದಿ ಅನುಸಾರ ಮುಂದೆ ಗೇಟ್‌ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಡ್ಯಾಂ ಗೇಟ್‌ ಮುರಿದಾಗ ರೈತರಿಗೆ ತುಂಬಾ ಆತಂಕವಿತ್ತು. ಡ್ಯಾಂನಿಂದ 20 ಟಿಎಂಸಿಗೂ ಹೆಚ್ಚಿನ ನೀರು ಹರಿದು ಹೋಗಿತ್ತು. ಆಗ ಡ್ಯಾಂಗೆ ಭೇಟಿ ನೀಡಿದ್ದೆ. ಗೇಟ್‌ ರಿಪೇರಿಯಾಗಿ ಮತ್ತೆ ಡ್ಯಾಂ ತುಂಬುತ್ತದೆ ಎಂದಿದ್ದೆ. ಮಳೆಯ ಕೃಪೆಯಿಂದಾಗಿ ಮತ್ತೆ ಜಲಾಶಯ ತುಂಬಿದೆ. ಮುಂಗಾರಿನ ಬೆಳೆಗೆ ನೀರು ದೊರೆಯುತ್ತದೆ. ಹಿಂಗಾರು ಬೆಳೆಗೂ ನೀರು ಲಭಿಸುವ ಭರವಸೆಯಿದೆ ಎಂದರು.

ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಹಾಗೂ ಅಧಿಕಾರಿಗಳ ತಂಡದ ಶ್ರಮದಿಂದ ಗೇಟ್‌ ದುರಸ್ತಿ ಮಾಡಲಾಯಿತು. ಹಿಂದುಸ್ಥಾನ್‌, ನಾರಾಯಣ, ಜಿಂದಾಲ್‌ ಸಂಸ್ಥೆಗಳ ಸಹಾಯವೂ ದೊರೆಯಿತು. ಇದರಿಂದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮತ್ತೆ ಮಳೆ ಬಂದು ತುಂಗಭದ್ರೆ ತುಂಬಿದ್ದರಿಂದ ರೈತರಲ್ಲಿ ಸಂತಸ ತಂದಿದೆ. ಮಳೆರಾಯನಿಗೆ ಸರಕಾರದ ಪರವಾಗಿ ಧನ್ಯವಾದ ಹೇಳುವೆ ಎಂದರು.

ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 56 ವಿಷಯಗಳ ಕುರಿತು ಚರ್ಚೆ ಮಾಡಿದ್ದೇವೆ. ಇದರಲ್ಲಿ 46 ಕಲ್ಯಾಣ ಕರ್ನಾಟಕದ್ದಾಗಿವೆ ಎಂದು ಹೇಳಿದರು.

ಹಾಲು ದರ ಹೆಚ್ಚಳದ ಲಾಭ ಸಂಪೂರ್ಣ ರೈತರಿಗೆ
ಹಾಲಿನ ದರ ಹೆಚ್ಚಳದ ವಿಚಾರದಲ್ಲಿ ಮಾಗಡಿಗೆ ತೆರಳಿದ್ದ ವೇಳೆ ಅಲ್ಲಿನ ರೈತರು ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹಾಲಿನ ಪ್ರೋತ್ಸಾಹ ಧನ ಕಡಿಮೆಯಿದೆ ಎಂದು ಮನವಿ ಮಾಡಿದ್ದರು. ಹಾಲಿನ ದರ ಹೆಚ್ಚಳ ಮಾಡಿ ಎಂದು ನನಗೆ ಮನವಿ ಮಾಡಿದ್ದರು. ಆಗ ಒಂದು ವೇಳೆ ಸಚಿವ ಸಂಪುಟದಲ್ಲಿ ಇದನ್ನು ನಿರ್ಧರಿಸಿದರೆ ಹಾಲಿನ ದರದ ಹೆಚ್ಚಳದ ಲಾಭವನ್ನು ರೈತರಿಗೆ ಸಂಪೂರ್ಣವಾಗಿ ವರ್ಗಾಯಿಸಲಾಗುವುದು ಎಂದು ಭರವಸೆ ನೀಡಿದೆ. ಈ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಿದರೆ ಆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next